ಕಲಬುರಗಿ: ಇಲ್ಲಿನ ಕೇಂದ್ರ ಕಾರಾಗೃಹದಲ್ಲಿನ ವಿಚಾರಣಾಧೀನ ಕೈದಿಯೊಬ್ಬ ಮೃತಪಟ್ಟಿದ್ದಾನೆ. ಮೆದಳು ಜ್ವರದಿಂದ ಬಳಲುತ್ತಿದ್ದ ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ಕೊಡೇಕಲ್ ಗ್ರಾಮದ ಕಾಶಿನಾಥ ಬಸಪ್ಪ (24) ಎಂಬಾತನೇ ಮೃತ ಕೈದಿ. ಕೊಡೇಕಲ್ ಗ್ರಾಮದ ಕಾಶಿನಾಥ ಸ್ವಂತ ಮಗಳನ್ನೇ ತನಗೆ ಹುಟ್ಟಿಲ್ಲವೆಂದು ಶಂಕೆ ವ್ಯಕ್ತಪಡಿಸಿ ಕೊಲೆ ಮಾಡಿ ಜೈಲು ಸೇರಿದ್ದ. ಮೆದಳು ಜ್ವರದಿಂದ ಬಳಲುತ್ತಿದ್ದ ಈತನನ್ನು ಜ.29ರಂದು ಜಿಲ್ಲಾ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ. ಜೀವ ಉಳಿಸಿಕೊಳ್ಳಲು ಹೋದಾತ ಹೆಣವಾದ! ಕಲಬುರಗಿ: ಜೀವ ಉಳಿಸಿಕೊಳ್ಳಲು ಯತ್ನಿಸಿದ ಯುವಕನೊಬ್ಬ ಸಾವನ್ನಪ್ಪಿದ ಘಟನೆ ಆಳಂದ ತಾಲ್ಲೂಕಿನ ಜವಳಗಾ ಗ್ರಾಮದಲ್ಲಿ ಸಂಭವಿಸಿದೆ. ಜವಳಗಾ ಗ್ರಾಮದ ಅಂಬರೀಶ್ ಚಿಂಚನಸೂರ (23) ಎಂಬಾತನೇ ಜೀವ ಕಳೆದುಕೊಂಡಾತ. ಜವಳಗಾ ಗ್ರಾಮದ ಅಂಬರೀಶ್ ಮತ್ತು ನಿಂಗಪ್ಪ ಎಂಬುವವರು ಬೈಕ್ ಮೇಲೆ ಕಲ್ಲಹಂಗರಗಾ ಗ್ರಾಮಕ್ಕೆ ಹೋಗುವಾಗ ಹೊಲದಿಂದ ಮನೆಗೆ ಮರಳುತಿದ್ದ ಮಲ್ಲಯ್ಯ ಕಲಾಲ(60) ಎಂಬುವವರಿಗೆ ಡಿಕ್ಕಿ ಹೊಡೆದಿದ್ದಾರೆ. ವೃದ್ಧನಿಗೆ ಡಿಕ್ಕಿ ಹೊಡೆದಿರುವ ಸುದ್ದಿ ಗ್ರಾಮಸ್ಥರಿಗೆ ತಿಳಿಯುತ್ತಲೇ ಅಂಬರೀಶ್ ಮತ್ತು ನಿಂಗಪ್ಪ ಅವರಿಗೆ ಹೊಡೆಯಲು ಬೆನ್ನಟ್ಟಿದ್ದಾರೆ ಎನ್ನಲಾಗಿದೆ. ತಪ್ಪಿಸಿಕೊಳ್ಳುವ ಧಾವಂತದಲ್ಲಿ ಅಂಬರೀಶ್ ಮತ್ತು ನಿಂಗಪ್ಪ ಬೈಕ್ ಅಲ್ಲಿಯೇ ಬಿಟ್ಟು ಓಡಿ ಹೋಗಲು ಯತ್ನಿಸಿದ್ದಾರೆ. ಆಗ ಅಂಬರೀಶ್ ಆಯತಪ್ಪಿ ಬಾವಿಯೊಳಗೆ ಬಿದ್ದು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ತಮ್ಮ ಮಗ ಬಾವಿಯೊಳಗೆ ಬಿದ್ದು ಮೃತಪಟ್ಟಿಲ್ಲ. ಗ್ರಾಮಸ್ಥರು ಆತನನ್ನು ಹೊಡೆದು ಕೊಲೆ ಮಾಡಿ ಬಾವಿಯಲ್ಲಿ ಹಾಕಿದ್ದಾರೆ ಎಂದು ಅಂಬರೀಶ್ ಪಾಲಕರು ಆರೋಪಿಸಿದ್ದಾರೆ. ಬಾವಿಯಿಂದ ಶವವನ್ನು ಹೊರ ತೆಗೆಯಲಾಗಿದೆ. ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.
ವಿಚಾರಣಾಧೀನ ಕೈದಿ ಸಾವು
ನಗರಕ್ಕೆ ರಾಹುಲ್ ಗಾಂಧಿ 12ರಂದು
ಕಲಬುರಗಿ: ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ಗಾಂಧಿ ಅವರು ಇದೇ ಫೆ.12ರಂದು ಯಾದಗಿರಿ ಮತ್ತು ಕಲಬುರಗಿ ಜಿಲ್ಲೆಗೆ ಭೇಟಿ ನೀಡಲಿದ್ದು, ದಕ್ಷಿಣ ಮತ್ತು ಉತ್ತರ ಕ್ಷೇತ್ರದ ಕಾರ್ಯಕರ್ತರು ಸಕ್ರಿಯವಾಗಿ ಕಾರ್ಯನಿರ್ವಹಿಸುವಂತೆ ಜಿಲ್ಲಾ ಉಸ್ತುವಾರಿ ಡಾ.ಶರಣಪ್ರಕಾಶ್ ಪಾಟೀಲ್ ಸಲಹೆ ನೀಡಿದರು. ಜಿಲ್ಲಾ ಕಾಂಗ್ರೆಸ್ ಸಮಿತಿಯು ನಗರದ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ನಡೆದ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು. ಫೆ.12ರಂದು ಮಧ್ಯಾಹ್ನ 1.30ಕ್ಕೆ ಯಾದಗಿರಿ ಜಿಲ್ಲೆಯ ಶಹಾಪುರಕ್ಕೆ ಆಗಮಿಸಲಿದ್ದಾರೆ. ಅಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ನಂತರ ಜೇವರ್ಗಿಯ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಅದೇ ದಿನ ಸಂಜೆ 5.20ಕ್ಕೆ ಕಲಬುರಗಿ ನಗರಕ್ಕೆ ಆಗಮಿಸಿ ನಗರದ ಎನ್ವಿ ಮೈದಾನದಲ್ಲಿ ನಡೆಯುವ ಬಹಿರಂಗ ಸಭೆಯಲ್ಲಿ ಮಾತನಾಡುವರು. ಸಂಜೆ 6.30ಕ್ಕೆ ನಗರದ ಖ್ವಾಜಾ ಬಂದೇ ನವಾಜ್ ದರ್ಗಾಕ್ಕೆ ಭೇಟಿ ನೀಡುವರು ಎಂದು ತಿಳಿಸಿದರು. ಫೆ.13ರಂದು ಬೆಳಗ್ಗೆ 9ಕ್ಕೆ ಮಾಜಿ ಸಚಿವ ದಿ.ಖಮರುಲ್ ಇಸ್ಲಾಂ ಅವರ ಮನೆಗೆ ಭೇಟಿ ನೀಡಿ, 10ಕ್ಕೆ ನಗರದ ಎಚ್ಕೆಇ ಸಂಸ್ಥೆ ಸಭಾಂಗಣದಲ್ಲಿ ಪ್ರಗತಿಪರರು ಮತ್ತು ಉದ್ಯಮಿಗಳೊಂದಿಗೆ ಸಂವಾದ ನಡೆಸುವರು. 11.15ಕ್ಕೆ ಬೀದರ್ಗೆ ತೆರಳಿ ಬಸವಕಲ್ಯಾಣದ ಅನುಭವ ಮಂಟಪಕ್ಕೆ ಭೇಟಿ ನೀಡಲಿದ್ದಾರೆ. ರಾತ್ರಿ ಬೀದರ್ನಲ್ಲಿ ವಾಸ್ತವ್ಯ ಮಾಡಿ ಮರುದಿನ ಹೈದರಾಬಾದ್ ಮೂಲಕ ದಿಲ್ಲಿಗೆ ತೆರಳಲಿದ್ದಾರೆ ಎಂದು ಹೇಳಿದರು. ವಿಧಾನ ಪರಿಷತ್ ಮಾಜಿ ಸದಸ್ಯ ಅಲ್ಲಮಪ್ರಭು ಪಾಟೀಲ್, ಮಹಾನಗರ ಪಾಲಿಕೆ ಮೇಯರ್ ಶರಣಕುಮಾರ ಮೋದಿ, ಪ್ರಚಾರ ಸಮಿತಿ ಅಧ್ಯಕ್ಷ ಜಗನ್ನಾಥ ಗೋಧಿ, ತಿಪ್ಪಣ್ಣಪ್ಪ ಕಮಕನೂರ, ನೀಲಕಂಠರಾವ್ ಮೂಲಗೆ, ದಶರಥ ಬಾಬು ಒಂಟಿ, ಚಂದ್ರಿಕಾ ಪರಮೇಶ್ವರ, ಕೃಷ್ಣಾಜಿ ಕುಲಕರ್ಣಿ, ಭೀಮರಾವ್, ಬಾಬುರಾವ್ ಜಾಗೀರದಾರ್, ನಾರಾಯಣರಾವ್ ಕಾಳೆ ಸೇರಿದಂತೆ ದಕ್ಷಿಣ ಮತ್ತು ಉತ್ತರ ಮತಕ್ಷೇತ್ರದ ಕಾರ್ಯಕರ್ತರು ಪಾಲ್ಗೊಂಡಿದ್ದರು.
ಸದೃಢ ದೇಶಕ್ಕಾಗಿ ಮತದಾನ ಮಾಡಿ: ಸಿಇಒ
ಕಲಬುರಗಿ: ಭಾರತ ದೇಶ ಬೃಹತ್ ಪ್ರಜಾಪ್ರಭುತ್ವ ರಾಷ್ಟ್ರ ಮಾಡಲು ದೇಶದ ಪ್ರತಿಯೊಬ್ಬ ಯುವಕ, ಯುವತಿಯರು 2018ರ ವಿಧಾನಸಭಾ ಚುನಾವಣೆಯಲ್ಲಿ ಮತದಾನ ಮಾಡಬೇಕೆಂದು ಜಿಪಂ ಸಿಇಒ ಹೆಪ್ಸಿಬಾರಾಣಿ ಕೊಲಪಾರ್ಟಿ ಸಲಹೆ ನೀಡಿದರು. ಅವರು ನಗರದ ಪ್ರತಿಷ್ಠಿತ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಗೋದುತಾಯಿ ದೊಡ್ಡಪ್ಪ ಅಪ್ಪ ಕಲಾ ಮತ್ತು ವಾಣಿಜ್ಯ ಮಹಿಳಾ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಮತದಾನ ಮಾಡುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ. ವಿದ್ಯಾರ್ಥಿಗಳು ತಪ್ಪದೆ ಮತದಾನ ಮಾಡಬೇಕು ಮತ್ತು ಬೇರೆಯವರಲ್ಲಿ ಇದರ ಬಗ್ಗೆ ಜಾಗೃತಿ ಮೂಡಿಸಬೇಕೆಂದು ಹೇಳಿದರು. ಮತದಾನದ ಬಗ್ಗೆ ಜನರಲ್ಲಿ ಅರಿವನ್ನು ಜಾಗೃತಗೊಳಿಸಲು ಸರಕಾರ ಏನೆಲ್ಲ ಯೋಜನೆಗಳನ್ನು ರೂಪಿಸಿದೆಯೋ ಅದಕ್ಕಿಂತ ಮುಂಚೆಯೇ ಈ ಮಹಾವಿದ್ಯಾಲಯವು ಆ ಕಾರ್ಯವನ್ನು ಮಾಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಅಧ್ಯಕ್ಷ ತೆ ವಹಿಸಿದ್ದ ಮಹಾವಿದ್ಯಾಲಯದ ಪ್ರಿನ್ಸಿಪಾಲ್ ಡಾ.ನೀಲಾಂಬಿಕಾ ಶೇರಿಕಾರ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಮತದಾನದ ಹಕ್ಕನ್ನು ಹೇಗೆ ಉಪಯೋಗಿಸಿಕೊಳ್ಳಬೇಕು ಎಂದು ತಿಳಿಸಿದರು ಸಂಸ್ಥೆಯ ಅಧ್ಯಕ್ಷ ಡಾ.ಶರಣಬಸವಪ್ಪ ಅಪ್ಪಾ ಅವರ ಕನಸ್ಸಿನಂತೆ ವಿದ್ಯಾರ್ಥಿಗಳು ಐಎಎಸ್ ಉತ್ತೀರ್ಣರಾಗುವಲ್ಲಿ ಹೆಚ್ಚಿನ ಗಮನ ಹರಿಸಬೇಕೆಂದು ಸಲಹೆ ನೀಡಿದರು. ಜಿಪಂ ಸಿಪಿಒ ಪ್ರವೀಣಪ್ರಿಯಾ ಅವರು ವಿದ್ಯಾರ್ಥಿನಿಯರಿಗೆ ಹಾಗೂ ಪ್ರಾಧ್ಯಾಪಕರುಗಳಿಗೆ ಪ್ರಮಾಣವಚನ ಬೋಧಿಸಿದರು. ವಿದ್ಯಾರ್ಥಿ ಕ್ಷೇಮ ಸಮಾಲೋಚನ ಅಧಿಕಾರಿ ಪ್ರೊ. ಶಾಂತಲಾ ನಿಷ್ಠಿ, ನೋಡಲ್ ಅಧಿಕಾರಿ ಪ್ರೊ. ಜಾನಕಿ ಹೊಸೂರ ಇದ್ದರು. ಮಹಾವಿದ್ಯಾಲಯ ಐ.ಕ್ಯೂ.ಎಸ್.ಸ್ಸಿ. ಸಂಚಾಲಕಿ ಪ್ರೊ. ಸಾವಿತ್ರಿ ಜಂಬಲದಿನ್ನಿ ಸ್ವಾಗತಿಸಿದರು. ಡಾ.ಪುಟ್ಟಮಣಿ ದೇವಿದಾಸ ವಿವಿಧ ಸ್ಪರ್ಧೆಗಳ ಫಲಿತಾಂಶ ಓದಿದರು. ಡಾ.ಇಂದಿರಾ ಶೆಟಗಾರ್ ನಿರೂಪಿಸಿದರು, ಡಾ.ಸಿದ್ದಮ್ಮ ಗುಡೇದ್ ವಂದಿಸಿದರು. ಮಹಾವಿದ್ಯಾಲಯದ ಶಿಕ್ಷ ಕ ಮತ್ತು ಶಿಕ್ಷ ಕೇತರರು ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರು ಮತದಾನದ ಮಹತ್ವವನ್ನು ಬಿಂಬಿಸುವ ರಂಗೋಲಿ, ಚಿತ್ರಕಲೆ, ಡ್ರಾಮ ನಡೆಸಿಕೊಟ್ಟರು.
ಹಡಪದ ಅಭಿವೃದ್ಧಿ ನಿಗಮ ಸ್ಥಾಪನೆಗೆ ಆಗ್ರಹ
ಕಲಬುರಗಿ: ಹಡಪದ(ಕ್ಷೌರಿಕ) ಸಮಾಜದ ಪ್ರತ್ಯೇಕ ಅಭಿವೃದ್ಧಿ ನಿಗಮ ಮಂಡಳಿ ಸ್ಥಾಪನೆ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಅಖಿಲ ಕರ್ನಾಟಕ ಹಡಪದ(ಕ್ಷೌರಿಕ) ಸಮಾಜ ಸೇವಾ ಸಂಘದ ಪದಾಧಿಕಾರಿಗಳು ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಮುಂದೆ ಮಂಗಳವಾರ ಪ್ರತಿಭಟನೆ ನಡೆಸಿದರು. ಹಡಪದ, ನಾವಿ, ಕ್ಷೌರಿಕ, ನಾವಲಿಗ, ನಾಯಿಂದಾ, ಭಂಡಾರಿ ಹೀಗೆ ಆಯಾ ಭಾಗಗಳಲ್ಲಿ ಆಯಾ ಪದಗಳಿಂದ ಕರೆಯುತ್ತಾರೆ. ವೃತ್ತಿನಿರತ ಹಡಪದ ಸಮಾಜದವರು ಸಾಕಷ್ಟು ಸಮಸ್ಯೆಗಳು ಎದುರಿಸುತ್ತಿದ್ದಾರೆ. ಹೀಗಾಗಿ, ಸಮಾಜವನ್ನು ಪರಿಶಿಷ್ಟ ಪಂಗಡ (ಎಸ್ಟಿ)ಗೆ ಸೇರ್ಪಡೆ ಮಾಡಬೇಕು. ಹಾಗೂ ಇನ್ನೂ ಹಲವೆಡೆ, 'ಹಜಾಮ' ಎಂಬ ಪದದಿಂದ ಕರೆಯಲಾಗುತ್ತಿದ್ದು, ಅದನ್ನು ಕೂಡಲೇ ನಿಷೇಧಿಸಬೇಕು. ಮತ್ತು ಜಾತಿ ನಿಂದನೆ ಮಾಡಿದವರಿಗೆ ಅಟ್ರಾಸಿಟಿ ಅಡಿ ದೂರು ದಾಖಲಿಸುವಂತೆ ಕಾನೂನು ರಚಿಸಬೇಕು ಎಂದು ಡಿಸಿ ಮೂಲಕ ಮುಖ್ಯಮಂತ್ರಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ ಸಮಾಜದ ಜಿಲ್ಲಾಧ್ಯಕ್ಷ ಈರಣ್ಣ ಹಡಪದ ಸಣ್ಣೂರ ತಿಳಿಸಿದ್ದಾರೆ. *ಬೇಡಿಕೆಗಳು: ಬಸವಣ್ಣನವರ ಆಪ್ತ ಕಾರ್ಯದರ್ಶಿ ಹಡಪದ ಅಪ್ಪಣ್ಣನವರ ಜಯಂತಿಯನ್ನು ಕಡ್ಲಿಗಡಬು ಹುಣ್ಣಿಮೆಯಂದು ಸರಕಾರದ ವತಿಯಿಂದಲೇ ಆಚರಿಸಬೇಕು. ಜಿಲ್ಲಾ ಹಡಪದ ಸಮಾಜದ ಸಮುದಾಯ ಭವನಕ್ಕೆ ರೂ. 50 ಲಕ್ಷ ಬಿಡುಗಡೆ ಮಾಡಬೇಕು. ಗುಲ್ಬರ್ಗ ವಿಶ್ವವಿದ್ಯಾಲಯದಲ್ಲಿರುವ ಹಡಪದ ಅಪ್ಪಣ್ಣನವರ ಅಧ್ಯಯನ ಪೀಠಕ್ಕೆ ಪ್ರತ್ಯೇಕ ಕಟ್ಟಡ ನಿರ್ಮಿಸಲು ಧನ ಸಹಾಯ ಮಾಡಬೇಕು. ಕ್ಷೌರಿಕ ವೃತ್ತಿನಿರತ ಹಡಪದ ಸಮಾಜದ ಜನರಿಗೆ ಉಚಿತ ಆರೋಗ್ಯ ವಿಮೆ ಸೌಲಭ್ಯ ಕಲ್ಪಿಸಬೇಕು. ಗ್ರಾಮೀಣ ಪ್ರದೇಶಗಳಲ್ಲಿ ಕ್ಷೌರಿಕರಿಗಾಗಿ ಕ್ಷೌರ ಕುಟೀರ ನಿರ್ಮಿಸಬೇಕು. ಕ್ಷೌರಿಕ ವೃತ್ತಿನಿರತರಿಗೆ ಗ್ರಾಪಂ, ಪುರಸಭೆ, ನಗರಸಭೆ ವ್ಯಾಪ್ತಿಯ ವಾಣಿಜ್ಯ ಮಳಿಗೆಗಳನ್ನು ಕ್ಷೌರಿಕ ಅಂಗಡಿಗಳಿಗೆ ಮೀಸಲು ಇಡಬೇಕು. ಬೆಂಗಳೂರಿನಲ್ಲಿ ಹಡಪದ ಸಮಾಜದವರಿಗಾಗಿ ಉಚಿತ ವಸತಿ ನಿಲಯ ಆರಂಭಕ್ಕೆ ನಿವೇಶನ ಹಾಗೂ ಧನ ಸಹಾಯ ಮಾಡಬೇಕು. ರಾಜಕೀಯ ಕ್ಷೇತ್ರದಿಂದ ವಂಚಿತರಾದ ಹಡಪದ ಸಮಾಜಕ್ಕೆ ಪ್ರಾತಿನಿಧ್ಯ ಒದಗಿಸಬೇಕು. ಹಡಪದ ಸಮಾಜದ ವ್ಯಕ್ತಿಗಳಿಗೆ ನಿಗಮ ಮಂಡಳಿಯಲ್ಲಿ ಸ್ಥಾನ ನೀಡಬೇಕು. ಗ್ರಾಪಂಗಳಿಗೆ ಬರುವ ಸರಕಾರಿ ಮನೆಗಳಲ್ಲಿ ಕ್ಷೌರಿಕರ ಸಮುದಾಯಕ್ಕೂ ಮೀಸಲು ಇಡಬೇಕು. ಪಠ್ಯಪುಸ್ತಕಗಳಲ್ಲಿ ಹಡಪದ ಅಪ್ಪಣ್ಣನವರ ಹಾಗೂ ಹಡಪದ ಲಿಂಗಮ್ಮನವರ ವಚನಗಳನ್ನು ಸೇರ್ಪಡೆ ಮಾಡಬೇಕು ಎಂದು ಒತ್ತಾಯಿಸಿದರು. ಸಂಘದ ಯುವ ಜಿಲ್ಲಾಧ್ಯಕ್ಷ ಸಂತೋಷ್ ಬಗ್ದುರಗಿ, ಕಾರ್ಯದರ್ಶಿ ರಮೇಶ್ ಹಡಪದ ನಿಲೂರ, ಸಂಗಮೇಶ್, ಆನಂದ, ಸುನಿಲ್ ಸೇರಿ ಇತರರಿದ್ದರು.
ಸುಗಮ ಜೀವನಕ್ಕೆ ನಾಲ್ಕು ಸೂತ್ರ ಪಾಲಿಸಲು ಸಲಹೆ
ಕಲಬುರಗಿ: ಸುಗಮ ಜೀವನದ ನಾಲ್ಕು ಸೂತ್ರಗಳಾದ ಬೇಕೆಂಬುದೆ ನೋವು, ಸಾಕುಕೆಂಬುವುದೇ ನಲಿವು. ಇದ್ದುದ್ದನ್ನು ಕೊಟ್ಟು ಬಿಡು, ಇಲ್ಲದಕ್ಕೆ ಚಿಂತೆ ಬಿಡು ಎಂಬ ಸೂತ್ರಗಳನ್ನು ಜೀವನದಲ್ಲಿ ಅವಳಡಿಸಿಕೊಂಡರೆ ಜೀವನದಲ್ಲಿ ಖುಷಿಯಾಗಿರಬಹುದು ಎಂದು ಉಜ್ಜಯಿನಿ ಮಹಾಪೀಠದ 1008 ಸಿದ್ಧಲಿಂಗ ರಾಜೇಂದ್ರ ಶಿವಾಚಾರ್ಯರು ನೀಡಿದರು. ಜೇವರ್ಗಿ ರಸ್ತೆಯಲ್ಲಿರುವ ಫರಹತಾಬಾದ ಹತ್ತಿರದ ಬ್ರಹನ್ಮಠದ ಶಾಖೆ ಕೇಸರಿಬೆಟ್ಟದಲ್ಲಿ ಬಾಲ ತಪಸ್ವಿ ತಪೊರತ್ನ ಉಪಾಚಾರ್ಯರತ್ನ ದ್ವಿತೀಯ ಸಾಂಬಶಿವಾಚಾರ್ಯರು ಸಂಸ್ಥಾನ ಹಿರೇಮಠ ಸಾಂಬ ಸಲಗರ ಸಂಕಲ್ಪ ಮೆರೆಗೆ ತಪೋನಿಧಿ ಸಾಂಬ ಶಿವಯೋಗೀಶ್ವರ ನೂತನ ಮಹಾಪೂಜಾ ಭವನವನ್ನು ಉದ್ಘಾಟನೆ ಹಾಗೂ ಲಕ್ಷ ದೀಪೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಹೆಣ್ಣು ಬಾಳಿನ ಕಣ್ಣು. ಜೀವನದ ಜ್ಯೋತಿ ಹೆಣ್ಣು ಎಂಬುವುದನ್ನು ಮರೆಯಬಾರದು. ಹೆಣ್ಣನ್ನು ದ್ವೇಷಿಸಬಾರದು. ಹೆಣ್ಣು ಜೀವನಲ್ಲಿ ಮೊದಲು ತಾಯಿಯಾಗಿ, ತಂಗಿಯಾಗಿ, ಅಕ್ಕನಾಗಿ, ಮಡದಿಯಾಗಿ, ಮಗಳಾಗಿ ನಮ್ಮಗಳ ಜೀವನನ್ನು ಬೇಳಗಿಸುವ ಜ್ಯೋತಿ ಎಂದರು. ಸಿದ್ಧಲಿಂಗ ರಾಜೇಂದ್ರ ಶಿವಾಚಾರ್ಯರಿಗೆ ತುಲಾಭಾರ ಜರುಗಿತು. ಕೋಟಿ ಜಪಯಜ್ಞ ಹಾಗೂ 11000 ಸಾವಿರ ಮುತೈದೆಯರಿಗೆ ಉಡಿತುಂಬುವ ಕಾರ್ಯಕ್ರಮ ಜರುಗಿತು. ಬಾಲ ತಪಸ್ವಿ ತಪೊರತ್ನ ದ್ವಿತೀಯ ಸಾಂಬಶಿವಯೋಗಿಗಳ ಅಭಿಮಾನಿಗಳ ಬಳಗದ ವತಿಯಿಂದ ಸಾಂಬ ಸೇನಾ ಎಂಬ ಸಂಘಟನೆಯನ್ನು ಅಸ್ತಿತ್ವಕ್ಕೆ ತರಲಾಯಿತು. ಸಿದ್ದೇಶ್ವರ ಶಿವಾಚಾರ್ಯರು, ಗುರುಸ್ವಾಮಿ ಹೀರೆಮಠ, ಬಿಜೆಪಿ ಕಾರ್ಯಕಾರಣಿ ಸದಸ್ಯ ಸುಭಾಷ ಬಿರಾದಾರ, ಮಾಜಿ ಶಾಸಕ ಎಂ.ವೈ ಪಾಟೀಲ್, ಮಾಜಿ ಸಚಿವ ರೇವೂನಾಯಕ ಬೆಳಮಗಿ, ಬಿಜೆಪಿ ರಾಜ್ಯ ಕಾರ್ಯಕಾರಣಿ ಸದಸ್ಯೆ ಮಹೇಶ್ವರಿ ಶಿವಕುಮಾರ ವಾಲಿ, ಮತೀನ ಪಟೇಲ್, ಸಿದ್ದಾರ್ಥ ಬಸರಿಗಿಡ, ಸುರೇಶ ಮಹಾಗಾಂವಕರ್, ಬಸವರಾಜ ಬಿರಬಟ್ಟಿ, ಲಿಂಗರಾಜ, ಚಾಂದಪಾಶಾ ಜಮಾದಾರ, ಶಾಂತಕುಮಾರ ಬಿರಾದಾರ, ಶಿವಲಿಂಗಯ್ಯ ಸ್ವಾಮೀಜಿ, ಮಹಾಂತೇಶ, ಶಿವಾನಂದ ಸ್ವಾಮಿ, ಮಂಜು ಬಿರಾದಾರ ಸೇರಿದಂತೆ ಹಲವಾರು ಗಣ್ಯರು ಇದ್ದರು. ಪ್ರಥಮ ಸಾಂಬಶಿವಯೋಗಿ ನಮ್ಮನ್ನು ಬಿಟ್ಟು ಹೋಗಿಲ್ಲ. ನಮ್ಮ ಜೊತೆಯಲ್ಲಿಯೇ ದ್ವೀತಿಯ ಸಾಂಬ ಶಿವಾಚಾರ್ಯರಾಗಿ ಇದ್ದಾರೆ. ಸತ್ತಿರುವಂತಹ 28 ಜನರನ್ನು ಮರು ಜೀವವನ್ನು ನೀಡಿದ ಮಹಾ ಪವಾಡ ಯೋಗಿಗಳಾಗಿದ್ದರು. -ಸಿದ್ಧಲಿಂಗ ರಾಜೇಂದ್ರ ಶಿವಾಚಾರ್ಯರು, ಉಜ್ಜಯಿನಿ ಮಹಾಪೀಠ
ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ 24ರಂದು
ಕಲಬುರಗಿ: ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ 5ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನವನ್ನು ಫೆ. 24ರಂದು ಇಲ್ಲಿನ ಶತಮಾನೋತ್ಸವ ಸಭಾಂಗಣದಲ್ಲಿ ನಡೆಸಲು ಪರಿಷತ್ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ನಿರ್ಧರಿಸಲಾಗಿದೆ. ಸಮ್ಮೇಳನ ಯಶಸ್ವಿಯಾಗಿ ಜರುಗಲು ಶರಣಬಸವೇಶ್ವರ ಸಂಸ್ಥಾನದ 8ನೇ ಪೀಠಾಧಿಪತಿ ಡಾ. ಶರಣಬಸವಪ್ಪ ಅಪ್ಪ ಸಾನ್ನಿಧ್ಯ ವಹಿಸಲು ಒಪ್ಪಿಗೆ ಸೂಚಿಸಿದ್ದು, ಈ ಬಗ್ಗೆ ಪದಾಧಿಕಾರಿಗಳ ಮನವಿಗೆ ಸ್ಪಂದನೆ ಸಿಕ್ಕಿದ್ದು, ಸಮ್ಮೇಳನ ಸಾರ್ಥಕಗೊಳಿಸಲು ಪೂಜ್ಯರ ಆಶೀರ್ವಾದ ಸಿಕ್ಕಿದೆ ಎಂದು ಪದಾಧಿಕಾರಿಗಳು ತಿಳಿಸಿದ್ದಾರೆ. ಸಮ್ಮೇಳನಕ್ಕೆ ಸ್ಥಳ ನೀಡಿದ ಅಪ್ಪಾ ಅವರಿಗೆ ಕಲಬುರಗಿ ತಾಲೂಕಿನ ಪದಾಧಿಕಾರಿಗಳು ಸನ್ಮಾನಿಸಿದರು. ಕಸಾಪ ಕಲಬುರಗಿ ತಾಲೂಕಿನ ಅಧ್ಯಕ್ಷ ಸಿ.ಎಸ್. ಮಾಲಿಪಾಟೀಲ ಹಿರಿಯ ಸಾಹಿತಿ ಎ.ಕೆ. ರಾಮೇಶ್ವರ, ಪ್ರೊ. ಬಿ.ಹೆಚ್. ಭಜಂತ್ರಿ ಡಾ. ಚಿ.ಸಿ.ನಿಂಗಣ್ಣ, ಡಾ. ಸಂಗಮೇಶ ಹಿರೆಮಠ, ವೆಂಕಟೇಶ ನೀರಡಗಿ, ಲಿಂಗರಾಜ ಸಿರಗಾಪೂರ, ನಾರಾಯಣ ಜೋಶಿ, ಎಸ್.ಜಿ. ಮಠ, ವೀರಸಂಗಪ್ಪಾ, ಪ್ರಶಾಂತ ತಂಬೂರಿ ಇದ್ದರು. ಈ ಸಂದರ್ಭದಲ್ಲಿ ಡಾ. ನೀಲಾಂಬಿಕಾ ಪೋಲಿಸ್ ಪಾಟೀಲ, ಪ್ರೊ. ಶಿವರಾಜ ಶಾಸ್ತ್ರಿ ಹೇರೂರ ಇತರರು ಉಪಸ್ಥತರಿದ್ದರು ಎಂದು ಗೌರವ ಕಾರ್ಯದರ್ಶಿ ಡಾ. ಶರಣಬಸಪ್ಪ ವಡ್ಡನಕೇರಿ, ಬಾನುಕುಮಾರ ಗಿರೆಗೋಳ ತಿಳಿಸಿದ್ದಾರೆ.
ವೈಚಾರಿಕತೆ ಹೆಸರಿನಲ್ಲಿ ಸಂಸ್ಕೃತಿ ಕಲುಷಿತ ಬೇಡ: ರಂಭಾಪುರಿ ಶ್ರೀ
ಅಫಜಲಪುರ: ಸಬಲ ಸದೃಢ ಮತ್ತು ಆರೋಗ್ಯ ಪೂರ್ಣ ಸಮಾಜ ನಿರ್ಮಾಣಕ್ಕೆ ಖಾದಿ, ಖಾಕಿ -ಖಾವಿ ಪ್ರಾಮಾಣಿಕವಾಗಿ ಕಾರ್ಯ ಮಾಡಿದರೆ, ಎಲ್ಲೆಡೆ ಸಾಮರಸ್ಯ ಶಾಂತಿ ನೆಲೆಗೊಳ್ಳಲು ಸಾಧ್ಯವಾಗುವುದೆಂದು ಬಾಳೆಹೊನ್ನೂರು ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕ ಡಾ. ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ಅಭಿಪ್ರಾಯಪಟ್ಟರು. ತಾಲೂಕಿನ ಚಿನ್ಮಯಗಿರಿ ಚೌಡಾಪುರ ಕ್ಷೇತ್ರದಲ್ಲಿ ಗುರು ಮಹಾಂತೇಶ್ವರ ಗದ್ದುಗೆ ಲಿಂಗ ಪ್ರತಿಷ್ಠಾಪನೆ, ಕಳಸಾರೋಹಣ ಮತ್ತು ಕಾಯಕಯೋಗಿ ಸಿದ್ಧರಾಮ ಶಿವಾಚಾರ್ಯ ಸ್ವಾಮಿಗಳವರ ಪಟ್ಟಾಧಿಕಾರದ ಸುವರ್ಣ ಮಹೋತ್ಸವ ಧರ್ಮ ಸಮಾಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು. ಚಿನ್ಮಯಗಿರಿ ಮಹಾಂತೇಶ್ವರ ಕ್ರಿಯಾ ಕತೃತ್ವ ಶಕ್ತಿ ಅಮೋಘವಾದುದು. ಕಡಕೋಳದ ಮಡಿವಾಳಪ್ಪನವರಿಗೆ ಲಿಂಗ ದೀಕ್ಷೆಯಿತ್ತ ಮಹಾಮಹಿಮ. ರಂಭಾಪುರಿ ಪೀಠದ ಶಾಖಾ ಮಠವಾಗಿರುವ ಈ ಕ್ಷೇತ್ರ ಇಂದಿನ ಪಟ್ಟಾಧ್ಯಕ್ಷ ರಾದ ಸಿದ್ಧರಾಮ ಶಿವಾಚಾರ್ಯರು ಪಟ್ಟಾಧಿಕಾರ ವಹಿಸಿಕೊಂಡು 50 ವರ್ಷ ಪೂರ್ಣಗೊಂಡ ಸಂದರ್ಭದಲ್ಲಿ ಸುವರ್ಣ ಮಹೋತ್ಸವ, ಕಾಯಕಯೋಗಿ ಗ್ರಂಥ ಬಿಡುಗಡೆ, ಗುಡ್ಡದ ಐಸಿರಿ ಸಿ.ಡಿ. ಬಿಡುಗಡೆಗೊಳಿಸುತ್ತರುವುದು ಸಂತಸದ ಸಂಗತಿ. ವೀರಶೈವ ಧರ್ಮ ಸಂಸ್ಕೃತಿ ಆಚಾರ್ಯ ಪರಂಪರೆ ಎತ್ತಿ ಹಿಡಿದ ಶ್ರೇಯಸ್ಸು ಶ್ರೀಗಳದ್ದಾಗಿದೆ ಎಂದರು. ಸಾನ್ನಿಧ್ಯ ವಹಿಸಿದ ಉಜ್ಜಯಿನಿ ಜಗದ್ಗುರು ಸಿದ್ಧಲಿಂಗ ಶಿವಾಚಾರ್ಯ ಭಗವತ್ಪಾದರು ಆಶೀರ್ವಚನ ನೀಡಿ, ಧರ್ಮದ ದಿಕ್ಸೂಚಿ ಇಲ್ಲದೇ ಹೋದರೆ ಬದುಕು ಬರಡು. ಕತ್ತಲೆಯ ಬಾಳಿನಲ್ಲಿ ಬೆಳಕು ತೋರಬಲ್ಲಾತನೇ ನಿಜವಾದ ಗುರು. ಶಿವಪಥವನರಿಯಲು ಗುರು ಪಥವೇ ಮೊದಲು. ಕಾಯಕ ಯೋಗಿ ಸಿದ್ಧರಾಮ ಶಿವಾಚಾರ್ಯರ ಶ್ರಮ ಜೀವಿಗಳಾಗಿ ಧರ್ಮ ಕಾರ್ಯಗಳನ್ನು ಮಾಡಿದ ಶ್ರೇಷ್ಠ ಸಾಧಕರು. ಶ್ರೀಗಳು ನೂರಾರು ವರುಷ ಬಾಳಿ ಬದುಕಿ ಭಕ್ತ ಸಮುದಾಯಕ್ಕೆ ಮಾರ್ಗದರ್ಶನ ನೀಡಲೆಂದು ಹಾರೈಸಿದರು. ಹಲವಾರು ಮಠಾಧೀಶರರು ಪಾಲ್ಗೊಂಡ ಈ ಧರ್ಮ ಸಮಾರಂಭದ ನೇತೃತ್ವವನ್ನು ಚಿನ್ಮಯಗಿರಿ ಸಿದ್ಧರಾಮ ಶಿವಾಚಾರ್ಯ ಸ್ವಾಮಿಗಳು ವಹಿಸಿ ಮಾತನಾಡಿದ ಅವರು ಗುರುವಿನಲ್ಲಿ ಇಟ್ಟ ನಿಷ್ಠೆ ಈ ಎತ್ತರಕ್ಕೆ ಬೆಳೆಸಿದೆ. ಕಾಯಕ ನನ್ನ ಜೀವನದ ಉಸಿರು ಎಂದರು. ಹಾರಕೂಡದ ಚನ್ನವೀರ ಶಿವಾಚಾರ್ಯರು, ಸ್ಟೇಷನ್ ಬಬಲಾದಿನ ರೇವಣಸಿದ್ಧ ಶಿವಾಚಾರ್ಯರು ಸೇರಿದಂತ ಐಹೊಳಿ, ಶಿರಿಸ್ಯಾಡ, ಅಳ್ಳಳ್ಳಿ, ಮಾಶ್ಯಾಳ, ಮಿಣಜಿಗಿ, ಜೋಗೂರ ಶ್ರೀಗಳು ಉಪಸ್ಥಿತರಿದ್ದರು. ಮೈಸೂರಿನ ಜಿ.ಎಸ್.ಎಸ್.ಗುರುಕುಲದ ಸಾಧಕರು ವೇದಘೋಷ ಮಾಡಿದರು. ಸಮಾರಂಭಕ್ಕೂ ಮುನ್ನ ಉಭಯ ಜಗದ್ಗುರುಗಳವರನ್ನು ಅಲಂಕೃತ ಸಾರೋಟದಲ್ಲಿ ಭವ್ಯ ಮೆರವಣಿಗೆಯೊಂದಿಗೆ ಕ್ಷೇತ್ರಕ್ಕೆ ಬರಮಾಡಿಕೊಂಡರು. ಸಕಲ ವಾದ್ಯ ವೈಭವ, ಕಲಶ ಕನ್ನಡಿ ಕುಂಭ ಹೊತ್ತ ಮಹಿಳೆಯರು ಸಹಸ್ರಾರು ಭಕ್ತರು ಪಾಲ್ಗೊಂಡು ಉಭಯ ಜಗದ್ಗುರುಗಳವರ ಆಶೀರ್ವಾದ ಪಡೆದರು. ಭಾರತೀಯ ಉತ್ಕೃಷ್ಟ ಸಂಸ್ಕೃತಿ ಉಳಿದು ಬಂದಿದ್ದರೆ ಅದು ಅಧ್ಯಾತ್ಮದಿಂದ ಎಂಬುದನ್ನು ಮರೆಯುವಂತಿಲ್ಲ. ಧರ್ಮ ದೇವರು ಗುರುವಿನಲ್ಲಿ ನಂಬಿಕೆ ವಿಶ್ವಾಸವಿಟ್ಟು ಬಾಳಿದವರ ಬಾಳು ವಿಕಾಸಗೊಂಡಿದ್ದನ್ನು ಕಾಣುತ್ತೇವೆ. ವೈಚಾರಿಕತೆ ಹೆಸರಿನಲ್ಲಿ ಸಂಸ್ಕೃತಿ ಕಲುಷಿತಗೊಳಿಸಬಾರದು. ಶೃದ್ಧೆ, ನಿಷ್ಠೆ, ಸ್ವಾಭಿಮಾನ, ಕರ್ತವ್ಯಶೀಲತೆ ಬಾಳಿನ ಉತ್ಕರ್ಷತೆಗೆ ಅಡಿಪಾಯವಾಗಿದೆ. - ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕ ಡಾ. ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು
ಜಡ್ಜ್ ನೇಮಕ: ವಕೀಲರ ನಿರಶನ
ಕಲಬುರಗಿ: ಇಲ್ಲಿನ ಹೈಕೋರ್ಟ್ ಪೀಠಕ್ಕೆ ತುರ್ತಾಗಿ ನ್ಯಾಯಮೂರ್ತಿಗಳನ್ನು ನೇಮಕ ಮಾಡುವಂತೆ ಆಗ್ರಹಿಸಿ ಕಲಬುರಗಿ ನ್ಯಾಯವಾದಿಗಳ ಸಂಘದ ಉಚ್ಛ ನ್ಯಾಯಾಲಯ ಘಟಕ ಸಂಘದ ಪದಾಧಿಕಾರಿಗಳು ಮತ್ತು ವಕೀಲರು ಪೀಠದ ಪ್ರವೇಶ ದ್ವಾರದ ಎದುರು ಬುಧವಾರ ಸರದಿ ಉಪವಾಸ ಸತ್ಯಾಗ್ರಹ ಆರಂಭಿಸಿದರು. ಸತ್ಯಾಗ್ರಹ ನೇತೃತ್ವ ವಹಿಸಿದ ಸಂಘದ ಜಿಲ್ಲಾಧ್ಯಕ್ಷ ಆರ್.ಕೆ.ಹಿರೇಮಠ ಮಾತನಾಡಿ, ಕಲಬುರಗಿ ಹೈಕೋರ್ಟ್ ಪೀಠದ ಕಾರ್ಯಾರಂಭ ಮಾಡಿದಾಗ 8926 ಪ್ರಕರಣಗಳು ವರ್ಗವಾಗಿ ಬಂದಿದ್ದವು. ಅಲ್ಲಿಂದ ಇಲ್ಲಿಯವರೆಗೆ 1,23,868 ಪ್ರಕರಣಗಳು ದಾಖಲಾಗಿವೆ. ಇದರಲ್ಲಿ 1,09,584 ಪ್ರಕರಣಗಳಲ್ಲಿ ತೀರ್ಪು ನೀಡಲಾಗಿದೆ . ಈಗ 24094 ಪ್ರಕರಣಗಳು ಇತ್ಯರ್ಥಗೊಳ್ಳದೆ ಬಾಕಿ ಉಳಿದಿವೆ ಎಂದು ವಿವರಿಸಿದರು. ಹೈಕೋರ್ಟ್ ನ್ಯಾಯಾಧೀಶರ ನೇಮಕಾತಿ ಪ್ರಕ್ರಿಯೆ ವೇಳೆ ಕಲಬುರಗಿ ಪೀಠದಲ್ಲಿ ಪ್ರಾಕ್ಟೀಸ್ ಮಾಡುವ ವಕೀಲರನ್ನು ಸಹ ಪರಿಗಣಿಸಬೇಕೆಂದು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರಬೇಕೆಂದು ಅವರು ಮನವಿ ಮಾಡಿದರು. ಸದ್ಯ ಮೂವರು ನ್ಯಾಯಾಧೀಶರು ಕಾರ್ಯನಿರ್ವಹಿಸುತ್ತಿದ್ದು, ಇನ್ನೂ ಇಬ್ಬರು ನ್ಯಾಯಾಧೀಶರ ಅವಶ್ಯಕತೆಯಿದೆ. ಈ ಕೂಡಲೆ ಅಗತ್ಯ ನ್ಯಾಯಮೂರ್ತಿಗಳ ಹುದ್ದೆಗಳಿಗೆ ನೇಮಕ ಮಾಡಬೇಕೆಂದು ಅವರು ಆಗ್ರಹಿಸಿದರು. ಸಂಘದ ಪದಾಧಿಕಾರಿಗಳಾದ ಶರಣಯ್ಯ ಮಠ, ಗೋಪಾಲಕೃಷ್ಣನ್ ಯಾದವ್, ಅಮರೇಶ್ವರ ರಾವೂರ, ಶಂಭುಲಿಂಗ ಸಾಲಿಮಠ, ರಾಜೇಶ್ ದೊಡ್ಡಮನಿ, ವೀರಶೆಟ್ಟಿ ಕೊಂಡಂಪಳ್ಳಿ, ನಾಮದೇವ, ಎಸ್.ಎಸ್.ಮಮದಾಪುರ, ಬಿ.ಎನ್.ಪಾಟೀಲ್ ಸೇರಿದಂತೆ ಇನ್ನಿತರರು ಇದ್ದರು.
ಮಠಗಳು ಸಂಸ್ಕಾರ ಕಲಿಕಾ ಕೇಂದ್ರ ಆಗಲಿ :ರಂಭಾಪುರಿ ಶ್ರೀ
ಕಲಬುರಗಿ: ಅತಿಯಾದ ವೈಚಾರಿಕತೆಯಿಂದ ಭಾರತೀಯ ಉತ್ಕೃಷ್ಟ ಸಂಸ್ಕೃತಿಗೆ ಧಕ್ಕೆ ಉಂಟಾಗುತ್ತಿದೆ. ಜನರಲ್ಲಿ ಸಂಸ್ಕಾರ ಕೊರತೆ ಹೆಚ್ಚುತ್ತಿದೆ. ಹೀಗಾಗಿ ನಾಡಿನ ಮಠಗಳು ಸಂಸ್ಕಾರ ಕಲಿಸುವ ಕೇಂದ್ರಗಳಾಗಿ ಕಾರ್ಯ ನಿರ್ವಹಿಸಬೇಕಿದೆ ಎಂದು ಬಾಳೆಹೊನ್ನೂರು ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕ ಡಾ.ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ಕಿವಿಮಾತು ಹೇಳಿದರು. ಅಫಜಲಪುರ ತಾಲೂಕಿನ ಚಿನ್ಮಯಗಿರಿಯಲ್ಲಿ ಹಮ್ಮಿಕೊಂಡಿದ್ದ ಗುರು ಪಟ್ಟಾಧಿಕಾರ ಮಹೋತ್ಸವ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು. ಮನುಷ್ಯ ಜೀವನದಲ್ಲಿ ಸಂಸ್ಕಾರ ಮುಖ್ಯ. ಸಂಸ್ಕಾರದಿಂದಲೇ ಸದ್ಗತಿ ಮತ್ತು ಶ್ರೇಯಸ್ಸು ಪ್ರಾಪ್ತವಾಗುತ್ತದೆ. ನೀತಿ ನಿಯಮಗಳು ನಮ್ಮನ್ನು ರಕ್ಷಿಸುತ್ತವೆ ಎಂದರು. ವೀರಶೈವ ಧರ್ಮದಲ್ಲಿ ಜಗದ್ಗುರು ರೇಣುಕಾಚಾರ್ಯರು ಸಂಸ್ಕಾರಕ್ಕೆ ಹೆಚ್ಚಿನ ಪ್ರಾಧಾನ್ಯತೆ ಕೊಟ್ಟಿದ್ದಾರೆ. ಜಾತಿಗಿಂತ ನೀತಿ, ತತ್ವಕ್ಕಿಂತ ಆಚರಣೆ, ಮಾತಿಗಿಂತ ಕೃತಿ, ಬೋಧನೆಗಿಂತ ಸಾಧನೆ. ಚರಿತ್ರೆಗಿಂತ ಚಾರಿತ್ರ್ಯ, ದಾನಕ್ಕಿಂತ ದಾಸೋಹಕ್ಕೆ ಹೆಚ್ಚಿನ ಪ್ರಾಮುಖ್ಯತೆ ಕೊಟ್ಟಿದ್ದಾರೆ ಎಂದರು. ಕಾಯಿಸಿದ ಚಿನ್ನ ಒಡವೆಯಾಗುತ್ತದೆ. ಬಡಿದ ತಾಮ್ರ ತಂತಿಯಾಗುತ್ತದೆ. ಕೆತ್ತಿದ ಕಲ್ಲು ಸುಂದರ ಮೂರ್ತಿಯಾಗುತ್ತದೆ. ಅದರಂತೆ ಗುರುವಿನ ಸಂಸ್ಕಾರ ಬಲದಿಂದ ಜೀವಾತ್ಮ ಪರಮಾತ್ಮನಾಗಲು ಸಾಧ್ಯವಾಗುತ್ತದೆ. ಮನುಷ್ಯ ಜೀವನದಲ್ಲಿ ಗುರು ಮತ್ತು ಗುರಿ ಇರಬೇಕು. ವೀರಶೈವ ಧರ್ಮದಲ್ಲಿ ಗುರು ಪೀಠ ಪರಂಪರೆ ಪ್ರಾಚೀನ ಕಾಲದಿಂದ ಬೆಳೆದು ಬಂದಿದೆ ಎಂದು ನುಡಿದರು. ಚಿನ್ಮಯಗಿರಿ ಮಹಾಂತೇಶ್ವರ ಮಠ ರಂಭಾಪುರಿ ಪೀಠದ ಶಾಖಾ ಮಠವಾಗಿದ್ದು , ಸಿದ್ಧರಾಮ ಶಿವಾಚಾರ್ಯರ ಸುದೀರ್ಘ 50 ವರುಷಗಳ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯ ಮಾಡಿದ್ದಾರೆ. ಇಂದು ತಮ್ಮ ಉತ್ತರಾಧಿಕಾರಿಗಳಾಗಿ ಅಣ್ಣಯ್ಯ ದೇವರಿಗೆ ವಿದ್ಯುಕ್ತವಾಗಿ ಗುರು ಪಟ್ಟಾಧಿಕಾರ ನೆರವೇರಿಸಿದ ಈ ಅಪೂರ್ವ ಸಂದರ್ಭದಲ್ಲಿ ನೂತನ ಪಟ್ಟಾಧ್ಯಕ್ಷರಿಗೆ ವೀರ ಮಹಾಂತ ಶಿವಾಚಾರ್ಯ ಸ್ವಾಮಿಗಳು ಎಂಬ ಅಭಿದಾನದೊಂದಿಗೆ ದಂಡ ಕಮಂಡಲ ಪಂಚ ಮುದ್ರಾ ಸಮೇತ ಪೀಠದಿಂದ ರೇಶ್ಮೆ ಮಡಿ ಫಲ ತಾಂಬೂಲವನ್ನಿತ್ತು ಶುಭ ಹಾರೈಸಿದ್ದೇವೆ. ಅತ್ಯಂತ ಜವಾಬ್ದಾರಿ ಸ್ಥಾನವನ್ನು ಹೊಂದಿದ ವೀರ ಮಹಾಂತ ಶಿವಾಚಾರ್ಯರು ತಮ್ಮ ಂದಿನ ಗುರುಗಳಂತೆ ಮಠದ ಗೌರವ ಘನತೆ ಕಾಪಾಡಿಕೊಂಡು ಭಕ್ತರ ಕಲ್ಯಾಣವನ್ನು ಉಂಟು ಮಾಡಲೆಂದು ಆಶೀರ್ವದಿಸಿದರು. ಮುಗಳಖೋಡ-ಜಿಡಗಾ ಮಠದ ಷಡಕ್ಷರ ಶಿವಯೋಗಿ ಡಾ.ಮುರುಘರಾಜೇಂದ್ರ ಮಹಾಸ್ವಾಮಿಗಳು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಚಿನ್ಮಯಗಿರಿ ಚೌಡಾಪುರ ಮಹಾಂತೇಶ್ವರ ಮಠದ ಸಿದ್ಧರಾಮ ಶಿವಾಚಾರ್ಯ ಸ್ವಾಮಿಗಳು ಸಮಾರಂಭದ ನೇತೃತ್ವವನ್ನು ವಹಿಸಿದ್ದರು. ಬಡದಾಳ, ಕಡಕೋಳ,ಅಫಜಲಪುರ, ರೇವೂರ, ಆಲಮೇಲ, ಶಿರಸ್ಯಾಡ ಶಿವಾಚಾರ್ಯರನ್ನು ಸೇರಿದಂತೆಯೇ ಸುಮಾರು 50 ಮಠಾಧೀಶರು ಪಟ್ಟಾಧಿಕಾರ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಶಿವಶರಣಪ್ಪ ಸಿರಿ, ಮಲ್ಲಿಕಾರ್ಜುನ ಪಾಟೀಲ್, ಸಿದ್ರಾಮಪ್ಪ ಆಲಗೂಡಕರ್ ಸೇರಿದಂತೆ ಇತರರು ಪಾಲ್ಗೊಂಡಿದ್ದರು.
ಉನ್ನತ ಆಚಾರ -ವಿಚಾರವೇ ಆತ್ಮೋನ್ನತಿಯ ಹಾದಿ
ಕಲಬುರಗಿ: ನಮ್ಮೊಳಗಿನ ಉನ್ನತ ಆಚಾರ ಮತ್ತು ವಿಚಾರದಿಂದ ಲಭಿಸುವ ಆತ್ಮೋನ್ನತಿ ಆಗುವುದಾದರೆ, ನಾವು ಆಚರಿಸುವ ಶಿವರಾತ್ರಿಗೆ ನೈಜ ಅರ್ಥ ಲಭಿಸುತ್ತದೆ ಎಂದು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ವಲಯ ಮುಖ್ಯಸ್ಥರಾದ ಬಿ.ಕೆ.ವಿಜಯಾ ಅಕ್ಕ ಕಿವಿಮಾತು ಹೇಳಿದರು. ಇಲ್ಲಿನ ಆದರ್ಶ ನಗರದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ, ವಿಜಯ ಕರ್ನಾಟಕ ಹಾಗೂ ಬೋಧಿವೃಕ್ಷ ಆಶ್ರಯದಲ್ಲಿ ಶಿವರಾತ್ರಿ ಪ್ರಯುಕ್ತ ಹಮ್ಮಿಕೊಳ್ಳಲಾಗಿದ್ದ ಶಿವದರ್ಶನ ಸತ್ಸಂಗ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು. ಆಚಾರ, ವಿಚಾರ, ಆಹಾರ, ವ್ಯವಹಾರದಲ್ಲಿ ಸ್ವಚ್ಛತೆ ಇರುವಂತೆ ಜಾಗೃತಿ ವಹಿಸದೆ, ಕೇವಲ ಜಾಗರಣೆ ಮಾಡಿದ ಮಾತ್ರಕ್ಕೆ ಶಿವರಾತ್ರಿ ಆಚರಣೆಗೆ ಅರ್ಥ ಬರುವುದಿಲ್ಲ ಎಂದು ಪ್ರತಿಪಾದಿಸಿದರು. ಇತ್ತೀಚೆಗೆ ಬಹುತೇಕರು ಕೇವಲ ತಮ್ಮ ದೇಹದ ಚಿಂತೆಯಲ್ಲಿ ಹೆಚ್ಚಾಗಿ ಮುಳುಗುತ್ತಿದ್ದಾರೆ. ಹೀಗಾಗಿ, ಶಿವರಾತ್ರಿಯ ನೆಪದಲ್ಲಿ ಟೆಲಿವಿಷನ್ ಎದುರು ಕುಳಿತು ಜಾಗರಣೆ ಮಾಡುವ ಪರಿಪಾಠ ರೂಢಿಸಿಕೊಂಡಿದ್ದಾರೆ. ಮನದ ಸ್ವಚ್ಛತೆಗೆ ಅಧ್ಯಾತ್ಮದ ಅಗತ್ಯವಿದೆ. ಅಂದಾಗ ಮಾತ್ರ ಆತ್ಮೋನ್ನತಿ ಮತ್ತು ಆತ್ಮೋದ್ಧಾರದ ದಾರಿ ಮುಕ್ತಗೊಳ್ಳುತ್ತದೆ ಎಂಬುದು ಗ್ರಹಿಸದ ಕಾರಣ ಹೀಗೆಲ್ಲಾ ಆಗುತ್ತಿದೆ ಎಂದು ವಿಜಯಾ ಅಕ್ಕ ಅರ್ಥೈಸಿದರು. ಶಿವ ಪರಂಜ್ಯೋತಿಯಷ್ಟೇ ಅಲ್ಲ; ಆತ ಅಯೋಜಿಜ. ಹೀಗಾಗಿ, ಅವನು ಯಾವುದೇ ಧರ್ಮ, ಜಾತಿಗೆ ಸೀಮಿತವಲ್ಲ. ಇಡೀ ಮನುಷ್ಯ ಗಣದ ಪಾಲಿಗೆ ಶಿವನೇ ಭಗವಂತ. ಶಿವನಿಲ್ಲದ ಜೀವನ ಶವ ಸಮಾನ ಎಂಬುದು ಎಷ್ಟು ಸತ್ಯವೋ, ದೇಹದ ಚಿಂತೆಯಲ್ಲಿ ಮುಳುಗುವುದನ್ನು ಬಿಟ್ಟು ದೇಹವನ್ನು ಪಂಚ ವಿಕಾರಗಳಿಂದ ಮುಕ್ತಗೊಳಿಸಿಕೊಳ್ಳಲು ಶಿವರಾತ್ರಿಯ ಜಾಗರಣೆ, ಧ್ಯಾನವನ್ನು ಆಶ್ರಯಿಸಿದರೆ ಆತ್ಮಜ್ಞಾನ ಲಭಿಸುತ್ತದೆ ಎಂಬುದು ಅಷ್ಟೇ ಸತ್ಯ ಎಂದು ಅವರು ಸಲಹೆ ನೀಡಿದರು. ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ನಿರ್ದೇಶಕ ರಾಜಯೋಗಿ ಬಿ.ಕೆ.ಪ್ರೇಮ್ ಅಣ್ಣನವರು ಮಾತನಾಡಿ, ಬೋಧಿವೃಕ್ಷ, ಕಲ್ಪವೃಕ್ಷ ಮತ್ತು ಕ್ರಿಸ್ಮಸ ಟ್ರೀ - ಹೆಸರಿನಲ್ಲಿ ಮನುಷ್ಯ ಮೊದಲು ತನ್ನ ಧರ್ಮದ ಆಚರಣೆಯ ಕಡೆಗೆ ಆಕರ್ಷಿತನಾಗುತ್ತಾನೆ. ಇಂತಹ ಆಕರ್ಷಣೆಗೆ ಪ್ರತೀಕಗಳ ಅಗತ್ಯವಿದೆ ಎಂದರು. ಇದಕ್ಕೂ ಮುನ್ನ ಕಲಬುರಗಿ ಮಹಾನಗರ ಪಾಲಿಕೆಯ ಮಹಾಪೌರ ಶರಣಕುಮಾರ್ ಮೋದಿ ಉದ್ಘಾಟಿಸಿದರು. ಶಾಮಾಚಾರಿ ಬೈಚನಾಳ ಅವರು ಕಣ್ವಮಠದ ವಿದ್ಯಾ ವಾರಿಧಿ ತೀರ್ಥ ಪಾದಂಗಳವರ್ ಅವರ ಪರಿಚಯ ಮಾಡಿಕೊಟ್ಟರು. ಬಿ.ಕೆ.ಮನೋಜ್ ಬಾಯ್ ಪ್ರಾರ್ಥಿಸಿದರು. ಜ್ಯೋತಿ ಜಾತಿ ರಹಿತ ಶಿವನ ನೈಜ ಧ್ಯಾನದಿಂದ ಆತ್ಮಜ್ಞಾನ ಲಭಿಸುತ್ತದೆ. ಇದರ ಜೊತೆಗೆ, ನಮ್ಮೊಳಗಿನ ಆತ್ಮಜ್ಯೋತಿ ಪ್ರಜ್ವಲಿಸುತ್ತದೆ. ಇಷ್ಟಕ್ಕೂ ಜ್ಯೋತಿಗೆ ಯಾವುದೇ ಜಾತಿಯಿಲ್ಲ ಎಂದ ಮೇಲೆ ಶಿವ ಮತ್ತು ಆತನ ಆರಾಧಕರು ಒಂದೇ ಜಾತಿಗೆ ಸೇರಿರಲೇಬೇಕು ಎಂಬ ನಿಯಮವೇನೂ ಇಲ್ಲ ಎಂದು ಬಿ.ಕೆ.ವಿಜಯಾ ಅಕ್ಕ ಹೇಳಿದರು. ಶರಣ ಸಾಹಿತ್ಯ ಮತ್ತು ಶರಣರ ವಚನಗಳಲ್ಲಿ ಶಿವನ ಕುರಿತಾದ ಅತ್ಯುತ್ತಮ ವಚನಗಳಿವೆ. ಈ ಎಲ್ಲ ವಚನಗಳಲ್ಲಿ ಆಂತರಿಕ ಬದಲಾವಣೆ ಹೆಚ್ಚು ಮಹತ್ವ ನೀಡಲಾಗಿದೆ. ಆಂತರಿಕ ಬದಲಾವಣೆ ಆಗದ ಹೊರತು; ಆಂತರಿಕ ನೆಮ್ಮದಿ ಲಭಿಸದು. ಹೀಗಾಗಿ, ಶಿವನ ಆರಾಧನೆಗೂ ಮುನ್ನ ಮನದ ಸ್ವಚ್ಛತೆಗೆ ಒತ್ತು ನೀಡಬೇಕಿದೆ ಎಂದರು. ಶಿವನನ್ನು 'ಶಂಕರ' ಮಾಡಿದವರು ನಾವು... ಶಿವನು ಪರಂಜ್ಯೋತಿ ಸ್ವರೂಪ. ಹೀಗಾಗಿ, ಅವನಿಗೆ ಯಾವುದೇ ಜಾತಿ, ಧರ್ಮ ಮತ್ತು ಸಂಬಂಧದ ಜಂಜಾಟವೇ ಇಲ್ಲ ಎಂದು ಹೇಳಲಾಗುತ್ತಿತ್ತು. ಆದರೆ, ಭಕ್ತಿಯ ಪರಾಕಾಷ್ಠೆ ಮತ್ತು ತಮ್ಮ ನಿಲುವುಗಳ ಸಮರ್ಥನೆಗೆ ಭಕ್ತರು ಶಿವ ಹೆಸರಿಗೆ ಶಂಕರ ಎಂದು ಪರ್ಯಾಯ ಪದ ಜೋಡಿಸಿ, ಅವನ ಪಕ್ಕದಲ್ಲೊಬ್ಬ ಸತಿ, ಮುಡಿಯಲ್ಲಿ ಗಂಗೆ ಮತ್ತು ಚಂದ್ರನನ್ನು ಕೂಡಿಸಿಬಿಟ್ಟಿದ್ದಾರೆ. ಆ ಪ್ರಯತ್ನದ ಫಲವಾಗಿ ಶಂಕರ ಸಂಸಾರಿ ಎಂಬುದನ್ನು ಪ್ರತಿಪಾದಿಸತೊಡಗಿದರು ಎಂದು ಬಿ.ಕೆ. ವಿಜಯಾ ಅಕ್ಕ ತುಲನಾತ್ಮಕವಾಗಿ ಮಾತನಾಡಿದರು. ಶಿವ, ಶಂಕರ ಎಂದು ಯಾವುದೇ ಹೆಸರಿನಲ್ಲಿ ಭಗವಂತನನ್ನು ಆರಾಧಿಸಿದರೂ ಉತ್ತಮ ಚರಿತ್ರೆ ನಿರ್ಮಾಣಕ್ಕೆ ನಮ್ಮ ಆತ್ಮ ಸಜ್ಜುಗೊಳ್ಳುತ್ತದೆ. ಬಾಹ್ಯ ಪೂಜೆ ಎಂಬುದು ಪ್ರಾಥಮಿಕ ಹಂತದ ಆಧ್ಯಾತ್ಮಿಕ ಹೆಜ್ಜೆ ಎನಿಸಿದರೂ, ಅದರ ಮೂಲಕ ಆತ್ಮಜ್ಞಾನದ ಕಡೆಗೆ ಹೊರಳುವ ಹಂತದಲ್ಲಿ ನಮ್ಮೊಳಗೆ ಆತ್ಮಜ್ಯೋತಿ ಪ್ರಜ್ವಲಿಸುತ್ತದೆ ಎಂದು ಅವರು ಹೇಳಿದರು. ಗಾರ್ಡನ್ ನಿರ್ವಹಣೆ ಬ್ರಹ್ಮಕುಮಾರೀಸ್ ಹೆಗಲಿಗೆ ಕಲಬುರಗಿ ಮಹಾನಗರ ಪಾಲಿಕೆ ವ್ಯಾಪ್ತಿಯ ಯಾವುದೇ ಭಾಗದಲ್ಲಿ ಹೊಸದಾಗಿ ಉದ್ಯಾನ ಅಭಿವೃದ್ಧಿಪಡಿಸಿದಲ್ಲಿ ಅದರ ನಿರ್ವಹಣೆಯನ್ನು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯಕ್ಕೆ ವಹಿಸಲು ಪಾಲಿಕೆ ಸಿದ್ಧವಿದೆ ಎಂದು ಪಾಲಿಕೆಯ ಮಹಾಪೌರ ಶರಣಕುಮಾರ್ ಮೋದಿ ಭರವಸೆ ನೀಡಿದರು. ಈ ನಿಟ್ಟಿನಲ್ಲಿ ಮಹಾನಗರ ಪಾಲಿಕೆ ಮತ್ತು ವಿಶ್ವವಿದ್ಯಾಲಯದ ಮಧ್ಯೆ ಒಡಂಬಡಿಕೆಗೂ ತಾವು ಸಿದ್ಧರಿದ್ದು, ಈ ನಿಟ್ಟಿನಲ್ಲಿ ಚಿಂತನೆ ನಡೆಸಬೇಕೆಂದು ಅವರು ಮನವಿ ಮಾಡಿದರು. ಯಾರು ಏನಂದರು? ಶರೀರದ ಸಾರಥಿ ನಾವೇ ಆಗಿರುತ್ತೇವೆ. ನಮ್ಮ ನಿರ್ಧಾರದ ಮೇಲೆ ನಮಗೆ ಹಿಡಿತ ಇರುತ್ತದೆ ಎಂದ ಮೇಲೆ ಭಗವಂತನ ಆರಾಧನೆಯ ವಿಷಯದಲ್ಲಿಯೂ ನಮ್ಮಲ್ಲಿ ಬದ್ಧತೆ ಇರಬೇಕು. ಅಂದಾಗಲೇ ಬುದ್ಧನಂತೆ ನಿರ್ವಾಣ ಸ್ಥಿತಿ ತಲುಪುವುದು ಸಾಧ್ಯವಾಗುತ್ತದೆ. -ರಾಜಯೋಗಿ ಬಿ.ಕೆ.ಪ್ರೇಮ್, ನಿರ್ದೇಶಕರು, ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಶರೀರದ ಕೊಳೆಯನ್ನು ನೀರಿನಿಂದ ತೊಳೆಬಹುದಾದರೂ ಅದರಿಂದ ಆತ್ಮದ ಕೊಳೆ ನಿವಾರಣೆ ಅಸಾಧ್ಯ. ಆತ್ಮದ ಕೊಳೆಯ ನಿವಾರಣೆ ಆಗಬೇಕಾದರೆ ಭಗವಂತನ ಜೊತೆ ಅನುಸಂಧಾನ ಏರ್ಪಡುವಂತೆ ಧ್ಯಾನಿಸಬೇಕು. -ವಿದ್ಯಾವಾರಿಧಿ ತೀರ್ಥ ಶ್ರೀಪಾದಂಗಳವರು, ಕಣ್ವ ಮಠ, ಹುಣಸಿಹೊಳೆ ಇಂದು ಮಾಧ್ಯಮದಲ್ಲಿ ನಕಾರಾತ್ಮಕ ವಿಷಯಗಳಿಗೆ ಹೆಚ್ಚು ಆದ್ಯತೆ ನೀಡಲಾಗುತ್ತಿದೆ. ಇದರ ಬದಲು ಅಧ್ಯಾತ್ಮ ಮತ್ತು ಆತ್ಮೋದ್ಧಾರಕ್ಕೆ ಪೂರಕವಾದ ಅಂಶಗಳಲ್ಲಿ ಜನರಿಗೆ ಆಸಕ್ತಿ ಮೂಡುವಂತಹ ಕಾರ್ಯಕ್ರಮಗಳು ಪ್ರಸಾರಕ್ಕೆ ಒತ್ತು ನೀಡುವಂತಾಗಬೇಕು. -ರಾಜಯೋಗಿನಿ ಬಿ.ಕೆ.ವಿಜಯಾ, ಕಲಬುರಗಿ ವಲಯ ಮುಖ್ಯಸ್ಥೆ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಮನಸ್ಸು ಪ್ರಶಾಂತವಾಗಿರಬೇಕಾದರೆ ಅಧ್ಯಾತ್ಮ ಮತ್ತು ಧ್ಯಾನ ಹೆಚ್ಚು ಪ್ರಯೋಜನಕಾರಿ. ನನಗೆ ಇದರಿಂದ ಸಾಕಷ್ಟು ಲಾಭವಾಗಿದೆ. -ಮಹಾದೇವಿ, ಸಂಗಮೇಶ್ವರ ಕಾಲೊನಿ ಶಿವ ದರ್ಶನ ಸತ್ಸಂಗ ಎಂಬುದು ಶಿವರಾತ್ರಿಯ ಈ ಮುನ್ನಾ ದಿನಗಳಲ್ಲಿ ನಿಜಕ್ಕೂ ಪ್ರತಿಯೊಬ್ಬರ ಮನಸ್ಸಿಗೂ ಚೈತನ್ಯ ನೀಡುವಂತಿದೆ. ಇದೊಂದು ಅದ್ಭುತ ಪರಿಕಲ್ಪನೆ. -ಗಿರಿಜಾ, ಸಂಗಮೇಶ್ವರ ಕಾಲೊನಿ ಧ್ಯಾನ ನಮ್ಮ ಮನಸ್ಸಿನ ಆತಂಕವನ್ನು ದೂರ ಮಾಡುತ್ತದೆ. ಈ ನಿಟ್ಟಿನಲ್ಲಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಿಂದ ಸಾಕಷ್ಟು ಕಲಿತಿದ್ದೇನೆ. -ಪ್ರೇಮಾ, ವಿದ್ಯಾನಗರ, ಕಲಬುರಗಿ
ಅಧಿವೇಶನದಲ್ಲಿ ಪ್ರತಿಧ್ವನಿಸಿದ ವಿಕ ವರದಿ
ಕಲಬುರಗಿ: ಇಲ್ಲಿನ ಚಂದ್ರಶೇಖರ ಪಾಟೀಲ್ ಕ್ರೀಡಾಂಗಣದ ಅವ್ಯವಸ್ಥೆ ಕುರಿತು ವಿಜಯ ಕರ್ನಾಟಕ ಪ್ರಕಟಿಸಿದ ವರದಿ ವಿಧಾನಸಭೆ ಕಲಾಪದಲ್ಲಿ ಪ್ರತಿಧ್ವನಿಸಿದೆ. ಬುಧವಾರ ಸದನದಲ್ಲಿ ವಿಧಾನ ಪರಿಷತ್ ಸದಸ್ಯ ಅಮರನಾಥ ಪಾಟೀಲ್ ಅವರು ಪತ್ರಿಕಾ ವರದಿಯನ್ನು ಉಲ್ಲೇಖಿಸಿ ಕೇಳಲಾದ ಚುಕ್ಕೆ ಗುರುತಿನ ಪ್ರಶ್ನೆ ಸದನದಲ್ಲಿ ಗಮನ ಸೆಳೆಯಿತು. ಪತ್ರಿಕೆಯಲ್ಲಿ ಪ್ರಕಟವಾದ ವರದಿಯ ಪ್ರತಿಯನ್ನು ಪರಿಷತ್ ಕಲಾಪದಲ್ಲೇ ತೋರಿಸಿದ ಅಮರನಾಥ ಪಾಟೀಲ್, ಕ್ರೀಡಾಂಗಣದಲ್ಲಿ ಯಾವುದೇ ಕೆಲಸ ಆಗುತ್ತಿಲ್ಲ. ವಿನಾಕಾರಣ ವಿಳಂಬ ಮಾಡುತ್ತಿದ್ದು, ಅಧಿಕಾರಿಗಳು ಸದನಕ್ಕೆ ತಪ್ಪು ಮಾಹಿತಿ ನೀಡುತ್ತಿದ್ದಾರೆ ಎಂದು ಆರೋಪಿಸಿದರು. ಜನವರಿ 28ರಂದು 'ವಿಜಯ ಕರ್ನಾಟಕ'ದಲ್ಲಿ 'ಕ್ರೀಡಾಂಗಣ ಗ್ಯಾಲರಿ.. ಕೂತ್ರೆ ಡೇಂಜರ್ರಿ!' ಶೀರ್ಷಿಕೆ ಸಹಿತ ಓದಿ ಹೇಳಿದ ಅಮರನಾಥ, ಕೆಲಸ ಕಳಪೆಯಾಗಿದೆ. ಇನ್ನೂ ಕೆಲವೆಡೆ ಕೆಲಸವೇ ಆಗಿಲ್ಲ ಎಂದು ಸದನದ ಗಮನ ಸೆಳೆದರು. ರಾಜ್ಯದಲ್ಲೇ ಎರಡನೇ ಅತಿ ದೊಡ್ಡ ಕ್ರೀಡಾ ಸಮುಚ್ಚಯ ಖ್ಯಾತಿಯ ಕ್ರೀಡಾಂಗಣ ನಿರ್ವಹಣೆಯಲ್ಲಿ ಆದ ವೈಫಲ್ಯಗಳ ಬಗ್ಗೆ ವಿಸ್ತೃತವಾಗಿ ಬೆಳಕು ಚೆಲ್ಲಿತ್ತು. ಈ ಬಗ್ಗೆ ಸದನದಲ್ಲಿ ದನಿ ಎತ್ತಿರುವ ಪಾಟೀಲ್, ಅವರು ತನಿಖೆಗೆ ಮನವಿ ಮಾಡಿದರು. 2015-16 ರಿಂದ 2017-18ರವರೆಗೆ ಆದ ಕಾಮಗಾರಿಗಳ ಬಗ್ಗೆ ಕೇಳಿದ್ದ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್, ಕ್ರೀಡಾಂಗಣದಲ್ಲಿ ಕೈಗೊಂಡಿರುವ ಕಾಮಗಾರಿಗಳ ಬಗ್ಗೆ ಲಿಖಿತ ಉತ್ತರ ನೀಡಿದ್ದಾರೆ. 'ಶಾಸಕರ ನಿಧಿಯಡಿ 10 ಲಕ್ಷ ರೂ. ವೆಚ್ಚದಲ್ಲಿ ಗಾರ್ಡನ್ ನಿರ್ಮಾಣ ಕಾಮಗಾರಿ ಮುಕ್ತಾಯ ಹಂತದಲ್ಲಿ ಇರುವುದಾಗಿ ತಿಳಿಸಿದ್ದಾರೆ. ಆದರೆ, ವಾಸ್ತವದಲ್ಲಿ ಇನ್ನೂ ಕಾಮಗಾರಿ ಆರಂಭವೇ ಆಗಿಲ್ಲ. ಈ ಬಗ್ಗೆ ಸೂಕ್ತ ತನಿಖೆ ನಡೆಯಬೇಕು ಎಂದು ಅಮರನಾಥ ಪಾಟೀಲ್ ಒತ್ತಾಯಿಸಿದರು. 'ಚಂಪಾ ಕ್ರೀಡಾಂಗಣದಲ್ಲಿ ಆಗಿರುವ ಮತ್ತು ಆಗುತ್ತಿರುವ ಹಲವು ಕಾಮಗಾರಿಗಳ ಬಗ್ಗೆ ನಿರಂತರವಾಗಿ ದನಿ ಎತ್ತುತ್ತಲೇ ಬಂದಿದ್ದೇನೆ. ಆದರೂ, ಈ ಬಗ್ಗೆ ಸಂಬಂಧಪಟ್ಟವರು ಗಂಭೀರವಾಗಿ ಪರಿಗಣಿಸಿಲ್ಲ. ಭದ್ರತಾ ಸಿಬ್ಬಂದಿ ಕೊರತೆ ಇದೆ. ನಿರಂತರವಾಗಿ ಪ್ರಶ್ನೆಗಳನ್ನು ಕೇಳುತತ ಬಂದರೂ ನಿಖರ ಉತ್ತರ ಮಾತ್ರ ಸಿಕ್ಕಿಲ್ಲ' ಎಂದು ಆರೋಪಿಸಿದರು. 40ರ ಪೈಕಿ 25 ಕಾಮಗಾರಿಗಳು ಪೂರ್ಣಗೊಂಡಿವೆ. 11 ಕಾಮಗಾರಿಗಳು ಪ್ರಗತಿಯಲ್ಲಿವೆ. ಎರಡರ ಅಂದಾಜು ಪಟ್ಟಿ ತಯಾರಿಸಲಾಗುತ್ತಿದ್ದು, ಇನ್ನೆರಡರ ಕಾಮಗಾರಿಗಳನ್ನು ರದ್ದುಪಡಿಸಲಾಗಿದ್ದು, ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವರ ಸೂಚನೆಯ ಮೇರೆಗೆ ನಿರ್ಮಿತಿ ಕೇಂದ್ರ ಕಾಮಗಾರಿ ನಡೆಸುತ್ತಿದೆ ಎಂದು ಮಧ್ವರಾಜ್ ಅವರು ಹೇಳಿದ್ದಾರೆ. ಹುದ್ದಗಳ ನೇಮಕಾತಿ ವಿಚಾರದಲ್ಲೂ ಉತ್ತರಿಸಿದ್ದು, ಕರ್ನಾಟಕ ಕ್ರೀಡಾ ಪ್ರಾಧಿಕಾರದಿಂದ ಹೈ-ಕ ಪ್ರದೇಶದ ಬಳ್ಳಾರಿ, ಕಲಬುರಗಿ ಕೊಪ್ಪಳ ಮತ್ತು ರಾಯಚೂರುಗಳಲ್ಲಿ ಆರು ಜನ ತರಬೇತುದಾರರನ್ನು ನೇಮಕ ಮಾಡಲಾಗಿದೆ ಎಂದು ತಿಳಿಸಿದರು. ತನಿಖೆ ನಡೆಸುವಂತೆ ಒತ್ತಾಯಿಸಿದಾಗ, ಈ ಬಗ್ಗೆ ಅಧಿಕಾರಿಗಳಿಂದ ವರದಿ ಪಡೆದು ಮುಂದಿನ ಕ್ರಮ ಕೈಗೊಳ್ಳುವುದಾಗಿ ಸಚಿವರು ಭರವಸೆ ನೀಡಿದರು.
ಔಷಧ ನಿರ್ವಹಣೆಯಲ್ಲಿ ಫಾರ್ಮಾಸಿಸ್ಟ್ ಪಾತ್ರ ಹಿರಿದು
ಕಲಬುರಗಿ: ಅನಾರೋಗ್ಯ ಪೀಡಿತ ವ್ಯಕ್ತಿಗೆ ಯಾವಾಗ ಮತ್ತು ಎಷ್ಟು ಪ್ರಮಾಣದ ಔಷಧಿ ನೀಡಬೇಕು ಎಂಬ ವಿಷಯದಲ್ಲಿ ಫಾರ್ಮಾಸಿಸ್ಟ್ ಪಾತ್ರ ಮಹತ್ವದ್ದಾಗಿದೆ ಎಂದು ಇಂಡಿಯನ್ ಫಾರ್ಮಾಸ್ಯೂಟಿಕಲ್ ಕಾಂಗ್ರೆಸ್ ಅಸೋಸಿಯೇಷನ್ (ಐಪಿಸಿಎ) ಕಾರ್ಯದರ್ಶಿ ಟಿ.ವಿ.ನಾರಾಯಣ ಹೇಳಿದರು. ರಾಜೀವ್ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ, ಅಸೋಸಿಯೇಶನ್ ಆಫ್ ಫಾರ್ಮಾಸ್ಯೂಟಿಕಲ್ ಟೀಚರ್ಸ್ ಆಫ್ ಇಂಡಿಯಾ ಸಹಯೋಗದಲ್ಲಿ ಇಲ್ಲಿನ ಮಾತೋಶ್ರೀ ತಾರಾದೇವಿ ರಾಂಪುರೆ ಔಷಧ ವಿಜ್ಞಾನಗಳ ಸಂಸ್ಥೆಯ ಫಾರ್ಮಸಿ ಪ್ರಾಕ್ಟೀಸ್ ವಿಭಾಗವು ಪಿಡಿಎ ಎಂಜಿನಿಯರಿಂಗ್ ಕಾಲೇಜಿನ ಕನ್ವೆನ್ಷನ್ ಹಾಲ್ನಲ್ಲಿ ಬುಧವಾರ ಆಯೋಜಿಸಿದ್ದ 'ರಾಷ್ಟ್ರೀಯ ವಿಚಾರ ಸಂಕಿರಣ ಹಾಗೂ 'ಜೂಪಿಟರ್' ನ್ಯೂಸ್ ಲೆಟರ್ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು. ದೇಹದ ತೂಕಕ್ಕೆ ಅನುಗುಣವಾಗಿ ಔಷಧಿಗಳನ್ನು ನೀಡಬೇಕಾಗುತ್ತದೆ. ಇದು ಫಾರ್ಮಾಸಿಸ್ಟ್ಗಳಿಗೆ ಸರಿಯಾಗಿ ತಿಳಿದಿರುವುದರಿಂದ ಚಿಕಿತ್ಸೆಯಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತಾರೆ ಎಂದರು. ಆರ್ ಆ್ಯಂಡ್ ಡಿ ನಿರ್ದೇಶಕ ಎಸ್.ಎಸ್.ಹರಸೂರ ಮಾತನಾಡಿ, ದೇಶಕ್ಕೆ ಕ್ಯಾನ್ಸರ್ ದೊಡ್ಡ ತಲೆನೋವಾಗಿ ಕಾಡುತ್ತಿದೆ. ಆದರೆ, ಪ್ರಾಥಮಿಕ ಹಂತದಲ್ಲೇ ರೋಗ ಪತ್ತೆಯಾದಲ್ಲಿ ಸಂಪೂರ್ಣವಾಗಿ ರೋಗ ಗುಣಮುಖಗೊಳಿಸಬಹುದು ಎಂದು ತಿಳಿಸಿದರು. ಆರ್ಜಿಯುಎಚ್ಎಸ್ ಸೆನೆಟ್ ಸದಸ್ಯ ಡಾ.ಕ್ರಾಂತಿಕುಮಾರ ಸಿರಸೆ, ಎಚ್ಕೆಇ ಸಂಸ್ಥೆ ಅಧ್ಯಕ್ಷ ಬಸವರಾಜ ಭೀಮಳ್ಳಿ, ಡಾ.ಶರಣಗೌಡ ಪಾಟೀಲ್, ರುದ್ರಗೌಡ ಪಾಟೀಲ್, ಭೀಮಳ್ಳಿ, ಡಾ.ಎಸ್.ಅಪ್ಪಲರಾಜು, ಡಾ.ನೀಲಕಂಠ ಪಾಟೀಲ್ ಇತರರಿದ್ದರು.ಡಾ.ಶೋಭಾ ಮಂಜುನಾಥ ನಿರೂಪಿಸಿದರು. ಎಸ್.ಎಸ್.ಬಿರಾದಾರ ವಂದಿಸಿದರು.
ತೊಗರಿ ಖರೀದಿ ಇಂದಿನಿಂದ ಸ್ಥಗಿತ
2017-18ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ರಾಜ್ಯದಲ್ಲಿ ಕೇಂದ್ರ ಸರಕಾರದ ಬೆಂಬಲ ಬೆಲೆಯೊಂದಿಗೆ 1,65,750 ಮೆಟ್ರಿಕ್ ಟನ್ ಗರಿಷ್ಠ ಪ್ರಮಾಣದ ತೊಗರಿ ಉತ್ಪನ್ನ ಖರೀದಿಸಲು ಅನುಮೋದನೆ ನೀಡಲಾಗಿದ್ದು, ಈಗಾಗಲೇ ಈ ಪ್ರಮಾಣದ ತೊಗರಿಯನ್ನು ಖರೀದಿ ಮಾಡಲಾಗಿರುತ್ತದೆ. ಕಲಬುರಗಿ ಜಿಲ್ಲೆಯಲ್ಲಿ ಒಟ್ಟು 6.69 ಲಕ್ಷ ಕ್ವಿಂಟಾಲ್ ತೊಗರಿಯನ್ನು ಬೆಂಬಲ ಬೆಲೆ ನೀಡಿ ರೈತರಿಂದ ಖರೀದಿಸಲಾಗಿದೆ.
ಬಾಕಿ ಉಳಿದಿರುವ ರೈತರಿಂದ ಬೆಂಬಲ ಬೆಲೆ ಯೋಜನೆಯಡಿ ತೊಗರಿಯನ್ನು ಖರೀದಿಸಲು ಅವಶ್ಯವಿರುವ ಪ್ರಮಾಣವನ್ನು ಹೆಚ್ಚಿಸುವ ಕಾರ್ಯ ಪ್ರಗತಿಯಲ್ಲಿರುವುದರಿಂದ ಸರಕಾರದ ಆದೇಶದಂತೆ ಖರೀದಿ ಪ್ರಕ್ರಿಯೆ ತಡೆಹಿಡಿಯಲಾಗಿದೆ ಎಂದು ಡಿಸಿ ಸ್ಪಷ್ಟಪಡಿಸಿದ್ದಾರೆ.2017-18ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ರಾಜ್ಯದಲ್ಲಿ ಕೇಂದ್ರ ಸರಕಾರದ ಬೆಂಬಲ ಬೆಲೆಯೊಂದಿಗೆ 1,65,750 ಮೆಟ್ರಿಕ್ ಟನ್ ಗರಿಷ್ಠ ಪ್ರಮಾಣದ ತೊಗರಿ ಉತ್ಪನ್ನ ಖರೀದಿಸಲು ಅನುಮೋದನೆ ನೀಡಲಾಗಿದ್ದು, ಈಗಾಗಲೇ ಈ ಪ್ರಮಾಣದ ತೊಗರಿಯನ್ನು ಖರೀದಿ ಮಾಡಲಾಗಿರುತ್ತದೆ. ಕಲಬುರಗಿ ಜಿಲ್ಲೆಯಲ್ಲಿ ಒಟ್ಟು 6.69 ಲಕ್ಷ ಕ್ವಿಂಟಾಲ್ ತೊಗರಿಯನ್ನು ಬೆಂಬಲ ಬೆಲೆ ನೀಡಿ ರೈತರಿಂದ ಖರೀದಿಸಲಾಗಿದೆ.ಬಾಕಿ ಉಳಿದಿರುವ ರೈತರಿಂದ ಬೆಂಬಲ ಬೆಲೆ ಯೋಜನೆಯಡಿ ತೊಗರಿಯನ್ನು ಖರೀದಿಸಲು ಅವಶ್ಯವಿರುವ ಪ್ರಮಾಣವನ್ನು ಹೆಚ್ಚಿಸುವ ಕಾರ್ಯ ಪ್ರಗತಿಯಲ್ಲಿರುವುದರಿಂದ ಸರಕಾರದ ಆದೇಶದಂತೆ ಖರೀದಿ ಪ್ರಕ್ರಿಯೆ ತಡೆಹಿಡಿಯಲಾಗಿದೆ ಎಂದು ಡಿಸಿ ಸ್ಪಷ್ಟಪಡಿಸಿದ್ದಾರೆ.
ಪಿಡಿಎ- ಕ್ಲಸ್ಟರ್ಸ್ ಸಾಫ್ಟ್ವೇರ್ ಜತೆ ಒಡಂಬಡಿಕೆ
ಕಲಬುರಗಿ: ಪಿಡಿಎ ಎಂಜಿನಿಯರಿಂಗ್ ಕಾಲೇಜಿನ ಮಾಹಿತಿ ವಿಜ್ಞಾನ ವಿಭಾಗವು ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗಾಗಿ ಮತ್ತು ಅವರ ತಾಂತ್ರಿಕ ಕೌಶಲ್ಯ ವೃದ್ಧಿಗೆ ಬೆಂಗಳೂರಿನ ಕ್ಲಸ್ಟರ್ಸ ಸಾಫ್ಟವೇರ್ ಸಲೂಷನ್ಸ್ ಜೊತೆ ಒಡಂಬಡಿಕೆ ಮಾಡಿಕೊಂಡಿದೆ. ಒಡಂಬಡಿಕೆ ಪತ್ರದ ಪ್ರಕಾರ ಕ್ಲಸ್ಟರ್ಸ ಸಾಫ್ಟವೇರ್ ಸಲೂಷನ್ಸ್ ವಿದ್ಯಾರ್ಥಿಗಳ ತಾಂತ್ರಿಕೆ ಕೌಶಲ್ಯ ಅಭಿವೃದ್ಧಿಗಾಗಿ ವಿವಿಧ ಯೋಜನೆಗಳನ್ನು ಹೊಂದಿದ್ದು, ಮುಂಬರುವ ದಿನಗಳಲ್ಲಿ ಅವುಗಳನ್ನು ಕಾರ್ಯರೂಪಕ್ಕೆ ತರುವ ಗುರಿಯನ್ನು ಹೊಂದಿದೆ. ಕ್ಲಸ್ಟರ್ಸ ಸಾಫ್ಟವೇರ್ ಸಲೂಷನ್ಸ್ನ ವ್ಯವಸ್ಥಾಪಕ ನಿರ್ದೇಶಕರಾದ ರವಿಕುಮಾರ ಮಾತನಾಡಿ, ವಿದ್ಯಾರ್ಥಿಗಳಿಗೆ ಸಾಫ್ಟವೇರ್ ಡೆವಲಪ್ಮೆಂಟ್ನ ವಿವಿಧ ಹಂತಗಳನ್ನು ಅವರಿಗೆ ಕರಗತ ಮಾಡಿಸಿಕೊಡುವುದು ಆನ್ಲೈನ್ ಕೋಡ್ ಟ್ರೇನಿಂಗ್ ಕೊಡಿಸುವುದು ಹಾಗೂ ಅವರಿಗೆ ಉದ್ಯೋಗಾವಕಾಶವನ್ನು ಕಲ್ಪಸಿಕೊಡುವುದೇ ತಮ್ಮ ಮೂಲ ಉದ್ದೇಶವಾಗಿದೆ ಎಂದರು. ಒಡಂಬಡಿಕೆಯ ಫಲಶೃತಿ ಬಗ್ಗೆ ಮಾತನಾಡಿದ ಮಾಹಿತಿ ವಿಜ್ಞಾನ ವಿಭಾಗದ ಮುಖ್ಯಸ್ಥೆ ಡಾ. ಭಾರತಿ ಹರಸೂರ, ಮುಂಬರುವ ದಿನಗಳಲ್ಲಿ ಕ್ಲಸ್ಟರ್ಸ್ ಸಾಫ್ಟವೇರ್ ಸಲೂಷನ್ಸ್ ಒಡಗೂಡಿ ಮಾಹಿತಿ ವಿಜ್ಞಾನ ವಿಭಾಗದಲ್ಲಿ ಸುಸಜ್ಜಿತ ಸಾಫ್ಟವೇರ್ ಡೆವಲಪ್ಮೆಂಟ್ ಸೆಂಟರ್ ಸ್ಥಾಪಿಸುವ ಗುರಿಯನ್ನು ಹೊಂದಿದೆ ಎಂದರು. ಒಂಡಂಬಡಿಕೆ ಮಾಡಿಕೊಂಡ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಎಸ್.ಎಸ್.ಆವಂತಿ ಹರ್ಷವ್ಯಕ್ತಪಡಿಸಿದರು. ಮಹಾವಿದ್ಯಾಲಯದ ಉಪ-ಪ್ರಾಚಾರ್ಯರುಗಳಾದ ಡಾ.ಮಹಾದೇವಪ್ಪ ಗಾದಗೆ, ಡಾ.ಓಂಪ್ರಕಾಶ ಹೆಬ್ಬಾಳ, ಡೀನ್ ಅಕಾಡೆಮಿಕ್ಸ್ನ ಡಾ. ರಾಜೇಂದ್ರಕುಮಾರ ಹರಸೂರ ಹಾಗೂ ಮಾಹಿತಿ ವಿಜ್ಞಾನ ವಿಭಾಗದ ಡಾ.ವಿಶ್ವನಾಥ ಬುರಕಪಳ್ಳಿ, ಪ್ರೊ. ಉದಯ ಬಳಗಾರ, ಪ್ರೊ. ಅಶೋಕ ಪಾಟೀಲ, ಡಾ.ರಾಕೇಶಕುಮಾರ ಗೋದಿ, ಪ್ರೊ. ನಿತಿನ ಕಟ್ಟಿಶೆಟ್ಟರ ಇತರರು ಹಾಜರಿದ್ದರು.
ರೈಲ್ವೆಯಲ್ಲಿ ಕನ್ನಡಕ್ಕೆ ಆದ್ಯತೆ ಅಗತ್ಯ
ನಿರುದ್ಯೋಗ ಸಮಸ್ಯೆ ತಾಂಡವವಾಡುತ್ತಿದೆ. ಸರಕಾರವೇ ಉದ್ಯೋಗಗಳನ್ನು ಕಲ್ಪಿಸಬೇಕೆ ಅಥವಾ ಉದ್ಯಮಸ್ನೇಹಿ ವಾತಾವರಣ ಹಾಗೂ ಕೌಶಲ್ಯಗಳನ್ನು ಒದಗಿಸಿ ಸ್ವಯಂ ಉದ್ಯೋಗಕ್ಕೆ ನೆರವಾಗಬೇಕೆ ಎನ್ನುವ ವಾಗ್ವಾದಗಳು ತೀವ್ರವಾಗಿವೆ. ಇಂಥ ಸಂದರ್ಭದಲ್ಲಿ ರೈಲ್ವೆ ಇಲಾಖೆ 26502 ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿದೆ. ಇದು ಸ್ವಾಗತಾರ್ಹ. ಆದರೆ ಉದ್ಯೋಗ ಭರ್ತಿಗೆ ರೈಲ್ವೆ ಅನುಸರಿಸುತ್ತಿರುವ ವಿಧಿ ವಿಧಾನಗಳು ಒಕ್ಕೂಟ ವ್ಯವಸ್ಥೆಗೇ ವಿರುದ್ಧವಾಗಿದ್ದು ಭಾಷಾವಾರು ಪ್ರಾಂತ್ಯದ ಸ್ಫೂರ್ತಿ, ನೆಲೆಗಟ್ಟನ್ನೇ ಧಿಕ್ಕರಿಸುವಂತಿದೆ. ಒಟ್ಟು ಖಾಲಿ ಹುದ್ದೆಗಳಲ್ಲಿ ಬೆಂಗಳೂರು ರೈಲ್ವೆ ನೇಮಕ ಮಂಡಳಿಯಿಂದ ಸಾವಿರಕ್ಕೂ ಮಿಕ್ಕು ಹುದ್ದೆಗಳ ಆಯ್ಕೆ ನಡೆಯುತ್ತದೆ. ರಾಜ್ಯಗಳಿಗೆ ಪ್ರತ್ಯೇಕ ಅರ್ಜಿ, ಪರೀಕ್ಷೆ ಎಂಬುದು ಒಂದಿಷ್ಟು ಆಡಳಿತಾತ್ಮಕ ತೊಂದರೆಗಳನ್ನು ಉಂಟು ಮಾಡಬಹುದು. ಆದರೆ ಇವು ಪರಿಹರಿಸಿಕೊಳ್ಳಲು ಆಗದಷ್ಟು ಕ್ಲಿಷ್ಟ ಸಮಸ್ಯೆಗಳೇನೂ ಅಲ್ಲ. ಅನುವಾದಕ್ಕೆ ಮಾನವ ಸಂಪನ್ಮೂಲವಲ್ಲದೆ ತಂತ್ರಜ್ಞಾನದ ನೆರವನ್ನೂ ಸುಲಭವಾಗಿ ಬಳಸಿಕೊಳ್ಳಬಹುದು. ಇದಕ್ಕೆ ಬೇಕಾದ ತಜ್ಞತೆ, ಸಿದ್ಧತೆ ರೈಲ್ವೆಯಂಥ ಬೃಹತ್ ವ್ಯವಸ್ಥೆಗೆ ಇದ್ದೇ ಇದೆ. ದಕ್ಷಿಣದಲ್ಲಿ ಹಿಂದಿ ಭಾಷೆ ವ್ಯಾಪಕವಾಗಿಯೇನೂ ಇಲ್ಲ. ಅರ್ಜಿ ಹಂತದಲ್ಲೇ ಇಲ್ಲಿನ ಅಭ್ಯರ್ಥಿಗಳನ್ನು ಅನುತ್ತೀರ್ಣಗೊಳಿಸಿದರೆ ಈ ಹುದ್ದೆಗಳು ಉತ್ತರದವರ ಪಾಲಾಗುತ್ತವೆ. ಖಂಡಿತ ಇದು ಸಂವಿಧಾನ ತತ್ತ್ವಕ್ಕೆ ವಿರೋಧ. ರೈಲ್ವೆ ಇಲಾಖೆ ಈ ಭಾಷಾ ಸಂಕುಚಿತ ಧೋರಣೆಯನ್ನು ಕೈ ಬಿಡಬೇಕು. ಸಂವಿಧಾನ ಅಂಗೀಕರಿಸಿರುವ ಎಲ್ಲ ಭಾಷಿಕರಿಗೆ ಉದ್ಯೋಗವಕಾಶಗಳನ್ನು ಕಲ್ಪಿಸಬೇಕು. ನಮ್ಮ ಸಂಸದರು ಕೇಂದ್ರದ ಮೇಲೆ ಒತ್ತಡ ತಂದು ನೆಲದ ಮಕ್ಕಳ ಹಿತ ಕಾಯಬೇಕು.
ಆದರೆ ಇಲ್ಲಿ ನಮ್ಮ ರಾಜ್ಯಭಾಷೆಗೆ ನೆಲೆ ಬೆಲೆಯೇ ಇಲ್ಲ. ಪರೀಕ್ಷೆಯ ಮಾತು ಒತ್ತಟ್ಟಿಗಿರಲಿ, ಅರ್ಜಿ ಭರ್ತಿ ಮಾಡುವುದರಿಂದ ಹಿಡಿದು ಪೂರಕ ದಾಖಲೆಗಳು, ಪ್ರಮಾಣಪತ್ರಗಳನ್ನು ಹಿಂದಿ, ಇಲ್ಲವೇ ಆಂಗ್ಲಭಾಷೆಯಲ್ಲೇ ಸಲ್ಲಿಸಬೇಕು. ಸಹಿ ಕೂಡ ಕನ್ನಡದಲ್ಲಿ ಮಾಡುವಂತಿಲ್ಲ. ಜಾತಿ, ಆದಾಯ, ವಿಕಲಚೇತನ, ಗ್ರಾಮೀಣ ಕೃಪಾಂಕ ಮೊದಲಾದ ಪ್ರಮಾಣಪತ್ರಗಳು ಕನ್ನಡದಲ್ಲಿ ಇರುತ್ತವೆ. ಅಂಕಪಟ್ಟಿಗಳು ಕೂಡ ಇದಕ್ಕೆ ಅಪವಾದವಲ್ಲ. ಈಗ ಅರ್ಹ ಅಭ್ಯರ್ಥಿಗಳು ಸರಕಾರಿ ಕಚೇರಿಗಳು, ಶಿಕ್ಷಣ ಇಲಾಖೆಯ ಕಂಬಗಳನ್ನು ಸುತ್ತಬೇಕು. ದಾಖಲೆ-ಪತ್ರಗಳ ಆಂಗ್ಲ ಮಾದರಿಯನ್ನು ಶೋಧಿಸಬೇಕು. ಇವುಗಳನ್ನು ಪ್ರಮಾಣೀಕರಿಸಲು ಅಧಿಕಾರಿ ಗಡಣದ ಹಿಂದೆ ಓಡಬೇಕು. ಪರೀಕ್ಷೆಗೆ ಸಿದ್ಧವಾಗುವುದನ್ನು ಬದಿಗಿಟ್ಟು ದಾಖಲೆಗಳನ್ನು ಹೊಂದಿಸಿಕೊಳ್ಳುವುದಕ್ಕೆ ಇಡೀ ಸಮಯವನ್ನು ಮೀಸಲಿಡಬೇಕು. ಖಂಡಿತ ಇದು ದ್ರಾವಿಡ ಪ್ರಾಣಯಾಮವಲ್ಲದೆ ಬೇರೇನೂ ಅಲ್ಲ.
ಕನ್ನಡ ಸೇರಿದಂತೆ 21 ಭಾಷೆಗಳಿಗೆ ಸಂವಿಧಾನವೇ ಅಧಿಕೃತ ಸ್ಥಾನಮಾನ ನೀಡಿದೆ. ಹಿಂದಿ, ಇಂಗ್ಲಿಷ್ ಭಾಷೆಗಳಿಗೆ ರಾಷ್ಟ್ರಭಾಷೆಗಳೆಂಬ ಸ್ಥಾನಮಾನ ನೀಡಿಲ್ಲ. ಆದರೆ ರೈಲ್ವೆ ಇಲಾಖೆ ಮಾತ್ರ ತನ್ನ ಕಾರ್ಯನೀತಿಯಲ್ಲಿ ಈ ಭಾಷೆಗಳ ಸಾರ್ವಭೌಮತ್ವವನ್ನು ಅಂಗೀಕರಿಸಿದೆ. ಇದನ್ನು ವಿರೋಧಿಸಿ ಮಹಾರಾಷ್ಟ್ರ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳು ದನಿ ಎತ್ತಿವೆ. ನಮ್ಮ ರಾಜ್ಯದಲ್ಲೂ ಇಂಥ ಹೋರಾಟಗಳು ನಡೆದಿವೆ. ಬ್ಯಾಂಕ್, ಮಿಲಿಟರಿ, ರೈಲ್ವೆ ಸೇರಿದಂತೆ ಕೇಂದ್ರ ಸರಕಾರದ ನೇಮಕ ಪರೀಕ್ಷೆಗಳಲ್ಲಿ ಕನ್ನಡಕ್ಕೆ ಆದ್ಯತೆ ಇರಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹಲವು ಬಾರಿ ಮನವಿ ಸಲ್ಲಿಸಿದೆ. ರೈಲ್ವೆ ಸಚಿವರನ್ನು ಖುದ್ದು ಭೇಟಿ ಮಾಡಿ ಹಕ್ಕೊತ್ತಾಯಗಳನ್ನು ಮಂಡಿಸಿದೆ.
ಮಮತಾ ಬ್ಯಾನರ್ಜಿ ಅವರು ರೈಲ್ವೆ ಸಚಿವೆಯಾಗಿದ್ದಾಗ ಆಯಾ ರಾಜ್ಯ ಭಾಷೆಗಳಲ್ಲೇ ರೈಲ್ವೆ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು ಎಂದು ಘೋಷಿಸಿದ್ದರು. ಆದರೆ ಆ ಹಳೆಯ ನಿರ್ಣಯವನ್ನು ಸದ್ದಿಲ್ಲದೆ ತೆರೆಮರೆಗೆ ಸರಿಸಲಾಗಿದೆ. ನಿಜಕ್ಕೂ ಇಂದು ಖಂಡನೀಯ. ಭಾಷಾವಾರು ಪ್ರಾಂತ್ಯ ರಚನೆಯ ಮೂಲ ಉದ್ದೇಶವೇ ಅಧಿಕಾರ, ಆಡಳಿತ ಮತ್ತು ಅಭಿವೃದ್ಧಿಯ ವಿಕೇಂದ್ರೀಕರಣ. ಇದರ ಲಾಭಗಳು ಎಲ್ಲರಿಗೂ ಸಿಗಬೇಕು ಎಂದರೆ ಸ್ಥಳೀಯ ಭಾಷೆಗಳಿಗೆ ಮನ್ನಣೆ ನೀಡಲೇಬೇಕು. ಕನ್ನಡದಂಥ ಪ್ರಾದೇಶಿಕ ಭಾಷೆಗಳಿಗೆ ನೀಡುವ ಮನ್ನಣೆ ಆಯಾ ಪ್ರದೇಶದ ಜನರಿಗೆ ನೀಡುವ ಮನ್ನಣೆಯೇ ಆಗಿರುತ್ತದೆ. ಭಾರತವೇನೂ ಏಕಭಾಷೆ, ಏಕಸಂಸ್ಕೃತಿಯ ದೇಶವಲ್ಲ; ಬಹುತ್ವವೇ ನಮ್ಮ ವೈಶಿಷ್ಟ್ಯ. ಅದುವೇ ನಮ್ಮ ಶಕ್ತಿ ಎಂಬುದನ್ನು ಮರೆಯಬಾರದು.
ವರ್ತಮಾನ: ಮಸ್ಕಿ ಶಾಸನದ ನೆನಪಲ್ಲಿ ನಮ್ಮ ಗಣರಾಜ್ಯದ ನೋಟ
* ವರ್ತಮಾನ: ಬರಗೂರು ರಾಮಚಂದ್ರಪ್ಪ ರಾಯಚೂರು ಜಿಲ್ಲೆಯ ಮಸ್ಕಿ ಶಾಸನದ ಬಗ್ಗೆ ಬರೆಯುತ್ತ ಅಶೋಕನ ಆಶಯಗಳನ್ನು ನೆನೆಯುವ ಸಮಕಾಲೀನ ಅಗತ್ಯವನ್ನು ಅರ್ಥಮಾಡಿಕೊಳ್ಳುವ ಹಂಬಲ ನನ್ನದಾಗಿದೆ. ಇದೇನಿದು, ನನಗೂ ಶಾಸನಕ್ಕೂ ಎಲ್ಲಿಗೆಲ್ಲಿಯ ಸಂಬಂಧ ಎಂದು ಕೆಲವರಿಗೆ ಅಚ್ಚರಿಯಾದೀತು. ನಿಜ, ಆದರೆ, ನಾನು ಎಂಎ ಪದವಿಯಲ್ಲಿ ಶಾಸನಶಾಸ್ತ್ರವನ್ನು ವಿಶೇಷವಾಗಿ ಅಧ್ಯಯನ ಮಾಡಿದ ವಿದ್ಯಾರ್ಥಿ. ಡಾ. ಚಿದಾನಂದಮೂರ್ತಿ ಮತ್ತು ಹು.ರಾ. ಜಯದೇವ್ ಅವರಿಂದ ಶಾಸನ ಪಾಠಗಳನ್ನು ಕೇಳಿದವನು. ಚಿದಾನಂದಮೂರ್ತಿಯವರ ಪ್ರೇರಣೆಯಿಂದ ಕರ್ನಾಟಕದ ಕ್ಷೌರಿಕರನ್ನು ಕುರಿತು ಶಾಸನಗಳನ್ನು ಸಂಗ್ರಹಿಸಿದವನು. ಜೊತೆಗೆ ನಮ್ಮೂರು ಬರಗೂರಿನ ಶಾಸನಗಳನ್ನು ಎಪಿಗ್ರಾಫಿಯಾ ಕರ್ನಾಟಕ ಗ್ರಂಥದಲ್ಲಿ ಹುಡುಕಿ ತೆಗೆದವನು. ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದಲ್ಲಿ ಅಧ್ಯಾಪಕನಾಗಿ ಸೇರಿ, ಒಂದೇ ವರ್ಷದಲ್ಲಿ ಶಾಸನದಿಂದ ಜಾನಪದಕ್ಕೆ ಜಿಗಿದವನು. ಈಗ ಒಂದು ವಿಶಿಷ್ಟ ಕಾರಣದಿಂದ ಮಸ್ಕಿಯ ಅಶೋಕನ ಶಾಸನಕ್ಕೆ ಮರುಭೇಟಿ ಕೊಡುತ್ತಿದ್ದೇನೆ. ಕಾರಣ ಇಷ್ಟೇ; ಮಸ್ಕಿ ಶಾಸನ ಪತ್ತೆಯಾಗಿ ಈ ಜನವರಿಗೆ ನೂರಾಮೂರು ವರ್ಷವಾಯ್ತು. ಮಸ್ಕಿಯ ಬೆಟ್ಟಗುಡ್ಡಗಳಲ್ಲಿ ಗಣಿಕೆಲಸದ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಚಾರ್ಲ್ಸ್ಬಿಡನ್ ಅವರ ಕಣ್ಣಿಗೆ ಈ ಶಾಸನವು 1915ರ ಜನವರಿ 27ರಂದು ಕಂಡಿತು. ಈ ಶಾಸನವನ್ನು ಹಾಕಿಸಿದ್ದು ಅಶೋಕ ಮತ್ತು ಬರೆದದ್ದು ಚಪಡ ಎಂಬ ಲಿಪಿಕಾರ. ನೂರಾಮೂರು ವರ್ಷವಾಯಿತು ಎಂಬುದಷ್ಟೇ ಈ ಶಾಸನದ ಮಹತ್ವವಲ್ಲ. ದೇವನಾಂಪ್ರಿಯ ಎಂದರೆ ಅಶೋಕನೇ ಎಂದು ಖಚಿತಪಡಿಸಿದ ಕೀರ್ತಿ ಈ ಶಾಸನದ್ದಾಗಿದೆ. ಮಸ್ಕಿ ಶಾಸನದ ಆರಂಭದ ಸಾಲಿನಲ್ಲಿರುವ 'ದೇವಾನಂ ಪಿಯಸ ಅಶೋಕಸ'- ಅಂದರೆ ದೇವತೆಗಳಿಗೆ ಪ್ರಿಯನಾದ ಅಶೋಕ - ಎಂಬುದನ್ನು ಗುರುತಿಸಿದ ನಂತರ ಅಶೋಕನೇ ಇತರ ಶಾಸನಗಳೂ ಸಂಬೋಧಿಸುವ ಪ್ರಿಯದರ್ಶಿ ರಾಜನೆಂಬುದು ಸ್ಪಷ್ಟಗೊಂಡಿತು. (ಮೌರ್ಯ ಮತ್ತು ಶಾತವಾಹನ ಯುಗ- ಲೇ; ಲಕ್ಷ್ಮಣ ತೆಲಗಾವಿ) ಇದಲ್ಲದೆ ಇನ್ನೊಂದು ಮಹತ್ವವೂ ಮಸ್ಕಿ ಶಾಸನಕ್ಕಿದೆ. ಅದರಲ್ಲಿ ಪ್ರಸ್ತಾಪಿತವಾದ ವಿಷಯ ಇಂದಿಗೂ ಪ್ರಸ್ತುತವೆನ್ನಿಸುವುದೇ ಈ ಮಹತ್ವ. ಹಾಗೆ ನೋಡಿದರೆ, ಅಶೋಕನ ಅನೇಕ ಶಾಸನಗಳಿಗೆ ಚಾರಿತ್ರಿಕ, ಸಮಕಾಲೀನ ಮಹತ್ವ ಇದೆ. ಕ್ರಿ.ಪೂ. 300ರಲ್ಲಿ ರಾಯಚೂರು ಜಿಲ್ಲೆ ಅಶೋಕನ ಆಳ್ವಿಕೆಗೆ ಒಳಪಟ್ಟಿತ್ತು. ಕಳಿಂಗ ಯುದ್ಧಾನಂತರ ಶಾಂತಿಪ್ರಿಯನೂ ಬೌದ್ಧ ಧರ್ಮಾನುಯಾಯಿಯೂ ಆದ ಅಶೋಕ, ತನ್ನ ಆಳ್ವಿಕೆಯ ಪ್ರದೇಶಗಳಲ್ಲಿ ಶಾಸನಗಳನ್ನು ಬರೆಸಿದ. ಶಾಂತಿಪರ ಧರ್ಮ ಪ್ರಸಾರ ಮಾಡಿದ. ಇದರ ಒಂದು ಫಲವೇ ಮಸ್ಕಿ ಶಾಸನ. ಮಸ್ಕಿಯ ಸುತ್ತಮುತ್ತಲ ಪ್ರದೇಶಗಳಲ್ಲಿರುವ ಶಾಸನಗಳಲ್ಲಿ ಮಸ್ಕಿಯು ಮೊಸಂಗಿ, ಮೊಸಗಿ ಎಂದು ಉಲ್ಲೇಖಗೊಂಡಿದೆ. ಹೀಗೆ ಹೆಸರು ಬರಲು ಕಾರಣವಾದ ಅಂಶಗಳನ್ನು ವಿದ್ವಾಂಸರು ಊಹಿಸಿದ್ದಾರೆ. ಇಲ್ಲಿ ಬೌದ್ಧ ಬಿಕ್ಷುಗಳ ಮಹಾಸಂಘವಿದ್ದು ಮಹಾಸಂಘದ ರೂಪಾಂತರವೇ ಮಾಸಂಗಿಯಾಗಿರಬೇಕೆಂಬುದು ಒಂದು ಊಹೆ. ಮಸ್ಕಿಯಲ್ಲಿರುವ ಎತ್ತರದ ಶಿಖರಗಳ ಕಾರಣದಿಂದ ಮಹಾಶೃಂಗಿ ಎಂದು ಕರೆಸಿಕೊಂಡಿದ್ದು ಇದರ ತದ್ಭವ ರೂಪವಾಗಿ ಮಾಸಂಗಿ ಬಳಕೆಯಾಗಿರಬಹುದೆಂಬ ತರ್ಕವೂ ಇದೆ. ಮಸ್ಕಿ ಪ್ರದೇಶದಲ್ಲಿ ಅಂದು ಮತ್ತು ಇಂದು ಅಕ್ಕಸಾಲಿಗರು ಬಹುಸಂಖ್ಯೆಯಲ್ಲಿದ್ದು ಇವರ ವಾಸಸ್ಥಳವನ್ನು ಮೂಸಂಗೆಯ್ ಎಂದೂ ಕರೆಯಲಾಗಿದೆ. ಅಕ್ಕಸಾಲಿಗರನ್ನು ಮೂಸೆಯವರು ಎಂಬ ಇನ್ನೊಂದು ಹೆಸರಿನಿಂದ ಕರೆಯುತ್ತಿದ್ದುದರಿಂದ ಈ ಪ್ರದೇಶಕ್ಕೆ ಮೂಸಂಗೆಯ್ ಆಗಿ, ಅನಂತರ ಮೂಸಂಗಿ, ಮೊಸಂಗಿ, ಮಸ್ಕಿ ಆಗಿರಬೇಕೆಂಬ ವಿವರಣೆಯೂ ಇದೆ. ಇನ್ನೊಂದು ಮೂಲದ ಪ್ರಕಾರ ವಿಜಯನಗರದ ಸದಾಶಿವರಾಯ ಮತ್ತು ಅಚ್ಯುತರಾಯರ ಕಾಲದ ಎರಡು ಶಾಸನಗಳಲ್ಲಿ ಮಸ್ಕಿಗೆ ಆಗ ಮೊಸಗೆ ಎಂಬ ಹೆಸರಿತ್ತೆಂದು ತಿಳಿದುಬಂದಿದೆ. ಚಾಲುಕ್ಯ ಜಗದೇಕ ಮಲ್ಲನ ಶಾಸನಗಳಲ್ಲಿ ಪಿರಿಯ ಮೊಸಂಗಿ, ಬ್ರಹ್ಮಗಿರಿ ಮೊಸಂಗಿ ಎಂಬ ಉಲ್ಲೇಖ ಸಿಗುತ್ತದೆ. ಒಟ್ಟಿನಲ್ಲಿ ಮಸ್ಕಿಯು ಅಂದಿನ ಒಂದು ಪ್ರಮುಖ ಸ್ಥಳವಾಗಿದ್ದು, ಅಶೋಕನ ಶಾಸನದಿಂದ ಇಂದಿನ ಪ್ರಾಮುಖ್ಯವನ್ನು ಪಡೆದಿದೆ. ಕರ್ನಾಟಕದಲ್ಲಿ ಅಶೋಕನ 14 ಶಾಸನಗಳು ದೊರಕಿವೆ. (ರಾಯಚೂರು, ಸಿದ್ದಾಪುರ-1, ನಿಟ್ಟೂರು-2, ಉದಗೊಳ್ಳಂ-2, ಗವಿಮಠ-1, ಪಾಲ್ಕಿಗುಂಡ-1, ಸನ್ನತಿ-4, ಮಸ್ಕಿ-1). 17 ಶಾಸನಗಳಿವೆಯೆಂಬ ಒಂದು ಊಹೆಯೂ ಇದೆ. ಮಸ್ಕಿ ಶಾಸನದ ಕನ್ನಡಾನುವಾದ ಹೀಗಿದೆ; ''ದೇವನಾಂಪ್ರಿಯ ಅಶೋಕನಾದ ನಾನು ಕಳೆದ ಎರಡೂವರೆ ವರ್ಷದಿಂದ ಬುದ್ಧಗುರುವಿನ ನಮ್ರ ಶಿಷ್ಯನಾಗಿದ್ದೆ. ಅದಕ್ಕಿಂತ ಹೆಚ್ಚಾಗಿ ನಾನು ಸಂಘವನ್ನು ಸೇರಿದೆ. ಅತ್ಯಂತ ಉತ್ಸುಕತೆಯಿಂದ ಸೇರಿದೆ. ಜಂಬೂದ್ವೀಪದಲ್ಲಿ ಮೊದಲು ಕೆಲವೇ ಮಂದಿ ದೇವರನ್ನು ಸಮೀಪಿಸಿದ್ದರು. ಧರ್ಮವನ್ನು ಆಚರಿಸುವುದರ ಮೂಲಕ ಸಾಮಾನ್ಯ ಮನುಷ್ಯನೂ ದೇವರನ್ನು ಸಮೀಪಿಸಿ, ಧರ್ಮ- ದೇವರು ದೊಡ್ಡವರಿಗೆ ಮಾತ್ರ ಎಂಬುದನ್ನು ಸುಳ್ಳಾಗಿಸಿದ್ದಾರೆ. ದೊಡ್ಡವರು ಮತ್ತು ಸಣ್ಣವರು ಇದನ್ನು (ಧರ್ಮವನ್ನು) ಆಚರಿಸುವುದರ ಮೂಲಕ ಸಾಧಿಸಬಹುದಾಗಿದೆ.'' ಈ ರೀತಿಯ ಒಟ್ಟಾರೆ ಒಕ್ಕಣೆಯುಳ್ಳ ಶಾಸನವು ಧರ್ಮ ಮತ್ತು ದೇವರ ವಿಷಯದಲ್ಲಿ ದೊಡ್ಡವರು - ಸಣ್ಣವರು ಎಂದು ವ್ಯತ್ಯಾಸ ಮಾಡುವಂತಿಲ್ಲ ಎಂದು ಸಾರುತ್ತದೆ. ಬೌದ್ಧ ಧರ್ಮಾಚರಣೆಯ ಮೂಲಕ ದೊಡ್ಡವರ ಗುತ್ತಿಗೆಯನ್ನು ತಪ್ಪಿಸಲಾಗಿದೆ ಮತ್ತು ತಪ್ಪಿಸಬೇಕೆಂಬ ಆಶಯವೂ ಅಡಗಿದೆ. ಪ್ರಸಿದ್ಧ ವಿದ್ವಾಂಸ ಪಿ.ಬಿ. ದೇಸಾಯಿಯವರು ತಮ್ಮ 'ಕನ್ನಡ ನಾಡಿನ ಶಾಸನಗಳು' ಕೃತಿಯಲ್ಲಿ ದೊಡ್ಡವರು ಮತ್ತು ಸಣ್ಣವರು ಎಂಬುದನ್ನು ಬಲ್ಲಿದರು ಮತ್ತು ಬಡವರು ಎಂದು ಸಮೀಕರಿಸಿದ್ದಾರೆ. ಒಂದರ್ಥದಲ್ಲಿ ಇದು ಸರಿಯಾಗಿದೆ. ಯಾಕೆಂದರೆ, ಸಾಮಾಜಿಕವಾಗಿ, ಆರ್ಥಿಕವಾಗಿ ಮತ್ತು ಅಧಿಕಾರಾತ್ಮಕವಾಗಿ ಬಲಾಢ್ಯರಾದವರನ್ನೇ ನಮ್ಮ ಸಮಾಜ ದೊಡ್ಡವರು ಎಂದು ಕರೆಯುತ್ತ ಬಂದಿದೆ. ಈ ದೊಡ್ಡವರಿಗೆ ಹಣ, ಆಸ್ತಿ, ಅಧಿಕಾರ ಎಲ್ಲವೂ ಲಭ್ಯ - ಆದ್ದರಿಂದ ಅಹಂಕಾರವೂ ಲಭ್ಯ. ಇದನ್ನೇ ಬಸವಣ್ಣನವರು ಒಂದು ವಚನದಲ್ಲಿ ಹೀಗೆ ನುಡಿದಿದ್ದಾರೆ. ಹಾವು ತಿಂದವರ ನುಡಿಸಬಹುದು! ಗರ ಹೊಡೆದವರ ನುಡಿಸಬಹುದು! ಸಿರಿಗರ ಹೊಡೆದವರ ನುಡಿಸಬಾರದು ನೋಡಯ್ಯ ಬಡತನವೆಂಬ ಮಂತ್ರವಾದಿ ಹೊಗಲು ಒಡನೆ ನುಡಿವರಯ್ಯ ಕೂಡಲಸಂಗಮದೇವ ಬಸವಣ್ಣನವರ ವಚನಾರ್ಥದ ಮೂಲಕ ಮಸ್ಕಿ ಶಾಸನವನ್ನು ಕಂಡುಕೊಂಡರೆ ಇನ್ನಷ್ಟು ಅರ್ಥ ವಿಸ್ತರಣೆಯಾಗುತ್ತದೆ. ಇಂದಿಗೂ ಅನ್ವಯವಾಗುತ್ತದೆ. ಲಕ್ಷಾಂತರ ಖರ್ಚು ಮಾಡಿ ಪೂಜೆ ಮಾಡಿಸುವವರು, ಕೋಟ್ಯಂತರ ರೂಪಾಯಿಗಳ ಕಿರೀಟ ತೊಡಿಸಿ ದೇವರನ್ನು ಒಲಿಸಿಕೊಳ್ಳಬಯಸುವ ಲಂಚಗಾರರು ನಮ್ಮಲ್ಲಿದ್ದಾರೆ. 'ಕಲ್ಲನಾಗರ ಕಂಡರೆ ಹಾಲನೆರೆಯೆಂಬುದು | ದಿಟನಾಗರ ಕಂಡರೆ ಕೊಲ್ಲೆಂಬರು' ಎಂಬ ಬಸವಣ್ಣನವರ ವಚನ ನೆನಪಾಗುತ್ತಿದೆ. ದೊಡ್ಡವರು, ಬಲ್ಲಿದರು ಭಕ್ತಿಯನ್ನು ಬಂಡವಾಳಶಾಹಿ ಮಾಡುತ್ತಿದ್ದರೆ ಸಣ್ಣವರು, ಬಡವರು ಭಕ್ತಿಯನ್ನು ಭಾವಕೋಶಿಯಾಗಿಸುತ್ತಿದ್ದಾರೆ. ಆಸ್ತಿಕರು ಅಶೋಕನ ಶಾಸನವನ್ನು ಬುದ್ಧ, ಬಸವಣ್ಣನವರ ಬೆಳಕಲ್ಲಿ ಅರ್ಥಮಾಡಿಕೊಂಡರೆ ಬಡವರ ಭಕ್ತಿಯ ಶಕ್ತಿಯಿಂದ ಬಲ್ಲಿದರ ಬಹಿರಾಡಂಬರ ಬಯಲುಗೊಳ್ಳುತ್ತಿರುವುದನ್ನು ತಿಳಿಯಬಹುದು. ದೇವರು, ಧರ್ಮಗಳು ದೊಡ್ಡವರಿಗೆಂಬುದನ್ನು ಸುಳ್ಳುಮಾಡಿದ ಬಡವರ ಅಥವಾ ಸಣ್ಣವರ ಪ್ರಸ್ತಾಪ ಮಸ್ಕಿ ಶಾಸನಕ್ಕೆ ಮಹತ್ವ ತಂದುಕೊಟ್ಟಿದೆ. ನಮ್ಮ ದೇಶವು ಧರ್ಮ ಮತ್ತು ದೇವರುಗಳನ್ನು ಬಿಟ್ಟಿಲ್ಲ. ಚಾರ್ವಾಕರ ದೊಡ್ಡ ಪರಂಪರೆಯೇ ಇದ್ದರೂ ಆಧುನಿಕವೆಂದು ಕರೆಸಿಕೊಳ್ಳುತ್ತಿರುವ ಇಂದಿನ ಕಾಲಮಾನದಲ್ಲಿ ಮಾನಗೆಟ್ಟ ಆಚರಣೆಗಳಿಗೆ ಬರವಿಲ್ಲ. ಈ ಆಚರಣೆಯನ್ನು ಧರ್ಮ ಮತ್ತು ದೇವರ ಹೆಸರಲ್ಲೇ ನಡೆಸುವುದೊಂದು ದೊಡ್ಡ ವಿಪರ್ಯಾಸ, ಆದರೆ ಕಟು ವಾಸ್ತವ. ಇಂಥ ದೊಡ್ಡವರು ಏಕಕಾಲಕ್ಕೆ ಧರ್ಮ ಮತ್ತು ದೇವರ ಹೆಸರಲ್ಲಿ ಸಣ್ಣವರನ್ನು ಶೋಷಣೆ ಮಾಡುತ್ತಾರೆ. ದೇವರು ಮತ್ತು ಧರ್ಮಗಳು ಇಂದು ನಿರ್ದಿಷ್ಟ ಸಮುದಾಯಗಳ ಶಾಸ್ತ್ರವಾಗುವುದರ ಜೊತೆಗೆ ರಾಜಕೀಯ ಧುರೀಣರ ಶಸ್ತ್ರಗಳೂ ಆಗಿವೆ. ಶಾಸ್ತ್ರಗಳು ಸಣ್ಣವರ ಸಂವೇದನೆಯನ್ನು ಸಾಯಿಸುತ್ತಿದ್ದರೆ, ಶಸ್ತ್ರಗಳು ವಿರೋಧಿಗಳ ಎದೆಯ ದನಿಯನ್ನು ಗುರಿಮಾಡಿಕೊಂಡಿವೆ. 'ಎದೆಯ ದನಿಗೂ ಮಿಗಿಲು ಶಾಸ್ತ್ರವಿಹುದೇನು?' ಎಂಬ ಕುವೆಂಪು ಪ್ರಶ್ನೆಯನ್ನು ಹತ್ತಿಕ್ಕುವ ಆಯುಧಗಳಾಗುತ್ತಿವೆ. ಈ ಹಿನ್ನೆಲೆಯಲ್ಲಿ ಅಶೋಕನ ಶಾಸನಗಳಲ್ಲಿರುವ ಧರ್ಮ ಮತ್ತು ದೇವರ ವ್ಯಾಖ್ಯಾನಗಳು ಇಂದಿಗೂ ಆದರ್ಶಪ್ರಾಯವಾಗಿವೆ. ಅಶೋಕನು ಬ್ರಹ್ಮಗಿರಿ ಶಾಸನದಲ್ಲಿ ಕೊಟ್ಟಿರುವ ಧರ್ಮದ ವ್ಯಾಖ್ಯಾನಕ್ಕೆ ಶಾಸ್ತ್ರದ ಹಂಗಿಲ್ಲ. ನಿತ್ಯ ನಡವಳಿಕೆಯ ನೈತಿಕ ನಿಯಮಗಳಿವೆ. ತಾಯಿ ತಂದೆಯರಲ್ಲಿ ಹಾಗೂ ಹಿರಿಯರಲ್ಲಿ ವಿನಯದಿಂದ ನಡೆದುಕೊಳ್ಳಬೇಕು. ಪ್ರಾಣಿಗಳಲ್ಲಿ ದಯೆ ಇರಬೇಕು. ಸತ್ಯವನ್ನು ನುಡಿಯಬೇಕು. ಶಿಷ್ಯರು ಆಚಾರ್ಯರನ್ನು ಗೌರವಿಸಬೇಕು. ನೆಂಟರ ಜೊತೆ ಸರಿಯಾಗಿ ನಡೆದುಕೊಳ್ಳಬೇಕು. ಇದು ಹಿಂದಿನಿಂದಲೂ ನಡೆದು ಬಂದಿರುವ ಧರ್ಮ, ಪ್ರತಿಯೊಬ್ಬರೂ ಹೀಗೆಯೇ ನಡೆದುಕೊಳ್ಳಬೇಕು (ಮೌರ್ಯ ಮತ್ತು ಶಾತವಾಹನ ಯುಗ- ಲೇ: ಲಕ್ಷ್ಮಣ ತೆಲಗಾವಿ - ಪು. 187). ಬ್ರಹ್ಮಗಿರಿ ಶಾಸನದ ಈ ನುಡಿನೋಟಗಳೇ ಅಶೋಕ ಹೇಳುವ ಆಚರಣೆಗಳು. ಇಲ್ಲಿ ಮಂತ್ರ, ತಂತ್ರ, ಹೋಮ, ಹವನ, ಯಾವುದೂ ಇಲ್ಲ. ಲಕ್ಷಾಂತರ ಲಂಚಾರ್ಪಣೆಯೂ ಇಲ್ಲ. ಕಾಳ ಕಿರೀಟಗಳ ಕೊಡುಗೆಯೂ ಇಲ್ಲ. ಆದರೆ ಅಶೋಕನು ಎಲ್ಲ ಧರ್ಮೀಯರನ್ನು ಪೂಜಾರ್ಹರೆಂದು ಭಾವಿಸಿದ್ದ. ದಾನ ಮಾಡುತ್ತಿದ್ದ. ಹೀಗಾಗಿ ಸನ್ನತಿ ಶಾಸನದಲ್ಲಿ ಹೀಗೆ ಬರೆಸಿದ್ದಾನೆ: ''ದೇವತೆಗಳಿಗೆ ಪ್ರಿಯನಾದ ಪ್ರಿಯದರ್ಶಿರಾಜನು ಎಲ್ಲ ಅನ್ಯಧರ್ಮಿಯರನ್ನು, ಪರಿವ್ರಾಜಕರನ್ನು, ಗೃಹಸ್ಥರನ್ನು, ವಿಧವಿಧವಾದ ದಾನ ಮತ್ತು ಪೂಜೆಗಳಿಂದ ಸಮನಾಗಿ ಗೌರವಿಸುತ್ತಾನೆ.'' ಈ ಶಾಸನದಲ್ಲಿ ಉಲ್ಲೇಖಿತವಾಗಿರುವ ಅನ್ಯಧರ್ಮಿಯರ ಪ್ರಸ್ತಾಪ ಮತ್ತು ಸಮನಾಗಿ ಗೌರವಿಸುವ ನಡವಳಿಕೆಗಳನ್ನು ಎಲ್ಲ ಧರ್ಮದವರು, ರಾಜಕೀಯ ಪಕ್ಷದವರು, ಧಾರ್ಮಿಕ ಸಂಘಟನೆ ನೇತಾರರು ಮತ್ತು ಮಠಾಧೀಶರು ಮನಗಾಣಬೇಕು. ಇದೇ ಸನ್ನತಿ ಶಾಸನದಲ್ಲಿ ಎಲ್ಲ ಧರ್ಮಾನುಯಾಯಿಗಳಲ್ಲೂ ಅವರವರ ಧರ್ಮದ ಸಾರವರ್ಧನೆಯಾಗಲಿ, ಸಾರವೃದ್ಧಿ ಎನ್ನುವುದು ಅನೇಕ ವಿಧಗಳಲ್ಲಿ ಆಗುತ್ತದೆ ಎಂದು ಹೇಳಿದ್ದು, ಇದು ನಾವು ನೆನೆಯಬೇಕಾದ ಬಹುತ್ವದ ಸಂಕಲ್ಪನೆಯ ಮೂಲವಾಗಿದೆ. ಸಾರವೃದ್ಧಿಯ (ಇಂದಿನ ಅಭಿವೃದ್ಧಿಯ) ಮುಂದುವರೆದು ಬರೆದಿರುವ ಮಾತುಗಳು ನಾವಿಂದು ಅನುಸರಿಸಲೇಬೇಕಾದ ಸಂವಿಧಾನಾತ್ಮಕ ಆಶಯವಾಗಿವೆ; ಅವು ಹೀಗಿವೆ: ''ತನ್ನ ಧರ್ಮದಲ್ಲಿ ಆತ್ಮರತಿಯಾಗಲಿ, ಪರಧರ್ಮದಲ್ಲಿ ಅನಾದರವಾಗಲಿ, ಅನುಚಿತವಾದ ಸಣ್ಣಮಾತಾಗಲಿ ಕೂಡದು; ಪರಧರ್ಮೀಯರನ್ನು ಅವರವರ ರೀತಿಯಲ್ಲಿಯೇ ಗೌರವಿಸತಕ್ಕದ್ದು, ಹೀಗೆ ಮಾಡುವುದರಿಂದ ತನ್ನ ಧರ್ಮವನ್ನೂ ಬಲಪಡಿಸಿದಂತಾಗುತ್ತದೆ. ಪರಧರ್ಮೀಯರಿಗೂ ಉಪಕಾರ ಮಾಡಿದಂತಾಗುತ್ತದೆ. ಹೀಗೆ ಮಾಡದೆ ಅನ್ಯಥಾ ನಡೆದುಕೊಂಡರೆ ತನ್ನ ಧರ್ಮವನ್ನೂ ಹಾಳು ಮಾಡಿದಂತಾಗುತ್ತದೆ; ಪರಧರ್ಮೀಯರಿಗೂ ಅಪಕಾರ ಮಾಡಿದಂತಾಗುತ್ತದೆ. ಹೀಗೆ ಮಾಡುವುದರಿಂದ ತನ್ನ ಧರ್ಮಕ್ಕೆ ವಿಶೇಷ ಹಾನಿ ಉಂಟು ಮಾಡಿದಂತಾಗುತ್ತದೆ.'' (ಮೂಲ: ಅದೇ ಲಕ್ಷ್ಮಣ ತೆಲಗಾವಿ ಕೃತಿ) ಧರ್ಮ ಸಹಿಷ್ಣುತೆ ಎಂದರೆ ಏನೆಂಬುದಕ್ಕೆ ಇದಕ್ಕಿಂತ ಉತ್ತಮ ವಿವರಣೆ ಬೇಕಿಲ್ಲ. ಧರ್ಮಗಳ ಹೆಸರಿನಲ್ಲಿ ದ್ವೇಷ ಬಿತ್ತುವ, ನಾಲಗೆಯಲ್ಲಿ ನಾಗರವಿಷ ಉಗುಳುವ, ಕಡೆಗೆ ಕತ್ತು ಕತ್ತರಿಸುವ ಮಟ್ಟಕ್ಕೂ ಹೋಗುವ ಎಲ್ಲ ಧರ್ಮಗಳ ಮೂಲಭೂತವಾದಿಗಳಿಗೆ ಅಶೋಕನ ಸನ್ನತಿ ಶಾಸನವು ಸಂವಿಧಾನದ ಪಾಠ ಹೇಳುತ್ತಿದೆ. ಮೂಲಭೂತವಾದ ಮತ್ತು ಉಗ್ರವಾದಕ್ಕೆ ಪ್ರೇರಣೆಯಾಗುವ ಪಕ್ಷ - ಪಂಥಗಳಿಗೂ ಇದೊಂದು ಮಾನವೀಯ ಮಾರ್ಗದರ್ಶಿಯಾಗಿದೆ. ತನ್ನ ರಾಜ್ಯದಲ್ಲಿ ಜನಗಳ ಬಳಿಗೆ ಎಂಥವರನ್ನು ಕಳಿಸಲಾಗುತ್ತದೆಯೆಂಬುದನ್ನು 14ನೇ ಸನ್ನತಿ ಶಿಲಾಶಾಸನದಲ್ಲಿ ಅಶೋಕ ಹೇಳಿದ್ದಾನೆ. ''ಪ್ರತಿ ಐದು ವರ್ಷಗಳಿಗೊಮ್ಮೆ ಯಾರು ಕ್ರೂರರಲ್ಲವೊ, ಕರ್ಕಶರಲ್ಲವೊ, ಕಾರ್ಯಾಚರಣೆಯಲ್ಲಿ ಮಾರ್ದವತೆ ಉಳ್ಳವರೋ ಅಂಥ ಅಧಿಕಾರವರ್ಗದವರನ್ನು ಕಳಿಸುತ್ತೇನೆ.'' ನಾವು ಐದು ವರ್ಷಗಳಿಗೊಮ್ಮೆ ಇಂಥವರನ್ನೇ ಆರಿಸಿ ಅಧಿಕಾರಕ್ಕೆ ಕಳಿಸುತ್ತೇವೆ ಎಂದು ಸಂಕಲ್ಪ ಮಾಡಿದರೆ ನಮ್ಮ ಗಣರಾಜ್ಯ ಸಾಕಾರಗೊಳ್ಳುತ್ತದೆ.
ಅರ್ಥಮಾನ: ಹೂಡಿಕೆ ಹಿಂತೆಗೆತದ ಬಾಗಿಲು ತಟ್ಟಿದ ಬಜೆಟ್ ನೀತಿ
*ಅರ್ಥಮಾನ: ಡಾ.ಜಿ.ವಿ.ಜೋಶಿ ಭಾರತ ಮತ್ತು ಪಾಕಿಸ್ತಾನಗಳಲ್ಲಿ ಖಾಸಗೀಕರಣವೆಂದರೆ ಹೂಡಿಕೆ ಹಿಂತೆಗೆತ. ಸರ್ಕಾರ ತನ್ನ ಒಡೆತನದಲ್ಲಿರುವ ಹೂಡಿಕೆಯನ್ನು ಷೇರುಗಳ ಮೂಲಕ ನಿಯಮಾನುಸಾರ ಖಾಸಗಿ ವ್ಯಕ್ತಿಗೆ ಅಥವಾ ಸಂಸ್ಥೆಗೆ ಭಾಗಶಃ ವರ್ಗಾಯಿಸಿದರೂ ಅದು ಖಾಸಗೀಕರಣವಾಗುತ್ತದೆ. ಮನಮೋಹನ ಸಿಂಗರು ಹಣಕಾಸಿನ ಸಚಿವರಾಗಿದ್ದಾಗ 1991ರ ಜು.24ರ ಐತಿಹಾಸಿಕ ಬಜೆಟ್ ಭಾಷಣದಲ್ಲಿ ಆರ್ಥಿಕ ಸುಧಾರಣೆಗಳನ್ನು ಸಾರಿದರಷ್ಟೆ. ಎಲ್ಲೂ ಅವರು ಖಾಸಗೀಕರಣ ಅಥವಾ ಹೂಡಿಕೆ ಹಿಂತೆಗೆತದ ಪದ ಪ್ರಯೋಗ ಮಾಡಲಿಲ್ಲ! ಸತತ ಹಾನಿಯಲ್ಲಿದ್ದ ಸಾರ್ವಜನಿಕ ಉದ್ದಿಮೆಗಳ ಕಾರ್ಯಾಚರಣೆಯನ್ನು ಸುಧಾರಿಸುವ ಸಾಮಾಜಿಕ ಅಗತ್ಯವನ್ನು ಅವರು ಒತ್ತಿ ಒತ್ತಿ ಹೇಳಿದಾಗ ಖಾಸಗೀಕರಣವೆಂಬ ಬದಲಾವಣೆ ಅನಿವಾರ್ಯವೆಂಬ ಭಾವನೆ ಬರುವಂತಾಯಿತು. ನೋವು ಇಲ್ಲದೆ ಯಾವುದೇ ಬದಲಾವಣೆಯಾಗಲಿ, ಹೊಂದಾಣಿಕೆಯಾಗಲಿ ಸಾಧ್ಯವಿಲ್ಲವೆಂಬ ಅವರ ಹೇಳಿಕೆ ಖಾಸಗೀಕರಣದ ಮುನ್ಸೂಚನೆಯಾಗಿತ್ತು. ಖಾಸಗೀಕರಣದ ಗೀಳು 1991ರ ನಂತರ ಖಾಸಗೀಕರಣದ ಪ್ರಸ್ತಾಪಗಳನ್ನು ಕಾರ್ಮಿಕ ಸಂಘಗಳು ವಿರೋಧಿಸುತ್ತಿರುವಾಗಲೇ ಕೆಲವರಿಗೆ ಮಾತ್ರ ಅದು ನಳಪಾಕದಷ್ಟು ರುಚಿಕಟ್ಟಾಯಿತು. ಹಿಂದೆ ಮುಂದೆ ನೋಡದೆ ಅವರು ಖಾಸಗೀಕರಣವೆಂಬ ಮಂತ್ರಪಠಣ ಮಾಡಿದ್ದೂ ಉಂಟು. ಮಂಗಳೂರು ವಿವಿಯಲ್ಲಿ ನಡೆದ ಘಟನೆಯೊಂದು ನೆನಪಾಗುತ್ತದೆ. 1993 ಫೆ.26ರಂದು ಮಂಗಳಗಂಗೋತ್ರಿಯ ಸೆನೆಟ್ ಹಾಲಿನಲ್ಲಿ ಕೃಷಿರಂಗದ ಅಭಿವೃದ್ಧಿಯಲ್ಲಿ ಸಾಲದ ಇತಿಮಿತಿಯ ಮೇಲೆ ಆರ್ಥಿಕ ತಜ್ಞ ವಿ.ಎಂ. ದಾಂಡೇಕರರಿಂದ ವಿದ್ವತ್ಪೂರ್ಣ ಭಾಷಣ. ಮಹಾರಾಷ್ಟ್ರ ಸರಕಾರದಲ್ಲಿ ಮುಖ್ಯ ಕಾರ್ಯದರ್ಶಿಯಾಗಿ ನಿವೃತ್ತರಾಗಿದ್ದ ದಾಂಡೇಕರರ ಸ್ನೇಹಿತನೂ ಅಲ್ಲಿಗೆ ಆಗಮಿಸಿದ್ದರು. ದಾಂಡೇಕರರಿಂದ ಕೃಷಿರಂಗದ ಸಮಸ್ಯೆಗಳ ವಿಶ್ಲೇಷಣೆಯಾದ ನಂತರ ಚರ್ಚೆ ಪ್ರಾರಂಭವಾಯಿತು. ಈ ಸಮಸ್ಯೆಗಳಿಗೆಲ್ಲ ಖಾಸಗೀಕರಣ ಪರಿಹಾರವಾಗಬಹುದೇ ಎಂದು ಅವರ ಸ್ನೇಹಿತರು ಕೇಳಿಬಿಡಬೇಕೆ? ಕೃಷಿರಂಗ ಇರುವುದೇ ಖಾಸಗಿ ವಲಯದಲ್ಲಿ ಎಂಬ ಕನಿಷ್ಠ ತಿಳುವಳಿಕೆ ಕೂಡ ಮಾಜಿ ಮುಖ್ಯ ಕಾರ್ಯದರ್ಶಿಗಳಿಗೆ ಇರಲಿಲ್ಲ! ತಬ್ಬಿಬ್ಬಾಗಿ ಹೋದ ದಾಂಡೇಕರರು ಪ್ರಶ್ನೆಯನ್ನು ಬದಿಗೊತ್ತಿ ಚರ್ಚೆಯ ದಿಕ್ಕನ್ನೇ ಬದಲಾಯಿಸಬೇಕಾಯಿತು! ಈ ತನಕದ ಅನುಭವ ತೋರಿಸುವಂತೆ ಹೂಡಿಕೆ ಹಿಂತೆಗೆತ ತುಂಬಾ ಕ್ಲಿಷ್ಟವಾದ, ವಿವಾದಕ್ಕೆ ಕಾರಣವಾಗಬಲ್ಲ ಪ್ರಕ್ರಿಯೆ. 52000 ಕೋಟಿ ರೂ.ಗಳಿಗಿಂತ ಹೆಚ್ಚಿನ ಸಾಲದ ಬಾಧೆಯಿಂದ ನರಳುತ್ತಿರುವ, ಹಾನಿಯ ಗುಂಡಿಯಲ್ಲಿರುವ ಏರ್ಇಂಡಿಯಾದ ಹೂಡಿಕೆ ಹಿಂತೆಗೆತ ಪ್ರಸ್ತಾಪ ಈಗ ಅಂತಿಮ ಸ್ವರೂಪ ಪಡೆಯುತ್ತಿದೆ. ಅದರ ಮಾರಾಟ ಮಾಡುವ ಬಗ್ಗೆ ವಿಮಾನಯಾನ ಸಚಿವ ಜಯಂತ ಸಿನ್ಹಾ ಮಾತನಾಡಲು ಶುರು ಮಾಡಿದ್ದಾರೆ. 18 ವರ್ಷಗಳ ಹಿಂದೆ ಅವರ ತಂದೆ ಯಶವಂತ ಸಿನ್ಹಾ ವಾಜಪೇಯಿ ಸರಕಾರದಲ್ಲಿ ವಿತ್ತ ಸಚಿವರಾಗಿದ್ದಾಗಲೇ ಏರ್ಇಂಡಿಯಾದ ಖಾಸಗೀಕರಣದ ಅಗತ್ಯ ತಲೆದೋರಿತ್ತು ! 2017-18ನೇ ಸಾಲಿನ ಕೇಂದ್ರ ಆರ್ಥಿಕ ಸಮೀಕ್ಷೆ ಆಗ್ರಹಪಡಿಸುವಂತೆ ಮುಂದಿನ ಹಣಕಾಸಿನ ವರ್ಷದಲ್ಲಿ ಸರಕಾರ ಏರ್ಇಂಡಿಯಾದ ಖಾಸಗೀಕರಣ ಪ್ರಕ್ರಿಯೆಯನ್ನು ಪೂರ್ತಿಗೊಳಿಸಬೇಕು. ಹೂಡಿಕೆ ಹಿಂತೆಗೆತದ ವಿಷಯ ಬಂದಾಗ ರಾಜಕೀಯ ಪಕ್ಷ ಗಳು ದ್ವಂದ್ವ ನೀತಿ ಅನುಸರಿಸುತ್ತಿರುವುದು ಸಮಸ್ಯೆ. ಇದರಿಂದಾಗಿ ಖಾಸಗೀಕರಣದ ಪ್ರಕ್ರಿಯೆ ಏರಿಳಿತ ಕಾಣುವಂತಾಯಿತು. 1991-92ರಲ್ಲಿ ಕೇಂದ್ರ ಸರಕಾರಕ್ಕೆ ಹೂಡಿಕೆ ಹಿಂತೆಗೆತದಿಂದ ಬಂದ ಆದಾಯ 17,314 ಕೋಟಿ ರೂ. ಅದು 1993-94ರಲ್ಲಿ ಶೂನ್ಯಕ್ಕೆ ಇಳಿಯಿತು. 1996ರಲ್ಲಿ ಕೇಂದ್ರ ಸರಕಾರಕ್ಕೆ ಸಲಹೆ ನೀಡಲು ಹೂಡಿಕೆ ಹಿಂತೆಗೆತ ಆಯೋಗದ ರಚನೆಯಾಯಿತು. ನಂತರ ಆದಾಯದಲ್ಲಿ ಸ್ವಲ್ಪ ಏರಿಕೆ. 1997-98ರಲ್ಲಿ ಹೂಡಿಕೆ ಹಿಂತೆಗೆತದಿಂದ ಬಂದ ಆದಾಯ 3,143 ಕೋಟಿ ರೂ. ಪ್ರಥಮ ಎನ್ಡಿಎ ಅವಧಿಯಲ್ಲಿ ದ್ವಿತೀಯ ತಲೆಮಾರಿನ ಆರ್ಥಿಕ ಸುಧಾರಣೆಗಳು ಜಾರಿಯಾದವು. ಯಶವಂತ ಸಿನ್ಹಾ 2000-01ನೇ ಸಾಲಿನ ಬಜೆಟ್ ಮಂಡಿಸುತ್ತ ಹೂಡಿಕೆ ಹಿಂತೆಗೆತಗಳ ಸಲುವಾಗಿ ಪ್ರತ್ಯೇಕ ವಿಭಾಗ ತೆರೆದಿದ್ದು, ಸರಕಾರ ಸಾರ್ವಜನಿಕ ಉದ್ದಿಮೆಗಳ ಖಾಸಗೀಕರಣಕ್ಕೆ ಹೆಚ್ಚಿನ ಉತ್ತೇಜನ ನೀಡಲಿದೆಯೆಂದು ಸಾರಿದರು. ವಾಜಪೇಯಿ ಸರಕಾರದ ಅವಧಿಯಲ್ಲಿ ಭಾರತ ಅಲ್ಯುಮಿನಿಯಮ್ ಕಂಪೆನಿ, ಹಿಂದುಸ್ತಾನ ಝಿಂಕ್, ಇಂಡಿಯನ್ ಪೆಟ್ರೊಕೆಮಿಕಲ್ಸ್ ಕಾರ್ಪೊರೇಷನ್ ಮತ್ತು ವಿಎಸ್ಎನ್ಎಲ್ ಉದ್ದಿಮೆಗಳ ಒಡೆತನ ಭಾಗಶಃ ಖಾಸಗಿ ರಂಗಕ್ಕೆ ವರ್ಗಾಯಿಸಲ್ಪಟ್ಟಿತು. 2003-04ರ ಹೊತ್ತಿಗೆ ಹೂಡಿಕೆ ಹಿಂತೆಗೆತದಿಂದ ಬಂದ ಆದಾಯ 38,611 ಕೋಟಿ ರೂ.ಗೆ ಹೆಚ್ಚಿದರೂ ಅದು ಹೂಡಿಕೆ ಹಿಂತೆಗೆತದ ಎಲ್ಲಾ ಉದ್ದೇಶಗಳನ್ನು (ವಿತ್ತಿಯ ಕೊರತೆ ನೀಗುವುದು, ಆರ್ಥಿಕಾಭಿವೃದ್ಧಿಗೆ ಹಣ ಒದಗಣೆ, ಮೂಲ ಸೌಕರ್ಯ ನಿರ್ಮಾಣ ಇತ್ಯಾದಿ) ಗಮನಿಸಿದರೆ ದೊಡ್ಡ ಆದಾಯವೇನೂ ಆಗಿರಲಿಲ್ಲ. ವಿತ್ತ ಸಚಿವರಿದ್ದಾಗ ಪ್ರಣಬ್ ಮುಖರ್ಜಿ ಹೂಡಿಕೆ ಹಿಂತೆಗೆತ ವಿಷಯದಲ್ಲಿ ವಿವಾದದಿಂದ ದೂರ ಉಳಿಯಲು ಅಳೆದು ತೂಗಿ ಶಬ್ದಗಳನ್ನು ಬಳಸುತ್ತಿದ್ದರು. ಯುಪಿಎ ಎರಡನೇ ಅವಧಿಯಲ್ಲಿ 2009-10ರ ಬಜೆಟ್ ಮಂಡಿಸುವಾಗ 'ಸಾರ್ವಜನಿಕ ಉದ್ಯಮಗಳು ರಾಷ್ಟ್ರದ ಸಂಪತ್ತು, ಆದರೂ ಅವುಗಳಲ್ಲಿ ಜನಸಮುದಾಯದ ಪಾಲ್ಗೊಳ್ಳುವಿಕೆಯನ್ನು ಹೂಡಿಕೆ ಹಿಂತೆಗೆತದ ಮೂಲಕ ಹೆಚ್ಚಿಸುವ ಅಗತ್ಯವಿದೆ' ಎಂದರು. ಅವರಿಂದ ಬ್ಯಾಂಕುಗಳನ್ನು ಮತ್ತು ವಿಮಾ ಕಂಪೆನಿಗಳನ್ನು ಸಾರ್ವಜನಿಕ ರಂಗದಲ್ಲೇ ಮುಂದುವರಿಸುವ ಆಶ್ವಾಸನೆ ದೊರೆಯಿತು. ಪ್ರಣಬ್ ಮುಖರ್ಜಿ2011-12ನೇ ಸಾಲಿನಲ್ಲಿ 40,000 ಕೋಟಿ ರೂ. ಸಂಗ್ರಹಿಸುವ ಗುರಿ ಹೊಂದಿದ್ದರೆ, ಸಂಗ್ರಹವಾದದ್ದು ಕೇವಲ 19,418 ಕೋಟಿ. 2012-13ನೇ ಸಾಲಿನಲ್ಲಿ ಅವರು ಗುರಿಯನ್ನು 30,000 ಕೋಟಿ ರೂಗಳಿಗೆ ತಗ್ಗಿಸಿದರು. ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದ ಅವರ ಉತ್ತರಾಧಿಕಾರಿ ಪಿ.ಚಿದಂಬರಂ ಮಾಡಿದ ವಿಶೇಷ ಪ್ರಯತ್ನದಿಂದ ಗುರಿ ಮುಟ್ಟುವುದು ಸಾಧ್ಯವಾಯಿತು. ಆದರೆ 2013-14ನೇ ಹಣಕಾಸಿನ ವರ್ಷದಲ್ಲಿ ಆದಾಯ 18,304 ಕೋಟಿಗೆ ಕುಸಿದಾಗ ಅದನ್ನು ಗಂಭೀರವಾಗಿ ಪರಿಶೀಲಿಸುವ ಸ್ಥಾನದಲ್ಲಿ ಅರುಣ ಜೇಟ್ಲಿ ಕುಳಿತಿದ್ದರು! ಮೋದಿ ಸರಕಾರದ ಸಾಧನೆ ವಿತ್ತೀಯ ಕ್ರೋಡೀಕರಣದ ಪಥ ಅಯ್ಕೆ ಮಾಡಿಕೊಂಡ ಮೋದಿ ಸರಕಾರ ಸಂಪನ್ಮೂಲ ಸಂಗ್ರಹ ಉದ್ದೇಶದೊಂದಿಗೆ ಹೂಡಿಕೆ ಹಿಂತೆಗೆತದ ವಿಷಯದಲ್ಲಿ ಸ್ಪಷ್ಟ ಮತ್ತು ದಿಟ್ಟ ನಿಲುವು ತಾಳಿದೆ. 2015-16ನೇ ಸಾಲಿನ ಆಯವ್ಯಯ ಮಂಡಿಸುತ್ತ ಜೇಟ್ಲಿ ಹೂಡಿಕೆ ಹಿಂತೆಗೆತದ ವ್ಯಾಪ್ತಿಯನ್ನು ವಿಸ್ತೃಗೊಳಿಸುವ ನೀತಿಯನ್ನು ಸಾರಿದರು. ನಂತರ ಹೂಡಿಕೆ ಹಿಂತೆಗೆತ ಆಯೋಗ ರದ್ದಾಗಿ ಅದರ ಕಾರ್ಯವನ್ನು 2016 ಮಾರ್ಚ್ ತಿಂಗಳಿನಿಂದ ನೀತಿ ಆಯೋಗ ಮಾಡುತ್ತಿದೆ. 2016 ಆಗಸ್ಟ್ 16ರಂದು ಪ್ರಧಾನಿ ಮೋದಿ ನೇತೃತ್ವದಲ್ಲಿ ಆರ್ಥಿಕ ವ್ಯವಹಾರಗಳ ಕ್ಯಾಬಿನೆಟ್ ಸಮಿತಿ ಸಭೆ ಸೇರಿ ಹೂಡಿಕೆ ಹಿಂತೆಗೆತದ ವಿಧಾನಗಳನ್ನು ಸರಳೀಕರಣಗೊಳಿಸಿತು. 2016-17ನೇ ವಿತ್ತ ವರ್ಷದಲ್ಲಿ ಹೂಡಿಕೆ ಹಿಂತೆಗೆತದ ಮೂಲಕ 46,246 ಕೋಟಿ ರೂ. ಆದಾಯ ಗಳಿಸಿದ್ದು ದಾಖಲೆಯಾಯಿತು. ಹಲವಾರು ಸಾರ್ವಜನಿಕ ಉದ್ದಿಮೆಗಳು ಹೂಡಿಕೆ ಹಿಂತೆಗೆತದ ಯೋಜನೆಯ ಕಕ್ಷೆಯೊಳಗಿವೆ. ಬೆಂಗಳೂರಿನಲ್ಲಿರುವ ಬೃಹತ್ ಸಾರ್ವಜನಿಕ ಉದ್ದಿಮೆಯಾದ ಭಾರತ್ ಅರ್ತ್ ಮೂವರ್ಸ್ ಲಿಮಿಟೆಡ್ನ (ಬೆಮೆಲ್) ಖಾಸಗೀಕರಣವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಬಲವಾಗಿ ವಿರೋಧಿಸಿದ್ದಾರೆ. ಏಳು ತಯಾರಿಕಾ ಘಟಕಗಳನ್ನು ಹೊಂದಿದ, ರಕ್ಷ ಣಾ ಉಪಕರಣಗಳನ್ನೂ ಕೂಡ ಉತ್ಪಾದಿಸುವ, ಪ್ರತಿವರ್ಷ 600 ಕೋಟಿ ರೂ. ತೆರಿಗೆ ನೀಡುವ ಮತ್ತು ಗುಣಮಟ್ಟದ ಸಂಶೋಧನೆ ಹಾಗೂ ಅಭಿವೃದ್ಧಿ ವ್ಯವಸ್ಥೆಯನ್ನು ಹೊಂದಿರುವ ಈ ಉದ್ದಿಮೆಯನ್ನು ಸಾರ್ವಜನಿಕ ರಂಗದಲ್ಲೇ ಮುಂದುವರಿಸುವಂತೆ ಅವರು ಪ್ರಧಾನಿಗೆ ಬರೆದ ಪತ್ರದಲ್ಲಿ ಒತ್ತಾಯಿಸಿದ್ದಾರೆ. ಸಾಧಕ ಬಾಧಕಗಳನ್ನು ಪರೀಕ್ಷಿಸುವ ಉದ್ದೇಶದಿಂದ ಬೆಮೆಲ್ ಖಾಸಗೀಕರಣವನ್ನು ಕೇಂದ್ರ ಮುಂದೂಡಿದೆ. ಜೇಟ್ಲಿ 2017-18ನೇ ಸಾಲಿನಲ್ಲಿ ಹೂಡಿಕೆ ಹಿಂತೆಗೆತದ ಮೂಲಕ ಪ್ರಸಕ್ತ ಹಣಕಾಸು ವರ್ಷದಲ್ಲಿ 72,000 ಕೋಟಿ ರೂ. ಸಂಗ್ರಹಿಸುವ ಗುರಿ ನಿಗದಿಪಡಿಸಿದ್ದರು. ಬಜೆಟ್ ಭಾಷಣದಲ್ಲಿ ಜೇಟ್ಲಿ ಆಗಲೇ ಗುರಿ ಮೀರಿದ ಸಾಧನೆಯಾಗಿದೆಯೆಂದು ಹೇಳಿದಾಗ ಅವರ ಪಕ್ಷ ದ ಸಂಸದರ ಹರ್ಷೋದ್ಗಾರ. 2018 ಮಾರ್ಚ್ ಅಂತ್ಯದೊಳಗೆ ಒಂದು ಲಕ್ಷ ಕೋಟಿ ರೂ. ಆದಾಯ ಗಳಿಸುವ ನಿರೀಕ್ಷೆ ಅವರದು. 2018-19ನೇ ಸಾಲಿನಲ್ಲಿ 80,000 ಕೋಟಿ ಸಂಗ್ರಹಿಸುವ ಗುರಿ ಪ್ರಸಕ್ತ ಬಜೆಟ್ನಲ್ಲಿದೆ. ವಿತ್ತೀಯ ಕೊರತೆಯನ್ನು ತಗ್ಗಿಸಲು ಹೂಡಿಕೆ ಹಿಂತೆಗೆತದ ಆದಾಯ ನೆರವಾಗುತ್ತಿದೆಯೆಂದು 2017-18ನೇ ಆರ್ಥಿಕ ಸಮೀಕ್ಷೆ ವರದಿ ತಿಳಿಸಿದೆ. ಸರಕಾರದ ಹೂಡಿಕೆ ಹಿಂತೆಗೆತದ ಸಾಧನೆಯನ್ನು ನೀತಿ ಆಯೋಗದ ಉಪಾಧ್ಯಕ್ಷ ರಾಜೀವ್ ಕುಮಾರ್ ಕೊಂಡಾಡಿದ್ದಾರೆ.
ಸೂಕ್ತ ವೇತನ ಸಿಗಲಿ
ರಾಜ್ಯದ ಸರಕಾರಿ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ ತಯಾರಿಸುವ ನೌಕರರು ರಾಜಧಾನಿಯಲ್ಲಿ ಧರಣಿ ಕುಳಿತು ಮೂರು ದಿನವಾಗಿದೆ. ಕನಿಷ್ಠ ವೇತನ ಜಾರಿಯೂ ಸೇರಿದಂತೆ ಹಲವಾರು ಬೇಡಿಕೆಗಳನ್ನು ಇವರು ಸರಕಾರದ ಮುಂದಿಟ್ಟಿದ್ದಾರೆ. ಆದರೆ ಸರಕಾರ ಇದುವರೆಗೆ ಇವರ ಅಳಲನ್ನು ಕಿವಿಗೆ ಹಾಕಿಕೊಂಡಿಲ್ಲ.
ಪ್ರಸ್ತುತ ಈ ಕಾರ್ಯಕರ್ತರಿಗೆ ಕಾಯಂ ನೌಕರರೆಂಬ ಮಾನ್ಯತೆ ಇಲ್ಲ. ಭಾನುವಾರ ಹೊರತುಪಡಿಸಿ ಇತರ ರಜೆಗಳಿಲ್ಲ. ನಿವೃತ್ತಿಯ ನಂತರ ಪಿಂಚಣಿ ವ್ಯವಸ್ಥೆಯಿಲ್ಲ. ಕನಿಷ್ಠ ವೇತನ ಜಾರಿ ಮಾಡಬೇಕು; ನೌಕರರನ್ನು ಸಂಘಟಿತ ವಲಯದ ಕಾರ್ಮಿಕರೆಂದು ಪರಿಗಣಿಸಬೇಕು; ವಾರ್ಷಿಕ 30 ದಿನ ರಜೆ ನೀಡಬೇಕು; ಬಿಸಿಯೂಟ ಸಹಾಯಕರನ್ನು ಶಿಕ್ಷಣ ಇಲಾಖೆಯಡಿ ತರಬೇಕು; ಶಾಶ್ವತ ಅಂಗವಿಕಲತೆಗೆ 1.5 ಲಕ್ಷ ರೂ. ಪರಿಹಾರಧನ ನೀಡಬೇಕು; ವಿಮಾ ಯೋಜನೆ ಜಾರಿ ಮಾಡಬೇಕು ಎಂಬುದು ಇವರ ಬೇಡಿಕೆಗಳಾಗಿವೆ. ಮಾಸಿಕ 5ನೇ ತಾರೀಕಿನೊಳಗೆ ವೇತನ ನೀಡಬೇಕು ಎಂಬುದು ಕೂಡ ಇವರ ಬೇಡಿಕೆಗಳಲ್ಲಿ ಒಂದಾಗಿದೆ ಎಂಬುದನ್ನು ಗಮನಿಸಿದರೆ, ಇವರು ಎಂಥ ಅಸಹಾಯಕ ಪರಿಸ್ಥಿತಿಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂಬುದು ಅರ್ಥವಾಗಬಹುದು. ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಮೂರು ದಿನಗಳಿಂದ ನಡೆಯುತ್ತಿರುವ ಆಹೋರಾತ್ರಿ ಧರಣಿಯಲ್ಲಿ ಪಾಲ್ಗೊಂಡಿರುವ ಹಲವಾರು ನೌಕರರು ಈಗಾಗಲೇ ಅಸ್ವಸ್ಥರಾಗಿದ್ದಾರೆ. ಸ್ಥಳಕ್ಕೆ ಪ್ರೌಢಶಿಕ್ಷಣ ಸಚಿವರು ಭೇಟಿ ನೀಡಿದ್ದರೂ ಮುಷ್ಕರ ನಿರತರ ಅಳಲಿಗೆ ಸ್ಪಂದಿಸಿದ್ದು ಕಂಡುಬಂದಿಲ್ಲ. ಸಂಘಟಿತ ವಲಯಗಳ ನೌಕರರ ಬೇಡಿಕೆಗಳಿಗೆ ಬಹುಬೇಗನೆ ಸರಕಾರ ಸ್ಪಂದಿಸುತ್ತದೆ. ಇತ್ತೀಚೆಗೆ ವೇತನ ಆಯೋಗ 5.2 ಲಕ್ಷ ಸರಕಾರಿ ನೌಕರರ ವೇತನವನ್ನು ಶೇ.30ರಷ್ಟು ಹೆಚ್ಚಿಸಲು ಶಿಫಾರಸು ಮಾಡಿದೆ. ಪರಿಷ್ಕೃತ ಸಂಬಳವನ್ನು ಕನಿಷ್ಠ 17,000 ಎಂದು ಹಾಗೂ ಭತ್ಯೆಗಳನ್ನೂ ನಿಗದಿಪಡಿಸಲಾಗಿದೆ. ಇದಕ್ಕೆ ಹೋಲಿಸಿದರೆ, ಬಿಸಿಯೂಟ ತಯಾರಕರ ಮಾಸಿಕ ಸಂಬಳ ಹಾಸ್ಯಾಸ್ಪದ ಎನಿಸುವಂತಿದೆ. ಪುಟ್ಟ ಮಕ್ಕಳ ಆರೋಗ್ಯದ ಹೊಣೆಗಾರಿಕೆ ಹಾಗೂ ಆ ಮೂಲಕ ಸಮಾಜದ ಅಂಚಿನಲ್ಲಿರುವ ವರ್ಗಗಳ ಮಕ್ಕಳಿಗೆ ಕಡ್ಡಾಯ ಶಿಕ್ಷಣದ ಸಾಧ್ಯತೆಯನ್ನು ಕಲ್ಪಿಸಿರುವ ಈ ಉದ್ಯೋಗವನ್ನು ಸರಕಾರವೇ ನಗಣ್ಯವಾಗಿ ಕಾಣುತ್ತಿರುವುದು ಶೋಚನೀಯ. ಈ ಉದ್ಯೋಗ ಮೇಲ್ನೋಟಕ್ಕೆ ಅರೆಕಾಲಿಕವೆಂಬಂತೆ ಕಂಡರೂ, ನೌಕರರ ಪೂರ್ಣ ದಿನವನ್ನು ಬೇಡುತ್ತದೆ. ಈಗ ಬಿಸಿಯೂಟದ ಜೊತೆಗೆ ಕ್ಷೀರಭಾಗ್ಯ ಯೋಜನೆಯ ಹೊಣೆಗಾರಿಕೆಯನ್ನೂ ಇವರ ಹೆಗಲಿಗೆ ಹೊರಿಸಲಾಗಿದೆ. ಕೃಷಿ ಕಾರ್ಮಿಕರು ಸೇರಿದಂತೆ ಹಲವು ಅಸಂಘಟಿತ ವಲಯದ ಉದ್ಯೋಗಿಗಳಿಗೆ ಕನಿಷ್ಠ ವೇತನದ ಭರವಸೆ ಒದಗಿಸಿರುವ ಸರಕಾರ ಬಿಸಿಯೂಟ ತಯಾರಕರನ್ನು ಮಾತ್ರ ಪ್ರತಿಭಟನೆಯ ಹಂತದವರೆಗೆ ಮುಂದುವರಿಯಲು ಬಿಟ್ಟದ್ದು ಸರಿಯಲ್ಲ. ಪ್ರತಿಯೊಂದು ಉದ್ಯೋಗಕ್ಕೂ ಅದರದೇ ಆದ ಗೌರವವಿದೆ. ಆ ಗೌರವವನ್ನು ಸೂಕ್ತ ಗೌರವಧನ ಹಾಗೂ ಇತರ ಸವಲತ್ತುಗಳ ಮೂಲಕ ಸರಕಾರ ಖಾತರಿಪಡಿಸಬೇಕು. ಸಿಬ್ಬಂದಿಯ ಶ್ರಮಗೌರವವನ್ನು ಕಾಯ್ದುಕೊಳ್ಳುವುದು ಆಡಳಿತದ ಹೊಣೆ. ಈ ಹಿಂದೆ ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಕೂಡ ತಮ್ಮ ಬೇಡಿಕೆಗಳನ್ನು ಸರಕಾರದ ಕಿವಿಗಳಿಗೆ ತಲುಪಿಸಲು ರಾಜಧಾನಿಗೆ ಧಾವಿಸಿ ಬಂದು ವಾರಗಟ್ಟಲೆ ಮುಷ್ಕರ ಕುಳಿತಿದ್ದರು. ಮುಷ್ಕರ ಉಲ್ಬಣಿಸುವವರೆಗೂ ಸರಕಾರ ಸ್ಪಂದಿಸಿರಲಿಲ್ಲ. ಅಂಥ ಪರಿಸ್ಥಿತಿ ಇನ್ನೊಮ್ಮೆ ಸೃಷ್ಟಿಯಾಗುವರೆಗೆ ಸರಕಾರ ಕಾಯಕೂಡದು. ಮುಷ್ಕರ ನಿರತರಿಗೆ ಊಟ, ನಿದ್ದೆ, ನೀರು, ಶೌಚದ ವ್ಯವಸ್ಥೆ ಇಲ್ಲವಾದ್ದರಿಂದ ಪರಿಸ್ಥಿತಿ ಬಿಗಡಾಯಿಸುವ ಎಲ್ಲ ಸಂಭವವಿದೆ. ಇವರೆಲ್ಲ ನಮ್ಮ ಸರಕಾರಿ ಶಾಲೆಗಳಲ್ಲಿ ಓದುತ್ತಿರುವ ಪುಟ್ಟ ಕಂದಮ್ಮಗಳ ಹೊಟ್ಟೆಯನ್ನು ತಂಪಾಗಿಡುವ ಹೊಣೆ ಹೊತ್ತ ಅಮ್ಮಂದಿರು. ಇವರನ್ನು ಅಷ್ಟೇ ಜತನದಿಂದ ನೋಡಿಕೊಳ್ಳುವ ಹೊಣೆ ನಮ್ಮ ವ್ಯವಸ್ಥೆಯದ್ದು ಆಗಿರಬೇಕು.
ಆತ್ಮ ಸಂಗಾತ: ಕೇಳುಜಗತ್ತಿನಿಂದ ನೋಡುಜಗತ್ತಿಗೆ ಬಂದಾಗಿನ ಪಲ್ಲಟಗಳು
* ಆತ್ಮ ಸಂಗಾತ: ಶಿವಪ್ರಕಾಶ್ ನಾನು ಬಯಲಿಗೆ ಬಂದು ಕಾದು ನಿಂತಿದ್ದೇನೆ ಬರುವುದಿದೆ ಸರಿಯಾದ ವರ್ತಮಾನ -ಕೆ.ಎಸ್. ನರಸಿಂಹಸ್ವಾಮಿ ಗತದ ಆ ಅಕ್ಷ ರಮೂಲ ಸುದ್ದಿ ಸಂಸ್ಕೃತಿ ಬಹುಮಟ್ಟಿಗೆ ಉದ್ದೇಶವಾಗಿಟ್ಟುಕೊಂಡದ್ದು ಅಕ್ಷ ರ ಬಲ್ಲವರನ್ನು. ಆಗ ಸಾಕ್ಷ ರರಲ್ಲದ ಜನ ಸುದ್ದಿಯನ್ನು ಪಡೆದುಕೊಳ್ಳಲು ರೇಡಿಯೋದ ಮೊರೆ ಹೋಗಬೇಕಾಗಿತ್ತು. ರೇಡಿಯೋ ಸೇಕಡಾ ನೂರು ದೃಶ್ಯಮುಕ್ತ. ಅದರೆ ಪತ್ತಿಕೆಗಳ ಪ್ರಪಂಚದಲ್ಲಿ ದೃಶ್ಯಾಂಶ ಇರಲೇ ಇಲ್ಲ ಎಂದು ಹೇಳಲಾಗುವುದಿಲ್ಲ. ಫೋಟೋಗಳನ್ನು ಪತ್ರಿಕೆಗಳು ಆಗ ಸ್ವಲ್ಪಮಟ್ಟಿಗೆ ಬಳಸುತ್ತಿದ್ದವು. ಕೆಲವು ಸಲ ವ್ಯಂಗ್ಯಚಿತ್ರಗಳ ಬಳಕೆಯೂ ಆಗುತ್ತಿತ್ತು. ಆದರೆ ಆಗ ದೃಶ್ಯಾಂಶಗಳು ಊಟದಲ್ಲಿ ಉಪ್ಪಿನಕಾಯಿಯಂತೆ ಮಿತಪ್ರಮಾಣದಲ್ಲಿ ಮಾತ್ರ ಇರುತ್ತಿದ್ದವು. ಆಗ ದೃಶ್ಯಮೂಲ ಸಂಹವನ ಪ್ರಧಾನವಾಗಿ ಸಿನಿಮಾ ಆಗಿತ್ತು. ಆಧುನಿಕಪೂರ್ವ ದೃಶ್ಯಕಲೆಯಾಗಿದ್ದ ನೃತ್ಯ, ನಾಟಕಗಳ ವಲಯ ಸಾಕಷ್ಟೂ ಹಿನ್ನಲೆಗೆ ಸರಿಯುತ್ತಿದ್ದು ಅದರ ಜಾಗವನ್ನು ಸಿನಿಮಾ ಒತ್ತುವರಿ ಮಾಡಿಕೊಳ್ಳುತ್ತಿತ್ತು. ಆ ಕಾಲದ ದೃಶ್ಯ ಮಾಧ್ಯಮ ಮನರಂಜನೆಯ ಮಾರ್ಗವಾಗಿತ್ತು. ಮಾಹಿತಿ ಶೇಖರಿಸಬೇಕಾದಾಗ ಪುಸ್ತಕ ಮತ್ತು ಪತ್ರಿಕೆಗಳಿಗೆ ಪರ್ಯಾಯಗಳಿರಲಿಲ್ಲ. ಕಂಡದ್ದಕ್ಕಿಂತಾ, ಕೇಳಿದ್ದಕ್ಕಿಂತಾ ಬರೆದದ್ದು, ಬರೆದದ್ದಕ್ಕಿಂತಾ ಅಚ್ಚಾದದ್ದು ಹೆಚ್ಚು ನಿಜ ಎಂಬ ಅಭಿಪ್ರಾಯ ಅಂದಿನ ತಿಳುವಳಿಕೆಯ ತಿರುಳಾಗಿತ್ತು. ಅಕ್ಷ ರಪ್ರಧಾನ ಜಗತ್ತಿನಲ್ಲಿ ಜಾಹಿರಾತುಗಳ ಜಹಗೀರಿ ಆಗಾಗಲೇ ಸುರುವಾಗಿತ್ತು. ಆದರೆ ಆಗ ಜಾಹಿರಾತು ಅನ್ನುವುದು ಸುದ್ದಿಸೋಕದ ಸಣ್ಣ ದ್ವೀಪದ ಹಾಗೆ ತೋರುತ್ತಿತ್ತೇ ಹೊರತು ತನಗೆ ತಾನೇ ಪ್ರತ್ಯೇಕ ಪ್ರಪಂಚವಾಗಿರಲಿಲ್ಲ. ಆಗಿನ ಸುದ್ದಿ ಮತ್ತು ಜಾಹಿರಾತುಗಳು ಬಹುತೇಕ ಆ ಕಾಲದ ಫೋಟೋಗಳಂತೆ ಕಪ್ಪುಬಿಳುಪಾಗಿರುತ್ತಿದ್ದವು. ಮುಂದೆ ಸುದ್ದಿಲೋಕ ಹೆಚ್ಚು ಹೆಚ್ಚು ದೃಶ್ಯಲೋಕವಾಗುತ್ತಾ ಹೋದಹಾಗೆ ದೃಶ್ಯಲೋಕ ಗ್ರಹಣಮಾಧ್ಯಮಗಳಾದ ಕ್ಯಾಮರಾಗಳ ತಂತ್ರಜ್ಞಾನದಲ್ಲೂ ಬದಲಾವಣೆಗಳು ಅಧಿಕವಾಗಿ ಸುದ್ದಿಜಗತ್ತು ಹೆಚ್ಚು ನವರಂಗಿಯೂ ಬಹುರಂಗಿಯೂ ಆಯಿತು. ಕಿವಿಯಾಳಿಕೆಯ ಯುಗದಿಂದ ಕಣ್ಣಾಳಿಕೆಯ ಜಗತ್ತಿಗೆ ನಾವು ಬಂದದ್ದು ಎರಡು ಹಂತಗಳಲ್ಲಿ. ಅವುಗಳಲ್ಲಿ ಮೊದಲನೆಯದು ಅಕ್ಷ ರವಂತಿಕೆಯ ಕ್ರಾಂತಿ. ಆ ಸಂದರ್ಭದಲ್ಲಿ ಅಕ್ಷ ರ ಎಂಬ ಶಬ್ದ ಅರ್ಥವೇ ಬುಡಮೂಲ ಬದಲಾಯಿತು. ಶತಮಾನಗಳ ಹಿಂದೆ ಪ್ರಜಾಕವಿರಾಜನಾದ ಸರ್ವಜ್ಞ ಮೋಕ್ಷ ಕ್ಕೆರಡಕ್ಕರವೆಂದು ಸಾರಿದ್ದ. ಸದರಿ ಉಲ್ಲೇಖದಲ್ಲಿ ಅಕ್ಷ ರ ಪದದ ಅರ್ಥ ಬರವಣಿಗೆಯೆಂದೇನಲ್ಲ. ಅಲ್ಲಿ ಅಕ್ಷ ರವೆಂದರೆ ಕಿವಿಗೆ ತಲುಪುವ ಧ್ವನಿಯೆಂದು. ಇಂದಿನ ನಮ್ಮ ಮನೋಶಬ್ದಕೋಶದಲ್ಲಿ ಅಕ್ಷ ರ ಮತ್ತು ಶಬ್ದ ಪರಸ್ಪರ ವಿಚ್ಛೇದನ ಮಾಡಿಕೊಂಡುಬಿಟ್ಟಿವೆ. ಕೇಳುಜಗತ್ತಿನಿಂದ ಓದುಜಗತ್ತಿಗೆ ನಮ್ಮನ್ನು ವರ್ಗ ಮಾಡಿದ ಕ್ರಾಂತಿ ನಮ್ಮ ಹಿಡಿಗಟ್ಟು, ನುಡಿಗಟ್ಟು, ನಡೆಗಟ್ಟುಗಳಲ್ಲಿ 'ನ ಭೂತೋ' ಅನ್ನಿಸುವಂಥಾ ಪಲ್ಲಟವನ್ನು ಉಂಟುಮಾಡಿತು. ಅವುಗಳಲ್ಲಿ ಅತ್ಯಂತ ಮಖ್ಯವಾದುದೆಂದರೆ ಅಕ್ಷ ರವಂತಿಕೆಯನ್ನೇ ತಿಳುವಳಿಕೆಯೆಂದು ಬಗೆಯತೊಡಗಿಸಿದ್ದು. ಪರಿಣಾಮವಾಗಿ ಅಕ್ಷ ರ ಬಲ್ಲೆವೆಂಬಹಂಕಾರ ಅಕ್ಷ ರ ಬಾರದವರನ್ನು ಅಕ್ರಮವಾಗಿ ಆಳತೊಡಗಿತು. ಅದರ ನಂತರದಲ್ಲಿ ಸಂಭವಿಸಿ, ಇನ್ನೂ ಸಂಭವಿಸುತ್ತಾ ತನ್ನನ್ನು ತಾನೇ ತಳಹತ್ತ ಮಾರ್ಪಡಿಸಿಕೊಳ್ಳುತ್ತಿರುವ ದೃಶ್ಯಪ್ರಧಾನ ಸಂಸ್ಕೃತಿ ನಮ್ಮ ಅನುಭವಗಳಲ್ಲಿ ಮಾಡಿರುವ ಮಹಾನ್ ಮಾರ್ಪಾಟುಗಳು ನಮ್ಮ ಎಚ್ಚರದ ಅರಿವಿಗೂ ದಾಟಿದವು. ಅಕ್ಷ ರರೂಪದ ಸುದ್ದಿಯನ್ನು ಎಚ್ಚರಿಕೆಯಿಂದ, ಹುಷಾರಾಗಿ ಗ್ರಹಿಸುತ್ತಿದ್ದ ನಾವು ಈಗ ಬಹುಮಟ್ಟಿಗೆ ಎಚ್ಚರತಪ್ಪಿ ಗ್ರಹಿಸತೊಡಗಿದ್ದೇವೆ. ಅಂದು ನಮ್ಮ ಮತ್ತು ಸುದ್ದಿಯ ನಡುವೆ ಅಕ್ಷ ರ ಮಧ್ಯಸ್ಥಿಕೆ ವಹಿಸುತ್ತಿದ್ದವು. ಆದರೆ ಈಗ ಯಾವ ಮಧ್ಯಸ್ಥಿಕೆಯೂ ಇಲ್ಲದೆ ನಮ್ಮ ಒಪ್ಪಿಗೆಗೂ ಕಾಯದೆ ದೃಶ್ಯಗಳು ಸೀದಾ ನಮ್ಮೊಳಕ್ಕಿಳಿದು ನಮ್ಮನ್ನು ಆ ದೃಶ್ಯನಿರ್ಮಾತೃಗಳ ಇಚ್ಛಾನುಸಾರ ಆಡಿಸತೊಡಗುತ್ತಿವೆ. ಅವುಗಳ ತಾಕತ್ತನ್ನು ಎದುರುಗೊಳುವಲ್ಲಿ ನಮ್ಮ ಅಕ್ಷ ರಯುಗದ ವಿಮರ್ಶಾತ್ಮಕತೆ ವಿಫಲವಾಗುತ್ತಿದೆ. ಇನ್ನೊಂದು ನಿಟ್ಟಿನಿಂದ ನೋಡಿದಾಗ ಸುದ್ದಿ ಮತ್ತು ಜಾಹಿರಾತು ಎರಡೂ ಜೊತೆಯಾಗಿ ಉದ್ಯಮೀಕರಣ, ಖಾಸಗೀಕರಣಕ್ಕೆ ಒಳಗಾಗಿವೆ. ಸುದ್ದಿ ಗಂಡನಾಗಿ ಜಾಹಿರಾತು ಹೆಂಡತಿಯಾಗಿ ಅವರಿಬ್ಬರ ಮುನ್ನಡೆಯ ನಿರ್ಮಾಪಕನಾಗಿ ಮನರಂಜನೆಯೆಂಬ ಮಿಂಡಗಾರನೂ ಅವರೊಡನೆ ಷೇರೀಕಾಗಿದ್ದಾನೆ. 'ಗಂಡ ಹೆಂಡಿರ ಕೈಯ ಮಿಂಡ ಹಿಡಿದಿದ್ದಾನೆ ಹಾದಿ ಸಾಗುವುದೆಂತೊ ನೋಡಬೇಕು' ಅನ್ನುವಂತಾಗಿದೆ. ಸುದ್ದಿ ಸದ್ದಾಗಿ, ವರದಿ ಕಟ್ಟುಕತೆಯಾಗಿ, ಇವೆಲ್ಲವೂ ಮಾರುಕಟ್ಟೆಯ ಮಾಯಾಜಾಲ, ಕಣ್ಕಟ್ಟುಗಳಾಗಿ ನಮ್ಮ ಅಶಿಕ್ಷಿತ, ಅರಕ್ಷಿತ ಮನಸ್ಸುಗಳನ್ನು ತಮ್ಮ ಪೂರ್ಣಾಧಿಕಾರದ ವಸಾಹತುಗಳನ್ನಾಗಿ ಮಾಡಿಕೊಂಡಿವೆ. ಅಕ್ಷ ರಪ್ರಧಾನ ಯುಗದಲ್ಲಿ ವರದಿ ಅಥವಾ ಮಾಹಿತಿ ನೀಡಿಕೆ ನೂರಕ್ಕೆ ನೂರರಷ್ಟು ವಸ್ತುನಿಷ್ಠವಾಗಿತ್ತೆಂದು ಹೇಳಲು ಬರುವುದಿಲ್ಲ. ವರದಿಗಾರನ ತಳಮನದ ನಿಲುವುಗಳು, ಆಯ್ಕೆಗಳು ಮಾಹಿತಿ ಮತ್ತು ವರದಿಗಳನ್ನು ಸಾಕಷ್ಟು ಪ್ರಭಾವಿಸುತ್ತಿದ್ದವು, ನಿಜ. ನಾವು ಬಳಸುವ ನುಡಿಗಳಲ್ಲಿ ಯೋಚಿಸುವ ಬಗೆಗಳಲ್ಲಿ ಶ್ರೇಣೀಕೃತ ಬೇಕುಬೇಡಗಳು ಕೆಲಸ ಮಾಡುತ್ತಿರುತ್ತವೆ. ಆದರೆ ಭಾಷೆಯೆಂಬುದರ ಒಟ್ಟು ಗುಣ ಹೆಚ್ಚು ಅಮೂರ್ತವೂ ಪರೋಕ್ಷ ವೂ ಆಗಿರುವ ಕಾರಣ ಆ ಬಾಗಿಲಿನಿಂದ ಬರುವ ವರದಿ, ಮಾಹಿತಿಗಳು ಗಣನೀಯ ಪ್ರಮಾಣದಲ್ಲಿ ವ್ಯಕ್ತಿಪರತೆಯಿಂದ ಬಿಡುಗಡೆ ಹೊಂದಿ ಸಾಧಾರಣೀಕರಣವನ್ನು ತಳೆದು ಬಿಡುತ್ತವೆ. ದೃಶ್ಯಪ್ರಧಾನದ ಸಂವಹನ ಹಾಗಲ್ಲ. ದೃಗ್ಗೋಚರ ಪ್ರತಿಮಾ ನಿರ್ಮಿತಿಗೆ ಇಲ್ಲಿ ಮೊದಲ ಜಾಗ. ತಳಮಟ್ಟದ ನಿರಂತರ ಬದಲಾವಣೆಗಳ ಮೂಲಕ ತನ್ನನ್ನು ನವೀಕರಿಸಿಕೊಂಬ ಆಡುಬಿಂಬಗಳ ತಂತ್ರಜ್ಞಾನದ ತಾಕತ್ತಿನಿಂದ ದೃಶ್ಯಬಿಂಬಗಳನ್ನು ಹೆಚ್ಚು ಹೆಚ್ಚು ಮನೋಹರವನ್ನಾಗಿಯೂ ರೋಚಕವನ್ನಾಗಿಯೂ ಮಾಡಲಾಗುತ್ತದೆ. ಕ್ಯಾಮರಾದ ಮಾಯಾನರ್ತನದಲ್ಲಿ ಕಣ್ಣಿನಂತೆ ಮನವೂ ಆ ತೋರುಬಿಂಬಗಳ ವಶೀಕರಣಕ್ಕೆ ಒಳಗಾಗಿ ವಿಮರ್ಶಾತ್ಮಕತೆಯನ್ನು ಗಿರವಿಯಿಟ್ಟಿರುತ್ತವೆ. ಈ ಎಲ್ಲವುಗಳ ಮೂಲಕ ಬರುವ ಮಾಹಿತಿಗಿಂತಾ ಹೆಚ್ಚು ಪ್ರಮಾಣದಲ್ಲಿ ಈ ಮಾಯಾಬಿಂಬಗಳು ಸುದ್ದಿಯಿಂದ ಸ್ವತಂತ್ರವಾದ ಸಂದೇಶವನ್ನು ನೇರ ಅಧೋಮನಕ್ಕೆ ತಲುಪಿಸುತ್ತಿರುತ್ತವೆ. ಉದಾಹರಣೆಗೆ ಟಿವಿ ನಿರೂಪಕರ ದಿರಿಸುಗಳನ್ನೇ ನೋಡಿ. ಗಂಡಸರು ಹೆಂಗಸರು ಯೂರೋಪಿನ ಮದುವೆ ಹೆಣ್ಣುಗಂಡುಗಳಂತೆ ವೇಷ ಹಾಕಿಕೊಂಡು ಸ್ವದೇಶಿ ವೇಶಗಳಿಗೆ ಹೊರತಾಗಿ ವಿದೇಶೀ ಸಂಸ್ಕೃತಿಯ ಪಾರಮ್ಯದ ಪ್ರಚಾರ ಮಾಡುತ್ತಿರುತ್ತಾರೆ. ಇದು ಒಂದು ಸಣ್ಣ ಉದಾಹರಣೆ. ಇದಕ್ಕಿಂತಾ ದೊಡ್ಡ ಉದಾಹರಣೆಗಳು ಜಾಹಿರಾತು ಸಿನಿಮಾಗಳಲ್ಲಿ ದೊರಕುತ್ತವೆ. ಈ ಅಪಾಯಗಳಿಂದ ಪಾರಾಗಲು ಸೂಕ್ಷ ್ಮವಾದ ದೃಶ್ಯಸಾಕ್ಷ ರತೆ ಮತ್ತು ದೃಶ್ಯ ವಿಮರ್ಶಾತ್ಮಕತೆಗಳನ್ನು ನಾವೆಲ್ಲ ರೂಪಿಕೊಳ್ಳಬೇಕಾಗಿದೆ, ರೂಢಿಸಿಕೊಳ್ಳಬೇಕಾಗಿದೆ.
''ವರ್ತಮಾನ ಪತ್ರಿಕೆಯ ತುಂಬ ಭೂತದ ಸುದ್ದಿ''- ಇದು ಆಡಿಗರ ಕವಿತೆಯೊಂದರ ಸಾಲು. ಆದರೆ ಇವತ್ತು ಅಂದಿನ ಆ ವರ್ತಮಾನ ಪೂರ್ತಿ ಬೇರೆಯಾಗಿದೆ. ಅಂದಿನ ವರ್ತಮಾನ ಬಹುಮಟ್ಟಿಗೆ ಅಕ್ಷ ರಾಧಾರಿತ. ಬೆಳಗಿನ ಬಿಸಿಬಿಸಿ ಸುದ್ದಿಯನ್ನು ರೇಡಿಯೋ ನಮ್ಮ ಕಿವಿಯೊಳಗೆ ತುಂಬುತ್ತಿತ್ತು; ಅಥವಾ ಸುದ್ದಿ ಪತ್ರಿಕೆ ನಮ್ಮ ಕಣ್ಣಿನ ಮೂಲಕ ಮುಟ್ಟಿಸುತ್ತಿತ್ತು. ಆದ್ದರಿಂದ ವರ್ತಮಾನ ನಮ್ಮ ಮನಸಿನಲ್ಲಿ ಶ್ರವ್ಯ ದೃಶ್ಯ ಮೂಲವಾಗಿಯೇ ಆದರೂ ಅವು ನೀಡುವ ಮಾಹಿತಿಗಳು, ಬಣ್ಣಿಸುತ್ತಿದ್ದ ಘಟನೆಗಳು, ಮೂಡಿಸುತ್ತಿದ್ದ ವ್ಯಕ್ತಿಗಳು ನಮ್ಮೊಳಗೆ ಇಳಿಯುತ್ತಿದ್ದದ್ದು ಪರೋಕ್ಷ ವಾಗಿ. ಸುದ್ದಿಗಳ ಬಗ್ಗೆ ನಾವು ಕೇಳಿದಾಗ ಅಥವಾ ಓದಿದಾಗ ತತ್ಸಂಬಂಧಿತ ಘಟನಾವಳಿಗಳನ್ನು ಒಂದು ತೆರನ ವಿಮರ್ಶಾತ್ಮಕ ದೂರದಿಂದ ಅರ್ಥ ಮಾಡಿಕೊಳ್ಳುತ್ತೇವೆ. ಸುದ್ದಿ ಗುದ್ದಿಕೊಂಡು ನಮಗೇ ಗೊತ್ತಿಲ್ಲದ ಹಾಗೆ ನಮ್ಮೊಳಗಿಳಿದು ಆಳಗಳಲ್ಲಿ ಜಾಂಡಾ ಊರಿಕೊಂಡು ನಮಗೇ ಅರಿವಾಗದ ನೆಲೆಗಳಲ್ಲಿ ನಮ್ಮನ್ನು ನಿಯಂತ್ರಿಸುವ ಖತರ್ನಾಕ್ ಸಾಧ್ಯತೆಗಳು ತೀರಾ ಕಡಿಮೆ.
ಮಾತು ಮಂಥನ: ಕನ್ನಡದ ಬಾವುಟಕೆ ಮಿಡಿಯದವರಾರು?
*ಮಾತು ಮಂಥನ: ಪ್ರೊ.ಚಂದ್ರಶೇಖರ ಪಾಟೀಲ ಏರಿಸಿ ಹಾರಿಸಿ ಕನ್ನಡದ ಬಾವುಟ ಓಹೋ ಕನ್ನಡ ನಾಡು ಆಹಾ ಕನ್ನಡ ನುಡಿ ಹಾರಿಸಿ ತೋರಿಸಿ ಕೆಚ್ಚೆದೆಯ ಬಾವುಟ ಗಾಳಿಯಲಿ ಪಟಪಟ ಧಾಳಿಯಲಿ ಚಟಚಟ ಕನ್ನಡದ ಬಾವುಟವ ಹಿಡಿಯದವರಾರು ಕನ್ನಡದ ಬಾವುಟಕೆ ಮಡಿಯದವರಾರು ನಮ್ಮ ಈ ಬಾವುಟಕೆ ಮಿಡಿಯದವರಾರು ಹೇಳಿರೋ ಹೆಸರೊಂದು ನೆನಪಿನಲಿ ಸುಳಿದರೆ... 'ಬಾವುಟ' ಎಂಬ ಮೂರಕ್ಷರದ ಪದ ಕೇವಲ ದನಿಯಾಗಿ ಉಳಿಯದೆ ಒಂದು ಮಂತ್ರವಾದದ್ದು ಬಿಎಂಶ್ರೀ ಬರೆದ ಈ ಗೀತೆಯ ಮೂಲಕ. ಅವರು ಬರೆದ ಆ ಕಾಲದಲ್ಲಿ ನಿಜವಾಗಿಯೂ ಒಂದು 'ಬಾವುಟ' ಎಂಬ ವಸ್ತುವಿತ್ತೋ ಅಥವಾ ಅದು ಕೇವಲ ಕವಿ ಕಲ್ಪನೆಯಾಗಿತ್ತೋ ನನಗೆ ಗೊತ್ತಿಲ್ಲ. ಆದರೆ ಏಕೀಕರಣ ಪೂರ್ವದ ಈ ಕಲ್ಪನೆ ಕಾಲಾಂತರದಲ್ಲಿ ಪರಿಕಲ್ಪನೆಯಾಗಿ ಮಾರ್ಪಟ್ಟು ಒಂದು ಮೂರ್ತರೂಪ ಪಡೆದದ್ದು ಮಾತ್ರ ಏಕೀಕರಣೋತ್ತರ ಕಾಲದ 1960ರ ದಶಕದಲ್ಲಿ. ಈಗ ನಾವು ಸಲೀಸಾಗಿ ಬಳಸುತ್ತಿರುವ 'ಕನ್ನಡ ಚಳುವಳಿ' ಎಂಬ ಪದಪುಂಜಕ್ಕೆ ಕಣ್ಣು- ಮೂಗು ಮೂಡಿದ್ದು 1961ರಲ್ಲಿ 'ಕನ್ನಡ ಯುವಜನ ಸಭೆ' ಆರಂಭವಾದಾಗ. ಅ.ನ.ಕೃಷ್ಣರಾಯರು, ಗೋಪಾಲಕೃಷ್ಣ ಅಡಿಗರು, ಕೋಣಂದೂರು ಲಿಂಗಪ್ಪ, ಮ.ರಾಮಮೂರ್ತಿ, ಮ.ಶ್ರೀಧರಮೂರ್ತಿ ಮುಂತಾದವರು ಆಗಿನ ಮುಂಚೂಣಿ ಯುವ ನಾಯಕರು. ಭಾಷಾವಾರು ಪ್ರಾತ ರಚನೆಯಾಗಿದ್ದರೂ ರಾಜಧಾನಿಯಲ್ಲಿ ನೆರೆಯ ತಮಿಳು ಭಾಷೆಯ ದಬ್ಬಾಳಿಕೆ ತೀವ್ರವೆನಿಸಿದಾಗ ಹುಟ್ಟಿದ್ದು ಕನ್ನಡ ಚಳುವಳಿ. ನಮ್ಮ ನಾಡು- ನುಡಿಗೆ ಈ 'ದಬ್ಬಾಳಿಕೆ' ಎಂಬುದು ಅನೇಕ ನೆಲೆಗಳಲ್ಲಿ ಮುಂದುವರಿದಿದೆ. ಹೀಗಾಗಿ ಕನ್ನಡ ಚಳುವಳಿಗೂ ಅನೇಕ ಆಯಾಮಗಳು ಒಡೆದು ಬಂದಿವೆ. ಪೀಳಿಗೆಯಿಂದ ಪೀಳಿಗೆಗೆ ಈ ಚಳುವಳಿಯ ನೇತಾರರೂ ಬದಲಾಗುತ್ತಿದ್ದಾರೆ. ಮೊದಲ ಪೀಳಿಗೆಯ ಮ.ರಾಮಮೂರ್ತಿಯವರು ಅರವತ್ತರ ದಶಕದ ಕೊನೆಯಲ್ಲಿ, ತಮಿಳುನಾಡಿನ 'ದ್ರಾಮುಕ'(ಡಿಎಂಕೆ) ಪಕ್ಷಕ್ಕೆ ಎದುರಾಗಿ 'ಕನ್ನಡ ಪಕ್ಷ' ಕಟ್ಟಿದರು. ಅದಕ್ಕೊಂದು ಅಧಿಕೃತ ಬಾವುಟ(ಧ್ವಜ)ವೂ ಸಿದ್ಧವಾಯಿತು. ಅದೇ ಈಗ ನಾವು ನೀವೆಲ್ಲ 'ನಮ್ಮ ಬಾವುಟ' ಎಂದು ಭಾವನಾತ್ಮಕವಾಗಿ ಅಪ್ಪಿಕೊಂಡ ಕನ್ನಡ ಬಾವುಟ. ಅದಕ್ಕೆ ಎರಡು ಬಣ್ಣ: ಮೇಲೆ ಹಳದಿ, ಕೆಳಗೆ ಕೆಂಪು. (ಡಿಎಂಕೆಯವರದು ಏಕವರ್ಣ- ಕಪ್ಪು. ನಮ್ಮದು ದ್ವಿವರ್ಣ- ಹಳದಿ, ಕೆಂಪು). ಈಗ ಈ ಬಾವುಟದ ಪಯಣದಲ್ಲಿ 'ವರ್ಣಾಂತರ' ಪರ್ವ. ನಮ್ಮ ರಾಜ್ಯ ಸರಕಾರ ಧ್ವಜದ ವಿಚಾರದಲ್ಲಿ ಒಂದು ಸಮಿತಿಯನ್ನು ನೇಮಿಸಬೇಕಾಗಿ ಬಂದದ್ದು- ಅನೇಕ ವರ್ಷಗಳಿಂದ ಕನ್ನಡ ಪರ ಸಂಘಟನೆಗಳು ಮಂಡಿಸುತ್ತಿದ್ದ ಒತ್ತಾಯದ ಫಲವಾಗಿ. ಏನು ಒತ್ತಾಯ? ಕನ್ನಡಿಗರು ಭಾವನಾತ್ಮಕ ನೆಲೆಯಲ್ಲಿ ಸ್ವೀಕರಿಸಿದ ಹಳದಿ- ಕೆಂಪು ಧ್ವಜಕ್ಕೆ ಸರಕಾರದ ಮಾನ್ಯತೆ ಬೇಕು; ಅದಕ್ಕೇ ಅಧಿಕೃತತೆಯ ಮೊಹರು (ಶೀಲು- ಸಿಕ್ಕಾ-ಮುದ್ರೆ) ಬೇಕು. ಆಗ ಶುರುವಾಯಿತು ನೋಡಿರಿ ಈ ಎಲ್ಲ ಗೊಂದಲ. ಎರಡು ಬಗೆಯ ಗೊಂದಲ: (1) ಇಂಡಿಯಾ (ಭಾರತ) ಎಂಬ ಒಕ್ಕೂಟದ ಒಂದು ರಾಜ್ಯ ಕರ್ನಾಟಕ. ಇಂಡಿಯಾಕ್ಕೆ ಒಂದು 'ರಾಷ್ಟ್ರಧ್ವಜ' ಈಗಾಗಲೇ ಇರುವುದರಿಂದ 'ರಾಜ್ಯ'ಕ್ಕೆ ಪ್ರತ್ಯೇಕವಾದ ಧ್ವಜ ಬೇಕೆ? ಯಾಕೆ ಬೇಕು? ನಮ್ಮ ಸಂವಿಧಾನದಲ್ಲಿ ಇದಕ್ಕೆ ಅವಕಾಶ ಇದೆಯೇ? ಕಾನೂನಿಗೆ ಸಂಬಂಧಪಟ್ಟ ಈ ಪ್ರಶ್ನೆ ಈಗ ಪ್ರಶ್ನೆಯಾಗಿ ಉಳಿದಿಲ್ಲ. 'ರಾಜ್ಯಗಳು ಪ್ರತ್ಯೇಕ ಧ್ವಜ ಹೊಂದಿರಬಾರದು'- ಎಂದು ಸಂವಿಧಾನದಲ್ಲಿ ಎಲ್ಲಿಯೂ ಹೇಳಿಲ್ಲ. 'ರಾಷ್ಟ್ರಧ್ವಜ'ಕ್ಕೆ ಅದರ ಎತ್ತರ ಇದ್ದೇ ಇದೆ. ಅದನ್ನಾರೂ ಪ್ರಶ್ನಿಸುವಂತಿಲ್ಲ. ಹೀಗಾಗಿಯೇ ಈ ದಿಕ್ಕಿನಲ್ಲಿ ನಮ್ಮ ಸರಕಾರ ಮುನ್ನುಗ್ಗಿ ಸಮಿತಿಯನ್ನು ರಚಿಸಿದೆ. ತಜ್ಞರ ಈ ಸಮಿತಿ ವರದಿಯನ್ನೂ ಸಲ್ಲಿಸಿದೆ. ಈ ಹಂತದಲ್ಲಿ ಉಂಟಾಗಿರುವ ಇನ್ನೊಂದು ಗೊಂದಲ- ಬೇರೆ ರೀತಿಯದು. ಎಂ.ರಾಮಮೂರ್ತಿ ಅವರ 'ಕನ್ನಡ ಪಕ್ಷ' ಕಾಲಾಂತರದಲ್ಲಿ ನಮ್ಮ ಕೇಂದ್ರದ ಚುನಾವಣಾ ಆಯೋಗದಿಂದ ಅಧಿಕೃತ ಮಾನ್ಯತೆ ಪಡೆದಾಗ ಪಕ್ಷದ ಕೆಂಪು- ಹಳದಿ ಬಾವುಟ ಆ 'ಪಕ್ಷ'ದ ಬಾವುಟವಾಯಿತು. ಕಾನೂನಿನ ಪ್ರಕಾರ ಒಂದು ರಾಜಕೀಯ ಪಕ್ಷದ ಬಾವುಟವನ್ನು ಬೇರೆಯವರು ಯಾವ ಕಾರಣಕ್ಕೂ ಬಳಸುವಂತಿಲ್ಲ. ಸದ್ಯ ಆ ಪಕ್ಷದ ಅಧ್ಯಕ್ಷರಾದವರು ಈ ಕುರಿತು ಅಧಿಕೃತ ಪತ್ರವನ್ನು ಸಮಿತಿಗೆ ನೀಡಿದ್ದರಿಂದ ಸಮಿತಿ ಅನಿವಾರ್ಯವಾಗಿ ಬಾವುಟದ ವಿನ್ಯಾಸದಲ್ಲಿ 'ಬದಲಾವಣೆ'ಗೆ ಕೈಹಾಕಿದಂತೆ ಕಾಣುತ್ತದೆ. ಸಮಿತಿ ಸೂಚಿಸಿದ ಬದಲಾವಣೆ ಎರಡು ತೆರನಾದದ್ದು. (1) ದ್ವಿವರ್ಣದಿಂದ ತ್ರಿವರ್ಣಕ್ಕೆ- ಹಳದಿ, ಬಿಳಿ, ಕೆಂಪು. (2) ಮಧ್ಯದಲ್ಲಿ ನಾಡಿದ ಸಂಸ್ಕೃತಿ ಬಿಂಬಿಸುವ ಒಂದು ಲಾಂಛನ. (ನಮ್ಮ ಸಾಂಪ್ರದಾಯಿಕ ಲಾಂಛನ - ಗಂಡಭೇರುಂಡ). ಇದೀಗ ಸರಕಾರ ನೇಮಿಸಿದ ತಜ್ಞರ ಸಮಿತಿ ಸೂಚಿಸಿದ ಬದಲಾವಣೆಗಳನ್ನು ಒಪ್ಪಿಕೊಂಡು, 'ಹೌದು, ಇದು ನಮ್ಮ ರಾಜ್ಯಧ್ವಜ'- ಎಂದು ಸ್ವೀಕರಿಸುವುದು, ಒಂದು ರೀತಿ. ಅಥವಾ ಈಗಾಗಲೇ ಚಾಲ್ತಿಯಲ್ಲಿರುವ ಹಳದಿ-ಕೆಂಪು ಬಾವುಟವನ್ನು 'ರಾಜ್ಯಧ್ವಜ'ವನ್ನಾಗಿ ಬಳಸಲು ತಮ್ಮ ತಕರಾರು ಇಲ್ಲ- ಎಂದು ಕನ್ನಡ ಪಕ್ಷದ ಅಧ್ಯಕ್ಷರು ಸರಕಾರಕ್ಕೆ ಕಾನೂನು ಪ್ರಕಾರ ತಿಳಿಸಿದರೆ ಅದಕ್ಕೇ ಅಧಿಕೃತ ಮುದ್ರೆ ಒತ್ತಿಬಿಡಬಹುದು. ಒಟ್ಟಿನಲ್ಲಿ ನಮ್ಮ ಪ್ರಭುತ್ವ ಮತ್ತು ನಮ್ಮ ಪ್ರಜಾ ಸಮೂಹ ಒಮ್ಮನಸ್ಸಿನಿಂದ ನಿರ್ಣಯಿಸುವುದು ಒಳ್ಳೆಯದು. ಈ ನಿಟ್ಟಿನಲ್ಲಿ ಚರ್ಚೆಗೆ ಅರ್ಹವಾಗಬಹುದಾದ ಒಂದೆರಡು ಅನಿಸಿಕೆಗಳು: (1) ಸ್ವಾತಂತ್ರ್ಯ ನಂತರದ ದಶಕಗಳಲ್ಲಿ ನಮ್ಮ 'ಒಕ್ಕೂಟ' ವ್ಯವಸ್ಥೆಯಲ್ಲಿ ಅನೇಕ ಕಾರಣಗಳಿಂದಾಗಿ ಕೇಂದ್ರ ರಾಜ್ಯಗಳ ಸಂಬಂಧ ಸುಸೂತ್ರವಾಗಿ ಉಳಿದಿಲ್ಲ. ಕೇಂದ್ರದ ಅನಗತ್ಯ ಹಸ್ತಕ್ಷೇಪದಿಂದಾಗಿ ಸ್ವಾಯತ್ತತೆ, ಪ್ರತ್ಯೇಕತೆ, ಮುಂತಾದ (ಅಪ)ಸ್ವರಗಳು ಕೇಳುತ್ತಲೇ ಇವೆ. ಈ ಸನ್ನಿವೇಶದಲ್ಲಿ 'ರಾಜ್ಯಧ್ವಜ' ಎಂಬುದು ರಾಜ್ಯಕ್ಕೆ ಅಸ್ಮಿತೆಯನ್ನು ಆತ್ಮವಿಶ್ವಾಸದ ಬಲವನ್ನೂ ತರುವುದು ಸಾಧ್ಯ. ಎಲ್ಲ ರಾಜ್ಯಗಳವರು ಕರ್ನಾಟಕ ಮಾದರಿ ಅನುಸರಿಸುವುದಾದರೆ ಅದು ಇಡೀ ದೇಶಕ್ಕೆ ಒಳ್ಳೆಯದೇ. ಬಲಿಷ್ಠ ರಾಜ್ಯಗಳಿಂದ ಬಲಿಷ್ಠ-ತರ ರಾಷ್ಟ್ರ ಸಾಧ್ಯ. (2) ಇನ್ನು ಮೇಲೆ ನಮ್ಮ ಧ್ವಜ - (ಯಾವುದೇ ವಿನ್ಯಾಸವಿರಲಿ)- ಕನ್ನಡ ಧ್ವಜವೂ ಹೌದು; ಕರ್ನಾಟಕ ಧ್ವಜವೂ ಹೌದು. 'ಕರ್ನಾಟಕ' ಎಂಬುದರ ವ್ಯಾಪ್ತಿಯಲ್ಲಿ ಇಲ್ಲಿ ಪ್ರಚಲಿತವಿರುವ ಕನ್ನಡೇತರ ಭಾಷೆಗಳೂ ಬರುತ್ತವೆ. ಹೀಗಾಗಿ ನಮ್ಮ ನಾಡಿನ ತಮಿಳು- ತೆಲುಗು- ಮಲಯಾಳ- ಉರ್ದು ಭಾಷಿಕರು ಮತ್ತು ಸಂಘಟನೆಗಳು 'ಹೌದು, ಇದು ನಮ್ಮ ಬಾವುಟ' - ಎಂಬ ಅಭಿಮಾನದ ನೆಲೆಯಲ್ಲಿ ನಾಡಿನ ಬದುಕಿನಲ್ಲಿ ಇನ್ನೂ ಆಳವಾಗಿ ಬೆರೆಯಬಹುದೇನೋ. ಕನ್ನಡದ ಬಾವುಟವ ಹಿಡಿಯದವರಾರು ನಮ್ಮ ಈ ಬಾವುಟಕೆ ಮಿಡಿಯದವರಾರು ಬಿಎಂಶ್ರೀ ಅವರ ಈ ಪದಗಳಿಗೆ ಹೊಸ ವಿಸ್ತಾರ ಬರಬಹುದು. ಬಾವುಟಕ್ಕೆ ನೆಲವೇ ಬೇರು ಆದರೂ ಅದರ ಕ್ಷಿತಿಜ ಬಾನು ಮತ್ತು ಬಯಲು, ಅಲ್ಲವೇ?