Quantcast
Channel: Lifestyle, Latest Trends- ಟ್ರೆಂಡ್ಸ್, ಜೀವನಶೈಲಿ
Viewing all 6221 articles
Browse latest View live

ಯಾಕೆ ಭಯಪಡುತ್ತೀರಿ?

$
0
0

- ಜಿಡ್ಡು ಕೃಷ್ಣಮೂರ್ತಿ

ಭಯ ಎಂದರೇನು? ಅದು ಇದೆ ಎಂದು ನಿಮಗೆ ಗೊತ್ತಿರುವಾಗ, ಅದರ ಸ್ವರೂಪ ತಿಳಿದಿರುವಾಗ, ಅದರ ಮಿಡಿತ ತಿಳಿದಿರುವಾಗ, ನಿಮ್ಮ ಶರೀರ ಹೇಗೆ ಮುದುಡುತ್ತದೆ ಮತ್ತು ಬುದ್ಧಿ ಹೇಗೆ ಮಂಕಾಗುತ್ತದೆ ಎಂಬುದು ನಿಮಗೆ ಗೊತ್ತು. ಇದೆಲ್ಲ ನಿಮಗೆ ಗೊತ್ತಲ್ಲವೆ? ಇದು ವಸ್ತುಸ್ಥಿತಿ. ಅದು ನಿಮ್ಮ ನಿದ್ರೆ, ನಿತ್ಯಜೀವನಕ್ಕೆ ಬಾಧಕ. ಅದು ಸಂಶಯ, ಖಿನ್ನತೆ, ಆತಂಕ ಇತ್ಯಾದಿಯನ್ನು ಉಂಟುಮಾಡುತ್ತದೆ. ಆಗ ನೀವು ಯಾವುದನ್ನೋ ನೆಚ್ಚಿಕೊಳ್ಳುತ್ತೀರಿ ಮತ್ತು ಅದು ಬದಲಾಗುವುದಿಲ್ಲ ಹಾಗೂ ಅದರಿಂದ ಭಯ ಉತ್ಪನ್ನವಾಗುವುದಿಲ್ಲ ಎಂದು ನಂಬುತ್ತೀರಿ. ಒಂದೋ ನಾವು ಭಯದ ಬೇರುಗಳನ್ನು ಕಿತ್ತೊಗೆಯಬೇಕು ಅಥವಾ ಅದರ ರೆಂಬೆಗಳನ್ನು ಕಡಿಯಬೇಕು. ನೀವು ಯಾವುದನ್ನು ಮಾಡುವವರಿದ್ದೀರಿ? ಸಾವಿರ ಭಯಗಳಿವೆ. ಜಗತ್ತಿನ ಸುಂದರ ಸೃಷ್ಟಿಗಳಲ್ಲಿ ಒಂದಾದ ವೃಕ್ಷದಂತೆ, ಕುರೂಪಿಯಾದ ಭಯಕ್ಕೆ ಸಾವಿರಾರು ರೆಂಬೆ ಕೊಂಬೆಗಳಿವೆ; ಎಲೆಗಳಿವೆ. ವಿಧವಿಧ ಅಭಿವ್ಯಕ್ತಿಗಳಿವೆ. ನೀವು ಈ ಅಭಿವ್ಯಕ್ತಿಗಳನ್ನು, ಮೇಲ್ಮೈಯನ್ನು ಅಥವಾ ಬಹಿರಂಗವನ್ನು ಮುಖಾಮುಖಿಯಾಗುವಿರಾ? ಅಥವಾ ನಾವು ಜೊತೆಗೂಡಿ ಅದರ ಬೇರುಗಳತ್ತ ಹೋಗೋಣ. ಭಯದ ಕಾರಣವೇನು ಎಂಬುದನ್ನು ಒಟ್ಟಿಗೆ ಕಂಡುಹಿಡಿಯೋಣ. ನನಗೆ ಭಯದ ಅಭಿವ್ಯಕ್ತಿಗಳೆಲ್ಲ ಗೊತ್ತು. ಹೀಗಾಗಿ ನಾವು ಅದರ ಮೂಲವನ್ನು ಕಂಡುಕೊಂಡರೆ, ಬಾಹ್ಯ ಅಭಿವ್ಯಕ್ತಿಗಳು ತಾನಾಗಿ ಉದುರಿ ಹೋಗುತ್ತವೆ.

ಹಾಗಿದ್ದರೆ ಭಯಕ್ಕೆ ಕಾರಣವೇನು? ವಿವರಣೆಯೇ ವಸ್ತುಸ್ಥಿತಿಯಲ್ಲ. ನೀವು ಒಂದು ಪರ್ವತದ ಸುಂದರ ಚಿತ್ರ ಬಿಡಿಸಬಹುದು. ಆದರೆ ಆ ಚಿತ್ರವೇ ಪರ್ವತವಲ್ಲ. ಭಯ ಎಂಬ ಶಬ್ದವು ಭಯವಲ್ಲ. ಆದರೆ ಭಯ ಎಂಬ ಶಬ್ದವು ಭಯವನ್ನುಂಟುಮಾಡುತ್ತದೆ. ಹೀಗಾಗಿ ನಾವು ಬಣ್ಣನೆ, ಶಬ್ದ ಇತ್ಯಾದಿಗಳ ಜೊತೆಗೆ ವ್ಯವಹರಿಸದೆ ಭಯದ ಆಳ ಹಾಗೂ ಶಕ್ತಿಯನ್ನು ಗಮನಿಸುವವರಿದ್ದೇವೆ. ನಾವು ಒಟ್ಟಿಗೆ ಕಂಡುಕೊಳ್ಳಲು ಪ್ರಯತ್ನಿಸುತ್ತಿದ್ದೇವೆಯೇ ಹೊರತು ನಾನು ವಿವರಿಸಿದ್ದನ್ನು ನೀವು ಒಪ್ಪಿಕೊಳ್ಳುತ್ತಿಲ್ಲ. ನಾವು ಸತ್ಯವನ್ನು ನಮ್ಮಷ್ಟಕ್ಕೆ ಕಂಡುಕೊಳ್ಳುತ್ತಿದ್ದೇವೆ. ಹೀಗೆ ಮಾಡುವ ಮೂಲಕ ಅದು ನಿಮ್ಮ ಸತ್ಯವಾಗುವುದೇ ಹೊರತು ಬೇರೆಯವರ ಸತ್ಯವಾಗುವುದಲ್ಲ. ಬೇರೆಯವರ ಸತ್ಯದೊಂದಿಗೆ ನೀವು ಬದುಕಲು ಸಾಧ್ಯವಿಲ್ಲ. ನೀವು ನಿಮ್ಮ ಸತ್ಯದೊಂದಿಗೆ ಮಾತ್ರ ಬದುಕಲು ಸಾಧ್ಯ. ಭಯಕ್ಕೆ ಕಾರಣವೇನು? ಆಲೋಚನೆಯೇ? ಕಾಲವೇ? ಅದನ್ನೀಗ ಪರಿಶೀಲಿಸೋಣ. ನಾನು ಈಗ ಬದುಕುತ್ತಿದ್ದೇನೆ, ನೀವು ಈಗ ಬದುಕುತ್ತಿದ್ದೀರಿ. 'ನಾನು ನಾಳೆ ಸಾಯಬಹುದು' ಅಥವಾ 'ನಾನು ನನ್ನ ಕೆಲಸ ಕಳೆದುಕೊಳ್ಳಬಹುದು'. 'ಬ್ಯಾಂಕಿನಲ್ಲಿ ನನ್ನ ಹಣವಿದೆ, ಆದರೆ ಬ್ಯಾಂಕು ದಿವಾಳಿಯಾಗಬಹುದು'. 'ನನ್ನ ನನ್ನ ಹೆಂಡತಿ ಜೊತೆ ಚೆನ್ನಾಗಿದ್ದೇನೆ, ಆದರೆ ನಾಳೆ ಅವಳು ಬೇರೆ ಯಾರನ್ನಾದರೂ ಪ್ರೀತಿಸಬಹುದು'. 'ನಾನೊಂದು ಪುಸ್ತಕ ಪ್ರಕಟಿಸಿದ್ದೇನೆ, ಅದು ಚೆನ್ನಾಗಿ ಜನಪ್ರಿಯವಾಗಬಹುದು'. ಇದೆಲ್ಲವೂ ಭಯವೇ. 'ನಾನು ಜನಪ್ರಿಯನಾಗಬೇಕು' ಎಂಬುದು ಜಗತ್ತಿನಲ್ಲಿ ಅತ್ಯಂತ ಬಾಲಿಶವಾದ ಸಂಗತಿ. ನಾನು ಎಲ್ಲರಿಗೂ ಸುಪರಿಚಿತನಾಗಬೇಕು. ಯಾರೋ ಒಬ್ಬರು ಈಗಾಗಲೇ ನಮಗಿಂತ ಹೆಚ್ಚು ಪ್ರಸಿದ್ಧರಾಗಿದ್ದಾರೆ. ಹೀಗೆ ನಾನು ಕಳೆದುಕೊಳ್ಳಬಹುದು, ಗಳಿಸಬಹುದು, ಒಂಟಿಯಾಗಬಹುದು ಎಂಬ ಚಿಂತನೆ ನಮ್ಮಲ್ಲಿದೆ. ಇದು ಭಯದ ಅಂಶಗಳಲ್ಲೊಂದು. ನಾನು ನನ್ನ ಪತ್ನಿಯ ಜೊತೆ, ಮಕ್ಕಳ ಜೊತೆ ಚೆನ್ನಾಗಿದ್ದೇನೆ, ಆದರೆ ಹತಾಶೆ, ಒಂಟಿತನವನ್ನೂ ನಾನು ನನ್ನೊಳಗೆ ಅನುಭವಿಸಿದ್ದೇನೆ. ಒಂಟಿತನವೆಂದರೇನು ಎಂಬುದನ್ನು ನೀವು ಪರಿಶೀಲಿಸಿದ್ದೀರಾ? ಒಂಟಿತನದ ಬಗ್ಗೆ ಮನುಷ್ಯ ಯಾಕೆ ಇಷ್ಟೊಂದು ಭಯಪಡುತ್ತಾನೆ? ಇದನ್ನು ನಮ್ಮೊಳಗೆ ಪರಿಶೀಲಿಸೋಣ.



ಸಂಹಿತೆಗೂ ಮುನ್ನ ನೀತಿಯ ಅಗತ್ಯ

$
0
0

ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದೆ. ಆಳುವ ಪಕ್ಷ ಹಾಗೂ ಪ್ರತಿಪಕ್ಷಗಳ ಪ್ರತಿಯೊಂದು ನಡೆ ಕೂಡ ಮುಂದಿನ ಚುನಾವಣೆಯಲ್ಲಿ ಮತದಾರರನ್ನು ಒಲಿಸಿಕೊಳ್ಳುವುದು ಹೇಗೆ ಎಂಬ ನಿಟ್ಟಿನಲ್ಲಿ ರೂಪಿತವಾಗುತ್ತಿದೆ.

ಹೀಗಾಗಿ ಹೊಸ ಹೊಸ ಯೋಜನೆಗಳೂ ಘೋಷಣೆಯಾಗುತ್ತಿವೆ. ಚುನಾವಣೆ ಬಹುಶಃ ಮೇ ತಿಂಗಳಿನಲ್ಲಿ ನಡೆಯಲಿರುವುದರಿಂದ, ಅದಕ್ಕನುಗುಣವಾಗಿ ಚುನಾವಣಾ ನೀತಿ ಸಂಹಿತೆ ಸದ್ಯದಲ್ಲೇ ಜಾರಿಯಾಗಬಹುದು. ನೀತಿ ಸಂಹಿತೆ ಜಾರಿಯ ಬಳಿಕ ಅಭ್ಯರ್ಥಿಗಳು ಹಾಗೂ ರಾಜಕೀಯ ಪಕ್ಷಗಳು ನಡೆಸುವ ಪ್ರತಿಯೊಂದು ಪೈಸೆ ಖರ್ಚು ವೆಚ್ಚಕ್ಕೂ ಆಯೋಗ ಲೆಕ್ಕ ಕೇಳುತ್ತದೆ. ಪ್ರತಿ ಅಭ್ಯರ್ಥಿಯ ವೆಚ್ಚಕ್ಕೂ ಆಯೋಗ ಮಿತಿ ವಿಧಿಸಿದೆ. ಕರ್ನಾಟಕದಲ್ಲಿ ವಿಧಾನಸಭೆ ಅಭ್ಯರ್ಥಿಯ ಚುನಾವಣೆ ವೆಚ್ಚವನ್ನು 24 ಲಕ್ಷ ರೂ.ಗಳಿಗೆ ಆಯೋಗ ಮಿತಿಗೊಳಿಸಿದೆ. ಆದರೆ ಈ ಮಿತಿಯೊಳಗೆ ಮತದಾರರನ್ನು ಆಕರ್ಷಿಸುವುದು ಅಸಾಧ್ಯ ಎಂದು ಪಕ್ಷಗಳು ನಂಬಿರುವುದರಿಂದ ಅವು ವಾಮ ಮಾರ್ಗಕ್ಕೆ ಇಳಿದುಬಿಡುತ್ತವೆ. ಮತದಾರರಿಗೆ ಹಣ- ಹೆಂಡ ಹಂಚುವಿಕೆಯಂಥ ಕ್ರಮಗಳು ಪ್ರಜ್ಞಾವಂತ ಮತದಾರರಿದ್ದಲ್ಲಿ ಈಗ ಅಸಾಧ್ಯವಾಗಿವೆ. ಜೊತೆಗೆ ಚುನಾವಣಾ ಆಯೋಗವೂ ಕೂಡ ತನ್ನ ವೀಕ್ಷಕಕರ ಮೂಲಕ ಹದ್ದಿನ ಕಣ್ಣು ಇಟ್ಟಿರುವುದರಿಂದ, ಇದರಿಂದ ತಪ್ಪಿಸಿಕೊಳ್ಳಲು ಅಭ್ಯರ್ಥಿಗಳಿಗೆ ಸಾಧ್ಯವಾಗುತ್ತಿಲ್ಲ. ಆದರೆ ಆಯೋಗ ಚಾಪೆಯ ಕೆಳಗೆ ತೂರಿದರೆ, ರಂಗೋಲಿಯ ಕೆಳಗೆ ತೂರುವ ಕಲೆಯನ್ನು ಪಕ್ಷಗಳು ಕಲಿತಿವೆ. ಇದರ ಲಕ್ಷಣಗಳು ಈಗಾಗಲೇ ಎಲ್ಲೆಡೆ ಕಾಣಲಾರಂಭಿಸಿವೆ. ನೀತಿ ಸಂಹಿತೆ ಜಾರಿಗೆ ಮುನ್ನವೇ ಮತದಾರರನ್ನು ಒಲಿಸಿಕೊಳ್ಳುವ ಜಾಣ್ಮೆಯ ಕಾರ‍್ಯತಂತ್ರವನ್ನು ಅವು ಅನುಸರಿಸಲಾರಂಭಿಸಿವೆ. ರಾರ‍ಯಲಿಗಳಿಗೆ ಬಂದವರಿಗೆ ಸಾಕಷ್ಟು ಹಣ ನೀಡುವುದು ಇದ್ದೇ ಇದೆ. ತಮ್ಮ ಕ್ಷೇತ್ರದ ಮತದಾರರನ್ನು ಸೇರಿಸಿ ಅವರನ್ನು ಪ್ರವಾಸಿ ಅಥವಾ ತೀರ್ಥಕ್ಷೇತ್ರಗಳಿಗೆ ಕರೆದೊಯ್ಯುವುದು, ಅಲ್ಲಿ ಅವರನ್ನು ತಮ್ಮ ಔದಾರ‍್ಯದ ಉರುಳಲ್ಲಿ ಸಿಲುಕಿಸಿ ಮತದ ಭರವಸೆ ಪಡೆಯುವುದು ಈ ಪಕ್ಷಗಳ ಹೊಸ ವರಸೆಯಾಗಿ ರೂಪುಗೊಂಡಿದೆ. ಜತೆಗೆ ದುಬಾರಿ ಸೀರೆ, ಉಡುಗೊರೆಗಳನ್ನು ನೀಡುವುದು, ಮತದಾರರ ಪಟ್ಟಿಯನ್ನು ಮುಂದಿಟ್ಟುಕೊಂಡು ಗ್ರಾಮೀಣ ಪ್ರದೇಶದ ಮುಗ್ಧ ಮತದಾರರಿಂದ ವಾಗ್ದಾನಗಳನ್ನು ಪಡೆಯುವುದು, ಸಾಂಸ್ಕೃತಿಕ ಕಾರ‍್ಯಕ್ರಮಗಳ ಹೆಸರಿನಲ್ಲಿ ಮಹಿಳೆಯರನ್ನು ಸೇರಿಸಿ ಅವರಿಗೆ ದುಬಾರಿ ಕೊಡುಗೆಗಳನ್ನು ನೀಡುವುದು ಮಾಡುತ್ತಿವೆ. ಈ ನಿಟ್ಟಿನಲ್ಲಿ ಪ್ರತಿಯೊಂದು ಪಕ್ಷವೂ ತಮ್ಮದೇ ವಿಧಾನವನ್ನು ಆವಿಷ್ಕರಿಸಿಕೊಳ್ಳುತ್ತಿವೆ. ತಮ್ಮ ಕ್ಷೇತ್ರದ ಮದುವೆ ಮನೆಗಳು ಹಾಗೂ ಮರಣ ಸಂಭವಿಸಿದ ಮನೆಗಳು ರಾಜಕೀಯ ನಾಯಕರ ಪ್ರಭಾವ ಬೀರುವ ಸ್ಥಳಗಳಾಗುತ್ತಿವೆ. ರಾಜಕಾರಣಿಗಳು ತಮ್ಮ ಮತದಾರರೊಂದಿಗೆ ಸಂಪರ್ಕ ಹೊಂದಿರುವುದು ತಪ್ಪಲ್ಲ. ಆದರೆ, ಚುನಾವಣೆಯ ಸಂದರ್ಭದಲ್ಲಿ ಈ ಸಂಪರ್ಕ ಹಾಗೂ ಕೊಡುಗೆಗಳಿಗೆ ಬೇರೆ ಅರ್ಥ ಬರುತ್ತದೆ. ಈ ಅನೈತಿಕ ವೆಚ್ಚವನ್ನು ಮೊಳಕೆಯಲ್ಲೇ ನಿಯಂತ್ರಿಸಲು ಸೂಕ್ತ ಕಾರ‍್ಯತಂತ್ರದ ಅಗತ್ಯವಿದೆ. ರಾಜಕೀಯ ಪಕ್ಷಗಳು ಈಗ ಮಾಡುತ್ತಿರುವ ವೆಚ್ಚವನ್ನೂ ಚುನಾವಣಾ ವೆಚ್ಚದ ವ್ಯಾಪ್ತಿಯೊಳಗೆ ತರಲು ಆಯೋಗ ಪ್ರಯತ್ನಿಸಬೇಕು. ಅಥವಾ, ಅಭ್ಯರ್ಥಿಗಳ ಈಗಿನ ವೆಚ್ಚದ ಮೇಲೆ ನಿಗಾ ಇಡುವ ಉಪಕ್ರಮವನ್ನು ಕೈಗೊಳ್ಳಬೇಕು. ಇಲ್ಲವಾದರೆ, ಊರು ಸೂರೆ ಹೋದ ಮೇಲೆ ಕೋಟೆ ಬಾಗಿಲು ಹಾಕಿದಂತಾಗುತ್ತದೆ. ಭ್ರಷ್ಟತೆಯೆಂಬುದು ಬೇರು ಮಟ್ಟದಲ್ಲಿ ಹರಡುವುದು ಚುನಾವಣಾ ಸಂದರ್ಭದಲ್ಲಿಯೇ ಆಗಿದೆ. ಇಂಥ ವಾಮಮಾರ್ಗಗಳನ್ನು ಪರಿಶೋಧಿಸಿ ಅವುಗಳ ಮೇಲೆ ಕಣ್ಣಿಟ್ಟರೆ ಮಾತ್ರ ಪಾರದರ್ಶಕ ಹಾಗೂ ಭ್ರಷ್ಟಾಚಾರಮುಕ್ತ ಚುನಾವಣೆ ಸಾಧ್ಯ. ಎಚ್ಚರವುಳ್ಳ ಮತದಾರರು ಕೂಡ ಈ ನಿಟ್ಟಿನಲ್ಲಿ ಪ್ರಜಾಪ್ರಭುತ್ವದ ಪಹರೆದಾರರಂತೆ ವರ್ತಿಸುವ ಅಗತ್ಯವಿದೆ.


ಹೂ ಬೆರಳು: ಸದ್ಯದ ಜರೂರು, ಜನಸಮದಾಯಕ್ಕೆ ಪಾಠ ಹೇಳಿದ ಗುರು

$
0
0

*ಹೂ ಬೆರಳು: ಎಸ್.ಆರ್. ವಿಜಯಶಂಕರ
ವಿಮರ್ಶಕ ಟಿ.ಪಿ ಅಶೋಕ ಅವರ 'ಕಥನ ಭಾರತಿ' ವಿಮರ್ಶಾ ಸಂಕಲನ ಈ ಸಾಲಿನ (2017) ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಪಾತ್ರವಾಗಿದೆ. ನಾಳೆ ದಿಲ್ಲಿಯಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿಯ ನೂತನ ಅಧ್ಯಕ್ಷರು ಈ ಪ್ರಶಸ್ತಿಯನ್ನು ಪ್ರದಾನ ಮಾಡಲಿದ್ದಾರೆ. ಈ ಸಂದರ್ಭದಲ್ಲಿ ಅಶೋಕರನ್ನು ಅಭಿನಂದಿಸುತ್ತಾ ಇಂತಹ ಭಾರತೀಯ ಕಥನಗಳ ಬಗ್ಗೆ ದೇಶ ಭಾಷೆಗಳಲ್ಲಿ ಬರೆಯುವುದರ ಸಾಂಸ್ಕೃತಿಕ ಮಹತ್ವವೇನು ಎಂಬುದನ್ನು ಚರ್ಚಿಸಬಹುದು.

ಇಂದು ಕನ್ನಡ ಭಾಷೆ ತನ್ನ ಆಧುನಿಕ ಬರವಣಿಗೆಗಳಲ್ಲಿ ಇತರ ದೇಶ ಭಾಷೆಗಳೊಡನೆ ಹೊಂದಿರುವ ಕೊಡುಕೊಳೆಯ ಸಂಬಂಧ ಮಹತ್ವದ ಪ್ರಭಾವ ಬೀರುವಷ್ಟು ಬಲಿಷ್ಟವಾಗಿ ಇಲ್ಲ. ಅಮೆರಿಕ, ಯುರೋಪ್‌, ದಕ್ಷಿಣ ಅಮೆರಿಕ ಮುಂತಾದ ದೇಶಗಳ ಸಾಹಿತ್ಯ, ವೈಚಾರಿಕ ಚಿಂತನೆಗಳು ಇಂಗ್ಲಿಷ್‌ ಭಾಷೆಯ ಮೂಲಕ ನಮ್ಮ ಮೇಲೆ ಬೀರುವಷ್ಟು ಪ್ರಭಾವ ನಮ್ಮ ಸುತ್ತಲಿನ ರಾಜ್ಯಗಳ ಸಾಹಿತ್ಯ, ಚಿಂತನೆಗಳು ಬೀರುತ್ತಿಲ್ಲ. ಆದರೆ ಕನ್ನಡ ನವೋದಯ ಸದರ್ಭದಲ್ಲಿ ದೇಶಭಾಷೆಗಳ ಪರಸ್ಪರ ಸಂಬಂಧ ಹೀಗಿರಲಿಲ್ಲ. ಇದಕ್ಕೆ ಮರಾಠಿ ದಲಿತ ಸಾಹಿತ್ಯ ಬೀರಿದ ಪ್ರಭಾವ ಅಪವಾದವಾಗಿದೆ. ಕನ್ನಡದ ಪ್ರಮುಖ ಚರ್ಚೆಗಳಲ್ಲಿ ರಾಮಾಯಣ, ಮಹಾಭಾರತ ಹಾಗೂ ಇಂಗ್ಲಿಷ್‌ ಭಾಷೆಯಲ್ಲಿ ಲಭ್ಯವಿರುವ ಹಲವು ಪ್ರಮುಖ ಕೃತಿಗಳು ಚರ್ಚಿತವಾಗುತ್ತಿವೆ. ಮಲಯಾಳಂ, ತಮಿಳು, ತೆಲುಗು, ಹಿಂದಿ ಮುಂತಾದ ಭಾಷೆಗಳ ಕೃತಿಗಳು ಕನ್ನಡಕ್ಕೆ ಅನುವಾದಗೊಳ್ಳುವುದನ್ನು ಅಲ್ಲಿ ಇಲ್ಲಿ ನಾವು ಗುರುತಿಸುತ್ತೇವೆಯಾದರೂ ಅವುಗಳ ಬಗ್ಗೆ ಸಾಕಷ್ಟು ಚರ್ಚೆ ಆದಂತಿಲ್ಲ. ಇಂದು ಕನ್ನಡದ ಅನುವಾದಿತ ಕೃತಿಗಳು ಮಲಯಾಳಂ ಓದುಗರಿಗೆ ತಿಳಿದಿರುವಷ್ಟು ಮಲೆಯಾಳಂ ಅನುವಾದಿತ ಸಾಹಿತ್ಯ ಕನ್ನಡ ಓದುಗರಿಗೆ ತಿಳಿದಿಲ್ಲ.

ಕನ್ನಡದ ನವೋದಯ ಸಂದರ್ಭ ಬಹಳ ಭಿನ್ನವಾದುದು. ಅನ್ಯ ಭಾಷೆಗಳನ್ನು ಸ್ವತಃ ಕಲಿತು ನಮ್ಮ ವಿದ್ವಾಂಸರು ಅನುವಾದ ಮಾಡುತ್ತಿದ್ದರು. ಅದು ನಮ್ಮ ಮುಖ್ಯಧಾರೆಯ ಚರ್ಚೆಗಳಲ್ಲೂ ಪ್ರಸ್ತಾಪವಾಗುತ್ತಿತ್ತು. ಎ.ಆರ್‌. ಕೃಷ್ಣ ಶಾಸ್ತ್ರಿಗಳು ಬಂಗಾಳಿ ಭಾಷೆಯನ್ನು ಸ್ವ ಅಧ್ಯಯನದ ಮೂಲಕ ಕಲಿತಿದ್ದರು. ಟಿ.ಎಸ್‌. ವೆಂಕಣ್ಣಯ್ಯ, ಮಾಸ್ತಿ, ಕುವೆಂಪು, ಬೇಂದ್ರೆ ಇವರ ಮೇಲೆ ಬಂಗಾಳಿ ಸಾಹಿತ್ಯ, ರವೀಂದ್ರನಾಥ ಠಾಗೋರ್‌, ಮಹರ್ಷಿ ಅರವಿಂದ, ವಿವೇಕಾನಂದ ಮೊದಲಾದವರ ಬರಹಗಳು ಮಾಡಿರುವ ಪ್ರಭಾವ ಎಲ್ಲರಿಗೂ ತಿಳಿದುರುವುದೇ ಆಗಿದೆ. ಎ.ಆರ್‌. ಕೃಷ್ಣ ಶಾಸ್ತ್ರಿಗಳಿಗೆ 1961ರಲ್ಲಿ ಅವರು ಬರೆದ ಬಂಗಾಳಿ ಕಾದಂಬರಿಕಾರ ಬಂಕಿಮಚಂದ್ರರ ಬಗೆಗಿನ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿತು. 1961ರ ಬಳಿಕ ಕನ್ನಡದಲ್ಲಿ ದೇಶಭಾಷೆಗಳ ಅಧ್ಯಯನಕ್ಕೆ ಸಂಬಂಧಿಸಿದಂತೆ ಕೇಂದ್ರ ಸಾಹಿತ್ಯ ಅಕಾಡೆಮಿಯಂತಹ ಉನ್ನತ ಪ್ರಶಸ್ತಿಯೊಂದು ಸಂದಿರುವುದು 2017ರಲ್ಲಿ 'ಕಥನ ಭಾರತಿ' ಕೃತಿಗೆ. ಅನ್ಯ ಭಾಷಾ ಅಧ್ಯಯನವನ್ನೇ ಮಾನದಂಡವಾಗಿ ಇರಿಸಿಕೊಂಡರೆ 2001ರಲ್ಲಿ ಎಲ್‌.ಎಸ್‌. ಶೇಷಗಿರಿ ರಾಯರ 'ಇಂಗ್ಲಿಷ್‌ ಸಾಹಿತ್ಯ ಚರಿತ್ರೆ' ಅಕಾಡೆಮಿ ಪ್ರಶಸ್ತಿ ಲಭಿಸಿದೆ.

ನಮ್ಮ ಪ್ರಜಾಪ್ರಭುತ್ವ ಹಾಗೂ ಸಾಂಸ್ಕೃತಿಕ ವಿಕೇಂದ್ರೀಕರಣದ ಸಮತೋಲನ ಇರುವುದು ಬಹುತ್ವದಲ್ಲಿ. ಬಹುತ್ವದ ಸಾಂಸ್ಕೃತಿಕ ಗ್ರಹಿಕೆ ಹಾಗೂ ಮೂಲ ಸ್ವರೂಪಗಳ ಮೇಲೆ ಹೆಚ್ಚಿನ ಪ್ರಭಾವ ಬೀರುತ್ತಿರುವ ಪ್ರಮುಖ ಮಾಧ್ಯಮ ಎಂದರೆ ಸಾಹಿತ್ಯ. ಅದರ ಜತೆ ನಮ್ಮ ಹಲವು ಕಥಾನಕಗಳು ಕೂಡ ಬಹುತ್ವವನ್ನು ಬಲಗೊಳಿಸುತ್ತವೆ. ಮುಖ್ಯ ಧಾರೆಯಲ್ಲೆ ಭಿನ್ನ ಹಾಗೂ ಬಹುತ್ವದ ನೆಲೆಗಳನ್ನು ಬಲಗೊಳಿಸಿದ ಎರಡು ಉದಾಹರಣೆಗಳಾಗಿ ಮರಾಠಿ ಹಾಗೂ ಬಂಗಾಳಿ ಲೇಖಕರು ತಕ್ಷಣ ನೆನಪಿಗೆ ಬರುತ್ತಾರೆ.

ಇರಾವತಿ ಕರ್ವೆ ಅವರ 'ಯುಗಾಂತ' ಕೃತಿ ಮಹಾಭಾರತದ ಹೊಸ ಅಧ್ಯಯನಕ್ಕೆ ನಾಂದಿ ಹಾಡಿತು. ಅದೇ ರೀತಿ ಖಾಂಡೇಕರ್‌ ಅವರ 'ಯಯಾತಿ' ಕೂಡಾ ಕನ್ನಡಕ್ಕೆ ಅನುವಾದ ಗೊಂಡಿತು. ದೇಶ ಭಾಷೆಗಳ ಇಂತಹ ಹೊಸ ಕೃತಿಗಳು ಡಾ. ಎಸ್‌.ಎಲ್‌. ಭೈರಪ್ಪನವರ 'ಪರ್ವ'ವೂ ಸೇರಿದಂತೆ ಕನ್ನಡದಲ್ಲಿ ಮಹಾಭಾರತದ ಹೊಸ ವ್ಯಾಖ್ಯಾನಕ್ಕೆ ಪ್ರೇರಣೆ ನೀಡಿತು. ನಮ್ಮ ಚಾರಿತ್ರಿಕ ಪಾತ್ರಗಳಿಗೆ, ದೇವ ದೇವತೆಗಳ ಚಿತ್ರ ಕಲ್ಪನೆಗಳಿಗೆ ಅನ್ಯಾಯವಾಗಿದೆ ಎಂಬ ಈಗಿನ ಗಲಾಟೆಗಳನ್ನು ನೆನಪಿಸಿಕೊಂಡರೆ ಯುಗಾಂತ, ಯಯಾತಿ, ಪರ್ವ ಮೊದಲಾದ ಕೃತಿಗಳನ್ನು ಆಗ ಸಾಹಿತ್ಯಿಕ, ಸಾಂಸ್ಕೃತಿಕ ವಿಮರ್ಶಾ ನೆಲೆಗಳಲ್ಲಿ ಗಂಭೀರವಾಗಿ ನಮ್ಮ ನಾಡು ಚರ್ಚಿಸಿತು. ಕನ್ನಡ ನೆಲದ ಸಹನೆಯ ಗುಣದ ಜತೆ ನಮ್ಮ ಸುತ್ತಲಿನ ಸಹೋದರ ಭಾಷೆಗಳಲ್ಲಿ ನಡೆದ ಬೆಳವಣಿಗೆಗಳ ಅರಿವು ಕೂಡ ಅಂತಹ ಆರೋಗ್ಯಕರ ಚರ್ಚೆಗೆ ತನ್ನ ಕೊಡುಗೆ ನೀಡಿದೆ. ಹೀಗೆ ಹೇಳುವುದರ ಮೂಲಕ ಇಂದಿನ ಮೂಲಭೂತವಾದದ ಉಗ್ರ ಶಕ್ತಿಯನ್ನು ನಾನು ಅಲ್ಲಗಳೆಯುತ್ತಿಲ್ಲ. ಆದರೆ ಅನುವಾದಗಳ ಮೂಲಕ ನಮ್ಮ ಸುತ್ತಲಿನ ದೇಶಭಾಷೆಗಳ ವಿದ್ಯಮಾನದ ತಿಳಿವಳಿಕೆ ನಮ್ಮ ಭಾಷಾ ಓದುಗರಿಗೆ ಲಭ್ಯವಾಗುವುದು ಮತ್ತು ಆ ವಿಚಾರಗಳು ನಮ್ಮದೇ ಭಾಷೆಯ ವಿಚಾರಗಳು ಎಂಬಷ್ಟು ಆಪ್ತತೆಯಿಂದ ಚರ್ಚಿತವಾಗುವುದು ಬೀರುವ ಸಕಾರಾತ್ಮಕ ಪ್ರಭಾವವನ್ನು ಮರೆಯಲಾಗದು ಎಂಬುದು ಮಾತ್ರ ಇಲ್ಲಿ ನನ್ನ ಸೂಚನೆಯಾಗಿದೆ.

ರವೀಂದ್ರನಾಥ ಠಾಗೋರ್‌ ಚಿತ್ರಿಸಿದ ಊರ್ಮಿಳೆ ಬಗ್ಗೆ ಟಿ.ಎಸ್‌. ವೆಂಕಣ್ಣಯ್ಯನವರು ವಿಮರ್ಶಾತ್ಮಕವಾದ ವಿಶ್ಲೇಷಣೆ ಮಾಡಿದರು. ವೆಂಕಣ್ಣಯ್ಯನವರ ಶಿಷ್ಯರಾದ ಕುವೆಂಪು 'ರಾಮಾಯಣ ದರ್ಶನಂ'ನಲ್ಲಿ ಊರ್ಮಿಳೆಯನ್ನು ಸಂಸಾರಸ್ಥ ತಪಸ್ವಿನಿಯ ರೂಪದಲ್ಲಿ ಹೊಸದಾಗಿ ಚಿತ್ರಿಸಿದರು. ರಾಮಾಯಣದ ಪಾತ್ರ ಕಲ್ಪನೆ ಹಾಗೂ ಲೇಖಕರ ಸ್ವಾತಂತ್ರ್ಯ ಹೊಸಗನ್ನಡದಲ್ಲೂ ಇನ್ನೊಮ್ಮೆ ಹೊಸದಾಗಿ ವ್ಯಾಖ್ಯಾನಿಸಲ್ಪಟ್ಟಿತು. 'ನಮ್ಮ ದೇವರ ಚಿತ್ರವನ್ನು ಸಾಹಿತಿಗಳು ಹೊಸದಾಗಿ ಮುಟ್ಟಕೂಡದು. ನಮ್ಮ ಪೌರಾಣಿಕ ಪಾತ್ರಗಳು ನಿಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯದ ಪರಿಪ್ರೇಕ್ಷ್ಯದೊಳಗೆ ಸೇರುವುದಿಲ್ಲ ,'ಎಂಬ ಸನಾತನವಾದಿಗಳನ್ನು ಎದುರಿಸಲು ಈ ರೀತಿ ನಮ್ಮ ಸುತ್ತಲಿನ ಇತರ ಭಾಷೆಗಳಲ್ಲಿ ನಡೆಯುತ್ತಿರುವ ಹೊಸ ಚಿಂತನೆಯ ಶಕ್ತಿ ಯಾವ ರೀತಿ ಸಹಕರಿಸಬಲ್ಲದು ಎಂಬುದನ್ನು ನಾವು ಮನಗಾಣಬಹುದು. ಹೀಗೆಯೇ ಸಾಮಾಜಿಕ ಕಥನಗಳ ಕೃತಿಗಳು ಬೀರಿದ ಪ್ರಭಾವವನ್ನು ಚರ್ಚಿಸಲು ಸಾಧ್ಯ. ಬಂಗಾಳಿ ಸಾಹಿತ್ಯದ ಅನುವದಿತ ಕೃತಿಗಳು ನಮ್ಮ ಪಠ್ಯ ಪುಸ್ತಕಗಳಲ್ಲಿಯೂ ಇರುತ್ತಿದ್ದವು ಎಂಬುದನ್ನು ನಾವು ನೆನಪಿಸಿಕೊಳ್ಳಬೇಕು.

ನಮ್ಮ ದೇಶ ಭಾಷೆಗಳ ಕುರಿತಾಗಿ ಚರ್ಚಿಸಿರುವಂತೆ ಜಗತ್ತಿನ ಹಲವು ಶ್ರೇಷ್ಠ ಕೃತಿಗಳ ಕುರಿತಾಗಿಯೂ ಟಿ.ಪಿ. ಅಶೋಕ ತಮ್ಮ 'ಕೃತಿ ಜಗತ್ತು' ಎಂಬ ಇನ್ನೊಂದು ಪುಸ್ತಕದಲ್ಲಿ ಬರೆದಿದ್ದಾರೆ. ಕಥನ ಭಾರತಿಯಲ್ಲಿ 20 ವಿಮರ್ಶಾ ಲೇಖನಗಳಿದ್ದರೆ, ಷೇಕ್ಸ್‌ಪಿಯರ್‌, ಯೇಟ್ಸ್‌, ಎಲಿಯಟ್‌, ಬ್ರೆಕ್ಟ್ , ಟಾಲ್‌ಸ್ಟಾಯ್‌, ಸಿಂಗರ್‌, ಹೆಮಿಂಗ್ವೇ ಸೇರಿದಂತೆ 26 ಜಾಗತಿಕ ಮಟ್ಟದ ಬರಹಗಾರರ ಬಗೆಗಿನ ಲೇಖನಗಳ ಸಂಗ್ರಹ 'ಕೃತಿ ಜಗತ್ತು'. ಪುಸ್ತಕದ ಅರಿಕೆಯಲ್ಲಿ ಅಶೋಕರು ಹೇಳುವ, ''ಕನ್ನಡದಲ್ಲಿ ಸಿಗುವ ಎಲ್ಲಾ ಪುಸ್ತಕಗಳೂ ನನಗೆ ಕನ್ನಡ ಪುಸ್ತಕಗಳೇ. ಓರ್ವ ಕನ್ನಡ ಭಾಷಿಕನಾಗಿಯೇ ನಾನು ವಿಶ್ವ ಸಾಹಿತ್ಯಕ್ಕೂ ಸ್ಪಂದಿಸುವುದು,'' ಎಂಬ ಮಾತುಗಳು ವಿಮರ್ಶಕನಾಗಿ ಅವರ ತಾತ್ತ್ವಿಕ ಪರಿಕಲ್ಪನೆಯನ್ನು ವಿವರಿಸುತ್ತವೆ.

ಕನ್ನಡ ಅನುವಾದಗಳಲ್ಲಿ ಓದುವ ಸಂಸ್ಕೃತ ಸಾಹಿತ್ಯ ಇಂದು ಕನ್ನಡದ ಭಾಗವೇ ಆಗಿದೆ. ಹಾಗೆಯೇ ಇತರ ಭಾಷೆಗಳಿಂದ ಕನ್ನಡಕ್ಕೆ ಬರುವ ಕೃತಿಗಳು ಕೂಡ, ಭಾರತದ ಬೇರೆ ಬೇರೆ ಭಾಷೆಗಳಲ್ಲಿ ರಚಿತವಾದ ಆಧುನಿಕ ಭಾರತೀಯ ಸಾಹಿತ್ಯದ ಮಹತ್ವದ ಕೃತಿಗಳನ್ನು ಓದುತ್ತಾ, ಅವುಗಳ ಬಗ್ಗೆ ಸಾಂದರ್ಭಿಕವಾಗಿ ಬರೆಯುತ್ತಾ ಬಂದಾಗ ಆ ಕೃತಿಗಳು ಕನ್ನಡದ ಅನೇಕ ಬರಹಗಳೊಂದಿಗೆ ಹೊಂದಿರುವ ಸಾದೃಶ್ಯ- ವೈದೃಶ್ಯಗಳು ಅಶೋಕರ ವಿಮರ್ಶನ ಕುತೂಹಲವನ್ನು ಕೆರಳಿಸಿವೆ. ಹಾಗೆಯೇ ಅವುಗಳ ಸಾಹಿತ್ಯಕ ಸಾಧನೆ ಜತೆಗೆ ಅವುಗಳಿಂದ ಮೂಡಿಬಂದಿರುವ ಆಧುನಿಕ ಭಾರತದ ಇತಿಹಾಸದ ನಡಗಳೂ ಅವರಿಗೆ ಅಭ್ಯಾಸ ಯೋಗ್ಯವೆಂದು ಕಂಡಿವೆ. ಈ ದೃಷ್ಟಿಯಿಂದ ಅವರ 'ಕಥನ ಭಾರತಿ'ಯ ಉದ್ದೇಶ ಆಧುನಿಕ ಭಾರತದ ಕಥನವನ್ನು ಕಾಣಿಸುವುದಾಗಿದೆ. ಅದಕ್ಕಾಗಿ ಅವರು ರವೀಂದ್ರನಾಥ ಠಾಗೋರ್‌ ಜತೆ ಗಾಂಧೀಜಿ, ಅಂಬೇಡ್ಕರ್‌, ಮಾಸ್ತಿ, ಶಿವಾರಾಮ ಕಾರಂತ, ಚಂದ್ರಶೇಖರ ಕಂಬಾರ, ಯು.ಆರ್‌. ಅನಂತಮೂರ್ತಿ, ಗಿರೀಶ ಕರ್ನಾಡರ ಬಗೆಗಿನ ಅಶೋಕರ ಲೇಖನಗಳೂ ಇಲ್ಲಿ ಭಾರತೀಯ ಕಥಾನಕದ ಭಾಗವಾಗಿ ಚರ್ಚಿಸಲ್ಪಟ್ಟಿವೆ. 'ಕಥನ ಭಾರತಿ' ಕನ್ನಡದಲ್ಲಿರುವ ಭಾರತೀಯ ಭಾಷೆಗಳ ಅನುವಾದ ಸಾಹಿತ್ಯ ಸಮೀಕ್ಷೆ ಅಲ್ಲ. ಅದು ಕೆಲವು ಆಯ್ದ ಕೃತಿಗಳ ಮೂಲಕ ಕನ್ನಡದಲ್ಲಿ ಆಧುನಿಕ ಭಾರತೀಯ ಕಥನದ ತಾತ್ತ್ವಿಕ ಪರಿಕಲ್ಪನೆಗಳನ್ನು ಹುಡುಕುವ ಪ್ರಯತ್ನವಾಗಿದೆ.

ಆಧುನಿಕತೆಗೆ ನೀಡಿದ ಪ್ರತಿಕ್ರಿಯೆ, ವಸಾಹತುಶಾಹಿ ಅನುಭವ, ಈ ದೇಶದ ಬಡತನದ ಚಿತ್ರಣ, ತಳವರ್ಗದ ಜನ ಸಾಮಾಜಿಕ ಮೇಲುಸ್ತರಕ್ಕೆ ಪ್ರವೇಶಿಸುವ ಅನುಭವ ಹಾಗೂ ನಮ್ಮ ಸಮಾಜ ಸಮಾನತೆಯನ್ನು ಹೊಸ ಮೌಲ್ಯವಾಗಿ ಸ್ವೀಕರಿಸುವಲ್ಲಿ ಎದುರಿಸಿದ ಸಮಸ್ಯೆಗಳು-ಹೀಗೆ ಭಾರತದಲ್ಲಿ ಹಲವು ನೆಲೆಗಳಲ್ಲಿ ಸಾಮಾನ್ಯವಾಗಿದ್ದ ಅನುಭವಗಳ ಕಥನವನ್ನು ಕನ್ನಡ ಭಾಷೆಯ ಅನುವಾದಗಳಿಂದ ಆಯ್ದ ಕೃತಿಗಳ ಮೂಲಕ ಪರೀಕ್ಷಿಸುವುದು ಅಶೋಕರ ಒಂದು ವಿಧಾನ. ಅದರ ಜತೆ ಕನ್ನಡದ ಕೆಲವು ಲೇಖಕರು ಅಂತಹ ಅನುಭವಗಳಿಗೆ ನೀಡಿದ ಪ್ರತಿಕ್ರಿಯೆಯ ಚರ್ಚೆಯೂ ಇಲ್ಲಿದೆ. ಈ ಕೃತಿಯ ಹೊರಗೆ ಅಶೋಕ ಈ ತನಕ ಪ್ರಕಟಿಸಿದ ಸುಮಾರು 30 ಸ್ವತಂತ್ರ ಕೃತಿಗಳಲ್ಲೂ ಕನ್ನಡ ಸಾಹಿತ್ಯ ಈ ವಿಚಾರಗಳಿಗೆ ನೀಡಿದ ಪ್ರತಿಕ್ರಿಯೆಯನ್ನು ಅವರು ಚರ್ಚಿಸಿದ್ದಾರೆ. ಅಶೋಕರು ತಮ್ಮ ವಿಮರ್ಶೆಯಲ್ಲಿ ಕನ್ನಡದ ಸಮಗ್ರ ಕಥನದಿಂದ ಭಾರತೀಯ ಕಥನ ಶೋಧನದ ಕಡೆಗೆ ಈ ಕೃತಿಯ ಮೂಲಕ ಹೊಸ ಹೆಜ್ಜೆ ಇರಿಸಿದ್ದಾರೆ.

ಭಾರತ ಸ್ವಾತಂತ್ರ್ಯ ಪಡೆದಾಗ ತಾನು ಸಾಧಿಸಬೇಕಾದ ಮೂರು ಮುಖ್ಯ ಗುರಿಗಳನ್ನು ತನಗೆ ತಾನೇ ವಿಧಿಸಿಕೊಂಡಿತು. ಅವೆಂದರೆ ಕಾನೂನಿನ ಆಡಳಿತ (ಇದರಲ್ಲಿ ಸಂವಿಧಾನ, ಪ್ರಜಾಸತ್ತಾತ್ಮಕ ಚುನಾವಣೆ, ಸಮಾನತೆ ಮುಂತಾದವು ಸೇರಿದೆ), ಭಾರತದ ಏಕೀಕರಣ ಹಾಗೂ ರಾಷ್ಟ್ರ ರಕ್ಷಣೆ ಮತ್ತು ಬಡತನದ ನಿರ್ಮೂಲನೆ, ಇವುಗಳಲ್ಲಿ ಬಡತನದ ನಿರ್ಮೂಲನೆ ಒಂದನ್ನು ಬಿಟ್ಟು ಉಳಿದ ವಿಚಾರಗಳಲ್ಲಿ ನಾವು ಉನ್ನತ ಅಂಕಗಳನ್ನೇ ಪಡೆದಿದ್ದೇನೆ. ನಾನು ಗ್ರಹಿಸಿರುವಂತೆ ಭಾರತದ ಆಧುನಿಕ ಕಥಾನಕ ಹಾಗೂ ನೂತನ ಸಾಹಿತ್ಯ ಈ ಮೂರೂ ಅಂಶಗಳಿಗೆ ತನ್ನ ಪ್ರತಿಕ್ರಿಯೆ ನೀಡಿದೆ. ಭಾರತದ ಆಧುನಿಕ ಕಥಾನಕಗಳ ಮೂಲಕ ನಾವು ಈ ಮೂರೂ ಅಂಶಗಳಲ್ಲಿ ಮಾಡಿರುವ ಸಾಧನೆಗಳನ್ನೂ, ಸಾಧನೆಯ ಮಾರ್ಗದಲ್ಲಿ ಅನುಭವಿಸಿದ ಹಿಂಸೆ, ಶೋಷಣೆ-ಇನ್ನಿತರ ಹಲವು ಮನುಷ್ಯಾನುಭವಗಳನ್ನೂ ಗುರುತಿಸಿ ವಿವರಿಸಿಕೊಳ್ಳಲು ಕೂಡಾ ಮುಂದಿನ ಕನ್ನಡ ವಿಮರ್ಶೆಗೆ ಇಂತಹ ಕೃತಿಗಳು ಆಕರ ಒದಗಿಸಬಲ್ಲವು.

ಅನುವಾದ ಸಾಹಿತ್ಯದ ಬಗ್ಗೆ ಇಟೆಲಿಯನ್‌ ಲೇಖಕ ವಿಂಬರ್ಟೋ ಇಕೋ ತನ್ನ 'ಮೌಸ್‌ ಆರ್‌ ರಾರ‍ಯಟ್‌' (ಇಲಿಯೋ ಹೆಗ್ಗಣವೋ) ಎಂಬ ಕೃತಿಯಲ್ಲಿ, ಅನುವಾದಕ ಕೌಶಲ್ಯ ಎರಡೂ ಭಾಷೆಗಳ ನಡುವಿನ ಸಂಧಾನದಲ್ಲಿದೆ ಎನ್ನುತ್ತಾನೆ. ಅಶೋಕರು ಇಲ್ಲಿ ಮಾಡುತ್ತಿರುವುದು ಅನುವಾದಗಳ ಅಥವಾ ಅದರ ತಾತ್ತ್ವಿಕತೆಗಳ ವಿಶ್ಲೇಷಣೆ ಅಲ್ಲ. ಅಶೋಕ ಅನುವಾದಗಳನ್ನು ತನ್ನ ಭಾಷೆಯ ಕೃತಿಗಳೆಂಬಂತೆ ಸ್ವೀಕರಿಸಿ ವಿಮರ್ಶಿಸುವುದು ಅನುವಾದದ ಸಾಂಸ್ಕೃತಿಕ ಪರಿಣಾಮದ ಕುರಿತಾದ ತಾತ್ತ್ವಿಕತೆಯಾಗಿದೆ.

ಇಲ್ಲಿನ ಯಾವ ಲೇಖನಗಳೂ ಅಶೋಕರು ಈ ಕೃತಿಗಾಗಿ ಮಾಡಿದ ಪ್ರತ್ಯೇಕ ಅಧ್ಯಯನಗಳಲ್ಲ. ಅವರ ಬರಹ ಚಿಂತನೆಗಳ ಭಾಗವಾಗಿ ಕನ್ನಡ ವಿಮರ್ಶೆಯಲ್ಲಿ ಈ ಮೊದಲೇ ಸೇರಿಹೋಗಿದ್ದ ಅವರ ಬರಹಗಳನ್ನು ಕಥನ ಭಾರತಿಯ ತಾತ್ತ್ವಿಕತೆಗೆ ಅನುಕೂಲವಾಗಿ ಪುನರ್‌ ಜೋಡಿಸಿ ಅಗತ್ಯದ ತಿದ್ದುಪಡಿ ಮರು ಬರಹಗಳೊಡನೆ ಸಿದ್ಧಪಡಿಸಿದ ಸಂಗ್ರಹ ಕೃತಿ ಇದಾಗಿದೆ. ಈಗಾಗಲೇ ರಾಜ್ಯದಾದ್ಯಂತ ಸುಮಾರು 350ಕ್ಕೂ ಹೆಚ್ಚು ಸಾಹಿತ್ಯ ಕಮ್ಮಟಗಳನ್ನು ನಡೆಸಿರುವ ಅಶೋಕರು ತಮ್ಮ ಮುಂದಿನ 'ಭಾರತೀಯ ಕಥನ ಸಾಹಿತ್ಯ' ಕಮ್ಮಟಗಳಿಗೆ ಹೊಸದಾಗಿ ಪೂರಕ ಪಠ್ಯ ಸಾಮಗ್ರಿಗಳನ್ನು ಹೊಂದಿಸಿಕೊಳ್ಳಬೇಕಾಗಿತ್ತು. ಅಂತಹ ಸಂದರ್ಭದಲ್ಲಿ 'ಕಥನ ಭಾರತಿ' ಕೃತಿಯ ಕಲ್ಪನೆ ಅವರ ಮನಸ್ಸಲ್ಲಿ ಮೂಡಿ ಮುಂದೆ ಮಣಿಪಾಲ ಯುನಿವರ್ಸಿಟಿಯಿಂದ ಅದು ಪ್ರಕಟವಾಯಿತು.

ಟಿ.ಪಿ. ಅಶೋಕರ ವಿಮರ್ಶೆ ಸದ್ಯದ ಜರೂರಿನಲ್ಲೇ ಸೃಷ್ಟಿಯಾಗುವಂಥವು. ನಾಲ್ಕು ದಶಕಗಳ ಕಾಲ ಸಾಹಿತ್ಯವನ್ನು ವಿದ್ಯಾರ್ಥಿಗಳಿಗೆ ಪಾಠ ಮಾಡಿ ನಿವೃತ್ತರಾಗಿರುವ ಅವರ ವಿಮರ್ಶೆಯಲ್ಲೂ ತಿಳಿ ಹೇಳುವ ಗುಣವೊಂದು ಎದ್ದು ಕಾಣುತ್ತದೆ. ಚಿನುವಾ ಅಚಿಬೆ ಅವರು ''ತೃತೀಯ ಜಗತ್ತಿನ ಲೇಖಕರಿಗೆ ತನ್ನ ಜನ ಸಮುದಾಯಕ್ಕೆ ಪಾಠ ಹೇಳುವ ಜವಾಬ್ದಾರಿಯೂ ಇದೆ,''ಎನ್ನುತ್ತಾರೆ. ಅಂತಹ ಜವಾಬ್ದಾರಿಯೊಂದಕ್ಕೆ ತನ್ನನ್ನು ತಾನೇ ಸಮರ್ಪಿಸಿಕೊಂಡಿರುವಂತೆ ಅಶೋಕ್‌ ಬರೆಯುತ್ತಾರೆ. ಇದರಿಂದಾಗಿ ಅವರ ಬರಹಗಳು ಪರಿಚಯಾತ್ಮಕ ವಿವರಗಳನ್ನು ಬದಿಗೆ ಸರಿಸುವುದಿಲ್ಲ.

ಇದರ ಜತೆ ಸದ್ಯತನದ ಒತ್ತಡವೂ ಅವರ ಬರಹಗಳ ಮೇಲಿರುತ್ತದೆ. ಹೀಗಾಗಿ ಅವರು ವಿಮರ್ಶಾ ಸಾತತ್ಯದ ಮುಂದುವರಿಕೆಯಾಗಿ ಬರೆಯುವುದಿಲ್ಲ. ಆದುದರಿಂದ ಅವರ ಉಲ್ಲೇಖಗಳು ತಮ್ಮ ಬರವಣಿಗೆಯ ವಿವರಗಳನ್ನು ಕಮ್ಮಿ ಮಾಡುವುದಕ್ಕಾಗಿ ಇರುತ್ತವೆ. ಎಚ್‌.ಎಸ್‌. ರಾಘವೇಂದ್ರ ರಾವ್‌ ಅವರ ವಿಮರ್ಶೆಗಳಲ್ಲಿ ಆಗುವಂತೆ ವಿಮರ್ಶಾ ಸಾತತ್ಯದಲ್ಲಿ ನಡೆಯಬೇಕಾದ

ಅನುಸಂಧಾನದ ಭಾಗವಾಗಿ ಉಲ್ಲೇಖಗಳೂ ಚರ್ಚೆಯಾಗುವುದಿಲ್ಲ. ತಮ್ಮ ಬರವಣಿಗೆಗಳಲ್ಲಾದ ಬದಲಾವಣೆಗಳನ್ನು ದಾಖಲಿಸುವುದು ಕೂಡ ಅವರಿಗೆ ಮುಖ್ಯವಾಗುವುದಿಲ್ಲ. ಅನಂತಮೂರ್ತಿ, ವಸುಧೇಂದ್ರ ಮೊದಲಾದವರ ಬಗ್ಗೆ ಅವರ ಬದಲಾದ ನಿಲವುಗಳು ತನ್ನ ಮುಂದಿನ ಬರವಣಿಗೆಗಳಲ್ಲಿ ಇರುವಾಗ ಅದರ ಇನ್ನೊಂದು ದಾಖಲೆ ಯಾಕೆ ಎಂಬುದು ಅವರ ವಿಚಾರ. ರವೀಂದ್ರ ನಾಥ ಠಾಗೋರರ ಬಗ್ಗೆ ಅವರು 'ಕಥನ ಭಾರತಿ'ಯಲ್ಲಿ ಬರೆದ ಲೇಖನಗಳಲ್ಲಿ ಅವರಿಗೆ ಕೆ.ವಿ. ಅಕ್ಷರ, ವೈದೇಹಿ ನೆನಪಾಗುತ್ತಾರೆಯೇ ಹೊರತು ಠಾಗೋರರ ಬಗ್ಗೆ ಬರೆದ ಮಾಸ್ತಿ, ಬೇಂದ್ರೆ ಮೊದಲಾದವರ ವಿಚಾರಗಳು ನೆನಪಾಗುವುದಿಲ್ಲ. ಅವರೆಲ್ಲರ ಬಗ್ಗೆಯೂ ಅಧಿಕೃತವಾಗಿ ಮಾತನಾಡಬಲ್ಲಷ್ಟು ದೊಡ್ಡ ವಿದ್ವಾಂಸರಾದ ಅಶೋಕರಿಗೆ ಅಂತಹ ಚರ್ಚೆ ತಮ್ಮ ಲೇಖನಗಳಲ್ಲಿ ಮುಖ್ಯವಾಗದಿರಲು ಕಾರಣ, ಅವರ ವಿಮರ್ಶೆಯ ಸದ್ಯ ತನದ ತುರ್ತು. ವಿಮರ್ಶೆಯಲ್ಲಿ ಅವರು ಕೃತಿಗಳನ್ನು ತಮ್ಮ ಜೀವಕ್ಕೆ ಹತ್ತಿರ ತಂದು ತೋರುವ ಸದ್ಯತನದ ತುರ್ತು 'ಕಥನ ಭಾರತಿ' ಕೃತಿಗೆ ನಮ್ಮ ಕಾಲದ ಒಂದು ವಿಶಿಷ್ಟತೆಯನ್ನೂ ಅದರದ್ದೇ ಆದ ಸಾಂಸ್ಕೃತಿಕ ಮಹತ್ವವನ್ನೂ ತಂದುಕೊಟ್ಟಿದೆ.


ವ್ಯಕ್ತಿಗತ: ಕಳಚಿದ ಪ್ರಜಾ'ತಂತ್ರ'ದ ಮುಖವಾಡ

$
0
0

* ವ್ಯಕ್ತಿಗತ: ಮಲ್ಲಿಕಾರ್ಜುನ ತಿಪ್ಪಾರ

I want you to know that every thing I did, I did for my country.

- ಇದು ಕಾಂಬೋಡಿಯಾದ ಸರ್ವಾಧಿಕಾರಿ ಪೋಲ್‌ಪಾಟ್‌ ಹೇಳಿದ್ದು. ಪ್ರತಿಯೊಬ್ಬ ಸರ್ವಾಧಿಕಾರಿಯೂ ತನ್ನ ತಪ್ಪುಗಳನ್ನು ದೇಶದ ಹೆಸರಿನಲ್ಲಿ ಸರಿದೂಗಿಸಿಕೊಳ್ಳಲು ಹೋಗುತ್ತಾನೆ. ಇದೀಗ ಅಂಥದ್ದೇ ಸನ್ನಿವೇಶದಲ್ಲಿದ್ದಾರೆ ಮಾಲ್ಡೀವ್ಸ್‌ನ ಅಧ್ಯಕ್ಷ ಅಬ್ದುಲ್ಲಾ ಯಾಮೀನ್‌ ಅವರು.

ಪ್ರತಿಯೊಬ್ಬ ಸರ್ವಾಧಿಕಾರಿಯು, ಜನರು ಮತ್ತು ದೇಶದ ಏಳ್ಗೆಯ ಕಂಕಣಬದ್ಧರಾಗಿ ಅಧಿಕಾರದ ಗದ್ದುಗೆ ಏರುತ್ತಾರೆ. ಏರಿದ ಮೇಲೆ ತಮ್ಮ ಧ್ಯೇಯ ಮರೆತು, ಅಧಿಕಾರದ ಹಪಿಹಪಿಗೆ ಬಿದ್ದು ಸರ್ವಾಧಿಕಾರಿಗಳಾಗಿ ಬಿಡುತ್ತಾರೆ. ಅದರಲ್ಲೂ ಪ್ರಜಾಸತ್ತಾತ್ಮಕ ಮುಖವಾಡ ಹಾಗೂ ಆ ಸಾಧನದ ಮೂಲಕವೇ ಅಧಿಕಾರ ಹಿಡಿದವರು ಸರ್ವಾಧಿಕಾರಿಗಳಾಗಿ ಪರಿವರ್ತನೆಯಾಗುವುದಿದೆಯಲ್ಲ, ಅದು ತುಂಬ ಅಪಾಯಕಾರಿ. ಇದೀಗ ಮಾಲ್ಡೀವ್ಸ್‌ ಅಂಥ ಸರ್ವಾಧಿಕಾರಿಯನ್ನು ನೋಡುತ್ತಿದೆ.

ಹಿಂದೂ ಮಹಾಸಾಗರದ ಈ ಪುಟ್ಟ ರಾಷ್ಟ್ರ ಮಾಲ್ಡೀವ್ಸ್‌ ಭಾರತೀಯ ಉಪ ಖಂಡದಲ್ಲಿ ಅತ್ಯಂತ ಆಯಕಟ್ಟಿನಲ್ಲಿರುವ ದೇಶ. ಹಾಗಾಗಿಯೇ, ಚೀನಾ ಮತ್ತು ಭಾರತಗಳೆರಡರೂ ಈ ರಾಷ್ಟ್ರದ ಮೇಲೆ ತಮ್ಮ ಪ್ರಭಾವ ಬೀರುವುದಕ್ಕಾಗಿ ಸಂದರ್ಭ ಸಿಕ್ಕಾಗಲೆಲ್ಲ ಪ್ರಯತ್ನಿಸುತ್ತವೆ. ಇದೇನೂ ಗುಟ್ಟೇನಲ್ಲ. ಹಾಗೆ ನೋಡಿದರೆ, ತುಂಬ ವರ್ಷಗಳಿಂದಲೂ ಮಾಲ್ಡೀವ್ಸ್‌ ಭಾರತದ ನಂಬಿಗಸ್ಥ ಮತ್ತು ಸಹಜ ಸ್ನೇಹಿತ. ಜತೆಗೆ, ಸಾರ್ಕ್‌ನ ಪ್ರಮುಖ ಸದಸ್ಯ ರಾಷ್ಟ್ರವೂ ಹೌದು. ಆದರೆ, ಕಳೆದ ನಾಲ್ಕು ವರ್ಷದಲ್ಲಿ ಮಾಲ್ಡೀವ್ಸ್‌ ಮತ್ತು ಭಾರತದ ನಡುವಿನ ನಂಟು ಅಷ್ಟೇನೂ ಸುಮಧುರವಾಗಿ ಉಳಿದಿಲ್ಲ. ಮೇಲ್ನೋಟಕ್ಕೆ ಎಲ್ಲವೂ ಸರಿ ಎಂಬಂತೆ ಕಂಡರೂ, ಎಲ್ಲವೂ ಸರಿಯಿಲ್ಲ ಎಂಬುದು ಅಷ್ಟೇ ಸತ್ಯ. ಇದಕ್ಕೆ ಮುಖ್ಯ ಕಾರಣ ಮಾಲ್ಡೀವ್ಸ್‌ನಲ್ಲಿ ತುರ್ತು ಪರಿಸ್ಥಿತಿ ಹೇರಿ, ಗಹಗಹಿಸುತ್ತಿರುವ ಅಧ್ಯಕ್ಷ ಯಾಮೀನ್‌ ಅವರ ಭಾರತ ವಿರೋಧಿ ಮನೋಭಾವ. ಯಾಮೀನ್‌ ಅವರಿಗೆ ಭಾರತಕ್ಕಿಂತಲೂ ಚೀನಾ ಹೆಚ್ಚು ಆಪ್ತ.

ಯಾವಾಗ ಕಾರ್ಯಾಂಗದ ಮುಖ್ಯಸ್ಥನ ವೈಫಲ್ಯವನ್ನು ನ್ಯಾಯಾಂಗ ಎತ್ತಿ ಹಿಡಿದು ಕಿವಿ ಹಿಂಡುತ್ತದೆಯೋ ಆಗೆಲ್ಲ, ಸರ್ವಾಧಿಕಾರತ್ವದ ಮುಖವಾಡಗಳು ಬೆಳಕಿಗೆ ಬಂದಿವೆ. ಇದಕ್ಕೆ ಪಾಕಿಸ್ತಾನ, ಭಾರತದ ಇತಿಹಾಸದ ಕಣ್ಣ ಮುಂದಿದೆ. ಈಗ ಮಾಲ್ಡೀವ್ಸ್‌ ಕೂಡ ಆ ಸಾಲಿಗೆ ಸೇರಿದೆ. ಜೈಲಿನಲ್ಲಿರುವ ರಾಜಕೀಯ ನಾಯಕರನ್ನು ಬಿಡುಗಡೆ ಮಾಡುವಂತೆ ಮಾಲ್ಡೀವ್ಸ್‌ ಸುಪ್ರೀಂ ಕೋರ್ಟ್‌ ಸೂಚಿಸಿದ್ದನ್ನು ಅರಗಿಸಿಕೊಳ್ಳಲಾಗದ ಅಧ್ಯಕ್ಷ ಯಾಮೀನ್‌, ಫೆಬ್ರವರಿ 5ರಂದು 15 ದಿನಗಳ ಕಾಲ ತುರ್ತು ಪರಿಸ್ಥಿತಿ ಹೇರಿದ್ದಾರೆ. ಅಷ್ಟೇ ಅಲ್ಲದೆ, ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಹಾಗೂ ತನ್ನ ರಾಜಕೀಯ ಗುರು, ಮಲಸಹೋದರ ಮೌಮೂನ್‌ ಗಯೂಮ್‌(80 ವರ್ಷ ವಯಸ್ಸು) ಅವರನ್ನೂ ಜೈಲಿಗಟ್ಟಿದ್ದಾರೆ. ಗಯೂಮ್‌ ಇತ್ತೀಚಿನ ದಿನಗಳಲ್ಲಿ ಯಾಮೀನ್‌ ಅವರ ಕಟು ಟೀಕಾಕಾರರಾಗಿ ಬದಲಾಗಿದ್ದೇ ಇದಕ್ಕೆ ಕಾರಣ. ಮಾಲ್ಡೀವ್ಸ್‌ನಲ್ಲಾಗುತ್ತಿರುವ ರಾಜಕೀಯ ಬಿಕ್ಕಟ್ಟಿನ ಕುರಿತು ಇಡೀ ಜಗತ್ತೇ ಕಣ್ಣು ಎವೆಯಿಕ್ಕದೆ ನೋಡುತ್ತಿದೆ. ವಿಶ್ವಸಂಸ್ಥೆ ಕೂಡ ತೀರಾ ಹತ್ತಿರದಿಂದ ಮಾನಿಟರ್‌ ಮಾಡುತ್ತಿದೆ. ಆದರೆ, ಚೀನಾ ಮಾತ್ರ, ಯಾವುದೇ ರಾಷ್ಟ್ರ ಮಾಲ್ಡಿವ್ಸ್‌ನ ಆಂತರಿಕ ಬೆಳವಣಿಗೆಯಲ್ಲಿ ಭಾಗವಹಿಸದಂತೆ ಎಚ್ಚರಿಸುವ ಮೂಲಕ ತನ್ನ ರಾಜಕೀಯ ದಾಳವನ್ನು ಉರುಳಿಸುತ್ತಿದೆ.

2013ರಿಂದ ಮಾಲ್ಡೀವ್ಸ್‌ ಅಧ್ಯಕ್ಷ ರಾಗಿರುವ ಯಾಮೀನ್‌, ಅದಕ್ಕೂ ಮೊದಲು ಪೀಪಲ್ಸ್‌ ಅಲೈಯನ್ಸ್‌(ಪಿಎ) ಜತೆ ಗುರುತಿಸಿಕೊಂಡಿದ್ದರು. ಬಳಿಕ 2010ರಲ್ಲಿ ಪ್ರೊಗ್ರೆಸ್ಸಿವ್‌ ಪಾರ್ಟಿ ಆಫ್‌ ಮಾಲ್ಡೀವ್ಸ್‌(ಪಿಪಿಎಂ) ಸೇರಿಕೊಂಡರು. ಇದು ಅವರ ಮಲಸಹೋದರ ಗಯೂಮ್‌ ಅವರು ಸ್ಥಾಪಿಸಿದ ಪಕ್ಷ . 2012ರಲ್ಲಿ ಅಂದಿನ ಅಧ್ಯಕ್ಷ ಹಾಗೂ ಈಗ ದೇಶಾಂತರದಲ್ಲಿರುವ ಮೊಹಮ್ಮದ್‌ ನಷೀದ್‌ ಅವರನ್ನು ಕೆಳಗಳಿಸುವಲ್ಲಿ ಯಶಸ್ವಿಯಾದ ಯಾಮೀನ್‌, ಆಗ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ರಾಗಿ ಆಯ್ಕೆಯಾದರು. ಆದರೆ, ಈ ಚುನಾವಣೆಯ ಬಗ್ಗೆ ಅನೇಕ ಅನುಮಾನಗಳನ್ನು ಅಂತಾರಾಷ್ಟ್ರೀಯ ಸಮುದಾಯ ವ್ಯಕ್ತಪಡಿಸಿತ್ತು. ಆದರೂ, ಯಾಮೀನ್‌ ಅಧ್ಯಕ್ಷ ರಾಗುವುದನ್ನು ಯಾರೂ ತಪ್ಪಿಸಲು ಸಾಧ್ಯವಾಗಲಿಲ್ಲ. ಬಳಿಕ ನಷೀದ್‌ ಅವರನ್ನು ಜೈಲಿಗಟ್ಟಿದ ಅವರು, ಅಂತಾರಾಷ್ಟ್ರೀಯ ಒತ್ತಡದ ಹಿನ್ನೆಲೆಯಲ್ಲಿ ವೈದ್ಯಕೀಯ ಚಿಕಿತ್ಸೆಗಾಗಿ ವಿದೇಶಕ್ಕೆ ತೆರಳಲು ಅನುಮತಿ ನೀಡಿದರು.

ಯಾಮೀನ್‌ ಮೇಲ್ನೋಟಕ್ಕೆ ಪ್ರಜಾಪ್ರಭುತ್ವವಾದಿ ಎಂಬಂತೆ ಕಂಡರೂ, ಆಂತರ್ಯದಲ್ಲಿ ಅವರು ಸರ್ವಾಧಿಕಾರತ್ವದ ಎಲ್ಲ ಗುಣಗಳನ್ನು ಹೊಂದಿದ್ದಾರೆ. ಅದರ ಫಲವಾಗಿಯೇ ಅಧಿಕಾರಕ್ಕೇರುತ್ತಿದ್ದಂತೆ ಅವರು ಮಾಡಿದ ಮೊದಲ ಕೆಲಸಗಳೆಂದರೆ, ತಮ್ಮ ರಾಜಕೀಯ ವಿರೋಧಿಗಳನ್ನು ಜೈಲಿಗಟ್ಟಿದ್ದು. ಇದೀಗ ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಿ, ತಮ್ಮ ನಿಜ ಮುಖವಾಡವನ್ನು ಬಹಿರಂಗಗೊಳಿಸಿದ್ದಾರಷ್ಟೆ.

1959 ಮೇ 21ರಂದು ಮಾಲೆಯಲ್ಲಿ ಜನಿಸಿದ ಯಾಮೀನ್‌ ಅವರು ತಮ್ಮ ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷ ಣವನ್ನು ಮಾಲೆ ಮಜೀಧಿಯ್ಯಾ ಸ್ಕೂಲ್‌ನಲ್ಲಿ ಪೂರೈಸಿ, ಲೆಬನಾನ್‌ನ ಅಮೆರಿಕನ್‌ ವಿವಿಯಲ್ಲಿ ಬಿಸಿನೆಸ್‌ ಅಡ್ಮಿನ್‌ಸ್ಪ್ರೇಷನ್‌ನಲ್ಲಿ ಪದವಿ ಪಡೆದುಕೊಂಡಿದ್ದಾರೆ. ನಂತರ, ಅವರು ತಮ್ಮ ಸ್ನಾತಕೋತ್ತರ ಪದವಿಯನ್ನು ಅಮೆರಿಕದ ಲಾಸ್‌ ಏಂಜಲೀಸ್‌ನ ಕ್ಲೇರ್‌ಮಾಂಟ್‌ ಗ್ರ್ಯಾಜುಯೇಟ್‌ ಸ್ಕೂಲ್‌ನಿಂದ ಗಳಿಸಿದರು. ಮಲ ಸಹೋದರ ಗಯೂಮ್‌ ಅವರ ಆಡಳಿತಾವಧಿಯಲ್ಲಿ ವ್ಯಾಪಾರ ಮತ್ತು ಕೈಗಾರಿಕಾ ಸಚಿವರಾಗಿ ಕೆಲಸ ಮಾಡಿ ಆಡಳಿತಾತ್ಮಕ ಅನುಭವ ಪಡೆದರು. ಇದರ ಜತೆಗೆ ಉನ್ನತ ಶಿಕ್ಷ ಣ, ಉದ್ಯೋಗ, ಸಾಮಾಜಿಕ ಭದ್ರತೆ ಮತ್ತು ಪ್ರವಾಸೋದ್ಯಮ ಇಲಾಖೆಗಳನ್ನೂ ನಿರ್ವಹಣೆ ಮಾಡಿದರು. ಹೀಗೆ, ರಾಜಕೀಯ ಮತ್ತು ಆಡಳಿತಾತ್ಮಕ ಅನುಭವಗಳನ್ನು ಗಳಿಸುತ್ತಲೇ ಯಾಮೀನ್‌, ರಾಜಕೀಯ ಚದುರಂಗದಾಟದ ಎಲ್ಲ ಪಟ್ಟುಗಳನ್ನು ಕರಗತ ಮಾಡಿಕೊಂಡರು. ಈ ಪಟ್ಟುಗಳೇ ಮುಂದೆ ನಡೆದ 2012ರ ಅಧ್ಯಕ್ಷ ಚುನಾವಣೆಯಲ್ಲಿ ಬಹಳ ನೆರವಿಗೆ ಬಂತು ಎಂದು ವಿಶ್ಲೇಷಿಸಬಹುದು.

ಈಗ ಯಾಮೀನ್‌ ಅಕ್ಷ ರಶಃ ತಮ್ಮೆಲ್ಲ ರಾಜಕೀಯ ದಾಳಗಳನ್ನು ಉರುಳಿಸಿ, ಅಂತಾರಾಷ್ಟ್ರೀಯ ಸಮುದಾಯದ ಸಹಾನುಭೂತಿ ಗಳಿಸುವ ಯತ್ನ ಮಾಡುತ್ತಿದ್ದಾರೆ. ಅದರ ಫಲವಾಗಿಯೇ ಪಾಕಿಸ್ತಾನ, ಚೀನಾ, ಸೌದಿ ಅರೇಬಿಯಾಗಳಿಗೆ ತನ್ನ ರಾಯಭಾರಿಗಳನ್ನು ಕಳುಹಿಸಿ ಮಾಲ್ಡೀವ್ಸ್‌ನ ಪರಿಸ್ಥಿತಿ ವಿವರಿಸಲು ಪ್ರಯತ್ನಿಸುತ್ತಿದ್ದಾರೆ. ಭಾರತಕ್ಕೂ ಒಬ್ಬ ರಾಯಭಾರಿ ಬರಬೇಕಿತ್ತು. ಆದರೆ, ಭಾರತವೇ ಕೊಂಚ ಹಿಂದೇಟು ಹಾಕಿರುವಂತಿದೆ ಈ ವಿಷಯದಲ್ಲಿ. ಯಾಮೀನ್‌ ಅವರ ನಾಲ್ಕು ವರ್ಷಗಳ ಈ ಅವಧಿಯಲ್ಲಿ ಮಾಲ್ಡೀವ್ಸ್‌, ಎಲ್ಲ ಪ್ರಜಾಸತ್ತಾತ್ಮಕ ಸಂಸ್ಥೆಗಳು ಮತ್ತು ಆಡಳಿತ ನಿಧಾನವಾಗಿ ಅಳಿವಿನಂಚಿಗೆ ಬಂದು ನಿಂತಿದ್ದರೆ, ಮಾನವ ಹಕ್ಕುಗಳ ಉಲ್ಲಂಘನೆ ಎಗ್ಗಿಲ್ಲದೆ ನಡೆಯುತ್ತಿದೆ, ವಿದೇಶ ನೀತಿ ಹಳಿ ತಪ್ಪಿದೆ. ಇದೆಲ್ಲದರ ಫಲವಾಗಿ ಇಂದು ಮಾಲ್ಡೀವ್ಸ್‌ನ ರಾಜಕೀಯ ಬಿಕ್ಕಟ್ಟಿನಲ್ಲಿ ನರಳುತ್ತಿದೆ. ದ್ವೀಪರಾಷ್ಟ್ರದಲ್ಲಿ ಕೇವಲ ಪ್ರಜಾಪ್ರಭುತ್ವ ಮಾತ್ರ ಅಪಾಯದಲ್ಲಿ ಇಲ್ಲ. ಬದಲಾಗಿ ಉಗ್ರ ಇಸ್ಲಾಮೀಕರಣ ಕೂಡ ಬಾಧಿಸುತ್ತಿದೆ. ಇದಕ್ಕೆಲ್ಲ ಕಾರಣ ಯಾಮೀನ್‌ ಅವರ ಅಧಿಕಾರದ ದಾಹ ಮತ್ತು ಅಧಿಕಾರದ ದಾಹ ಅಷ್ಟೇ.

ಯಾಮೀನ್‌ ಅವರ ಸದ್ಯದ ನಡೆಗೆ ವ್ಯಾಪಕವಾಗಿ ಖಂಡನೆ ವ್ಯಕ್ತವಾಗಿದ್ದರೂ, ನೇರವಾಗಿ ಅದನ್ನು ಸರಿಪಡಿಸುವ ಪ್ರಯತ್ನವನ್ನು ಯಾವುದೇ ರಾಷ್ಟ್ರ ಮಾಡುತ್ತಿಲ್ಲ. ಆದರೆ, ಅವರು ಪ್ರಜಾಪ್ರಭುತ್ವ ಮರುಸ್ಥಾಪನೆ ಬಗ್ಗೆ ಅಂತಾರಾಷ್ಟ್ರೀಯ ಸಮುದಾಯಕ್ಕೆ ಭರವಸೆ ನೀಡಬೇಕಿದೆ. ಸದ್ಯದ ಅವರ ನಡೆಯನ್ನು ಗಮನಿಸಿದರೆ ಇದು ಸಾಧ್ಯವಿಲ್ಲ ಎನಿಸುತ್ತದೆ. 15 ದಿನಗಳವರೆಗೆ ಹೇರಲಾಗಿರುವ ತುರ್ತುಪರಿಸ್ಥಿತಿ ಮುಂದುವರೆಯಬಹುದು ಎಂಬ ಲೆಕ್ಕಾಚಾರವನ್ನು ರಾಜಕೀಯ ಪಂಡಿತರು ಹಾಕುತ್ತಿದ್ದಾರೆ. ಒಂದು ವೇಳೆ, ಇದು ನಿಜವಾದರೆ ಆಗ ಅನಿವಾರ್ಯವಾಗಿ ಅಂತಾರಾಷ್ಟ್ರೀಯ ಸಮುದಾಯ ಯಾಮೀನ್‌ ಅವರ ಮೇಲೆ ದಾಳಿ ಮಾಡಲೇಬೇಕಾದ ಪರಿಸ್ಥಿತಿ ಉಂಟಾಗಬಹುದು. ಆಗ ಅವರೇನು ಮಾಡುತ್ತಾರೆ ಎಂಬುದಕ್ಕೆ ಸದ್ಯಕ್ಕೆ ಯಾರ ಬಳಿಯೂ ಉತ್ತರವಿಲ್ಲ. ಏನೇ ಆಗಲಿ, ತುರ್ತು ಪರಿಸ್ಥಿತಿ ಹೇರುವ ಮೂಲಕ ಯಾಮೀನ್‌ ತನ್ನೊಳಗಿರುವ ಸರ್ವಾಧಿಕಾರಿಯ ಗುಣವನ್ನು ಇಡೀ ಜಗತ್ತಿಗೆ ತೋರಿಸಿಕೊಟ್ಟಿದ್ದಾರೆಂಬುದಂತೂ ಸತ್ಯ.


ವೀರಪ್ಪನ್ ಶಿಕಾರಿ: ಜ್ಯೋತಿಷಿಗಳಿಂದ ವೀರಪ್ಪನ್‌ ಎಸ್ಕೇಪ್‌, ಕೈ ಕೊಟ್ಟ ಆಪರೇಶನ್‌ ಬಾಸ್ಟನ್‌

$
0
0


*ವೀರಪ್ಪನ್ ಶಿಕಾರಿ: ಕೆ ವಿಜಯ್ ಕುಮಾರ್

ಫೆಬ್ರವರಿ 2004.

ನಮ್ಮ ಅಪೇಕ್ಷೆಯನ್ನೂ ಮೀರಿ ರಮ್ಯಾ ಕೆಲಸಮಾಡತೊಡಗಿದಳು. ಶೀಘ್ರದಲ್ಲಿಯೇ ಮುತ್ತುಲಕ್ಷ್ಮಿಯ ವಿಶ್ವಾಸವನ್ನು ಗಳಿಸಿದ ಆಕೆ, ತನ್ನ ಜೀವನದಲ್ಲಿಯೇ ಮೊಟ್ಟಮೊದಲ ಬಾರಿಗೆ ಮುತ್ತುಲಕ್ಷ್ಮಿ ಬ್ಯೂಟಿ ಪಾರ್ಲರ್‌ಗೆ ಹೋಗುವಂತೆ ಪ್ರೇರೇಪಿಸಿದ್ದಳು. ಹಲವಾರು ವರ್ಷಗಳ ಒತ್ತಡದ ಜೀವನದ ನಂತರ ವಡವಳ್ಳಿಯಲ್ಲಿ ತಾನು ಆತಂಕರಹಿತವಾಗಿ ಜೀವಿಸುತ್ತಿದ್ದೇನೆ ಎಂದು ಮುತ್ತುಲಕ್ಷ್ಮಿ ಭಾವಿಸಿದ್ದರಿಂದ ರಮ್ಯಾಳ ಜತೆಗಿನಆಕೆಯ ಸ್ನೇಹ ಗಟ್ಟಿಯಾಯಿತು.

ರಾತ್ರಿಯ ವೇಳೆಯಲ್ಲಿ ಮಾರುಕಟ್ಟೆಗೆ ಹೋಗುವ ಸಬೂಬು ಹೇಳಿ ರಮ್ಯಾ ತನ್ನ ಮನೆಯಿಂದ ಹೊರಗೆ ಬಂದು ಕಣ್ಣನ್‌ರನ್ನು ಭೇಟಿಯಾಗಿ ಆ ದಿನ ತನ್ನ ಹಾಗೂ ಮುತ್ತುಲಕ್ಷ್ಮಿಯ ನಡುವೆ ನಡೆದ ವೃತ್ತಾಂತವನ್ನು ಸವಿಸ್ತಾರವಾಗಿ ವರದಿ ಮಾಡುತ್ತಿದ್ದಳು.

ಎಸ್‌ಟಿಎಫ್‌ ತಂಡದ ಚಾಲಕನೊಬ್ಬನನ್ನು ರಮ್ಯಾಳ ಕುಟುಂಬದ ಡ್ರೈವರ್‌ ಎಂದು ನೇಮಿಸಲಾಗಿತ್ತು. ಈ ವ್ಯಕ್ತಿ ಮುತ್ತುಲಕ್ಷ್ಮಿಯ ಚಟುವಟಿಕೆಗಳನ್ನು ಹತ್ತಿರದಿಂದಲೇ ಗಮನಿಸುತ್ತಾ ಆಕೆಯನ್ನು ಸಂಧಿಸಲು ಬರುತ್ತಿದ್ದವರನ್ನು ಗಮನಿಸಿ, ಆ ವ್ಯಕ್ತಿಗಳನ್ನು ಹಿಂಬಾಲಿಸುತ್ತಿದ್ದ. ಮನೆಯಲ್ಲಿರುವ ಮೂರು ಮಹಿಳೆಯರ ಗುರುತೇನಾದರೂ ವೀರಪ್ಪನ್‌ ಗುಂಪಿಗೆ ಗೊತ್ತಾದಲ್ಲಿ ಆ ಮೂರು ಜನರಿಗೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ತರ್ಕಿಸಿದ ನಾವು ಡ್ರೈವರ್‌ಗೆ ಆ ಮೂರು ಜನರ ಅಂಗರಕ್ಷ ಕನಾಗಿಯೂ ಕಾರ್ಯನಿರ್ವಹಿಸಲು ನೇಮಿಸಿದ್ದೆವು. ಮುತ್ತುಲಕ್ಷ್ಮಿಯ ಏಕಾಂತಕ್ಕೆ ಯಾವುದೇ ರೀತಿಯ ಅಡ್ಡಿ ಪಡೆಸಬಾರದೆಂಬ ಎಚ್ಚರಿಕೆಯನ್ನು ನಾವು ನಮ್ಮ ಡ್ರೈವರ್‌ಗೆ ನೀಡಿದ್ದೆವು.

ಮುತ್ತುಲಕ್ಷ್ಮಿ ಹಾಗೂ ರಮ್ಯಾಳ ನಡುವಿನ ಬಾಂಧವ್ಯ ಗಟ್ಟಿಯಾದ ನಂತರ ಕಣ್ಣನ್‌ ಹಾಗೂ ನಾನು ನಮ್ಮ ಉದ್ದೇಶಿತ ಕಾರ್ಯಾಚರಣೆಯನ್ನು ಮುಂದಿನ ಹಂತಕ್ಕೆ ಒಯ್ಯಲು ಉದ್ದೇಶಿಸಿದೆವು. ವೀರಪ್ಪನ್‌ ಮುತ್ತುಲಕ್ಷ್ಮಿಯ ಬಳಿ ಬರುವಂತೆ ನಾವು ಮಾಡಬೇಕಾದರೆ ಮುತ್ತುಲಕ್ಷ್ಮಿಯನ್ನು ಆಕೆಯಿದ್ದ ಸ್ಥಳದಿಂದ ಬೇರೊಂದು ಸ್ಥಳಕ್ಕೆ ಸ್ಥಳಾಂತರಿಸಲೇಬೇಕಾಗಿತ್ತು. ಏಕೆಂದರೆ ಕೊಯಮತ್ತೂರಿನ ಬಡಾವಣೆಯಲ್ಲಿ ವೀರಪ್ಪನ್‌ನನ್ನು ನಾವು ಬಂಧಿಸುವುದು ಸುಲಭ ಸಾಧ್ಯವಾಗಿರಲಿಲ್ಲ.

ಹೀಗಾಗಿ ನಾವು ಊಟಿಯಿಂದ 20 ಕಿ.ಮೀ ದೂರದಲ್ಲಿರುವ ಒಂದು ಟೀ ಎಸ್ಟೇಟನ್ನು ಮುತ್ತುಲಕ್ಷ್ಮಿಯ ವಸತಿಗಾಗಿ ಆಯ್ಕೆ ಮಾಡಿದೆವು. ಅತ್ಯಂತ ಸುಂದರ ತಾಣದಲ್ಲಿದ್ದು ಅಕ್ಕಪಕ್ಕದಲ್ಲಿ ಯಾವುದೇ ಮನೆಗಳು ಇರದಿದ್ದುದರಿಂದ ನಮ್ಮ ಕಾರ್ಯಾಚರಣೆಗೆ ಈ ಎಸ್ಟೇಟ್‌ ಸೂಕ್ತವಾಗಿತ್ತು. ಆ ಎಸ್ಟೇಟ್‌ನ ಹೆಸರು 'ಬಾಸ್ಟನ್‌' ಎಂದಿತ್ತು. ಎಸ್‌ಟಿಎಫ್‌ನ ಒಬ್ಬ ಅಧಿಕಾರಿಯನ್ನು ಈ ಎಸ್ಟೇಟ್‌ನÜ ಅತಿಥಿಗೃಹದ ಕಾವಲುಗಾರ ಹಾಗೂ ಬಾಣಸಿಗನ ರೂಪದಲ್ಲಿ ನೇಮಿಸಲಾಯಿತು.

ರಮ್ಯಾ ಮುತ್ತುಲಕ್ಷ್ಮಿಯನ್ನು ಆ ಎಸ್ಟೇಟ್‌ಗೆ ಒಂದು ದಿನ ಕರೆದೊಯ್ದಾಗ, ''ಈ ಪ್ರದೇಶ ಅತ್ಯಂತ ರಮಣೀಯವಾಗಿದೆ ಈ ಎಸ್ಟೇಟ್‌ ಯಾರಿಗೆ ಸೇರಿದ್ದು,'' ಎಂದು ಆಕೆ ಕೇಳಿದಳು. ಎಸ್ಟೇಟ್‌ ಹಾಗೂ ಅದರ ಅತಿಥಿಗೃಹ ತನ್ನದೇ ಕುಟುಂಬಕ್ಕೆ ಸೇರಿದ್ದೆಂದು ರಮ್ಯಾ ಹೇಳಿ ತಾವು ಆಗಿಂದಾಗ್ಗೆ ಈ ಎಸ್ಟೇಟ್‌ಗೆ ಬಂದು ಕೆಲವು ದಿನಗಳ ಕಾಲ ಅಲ್ಲಿ ವಿರಮಿಸುತ್ತೇವೆ ಎಂದುತ್ತರಿಸಿದಳು.

ಈ ಇಬ್ಬರಿಗೂ ಅಲ್ಲಿನ ಕಾವಲುಗಾರ ಎಸ್ಟೇಟ್‌ನ ಇಪ್ಪತ್ತು ಎಕರೆಯಲ್ಲಿನ ಹಲವಾರು ಸುಂದರ ತಾಣಗಳನ್ನು ತೋರಿಸಿ ''ಇಲ್ಲಿಗೆ ಸ್ವಲ್ಪ ದೂರದಲ್ಲಿಯೇ ಒಂದು ಸಣ್ಣ ಜಲಪಾತವೂ ಇದೆ,'' ಎಂದು ತಿಳಿಸಿದ.

ಬಾಸ್ಟನ್‌ ಎಸ್ಟೇಟನ್ನು ನೋಡುತ್ತಿರುವಾಗ ಮುತ್ತುಲಕ್ಷ್ಮಿ ದಿಂಬಂ ಗುಡ್ಡಗಳು ಕಾಣುವಂತಹ ಪ್ರದೇಶದಲ್ಲಿ ಎರಡು ನಿಮಿಷಗಳ ಕಾಲ ನಿಂತಳು. ಮುತ್ತುಲಕ್ಷ್ಮಿಗೆ ಹಲವಾರು ಹಳೆಯ ನೆನಪುಗಳು ಮರುಕಳಿಸಿದವು. ಇದೇ ಪ್ರದೇಶದಿಂದಲೇ ಎಸ್‌ಟಿಎಫ್‌ ಕಾರ್ಯಾಚರಣೆಯ ಫಲವಾಗಿ ತಾನು ತನ್ನ ಗಂಡನಿಂದ ದೂರವಾದೆನಲ್ಲ ಎಂದು ಯೋಚಿಸಿದ ಆಕೆ ಖಿನ್ನಳಾದಳು.

ಮುತ್ತುಲಕ್ಷ್ಮಿ ಹಾಗೂ ರಮ್ಯಾಳ ಸ್ನೇಹ ಇನ್ನಷ್ಟು ಗಟ್ಟಿಯಾದ ನಂತರ ಮುತ್ತುಲಕ್ಷ್ಮಿಯ ಎರಡನೆಯ ಮಗಳು ಪ್ರಭಾಳನ್ನು ಮುತ್ತುಲಕ್ಷ್ಮಿಯ ಜತೆ ಅದೇ ಮನೆಯಲ್ಲಿಡುವ ಒಂದು ಹೊಸ ಯೋಜನೆಯನ್ನು ನಾವು ತಯಾರಿಸಿದೆವು. ತನ್ನ ಎರಡನೇ ಮಗಳ ಜನನವಾದ ಕೂಡಲೇ ಮುತ್ತುಲಕ್ಷ್ಮಿ ಅದಕ್ಕೆ ಪ್ರಭಾ ಎಂದು ನಾಮಕರಣ ಮಾಡಿ ಮಗುವನ್ನು ತನ್ನ ತಂದೆ ತಾಯಿಗಳ ಸುಪರ್ದಿಗೆ ನೀಡಿ ತಾನು ಅರಣ್ಯಕ್ಕೆ ತೆರಳಿದ್ದಳು. ಆನಂತರ ಎಸ್‌ಟಿಎಫ್‌ ಅಧಿಕಾರಿಗಳು ಈ ಮಗುವನ್ನು ಸಾಕಲು ತೆಲಗು ಭಾಷಿಕರ ಕುಟುಂಬವೊಂದಕ್ಕೆ ಕೊಟ್ಟಿದ್ದರು. ಆ ದಂಪತಿಗಳು ಪ್ರಭಾಳನ್ನು ಬಹಳ ಪ್ರೀತಿಯಿಂದ ಬೆಳೆಸಿದ್ದರು. ಯಾವುದೇ ಪರಿಸ್ಥಿತಿಯಲ್ಲೂ ತಾವು ಪ್ರಭಾಳನ್ನು ಜನ್ಮಕೊಟ್ಟ ತಾಯಿಯ ಬಳಿ ಕಳುಹಿಸುವುದಿಲ್ಲ ಎಂದು ಆ ದಂಪತಿಗಳು ಹಠ ಮಾಡುತ್ತಿದ್ದರು. ಆದರೆ ಇನ್ಸ್‌ಪೆಕ್ಟರ್‌ ರಾಮಲಿಂಗಂ ಈ ದಂಪತಿ ಮನವೊಲಿಸಿದ ನಂತರ ಮಗುವನ್ನು ಮುತ್ತುಲಕ್ಷ್ಮಿಯ ಬಳಿ ಕಳುಹಿಸಲು ಆ ದಂಪÜತಿ ಒಪ್ಪಿದರು. ರಾಮಲಿಂಗಂರ ಪ್ರಯತ್ನದಿಂದಾಗಿ ಪ್ರಭಾ ಮುತ್ತುಲಕ್ಷ್ಮಿಯ ಜೊತೆ ವಾಸಿಸಲು ಬಂದಳು. ವೀರಪ್ಪನ್‌ನ ಮೊದಲನೆಯ ಮಗಳು ವಿದ್ಯಾ ಬೋರ್ಡಿಂಗ್‌ ಶಾಲೆಯೊಂದರಲ್ಲಿ ಓದುತ್ತಿದ್ದಳು.

ಅಲ್ಲಿಯವರೆಗೂ ಮುತ್ತುಲಕ್ಷ್ಮಿ ತನ್ನ ಹಳೆಯ ಕತೆಗಳನ್ನು ರಮ್ಯಾಳಿಗೆ ತಿಳಿಸಿರಲಿಲ್ಲ. ಆದರೆ ಆ ವರ್ಷದ ಫೆಬ್ರವರಿ 26ರಂದು ಇಬ್ಬರೂ ಟೀ ಎಸ್ಟೇಟ್‌ ಬಳಿಯ ಜಲಪಾತದ ಬಳಿ ಹೋದಾಗ ಮುತ್ತುಲಕ್ಷ್ಮಿ ಮೊಟ್ಟಮೊದಲ ಬಾರಿಗೆ ತನ್ನ ಮನದಲ್ಲಿದ್ದ ಎಲ್ಲ ಭಾವನೆಗಳನ್ನೂ ಹೊರಹಾಕಿದಳು.

''ರಮ್ಯಾ, ನೀನು ನನಗೆ ತೀರಾ ಹತ್ತಿರವಾಗಿರುವುದರಿಂದ ನನ್ನ ಹಿನ್ನೆಲೆಯನ್ನು ನಿನಗೆ ತಿಳಿಸಬೇಕೆನಿಸಿದೆ. ಆದರೆ ಅದನ್ನು ತಿಳಿದ ನಂತರ ನೀನು ನನ್ನನು ದೂರಮಾಡಿ ನಮ್ಮ ಗೆಳೆತನವನ್ನು ಮುರಿಯುವುದಿಲ್ಲ ಎಂದು ನನಗೆ ಭಾಷೆ ಕೊಡಬೇಕು,'' ಎಂದಳು. ರಮ್ಯಾ ತಲೆಯನ್ನಲ್ಲಾಡಿಸಿ ಒಪ್ಪಿಗೆ ಸೂಚಿಸಿದಾಗ ಮುತ್ತುಲಕ್ಷ್ಮಿ, ''ನಾನೊಬ್ಬ ಕುಖ್ಯಾತ ವ್ಯಕ್ತಿಯ ಪತ್ನಿ. ನನ್ನ ಪತಿಯನ್ನು ಪೊಲೀಸರು ಹುಡುಕುತ್ತಿದ್ದಾರೆ,'' ಎಂದು ಪಿಸು ದನಿಯಲ್ಲಿ ಹೇಳಿದಳು.

''ನೀನು ಹೇಳುತ್ತಿರುವುದೇನೂ ನನಗೆ ಅರ್ಥವಾಗುತ್ತಿಲ್ಲ,'' ಎಂದು ಭಯ ಬಂದಂತೆ ನಟಿಸಿದಳು ರಮ್ಯಾ.

''ನನ್ನ ಮಾತುಗಳನ್ನು ಸಂಪೂರ್ಣವಾಗಿ ಕೇಳುವವರೆಗೆ ನೀನು ಯಾವುದೇ ತೀರ್ಮಾನವನ್ನು ತೆಗೆದುಕೊಳ್ಳಬಾರದು,'' ಎಂದು ಪೀಠಿಕೆ ಹಾಕಿದ ಮುತ್ತುಲಕ್ಷ್ಮಿ ವೀರಪ್ಪನ್‌ನ ಜತೆಗಿನ ತನ್ನ ವಿವಾಹ ಹಾಗೂ ಆನÜಂತರ ನಡೆದ ಎಲ್ಲ ಘಟನೆಗಳನ್ನೂ ಸವಿಸ್ತಾರವಾಗಿ ರಮ್ಯಾಳಿಗೆ ತಿಳಿಸಿದಳು. ಅವಳ ಮಾತುಗಳನ್ನು ಕೇಳಿದ ರಮ್ಯಾ ತನ್ನ ಕಣ್ಣಂಚಿನ ನೀರನ್ನು ಒರೆಸಿಕೊಂಡ ಹಾಗೆ ನಟಿಸಿ, ''ನೀನು ಇಷ್ಟು ಕಷ್ಟವನ್ನು ಅನುಭವಿಸಿರುವೆ ಎಂದು ನಾನು ಊಹಿಸಿರಲಿಲ್ಲ. ಇರಲಿ ಚಿಂತೆ ಮಾಡಬೇಡ, ಎಲ್ಲಿಯವರೆಗೆ ಬೇಕೋ ಅಲ್ಲಿಯವರೆವಿಗೂ ನೀನು ನಮ್ಮ ಮನೆಯಲ್ಲಿಯೇ ಬಾಡಿಗೆಗೆ ಇರಬಹುದು, ನನ್ನ ಅಭ್ಯಂತರವಿಲ್ಲ,'' ಎಂದಳು.

ಇದಾದ ಕೆÜಲವೇ ನಿಮಿಷಗಳ ತರುವಾಯ ನಡೆದ ಘಟನೆಯನ್ನು ರಮ್ಯಾ ಕಣ್ಣನ್‌ಗೆ ವರದಿ ಮಾಡಿದಳು. ನಾವು ರಮ್ಯಾಳಿಗೆ ಆಕೆ ಮುಂದೇನು ಮಾಡಬೇಕೆನ್ನುವ ಬಗ್ಗೆ ಸೂಚಿಸಿದಾಗ ಹೆದರಿದ ಆಕೆ, ''ಸರ್‌, ಯಾವುದೇ ರೀತಿಯ ಎನ್‌ಕೌಂಟರ್‌ನಲ್ಲಿ ಭಾಗವಹಿಸಲು ನನಗಾಗುವುದಿಲ್ಲ,'' ಎಂದು ಖಡಾಖಂಡಿತವಾಗಿ ತಿಳಿಸಿ ಬಿಕ್ಕಿ ಬಿಕ್ಕಿ ಅಳಲು ಪ್ರಾರಂಭಿಸಿದಳು.

''ರಮ್ಯಾ, ನೀನು ಹೆದರಬೇಕಾದ್ದಿಲ್ಲ. ನಾವು ವೀರಪ್ಪನ್‌ನನ್ನು ಜೀವಂತವಾಗಿ ಸೆರೆಹಿಡಿಯಬೇಕೆಂದೇ ಉದ್ದೇಶಿಸಿದ್ದೇವೆ. ಯಾವುದೇ ರೀತಿಯ ಎನ್‌ಕೌಂಟರ್‌ ನಡೆಯುವುದಿಲ್ಲ. ನೀನು ಯೋಚಿಸಬೇಡ,'' ಎಂದು ಆಶ್ವಾಸನೆ ನೀಡಿ ರಮ್ಯಾಳನ್ನು ಸಮಾಧಾನಪಡಿಸಿದರು ಕಣ್ಣನ್‌.

ಮಾರನೆಯ ದಿವಸ ಮುತ್ತುಲಕ್ಷ್ಮಿಯ ಜತೆ ರಮ್ಯಾ ನಾವು ಪಾಠಮಾಡಿಸಿದ್ದಂತೆಯೇ ಮಾತನಾಡಿ, ''ಮುತ್ತುಲಕ್ಷ್ಮಿ, ನಿನ್ನೆ ಇಡೀ ರಾತ್ರಿ ನನಗೆ ನಿದ್ದೆಯೇ ಬರಲಿಲ್ಲ. ನೀನು ನಿನ್ನ ಗಂಡನಿಗೆ ಕಣ್ಣಿನ ತæೂಂದರೆ ಇದ್ದು ಆತನನ್ನು ವೈದ್ಯರಿಗೆ ತೋರಿಸಬೇಕು ಎಂದು ಹೇಳಿದ್ದೆ. ನನಗೆ ಒಬ್ಬ ಕಣ್ಣಿನ ವೈದ್ಯರ ಪರಿಚಯವಿದೆ. ಅವರು ಯಾವುದೇ ಸಮಸ್ಯೆಯಿಲ್ಲದೆ ವೀರಪ್ಪನ್‌ಗೆ ಚಿಕಿತ್ಸೆ ನೀಡುತ್ತಾರೆ. ನಿನ್ನ ಗಂಡ ಸಹಾ ಸಾಕಷ್ಟು ವರ್ಷಗಳ ಕಾಲ ಪ್ರಭಾಳನ್ನು ನೋಡಿಲ್ಲ ನಿನ್ನ ಗಂಡನಿಗೆ ನೀನು ಇಲ್ಲಿಗೆ ಬರಹೇಳಿದರೆ ಅವರು ಕಣ್ಣಿನ ಚಿಕಿತ್ಸೆಯನ್ನೂ ಮಾಡಿಕೊಳ್ಳಬಹುದು ಹಾಗೂ ಪ್ರಭಾಳನ್ನೂ ನೋಡಬಹುದಲ್ಲವೇ,'' ಎಂದಳು. ಇದನ್ನು ಕೇಳಿ ಸಂತಸಗೊಂಡ ಮುತ್ತುಲಕ್ಷ್ಮಿ ತಾನು ಈ ಬಗ್ಗೆ ವೀರಪ್ಪನ್‌ನ ಜತೆ ಮಾತನಾಡುವುದಾಗಿ ತಿಳಿಸಿದಳು.

ಇದಾದ ಕೆಲವೇ ಗಂಟೆಗಳ ನಂತರ ರಮ್ಯಾಳಿಂದ ಈ ಮಾಹಿತಿಯನ್ನು ಪಡೆದ ನಾವು ಮುಂದಿನ ಕಾರ್ಯಾಚರಣೆಗಾಗಿ ಕಾರ್ಯಪ್ರವೃತ್ತರಾದೆವು. ಮುತ್ತುಲಕ್ಷ್ಮಿ ಹಾಗೂ ರಮ್ಯಾ ಟೀ ಎಸ್ಟೇಟ್‌ನಿಂದ ಕೊಯಮತ್ತೂರಿಗೆ ಕೆಲವು ದಿನಗಳಿಗೆಂದು ಹೊರಟಾಗ ಎಸ್‌ಟಿಎಫ್‌ನ ಇನ್ಸ್‌ಪೆಕ್ಟರ್‌ ಉಮಾಪತಿ ತಮ್ಮ ಕಾರ್ಯವನ್ನು ಪ್ರಾರಂಭಿಸಿದರು. ನುರಿತ ಎಂಜಿನಿಯರ್‌ ಆಗಿದ್ದ ಉಮಾಪತಿ ಎಲೆಕ್ಟ್ರಾನಿಕ್ಸ್‌ನಲ್ಲಿ ಸಾಕಷ್ಟು ಪರಿಣಿತಿ ಗಳಿಸಿದ್ದರು. ಆತ ಮುತ್ತುಲಕ್ಷ್ಮಿ ಇದ್ದ ಮನೆಯ ಹೊರಗಡೆ ಕ್ಯಾಮೆರಾಗಳನ್ನು ಅಳವಡಿಸಿ ಮನೆಯ ಬಳಿ ಬರುವಂತಹ ವ್ಯಕ್ತಿಗಳ ಬಗ್ಗೆ ನಿಗಾ ಇಡುವ ವ್ಯವಸ್ಥೆ ರೂಪಿಸಿ ಸ್ವಲ್ಪ ದೂರದಲ್ಲಿದ್ದ ಇನ್ನೊಂದು ಮನೆಯಲ್ಲಿ ಒಂದು ಕಂಟ್ರೋಲ್‌ ರೂಂ ಸ್ಥಾಪಿಸಿ ಕ್ಯಾಮೆರಾ ದೃಶ್ಯಗಳನ್ನು ಅವಲೋಕಿಸುವ ವ್ಯವಸ್ಥೆಯನ್ನು ಮಾಡಿದರು.

ಆ ನಂತರ ಕಣ್ಣನ್‌ ಹಾಗೂ ನಾನು ಎರಡು ಬೇರೆ ಬೇರೆ ಖಾಸಗಿ ವಾಹನಗಳನ್ನು ಉಪಯೋಗಿಸಿ ಊಟಿಯ ಎಸ್ಟೇಟ್‌ಗೆ ತೆರಳಿದೆವು. ಅತಿಥಿ ಗೃಹ ಇದ್ದ ಪ್ರದೇಶವನ್ನು ನಾವು ಸೂಕ್ಷ್ಮವಾಗಿ ಗಮನಿಸಿ ಅಲ್ಲಿಗೆ ಬಂದು ಹೋಗುವ ಎಲ್ಲಾ ರಸ್ತೆಗಳನ್ನು ಅವಲೋಕಿಸಿದೆವು. ಅತಿಥಿ ಗೃಹದಲ್ಲಿ ಒಂದು ಸಣ್ಣ ಉಗ್ರಾಣವಿತ್ತು. ಅಲ್ಲಿಗೆ ಹೋಗಲು ತಾರಸಿಯಿಂದ ಒಂದು ಸಣ್ಣ ಬಾಗಿಲು ಇತ್ತು. ಒಂದು ವೇಳೆ ವೀರಪ್ಪನ್‌ ಅತಿಥಿಗೃಹಕ್ಕೆ ಬಂದರೆ ನಾವು ತಾರಸಿಯ ಮೇಲೆ ಕುಳಿತು ಅಲ್ಲಿಂದ ಮನೆಯೊಳಕ್ಕೆ ಗ್ರನೇಡ್‌ ಎಸೆದು ವೀರಪ್ಪನ್‌ನನ್ನು ಬಂಧಿಸಲು ಸಾಧ್ಯ ಎಂದು ಯೋಜನೆ ಹಾಕಿದೆವು.

ಅಷ್ಟರಲ್ಲಿ ನಮಗೆ ಇನ್ನೊಂದು ಸಮಸ್ಯೆ ಎದುರಾಯಿತು. ರಮ್ಯಾಳ ಕುಟುಂಬಕ್ಕಾಗಿ ನಾವು ನೇಮಕ ಮಾಡಿದ್ದ ಎಸ್‌ಟಿಎಫ್‌ನ ಚಾಲಕ ತನಗೆ ಆ ಕೆಲಸದಿಂದ ವರ್ಗಾಯಿಸಬೇಕೆಂದು ಕೋರಿದ. ಕಾರಣವನ್ನು ವಿಚಾರಿಸಿದಾಗ, ''ಸರ್‌, ಮನೆಯಲ್ಲಿರುವ ಹೆಣ್ಣು ಮಕ್ಕಳು ಸರ್ವಾಧಿಕಾರಿಗಳಂತೆ ವರ್ತಿಸುತ್ತಾರೆ. ಕಾರನ್ನು ಸ್ವಚ್ಚಗೊಳಿಸುವುದು ನನ್ನ ಕೆಲಸವಾದರೂ ಮನೆಯ ಕಸವನ್ನು ಗುಡಿಸಿ ಮನೆ ಸಾರಿಸು ಎಂದು ಆದೇಶಿಸುತ್ತಾರೆ. ನಾನÜು ಮನೆಗೆಲಸ ಮಾಡಲು ಎಸ್‌ಟಿಎಫ್‌ಗೆ ಸೇರಲಿಲ್ಲವಲ್ಲ್ಲ,'' ಎಂದ.

ಕಣ್ಣನ್‌ ಅವನನ್ನು ಸಮಾಧಾನಗೊಳಿಸಿ ತನ್ನ ಕರ್ತವ್ಯ ಮುಂದುವರೆಸಲು ಸೂಚಿಸಿದರು.

ವಡವಳ್ಳಿಗೆ ಬಂದ ನಂತರ ಮುತ್ತುಲಕ್ಷ್ಮಿ ವೀರಪ್ಪನ್‌ಗಾಗಿ ಒಂದು ಕ್ಯಾಸೆಟ್‌ ತಯಾರಿಸಿದಳು. ಅದರಲ್ಲಿ ತಾನು ಅಲ್ಲಿಯವರೆಗೆ ಅನುಭವಿಸಿದ ಕಷ್ಟ ನಷ್ಟಗಳÜ ಬಗ್ಗೆ ವಿವರಿಸಿ ವೀರಪ್ಪನ್‌ ಒಬ್ಬ ಪತಿಯಾಗಿಯೂ ಹಾಗೂ ಒಬ್ಬ ತಂದೆಯಾಗಿಯೂ ತನ್ನ ಕರ್ತವ್ಯವನ್ನು ಸೂಕ್ತವಾಗಿ ನಿಭಾಯಿಸದಿರುವ ಬಗ್ಗೆ ದೂರಿದಳು. ಹಲವಾರು ಬಾರಿ ಬಿಕ್ಕಿಬಿಕ್ಕಿ ಅತ್ತ ಮುತ್ತುಲಕ್ಷ್ಮಿ ರಮ್ಯಾಳ ಜತೆ ತನ್ನ ಗೆಳೆತನದ ಬಗ್ಗೆಯೂ ವಿವರಿಸಿದಳು.

ಕೆಲವೇ ವಾರಗಳ ಅವಧಿಯಲ್ಲಿ ಮುತ್ತುಲಕ್ಷ್ಮಿ ವೀರಪ್ಪನ್‌ಗೆ ಹಲವಾರು ಕ್ಯಾಸೆಟ್‌ಗಳನ್ನು ರವಾನಿಸಿದಳು. ಒಂದು ಟೇಪಿನಲ್ಲಿ ಆಕೆ ಟೀ-ಎಸ್ಟೇಟ್‌ ಮತ್ತು ಅಲ್ಲಿನ ಅತಿಥಿಗೃಹದ ಬಗ್ಗೆ ಪ್ರಸ್ತಾಪಿಸಿದಳು. ಈ ಆಡಿಯೋ ಟೇಪ್‌ಗಳು ವೀರಪ್ಪನ್‌ನನ್ನು ಹೇಗೆ ತಲುಪುತ್ತವೆ ಎಂದು ಅಧಿಕಾರಿಗಳು ಪತ್ತೆಮಾಡಲು ಪ್ರಯತ್ನಿಸಿದರಾದರೂ ಅವರ ಪ್ರಯತ್ನಗಳು ಸಫಲವಾಗಲಿಲ್ಲ. ಒಬ್ಬ ಬಡಕಲು ಯುವಕ ಈ ಕ್ಯಾಸೆಟ್‌ಗಳನ್ನು ಈರೋಡ್‌ ಬಸ್‌ ಸ್ಟ್ಯಾಂಡ್‌ನವರೆಗೆ ಒಯ್ದದ್ದನ್ನು ನಮ್ಮ ಅಧಿಕಾರಿಗಳು ಗಮನಿಸಿದರು. ಆದರೆ ಆತ ಅಲ್ಲಿಂದ ಮುಂದೆ ಎಲ್ಲಿ ಹೋದ ಎನ್ನುವುದು ತಿಳಿಯಲೇ ಇಲ್ಲ.

ಮುತ್ತುಲಕ್ಷ್ಮಿ ರಮ್ಯಾಳ ಜತೆ ನಡೆಸಿದ್ದ ಮಾತುಕತೆಗಳಿಂದ ವೀರಪ್ಪನ್‌ ಬೇಗನೇ ಮುತ್ತುಲಕ್ಷ್ಮಿಯನ್ನು ನೋಡಲು ಬರಬಹುದು ಎಂದು ತಿಳಿದುಬಂದಿತು. ಕೂಡಲೇ ಕಣ್ಣನ್‌ ಮಧುರೈಗೆ ಹೋಗಿ ಅಲ್ಲಿನ ನೇತ್ರ ತಜ್ಞರೊಬ್ಬರನ್ನು ಭೇಟಿಯಾಗಿ ಶೀಘ್ರದಲ್ಲಿಯೇ ಒಬ್ಬ ಪ್ರಮುಖ ವ್ಯಕ್ತಿಯನ್ನು ಅವರಲ್ಲಿಗೆ ಕರೆದುಕೊಂಡು ಬರುವುದಾಗಿಯೂ ಹಾಗೂ ಆತನಿಗೆ ಗುಟ್ಟಾಗಿ ಚಿಕಿತ್ಸೆ ನೀಡಬೇಕೆಂದು ಕೋರಿ ಅವರ ಒಪ್ಪಿಗೆ ಪಡೆದರು. ಪುಣ್ಯಕ್ಕೆ ಆ ವೈದ್ಯರು ಹೆಚ್ಚಿನ ಪ್ರಶ್ನೆಗಳನ್ನು ಕೇಳಲಿಲ್ಲ.

ವೀರಪ್ಪನ್‌ ಬನ್ನಾರಿಯ ಬಳಿ ಕಾಡಿನಿಂದ ಹೊರಬರಬಹುದೆಂದು ರಮ್ಯಾ ನಮಗೆ ತಿಳಿಸಿದಳು. ದಿಂಬಂ ಬೆಟ್ಟಗುಡ್ಡಗಳ ಕೆಳಗೆ ಇರುವ ಜಾಗದಲ್ಲಿ ವೀರಪ್ಪನ್‌ ರಾಜ್‌ಕುಮಾರರನ್ನು ಬಂಧಿಯಾಗಿ ಇರಿಸಿದ್ದರಿಂದ ಆತ ಆ ಮಾರ್ಗದ ಮೂಲಕವೇ ಬನ್ನಾರಿಗೆ ಬರಬಹುದು ಎಂದು ನಾವು ಊಹಿಸಿದೆವು.

ಕಣ್ಣನ್‌ ಹಾಗೂ ನಾನು ಮುಂದಿನ ಕಾರ್ಯಾಚರಣೆಯ ಬಗ್ಗೆ ವಿವರವಾಗಿ ಚರ್ಚಿಸಿದೆವು. ವೀರಪ್ಪನ್‌ ಬರುವ ಹಾದಿಯಲ್ಲಿ ಕಾಡಿನಲ್ಲಿ ಕಸ-ಕಡ್ಡಿಗಳನ್ನು ಆಯ್ದುಕೊಳ್ಳುವ ಆದಿವಾಸಿಗಳಂತೆ ಕೆಲವು ಮಹಿಳಾ ಪೊಲೀಸ್‌ ಕಮಾಂಡೋಗಳನ್ನು ನೇಮಿಸಿ ವೀರಪ್ಪನ್‌ನನ್ನು ಸೆರೆಹಿಡಿಯುವ ಯೋಜನೆಯನ್ನು ರೂಪಿಸಿದೆವು. ತಮಿಳುನಾಡು ವಿಶೇಷ ಪೊಲೀಸ್‌ನಲ್ಲಿ ಸುಮಾರು 3000 ಜನ ಮಹಿಳಾ ಕಾನ್ಸ್‌ಸ್ಟೆಬಲ್‌ಗಳು ಇದ್ದರು. ನಾವು ಅವರಲ್ಲಿ ಕೆಲವರನ್ನು ಈ ಕರ್ತವ್ಯಕ್ಕಾಗಿ ಆಯ್ಕೆ ಮಾಡಿದೆವು.

ಆದರೆ ಕೆಲವೇ ದಿನಗಳಲ್ಲಿ ನಮ್ಮ ಕೆಲಸ ಕೆಟ್ಟಿತು.

23ನೇ ಮಾರ್ಚ್‌ನÜಂದು ಮುತ್ತುಲಕ್ಷ್ಮಿ ತನ್ನ ಮೊಬೈಲ್‌ ಫೋನ್‌ಗೆ ಮೂರು ಮಿಸ್ಡ್‌ಕಾಲ್‌ಗಳು ಬಂದಿದ್ದನ್ನು ಗಮನಿಸಿ ಹತ್ತಿರದ ಫೋನ್‌ ಬೂತ್‌ಗೆ ಹೋಗಿ ವೀರಪ್ಪನ್‌ಗೆ ಕರೆ ಮಾಡಿದಳು. ಈ ಸಂಭಾಷಣೆಯ ನಂತರ ಅವಳ ನಡವಳಿಕೆಯೇ ಬದಲಾಯಿತು ಎಂದು ನಮಗೆ ಅನಿಸಿತು. ಅಂದಿನಿಂದ ಆಕೆ ರಮ್ಯಾಳ ಜತೆ ಮಾತನಾಡುವುದನ್ನು ಕಡಿಮೆ ಮಾಡಿದಳು. ಆದರೆ ಪೂರ್ವನಿಯೋಜಿತ ಕಾರ್ಯಕ್ರಮದಂತೆ ಅವರಿಬ್ಬರೂ ವಲಪರೈ ಬೆಟ್ಟಕ್ಕೆ ಪ್ರವಾಸಕ್ಕೆ ಹೋಗಬೇಕಾಗಿತ್ತು. ಅದರಂತೆಯೇ ಇಬ್ಬರೂ ಅಲ್ಲಿಗೆ ಹೋದರು. ಮಧ್ಯಾಹ್ನದ ಭೋಜನದ ನಂತರ ಇಬ್ಬರೂ ಅಲ್ಲಿಂದ ವಾಪಸ್ಸಾಗಬೇಕಾಗಿತ್ತು.

ಅಷ್ಟರಲ್ಲಿ ಕಣ್ಣನ್‌ಗೆ ರಮ್ಯಾಳ ತಾಯಿಯಿಂದ ಫೋನ್‌ ಕರೆಯೊಂದು ಬಂದಿತು. ''ಕೆಲ ನಿಮಿಷಗಳ ಹಿಂದೆಯಷ್ಟೇ ರಮ್ಯಾ ನನಗೆ ಫೋನ್‌ ಮಾಡಿ ಮುತ್ತುಲಕ್ಷ್ಮಿತಾನು ಪೊಲೀಸರ ನಿಗಾದಲ್ಲಿ ಇದ್ದೇನೆಂದು ಭಾವಿಸುತ್ತಿದ್ದಾಳೆ ಎಂದು ಹೇಳಿ ಆತಂಕಗೊಂಡಿದ್ದಾಳೆ. ತಾವು ಈ ಬಗ್ಗೆ ಕೂಡಲೇ ಪರಿಹಾರವನ್ನು ಹುಡುಕಬೇಕು,'' ಎನ್ನುತ್ತಾ ತಮ್ಮ ದುಗುಡವನ್ನು ತೋಡಿಕೊಂಡರು.

''ನೀವೇನೂ ಚಿಂತೆ ಮಾಡಬೇಡಿ, ಈ ಬಗ್ಗೆ ನಾವು ಸೂಕ್ತ ಕ್ರಮವನ್ನು ತೆಗೆದುಕೊಳ್ಳುತ್ತೇವೆ,'' ಎಂದರು ಕಣ್ಣನ್‌.

,,,,,,,,,,,,,,,,,,,,,,,,,,,,,,,,,,,,,,,,,,,,,,


ಯಂಗ್‌ ಇಂಡಿಯಾ: ಸರಕಾರಿ ನೌಕರರ ನಿವೃತ್ತಿ ವಯಸ್ಸು ಏರಿಸಬೇಡಿ, ಇಳಿಸಿ

$
0
0

*ಯಂಗ್‌ ಇಂಡಿಯಾ: ಸದಾಶಿವ್ ಸೊರಟೂರು

,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,

ಯುವಶಕ್ತಿ ಸರಿಯಾದ ಹಾದಿಯಲ್ಲಿ ಸಾಗಬೇಕಾದರೆ ಅವರು ದೇಶಕ್ಕೆ ಆಸ್ತಿಯಾಗಬೇಕು ಎಂದರೆ ನಮ್ಮ ಮೈಂಡ್‌ ಸೆಟ್‌ ಬದಲಾಗಬೇಕು. ಅವರಿಗಾಗಿ ಎಲ್ಲರೂ ಕೊಂಚವಾದರೂ ತ್ಯಾಗ ಮಾಡಬೇಕು. ಈ ಕೆಲಸ ಸರಕಾರಿ ನೌಕರರಿಂದಲೇ ಶುರುವಾಗಬೇಕು. ಅವರೇ ಸ್ವಯಂ ಪ್ರೇರಣೆಯಿಂದ ನಾವು ಸಾಕಷ್ಟು ಗಳಿಸಿದ್ದೇವೆ, ಯುವ ಜನಾಂಗಕ್ಕೆ ಆದ್ಯತೆ ಕೊಡಿ ಎಂದು ಹೇಳುವಂತಾಗಬೇಕು.

,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,

ಬೆಳಗ್ಗೆಯಷ್ಟೇ ಅಂಚೆ ಕಚೇರಿಗೆ ಹೋಗಿದ್ದೆ. ಒಂದು ಪಾರ್ಸಲ್‌ ಪೋಸ್ಟ್‌ ಮಾಡುವುದಿತ್ತು. ನನಗಿಂತ ಮೊದಲು ಬಂದವರೊಬ್ಬರು ಸಾಲಿನಲ್ಲಿ ನಿಂತಿದ್ದರು. ಬಹಳ ಹೊತ್ತು ನಿಂತೇ ಇದ್ದರು. ನಾನು ಗಮನಿಸುತ್ತಲೇ ಇದ್ದೆ. ಕೌಂಟರ್‌ನಲ್ಲಿದ್ದ ಸುಮಾರು ಐವತ್ತು ವಯಸ್ಸಿನ ನೌಕರರೊಬ್ಬರು ಮಾಹಿತಿಯನ್ನು ಟೈಪ್‌ ಮಾಡಲು ಕೀಬೋರ್ಡ್‌ನಲ್ಲಿ ಅಕ್ಷರಗಳನ್ನು ಹುಡುಕುತ್ತಿದ್ದರು. ಒಂದು ರಿಜಿಸ್ಟರ್‌ ಪೋಸ್ಟ್‌ ಮಾಡುವುದಕ್ಕೆ ಅವರು ತೆಗೆದುಕೊಂಡ ಸಮಯ ಬರೋಬ್ಬರು ಅರ್ಧಗಂಟೆ. 8 ಗಂಟೆ ಕೆಲಸದ ಅವಧಿ. 16 ಮಂದಿಗೆ ಮಾತ್ರ ಇವರ ಸೇವಾಭಾಗ್ಯ! ಈ ಅಂಚೆ ಕಚೇರಿಗೆ ಬರುವವರಿಗೆ ತುಂಬ ತಾಳ್ಮೆ ಇರಬೇಕು.ಅಷ್ಟೇ ಅಲ್ಲ ಅವರಿಗೆ ಯಾವುದೇ ಕೆಲಸವೂ ಇರಬಾರದು. ಎಷ್ಟೊಂದು ಅಮೂಲ್ಯ ಸಮಯ ವ್ಯರ್ಥವಾಗುತ್ತಿದೆ ಎಂದು ಯಾರಿಗೂ ಅನ್ನಿಸುವುದಿಲ್ಲ. ಕಾಯುವುದೇ ನಮ್ಮ ಹಣೆಬರಹ ಎಂದು ಎಲ್ಲರೂ ಗೊಣಗಿಕೊಂಡು ಅಕ್ಷರ ಹುಡುಕುವ ಆಸಾಮಿಗೆ ಮನದಲ್ಲೇ ಹಿಡಿ ಶಾಪ ಹಾಕಿಕೊಂಡು ಕೆಲಸ ಮುಗಿಸಿ ಮನೆಯ ಕಡೆ ತೆರಳುತ್ತಾರೆ.ಇದು ಎಲ್ಲ ಕಚೇರಿಗಳಲ್ಲೂ ಕಂಡು ಬರುವ ಸಾಮಾನ್ಯ ನೋಟ.

ರಾಜ್ಯ ಮತ್ತು ಕೇಂದ್ರ ಸರಕಾರಿ ಕಚೇರಿಗಳು ಡಿಜಿಟಲ್‌ ಆಗಿದೆ. ಜನರ ಕೆಲವೊಂದು ಕೆಲಸ ಕಾರ್ಯಗಳನ್ನು 'ಸಕಾಲ'ದಲ್ಲಿ ಮಾಡಿಕೊಡುವುದಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ.ಹೀಗಾಗಿ ಬಹುತೇಕ ಕಚೇರಿಗಳಲ್ಲಿ ಗಣಕಗಳಿವೆ.ಆದರೆ ಇವುಗಳನ್ನು ನಿರ್ವಹಿಸುವವರೇ ಇಲ್ಲ.ಹಿರಿಯ ಅಧಿಕಾರಿಗಳಿಗೆ ಕಂಪ್ಯೂಟರ್‌ ಗೊತ್ತಿಲ್ಲ. ಅವರದ್ದೇ ವಯಸ್ಸಿನ ಇತರರೂ ಮೇಲಕ್ಕೂ ಕೆಳಕ್ಕೂ ಕಣ್‌ ಕಣ್‌ ಬಿಡುತ್ತಾರೆ. ಉಳಿದಿರುವುದು ಗುತ್ತಿಗೆ ನೌಕರರು.ಅವರಿಗೆ ದಂಡ ನಮಸ್ಕಾರ ಹಾಕಿ ಕೆಲಸ ಮಾಡಿಸಿಕೊಳ್ಳಬೇಕು. ಒಂದರ್ಥದಲ್ಲಿ ಈ ಗಣಕದಿಂದ ನೌಕರಶಾಹಿಯಲ್ಲಿದ್ದ ಅಧಿಕಾರದ ಏಣಿಶ್ರೇಣಿ ತುಂಡು ತುಂಡಾಗಿದೆ. ದೊಡ್ಡ ಅಧಿಕಾರಿಯೂ ಗಣಕ ಗೊತ್ತಿರುವವರ ಮುಂದೆ ಬಾಗಲೇಬೇಕಾಗಿದೆ. ಆದರೆ ಕೆಲಸಗಾರರ ತೀವ್ರ ಕೊರತೆಯಿಂದ ಸಾರ್ವಜನಿಕರ ಪರದಾಟ ಹೆಚ್ಚುತ್ತಲೇ ಇದೆ. ಹಾಗೆ ನೋಡಿದರೆ ಪಾಪ ಏನೂ ಗೊತ್ತಿಲ್ಲದ ಹಿರಿಯರ ಬಗ್ಗೆ ನನಗೆ ಕೆಟ್ಟ ಭಾವನೆ ಇಲ್ಲವೇ ಇಲ್ಲ. ಅವರ ಬಗ್ಗೆ ಸಹಾನುಭೂತಿ ಇದೆ. ಅವರು ಕೂಡ ಯುವಕರಾಗಿದ್ದಾಗ ಹೆಚ್ಚು ದುಡಿದಿರಬಹುದು. ಸುಖವಾಗಿ ಕಾಲ ಕಳೆದು ಪೆನ್ಷನ್‌ ಎಣಿಸಿಕೊಳ್ಳುವ ಕಾಲದಲ್ಲಿ ಸರಕಾರ ಅವರ ಮುಂದೆ ಬಹುದೊಡ್ಡ ತಾಂತ್ರಿಕ ಸವಾಲುಗಳನ್ನು ಒಡ್ಡಿದೆ. ಅವರೇನು ಮಾಡಲು ಆಗುತ್ತೆ? ಕಲಿಯಲು ವಯಸ್ಸು ಮೀರಿದೆ. ಬುದ್ಧಿಶಕ್ತಿ ಕೈಕೊಡುತ್ತಿದೆ. ತಾಂತ್ರಿಕ ಪರಿಭಾಷೆ ತಲೆ ತಿನ್ನುತ್ತಿದೆ. ತಲೆಯನ್ನು ಪರಪರ ಕೆರೆದುಕೊಂಡರೂ ಗಣಕದ ಒಗಟು ಬಿಡಿಸಲು ಆಗುತ್ತಿಲ್ಲ. ಇನ್ನೊಂದೆಡೆ ಎಲ್ಲಾ ಗೊತ್ತಿರುವ ಯುವಕರು ಕೆಲಸಕ್ಕಾಗಿ ಅಲೆಯುತ್ತಿದ್ದಾರೆ. ಇದೊಂದು ದೊಡ್ಡ ವಿರೋಧಾಭಾಸ. ಹಾಗಾದರೆ ಯುವಕ, ಯುವತಿಯರು ಪಟಾಪಟ್‌ ಕೆಲಸ ಮಾಡುತ್ತಾರಾ? ಅವರೇನು ಪಾರಂಗತರೇ ಎಂದು ನೀವು ಕೇಳಬಹುದು. ಮಧ್ಯಾಹ್ನದ ಸೂರ‍್ಯಯಾವತ್ತೂ ಕೂಡ ಬೆಳಕು ಕೊಡಲು ಹಿಂದೇಟು ಹಾಕುವುದಿಲ್ಲ. ನಾವು ಬಳಸಿಕೊಳ್ಳಬೇಕಷ್ಟೇ. ನಮ್ಮ ಯುವ ಜನತೆಗೆ ಒಂಚೂರು ತರಬೇತಿ ಕೊಟ್ಟು ಅಖಾಡಕ್ಕೆ ಬಿಡಲಿ ಆಮೇಲೆ ಮಾತನಾಡಿ. ನೀವು ಅಚ್ಚರಿ ಪಡುವಷ್ಟು ವೇಗದಲ್ಲಿ ಅವರು ಎಲ್ಲ ಕೆಲಸಗಳನ್ನು ನಿರಾಯಾಸವಾಗಿ ಮಾಡುತ್ತಾರೆ. ಇಂಥ ಹುಮ್ಮಸ್ಸಿನ ಮಂದಿ ಲಕ್ಷಾಂತರ ಮಂದಿ ಇದ್ದಾರೆ. ಆದರೆ ನಮ್ಮ ಸರಕಾರಿ ನೌಕರರ ದುರಾಸೆ ಹೇಗಿದೆ ಎಂದರೆ ಕೆಲಸ ಬರದೇ ಇದ್ದರೂ, ಸಾರ್ವಜನಿಕರು ಹಿಡಿ ಶಾಪ ಹಾಕುತ್ತಿದ್ದರೂ ನಿವೃತ್ತಿ ವಯಸ್ಸನ್ನು 62 ವರ್ಷಕ್ಕೇರಿಸಿ ಎಂದು ಸರಕಾರಕ್ಕೆ ಒತ್ತಾಯಿಸುತ್ತಾರೆ! ನೌಕರ ಸಂಘಗಳು ಇಂಥ ಒನ್‌ ಪಾಯಿಂಟ್‌ ಅಜೆಂಡಾವನ್ನು ಪ್ರತಿನಿತ್ಯ ಚರ್ಚಿಸುತ್ತವೆ! ಸರಕಾರವೇನೂ ಸದ್ಯಕ್ಕೆ ನಿವೃತ್ತಿ ವಯಸ್ಸನ್ನು ಏರಿಸುವುದಿಲ್ಲ ಎನ್ನುವ ಭರವಸೆ ನೀಡಿದೆ. ತಲೆಕೆಟ್ಟ ನಾಯಕರು ನಾವು ಅಧಿಕಾರಕ್ಕೆ ಬಂದರೆ 62 ವರ್ಷಕ್ಕೆ ರಿಟೈರ್‌ಮೆಂಟ್‌ ಎಂದು ಹೇಳಿಬಿಡುವ ಅಪಾಯ ಇದ್ದೇ ಇದೆ. ಹೀಗಾದರೆ ಅದೊಂದು ಆತ್ಮಹತ್ಯೆಕಾರಿ ನಿರ್ಧಾರವಾಗುತ್ತದೆ. ಸರಕಾರಿ ಕೆಲಸಗಳು ಇನ್ನಷ್ಟು ತಡವಾಗುವುದರಲ್ಲಿ ಯಾವುದೇ ಸಂದೇಹವಿಲ್ಲ. ಇದು ನಾಡಿನ ಅಭಿವೃದ್ಧಿಗೂ ಒಳ್ಳೆಯದಲ್ಲ; ಹೇಳಿ ಕೇಳಿ ನಮ್ಮದು ಯುವ ದೇಶ. ಯುವಕರಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಇಂಥ ಸನ್ನಿವೇಶಗಳಲ್ಲಿ ಇನ್ನೂ ನಿವೃತ್ತಿ ವಯಸ್ಸನ್ನು ಕಡಿಮೆ ಮಾಡಿದರೂ ಚಿಂತೆ ಇಲ್ಲ. ದುಡಿಯುವ ವಯಸ್ಸಿನಲ್ಲಿ ಪಟ್ಟಾಗಿ ದುಡಿದು ಅಮೇಲೆ ನೆಮ್ಮದಿಯಾಗಿ ಇದ್ದು ಬಿಡಬಹುದು. ಎಷ್ಟೊ ನೌಕರರಿಗೆ ಐವತ್ತು ವರ್ಷ ದಾಟುತ್ತಲೇ ಕೆಲಸ ಮಾಡುವ ಹುಮ್ಮಸ್ಸು ಇರುವುದಿಲ್ಲ. ದೇಹವೂ ಕೂಡ ಅದಕ್ಕೆ ಸ್ಪಂದಿಸುವುದಿಲ್ಲ ಎಂದು ಮೊದಲೇ ಹೇಳಿದ್ದೇನೆ.ಆದರೆ ಸಂಬಳದ ಆಸೆಗೆ ಉಳಿದು ಬಿಡುತ್ತಾರೆ. ಇನ್ನೂ 62ಕ್ಕೆ ಏರಿಸಿದರೆ ಏನಾಗಬೇಡ!?

25-30 ವರ್ಷ ಸೇವೆ ಸಲ್ಲಿಸಿರುವವರು ಸಾಕಷ್ಟು ದುಡಿದು ಕೊಂಡಿರುತ್ತಾರೆ. ಇವರು ನಿವೃತ್ತರಾಗಿ ಅಲ್ಲಿಗೆ ಹೊಸ ನೀರು ಬಂದರೆ ಖಂಡಿತ ಅದು ಇಡೀ ವಾತಾವರಣದಲ್ಲಿ ಹೊಸ ಉಲ್ಲಾಸವನ್ನು ತಂದೇ ತರುತ್ತದೆ. ಹಾಗೆಂದು ಹಿರಿಯರನ್ನು ಕಡೆಗಣಿಸುವುದು ತಪ್ಪು. ಅವರ ಸಲಹೆ, ಸೂಚನೆ, ಮಾರ್ಗದರ್ಶನವನ್ನು ಪಡೆದುಕೊಳ್ಳಬೇಕು. ಇದಕ್ಕಾಗಿ ಪ್ರತಿ ಇಲಾಖೆಯಲ್ಲೂ ಒಂದು ಮಾರ್ಗದರ್ಶನ ಮಂಡಳಿ ರಚನೆಯಾಗಬೇಕು. ಇದಕ್ಕೆ ಗೌರವ ಸಂಭಾವನೆ ಮಾತ್ರ ನೀಡಬೇಕು. ಇದರಿಂದ ನಿತ್ಯ ಎದುರಾಗುವ ಆಡಳಿತಾತ್ಮಕ ತೊಡಕುಗಳು ನಿವಾರಣೆಯಾಗುತ್ತದೆ. ಕಂದಾಯ ಇಲಾಖೆಯಂಥ ವಿಭಾಗಗಳಲ್ಲಿ ನೂರೆಂಟು ಕ್ಲಿಷ್ಟ ಪ್ರಕರಣಗಳಿರುತ್ತವೆ. ಇದಕ್ಕೆ ಹಿರಿಯರ ಮಾರ್ಗದರ್ಶನ ಅಗತ್ಯ.

ಕಾಲ ಬದಲಾದಂತೆ ವೃತ್ತಿಯಲ್ಲಿ ಹೊಸ ಹೊಸ ಬದಲಾವಣೆಗಳು ಬರುತ್ತವೆ. ಹೊಸ ತಂತ್ರಜ್ಞಾನಗಳು ಬರುತ್ತಿವೆ. ನೌಕರರಿಗೆ ತರಬೇತಿಗಳನ್ನು ನೀಡಲಾಗುತ್ತಿದೆ ಆದರೆ ಇದು ನಿರೀಕ್ಷಿತ ಫಲಗಳನ್ನು ಕೊಡುತ್ತಿಲ್ಲ. ಏಕೆಂದರೆ ನೌಕರರ ಕೌಶಲಕ್ಕೂ ಅವರು ಪಡೆಯುವ ಸಂಬಳ, ಬಡ್ತಿ ಮೊದಲಾದ ಅನುಕೂಲಗಳಿಗೂ ಯಾವುದೇ ಸಂಬಂಧವಿಲ್ಲ. ಕೆಲಸದ ಕ್ಷಮತೆ ಇದ್ದರೆ ಮಾತ್ರ ಬಡ್ತಿ, ವೇತನ ಹೆಚ್ಚಳ ಎಂದರೆ ಶತಾಯ ಗತಾಯ ಈಗಿರುವ ಪರಿಸ್ಥಿತಿ ಬದಲಾಗುತ್ತದೆ. ಇದಲ್ಲದೆ ಎಲ್ಲ ಸರಕಾರಿ ಉದ್ಯೋಗಿಗಳಿಗೂ ಪ್ರತಿ ವರ್ಷ ಸಾಮರ್ಥ್ಯ‌ ಪರೀಕ್ಷೆ ನಡೆಸಬೇಕು. ಅದರಲ್ಲಿ ವಿಫಲರಾದರೆ ಸಂಬಳಕ್ಕೆ ಕತ್ತರಿ ಹಾಕಬೇಕು. ಹಾಗೆಂದು ಇದು ಶೋಷಣೆಯಾಗದಂತೆ ಎಚ್ಚರ ವಹಿಸಬೇಕು. ಒಟ್ಟಾರೆ ಆಡಳಿತ ಸುಧಾರಣೆಗಾಗಿ ಮಾತ್ರ ಹೀಗೆ ಮಾಡಲಾಗುತ್ತಿದೆ ಎಂಬುದನ್ನು ಎಲ್ಲರಿಗೂ ಮನವರಿಕೆ ಮಾಡಿಕೊಡಬೇಕು. ಪದೇಪದೆ ವಿಫಲರಾದರೆ

ಕೆಲಸದಿಂದ ಸ್ವಯಂ ನಿವೃತ್ತಿ ತಗೆದುಕೊಳ್ಳುವಂತೆ ತಿಳಿಸುವುದು ಒಳ್ಳೆಯದು!

ನಮ್ಮ ಸಮಾಜಕ್ಕೆ, ವ್ಯವಸ್ಥೆಗೆ ಬೇಕಾಗಿರುವುದು ದಕ್ಷ ತೆ. ಸಮಯ ತಿಂದು ಹಾಕುವ, ಹಣ ನಷ್ಟ ಮಾಡುವ, ಶ್ರಮ ವ್ಯರ್ಥ ಮಾಡುವ ನೌಕರನಲ್ಲ! ಅಂತಹ ನೌಕರನಿಂದ ಯಾವ ಬದಲಾವಣೆಯನ್ನೂ ನಿರೀಕ್ಷೆ ಮಾಡಲಾಗದು. ಇಂಥವರಿಂದ ದೇಶದ ಪ್ರಗತಿಯಾಗುವುದಿಲ್ಲ. ಯುವಶಕ್ತಿ ಸರಿಯಾದ ಹಾದಿಯಲ್ಲಿ ಸಾಗಬೇಕಾದರೆ ನಮ್ಮ ಮೈಂಡ್‌ ಸೆಟ್‌ ಬದಲಾಗಬೇಕು. ಅವರಿಗಾಗಿ ಎಲ್ಲರೂ ಕೊಂಚವಾದರೂ ತ್ಯಾಗ ಮಾಡಬೇಕು. ಈ ಕೆಲಸ ಸರಕಾರಿ ನೌಕರರಿಂದಲೇ ಶುರುವಾಗಬೇಕು. ಅವರೇ ಸ್ವಯಂ ಪ್ರೇರಣೆಯಿಂದ ನಾವು ಸಾಕಷ್ಟು ಗಳಿಸಿದ್ದೇವೆ, ಯುವ ಜನಾಂಗಕ್ಕೆ ಆದ್ಯತೆ ಕೊಡಿ ಎಂದು ಹೇಳುವಂತಾಗಬೇಕು.


ಹರಿಗೋಲು: ನಮ್ಮ ಬೌದ್ಧಿಕ ಚರ್ಚೆಗಳೇಕೆ ದ್ವೀಪಗಳಂತಾಗುತ್ತಿವೆ?

$
0
0

*ಹರಿಗೋಲು: ಡಾ. ಜಿ.ಬಿ. ಹರೀಶ್

ಭಾರತೀಯ ಕಲೆಯ ಹಿರಿಯ ವಿಮರ್ಶಕ ಆನಂದಕುಮಾರಸ್ವಾಮಿ ತಮ್ಮದೊಂದು ಲೇಖನದಲ್ಲಿ ಮಹಾತ್ಮಾ ಗಾಂಧಿಯವರನ್ನು 'ಯಾರೂ ಖರೀದಿ ಮಾಡಲಾಗದ ಮನುಷ್ಯ' ಎಂದು ಗುರುತಿಸಿದ್ದಾರೆ. ಗಾಂಧೀಜಿ ನಂತರದ ಸೆಕ್ಯುಲರ್‌ ಭಾರತದಲ್ಲಿ ಈ ಮಾತು ಸಂಪೂರ್ಣವಾಗಿ ಅನ್ವಯಿಸುವುದು ಸೀತಾರಾಮ್‌ ಗೋಯಲ್‌ ಅವರಿಗೆ. ಪ್ರತಿಷ್ಠಿತ ಇತಿಹಾಸಕಾರರರು, ಪತ್ರಕರ್ತರು ಉದ್ದೇಶಪೂರ್ವಕವಾಗಿ ಮರೆತಿರುವ ಇತಿಹಾಸಕಾರ ಸೀತಾರಾಮ್‌ ಗೋಯಲ್‌ ಜನಿಸಿ, 96ವರ್ಷಗಳಾದವು. (16.10.1921-03.12.2003). ಬಾಲ್ಯದಲ್ಲಿ ಮೊದಲು ಆರ್ಯ ಸಮಾಜದ ಪ್ರಬಾವಕ್ಕೆ ಒಳಗಾದ ಅವರು ನಂತರ ಗಾಂಧಿವಾದವನ್ನು ಒಪ್ಪಿಕೊಂಡರು. ಯುವಕರಾಗಿ ಬೆಳೆದಂತೆ ಕಮ್ಯುನಿಸಂನ ಕೇಂದ್ರವಾಗಿದ್ದ ಕೊಲ್ಕೊತ್ತಾದಲ್ಲಿ ಆ ಸಿದ್ಧಾಂತದ ಕಟ್ಟಾ ಬೆಂಬಲಿಗರಾದರು. ಕಮ್ಯುನಿಸಂಅನ್ನು ಉಗ್ರವಾಗಿ ಬೆಂಬಲಿಸಿ ಬರೆದರು. ದೆಹಲಿ ವಿಶ್ವವಿದ್ಯಾನಿಲಯದಿಂದ ಇತಿಹಾಸದಲ್ಲಿ ಎಂ. ಎ. ಪದವಿಯ ನಂತರ ಅವರು ಭಾರತದ ಸ್ವಾತಂತ್ರ್ಯಾನಂತರದ ರಾಜಕೀಯ, ಸಾಮಾಜಿಕ ಆಗುಹೋಗುಗಳಿಗೆ ಸಾಕ್ಷಿ ಪ್ರಜ್ಞೆಯಾಗಿ ಬದುಕಿದರು. ಓದುವಾಗ ಹಲವು ವಿದ್ಯಾರ್ಥಿ ವೇತನಗಳನ್ನು ಪಡೆದಿದ್ದ ಸೀತಾರಾಮ್‌ ಗೋಯಲ್‌ ಮಹಾಭಾರತ, ಬುದ್ಧನ ಪಾಲಿ ಭಾಷೆಯ 'ಸುತ್ತಪಿಟಿಕ', ಪ್ಲೇಟೋ ಚಿಂತನೆ ಮತ್ತು ಅರವಿಂದರ ಚಿಂತನೆಗಳಿಂದ ಪ್ರಭಾವಿತರಾಗಿ ಪ್ರಬುದ್ಧ ಸಮಕಾಲೀನ ಚಿಂತಕರಾಗಿ ಬೆಳೆದರು.

ಹಿಂದಿ, ಬಂಗಾಳಿ, ಉರ್ದು, ಪಾರಸಿ ಭಾಷೆಗಳಲ್ಲಿ ಸ್ವತಃ ಘನ ವಿದ್ವಾಂಸರಾಗಿದ್ದ ಅವರು ಕಾಲೇಜು, ವಿಶ್ವವಿದ್ಯಾನಿಲಯಗಳಲ್ಲಿ ಅಧ್ಯಾಪಕಾರಾಗಲು ಸಾಧ್ಯವಾಗಲಿಲ್ಲ. ಇದಕ್ಕೆ ಮುಖ್ಯ ಕಾರಣ ಅವರ ಸತ್ಯಪಕ್ಷ ಪಾತ ಮತ್ತು ತೀರಾ ನೇರಾನೇರ ಸ್ವಭಾವ. ಆಧಾರವಿಲ್ಲದೆ ಯಾವುದನ್ನೂ ಒಪ್ಪದ ಗೋಯಲ್‌ ಅವರು ಭಾರತದ ಇತಿಹಾಸ ಕುರಿತಂತೆ ಕಮ್ಯುನಿಸ್ಟ್‌ ಇತಿಹಾಸಕಾರರು ಮಾಡಿರುವ ಪ್ರಮಾದಗಳನ್ನು ಬದುಕಿನುದ್ದಕ್ಕೂ ಬಯಲಿಗೆಳೆದರು. ಸಾಮ್ಯವಾದ, ಸೋವಿಯತ್‌ ರಷ್ಯಾ ಮತ್ತು ಚೀನಾದ ರಾಜಕೀಯ ಸಿದ್ಧಾಂತಗಳು, ಕ್ರೈಸ್ತ ಮತ್ತು ಇಸ್ಲಾಂ ಚಿಂತನೆಗಳನ್ನು ಮೂಲದಲ್ಲಿ ಅಧ್ಯಯನ ಮಾಡಿದಾಗ ಅವರಿಗೆ ಸತ್ಯ ದರ್ಶನವಾಯಿತು. ಇತಿಹಾಸದ ಕೃತಿಗಳೊಂದಿಗೆ ,ಎಂಟು ಕಾದಂಬರಿಗಳನ್ನು ರಚಿಸಿರುವ ಗೋಯಲ್‌ ಇಂದಿಗೂ ನೂರಾರು ಓದುಗರ ಮನಸ್ಸಿನಲ್ಲಿ ಉಳಿದಿರುವುದು ಮುಖ್ಯವಾಗಿ ಅವರ ಖಡಕ್‌ ಐತಿಹಾಸಿಕ ಬರವಣಿಗೆಗಳಿಂದ.

ರಾಮ್‌ಸ್ವರೂಪ್‌ (1920-1998) ಎಂಬ ತತ್ತ್ವಜ್ಞಾನಿಯ ಗರಡಿಯಲ್ಲಿ ವಿಕಾಸವಾದ ಗೋಯಲ್‌ ಅವರು ಪ್ಲೇಟೊ, ಶಿವಾಜಿ ಕುರಿತು ಕೃತಿಗಳನ್ನು ರಚಿಸಿದ್ದಾರೆ. ಮಹಾಭಾರತದ ನಳದಮಯಂತಿ ಕತೆಯನ್ನು ಅವರದೇ ರೀತಿಯಲ್ಲಿ ಸಂಗ್ರಹಿಸಿದ್ದಾರೆ. 1949ರಿಂದ ಕೊನೆಯವರೆಗೂ ಕಮ್ಯುನಿಸಂ, ಇಸ್ಲಾಂ ಮತ್ತು ಕ್ರೈಸ್ತ ಮತ ಬೋಧನೆಯ ನಿಸ್ವರೂಪವನ್ನು ಅಕ್ಷ ರಶಃ ನೂರಾರು ಲೇಖನಗಳ ಮೂಲಕ ಅವರು ಸಮಾಜದ ಮುಂದೆ ಇರಿಸಿದರು. ಆದರೆ ಅವರು ಬರೆಯುತ್ತಿದ್ದ ಕಾಲದಲ್ಲಿ ಟಿವಿ, ಇಂಟರ್‌ನೆಟ್‌, ಬ್ಲಾಗ್‌ಗಳು ತಲೆಎತ್ತಿರಲಿಲ್ಲ. ನೆಹರುವಾದವವನ್ನು ಟೀಕಿಸುವ ಮತ್ತು ಸನಾತನ ಧರ್ಮದ ದೃಷ್ಟಿಯಿಂದ ಆಧುನಿಕ ಮತ್ತು ಪ್ರಾಚೀನ ಸಾಮ್ರಾಜ್ಯಶಾಹಿ ಚಿಂತನೆಗಳನ್ನು ವಿಮರ್ಶಿಸುವ ಲೇಖನಗಳು ಇಂಗ್ಲಿಷ್‌ ಪತ್ರಿಕೆಗಳಲ್ಲಿ ಅಚ್ಚಾಗುವುದು ಬಹುತೇಕ ಅಸಾಧ್ಯವಾಗಿತ್ತು. ಇನ್ನು ಭಾರತದ ಚರಿತ್ರೆಯ ಮೇಲೆ ನಡೆದಿರುವ ಮೋಸದ ವ್ಯಾಖ್ಯಾನಗಳನ್ನು ಖಂಡಿಸಿ ಆಧಾರ ನೀಡಿ ಬರೆದ ಪುಸ್ತಕಗಳು ಪತ್ರಿಕೆಗಳಲ್ಲಿ ಸಾದರ ಸ್ವೀಕಾರದ ಭಾಗ್ಯವನ್ನೂ ಪಡೆಯುತ್ತಿರಲಿಲ್ಲ.

ಗೋಯಲ್‌ ಅವರು ತಮ್ಮ ದಾರ್ಶನಿಕ ಗುರು ರಾಮ್‌ಸ್ವರೂಪ್‌ ಮಾರ್ಗದರ್ಶನದಲ್ಲಿ 1981ರಲ್ಲಿ ದೆಹಲಿಯಲ್ಲಿ 'ವಾಯ್ಸ್‌ ಆಫ್‌ ಇಂಡಿಯಾ' ಎಂಬ ಸ್ವತಂತ್ರ ಪುಸ್ತಕ ಪ್ರಕಟಣಾ ಸಂಸ್ಥೆ ಆರಂಭಿಸಿದರು. ಯಾವುದೇ ಸರಕಾರಗಳ ಮರ್ಜಿಗೆ ಕಾಯದೆ ಮೊದಲು ತಮ್ಮ ಹಾಗೂ ತಮ್ಮ ಗುರು ರಾಮ್‌ಸ್ವರೂಪರ ಇಂಗ್ಲಿಷ್‌ ಕೃತಿಗಳನ್ನು ಹೊರತರಲು ಆರಂಭಿಸಿದರು. 'ದಿ ಕೊಲ್ಕತ್ತಾ ಕುರಾನ್‌ ಪಿಟಿಷನ್‌', 'ಕೆಥೊಲಿಕ್‌ ಆಶ್ರಮ್ಸ್‌: ಸನ್ಯಾಸಿನ್ಸ್‌ ಆರ್‌ ಸ್ವಿಂಡಲರ್ಸ್‌'(1988), 'ಫ್ರೀಡಂ ಆಫ್‌ ಎಕ್ಸ್‌ಪ್ರೆಷನ್‌'(1998), ಇವರ ಕೆಲವು ಪ್ರಮುಖ ಕೃತಿಗಳು. ಇತಿಹಾಸವನ್ನು ವಿಶ್ವವಿದ್ಯಾಲಗಳಲ್ಲಿ ಬೋಧಿಸಲು ಅವಕಾಶ ದೊರಕದಿದ್ದರೂ ತಮ್ಮ ದೈತ್ಯ ಓದುಗಾರಿಕೆ, ಖಚಿತ ಮಾಹಿತಿ ಸಂಗ್ರಹ ಮತ್ತು ಸತ್ಯವನ್ನು ಬರೆಯುವ ಪ್ರಕಟಿಸುವ ಧೈರ್ಯದಿಂದ ಗೋಯಲ್‌ ಬರೆದೂ ಏಕಾಂಗಿಯಾಗಿ ಉಳಿದರು. ದೇಶದ ಯಾವುದೇ ಪ್ರತಿಷ್ಠಿತ ಸಂಸ್ಥೆ ಅವರೊಡನೆ ಸಂಪರ್ಕ ಇರಿಸಿಕೊಳ್ಳಲು ಇಷ್ಟಪಡುತ್ತಿರಲಿಲ್ಲ. ಪ್ರವಾದಿ ಮೊಹಮ್ಮದರಿಗೆ ಸಂಬಂಧಿಸಿದಂತೆ ರಾಮ್‌ ಸ್ವರೂಪ್‌ ಅವರು ಬರೆದ ಕ್ಲಾಸಿಕ್‌ ಎಂದು ಹೆಸರು ಮಾಡಿದ 'ಅಂಡರ್‌ಸ್ಟ್ಯಾಂಡಿಗ್‌ ಇಸ್ಲಾಂ ಥ್ರೂ ದಿ ಹದೀಸ್‌' ಕೃತಿ ಹಿಂದಿಗೆ ಅನುವಾದಾಗ ಪ್ರಕಾಶಕರಾದ ಗೋಯಲ್‌ ಬಂಧನಕ್ಕೆ ಒಳಗಾದರು. ಅವರು ಮತ್ತು ಮುದ್ರಕಿಯಾದ ಮಹಿಳೆ ಹತ್ತಾರು ವರ್ಷ ಕೋರ್ಟ್‌ಗೆ ಅಲೆಯ ಬೇಕಾಯಿತು. ನಂತರ ಕೊನೆಗೂ ತೀರ್ಪು ಅವರ ಪರವಾಗಿ ಬಂತು. ಅಯೋಧ್ಯಾ ಆಂದೋಲನಕ್ಕೆ ವೈಚಾರಿಕ ಸ್ವರೂಪ ಕೊಡುವುದುರಲ್ಲಿ ಗೋಯಲ್‌ ಅವರು ಬರೆದಿರುವ 'ಹಿಂದು ಟೆಂಪಲ್ಸ್‌: ವಾಟ್‌ ಹ್ಯಾಪಂಡ್‌ ಟು ದೆಮ್‌' ಕೃತಿಗೆ ಚಾರಿತ್ರಿಕ ಮಹತ್ವವಿದೆ. ಜಗತ್ತಿನಾದ್ಯಂತ ವಿದ್ವಾಂಸರಿಂದ, ಓದುಗರಿಂದ ಪ್ರಶಂಸೆ ಗಳಿಸಿದ ಈ ಎರಡು ಸಂಪುಟಗಳು ಭಾರತದ ಕಮ್ಯುನಿಸ್ಟ್‌-ಸೆಕ್ಯುಲರ್‌ ವಿದ್ವಾಂಸರ ತೀವ್ರ ನಿರ್ಲಕ್ಷ ್ಯಕ್ಕೆ ತುತ್ತಾಯಿತು. ಇಂದಿಗೂ ಗೋಯಲ್‌ ಎತ್ತಿರುವ ಪ್ರಶ್ನೆಗಳು, ತೋರಿಸಿರುವ ದಾಖಲೆಗಳು ಈ ಬಳಗಕ್ಕೆ ನಂಗಲಾರದ ತುತ್ತಾಗಿವೆ.

ತೀವ್ರ ಸತ್ಯ ನಿಷ್ಠೆ, ಯಾವ ಮುಲಾಜಿಗೂ ಒಳಗಾಗದೆ ಚಿಂತಿಸುವ ಧೈರ್ಯ ಮತ್ತು ಅರ್ಥಪೂರ್ಣವಾದ ಇಂಗ್ಲಿಷ್‌ ಬರೆವಣಿಗೆ ಇವು ಗೋಯಲ್‌ ಸಾಹಿತ್ಯದ ಮುಖ್ಯ ಲಕ್ಷ ಣಗಳು. ಅವರು ವಾಯ್ಸ್‌ ಆಫ್‌ ಇಂಡಿಯಾದ ಮೂಲಕ ವಿಶ್ವವಿದ್ಯಾನಿಲಯದ ಭದ್ರಕೋಟೆಯ ಹೊರಗೆ ಇತಿಹಾಸ, ಸಂಸ್ಕೃತಿ ಮತ್ತು ಪ್ರವಾದಿ ಮತಗಳ ಅಪಾಯ ಕುರಿತು ಪ್ರಾಮಾಣಿಕ ಆಕರಗಳನ್ನು ನೋಡಿ ಬರೆಯುವ ಹಲವು ಲೇಖಕರಿಗೆ ಅವಕಾಶ ಮಾಡಿಕೊಟ್ಟರು. ಅದೊಂದು ಆಂದೋಲನವೇ ಆಯಿತು. ಕನ್ನಡಿಗರಾದ ನವರತ್ನ ರಾಜಾರಾಮ್‌, ಬೆಲ್ಜಿಯಂನ ಲೇಖಕ ಕೊನ್ರಾಡ್‌ ಎಲ್ಸ್ಟ್‌, ಅಮೆರಿಕದ ಡೇವಿಡ್‌ ಫ್ರಾಲಿ,ಅರುಣ್‌ ಶೌರಿ, ಈಶ್ವರ ಸರಣ್‌, ಎ.ಕೆ. ಪ್ರಿಯೊಲ್ಕರ್‌, ಕೆ.ಎಸ್‌.ಲಾಲ್‌, ಶ್ರೀಕಾಂತ ತೆಲೆಗೇರಿ, ಮುಂತದವರ ಪುಸ್ತಕಗಳನ್ನು ಸುಲಭ ಬೆಲೆಯಲ್ಲಿ ಗೋಯಲ್‌ ಪ್ರಕಟಿಸಿದರು.

ಈ ಸ್ವತಂತ್ರ ಚಿಂತಕರ ಪುಸ್ತಕಗಳು ತೊಂಬತ್ತರ ದಶಕದಲ್ಲಿ ಹೇಗೋ ಹಾಗೆ ಈಗಲೂ ಸಹ ಬೆಂಗಳೂರಿನ ಯಾವುದೇ ಪ್ರಸಿದ್ಧ ಪುಸ್ತಕದ ಅಂಗಡಿಗಳಲ್ಲಿ ಸಿಗುವುದಿಲ್ಲ ಎಂದರೆ ನಾವು ಮಾತನಾಡುತ್ತಿರುವ ಅಭಿವ್ಯಕ್ತಿ ಸ್ವಾತಂತ್ರ್ಯದ ಸ್ವರೂಪ ಎಷ್ಟು ಟೊಳ್ಳು ಎಂಬುದು ತಿಳಿಯುತ್ತದೆ.

ಗೋಯಲ್‌ ಅವರು ಕಮ್ಯುನಿಸಂ, ಇಸ್ಲಾಂ, ನೆಹರೂವಾದ, ಮಾವೋವಾದ, ನಕ್ಸಲ್‌ವಾದ ಮತ್ತು ಕ್ರೈಸ್ತ ಮಿಷನರಿಗಳ ಚಟುವಟಿಕೆಗಳನ್ನು ವೈಚಾರಿವಾಗಿ, ಸೈದ್ಧಾಂತಿಕವಾಗಿ ಎದುರಿಸಿದರು. ಈ ಮುಖಾಮುಖಿಗೆ ಈ ಯಾವುದೇ ಗುಂಪುಗಳು ದೆಹಲಿಯಲ್ಲಿ ಮತ್ತು ಬೇರೆ ಕಡೆ ತೆರೆದುಕೊಳ್ಳಲಿಲ್ಲ. ಇಲ್ಲಿ ಸೇರಸ ಬೇಕಾದ ಒಂದು ಮಾತೆಂದರೆ ಸೀತಾರಾಮ್‌ ಗೋಯಲ್‌ ಹೋರಾಟ ವಿಚಾರಗಳ ವಿರುದ್ಧ ಇತ್ತೇ ಹೊರತು ವ್ಯಕ್ತಿಗಳ ವಿರುದ್ಧ ಅಲ್ಲ. ಮೂಲತಃ ವ್ಯಾಪಾರಿ ಕುಟುಂಬದ ಹಿನ್ನೆಲೆಯಿಂದ ಬಂದ ಅವರು ಕೆಲವು ಕಾಲ ಲೋಕನಾಯಕ ಜಯಪ್ರಕಾಶ್‌ ನಾರಾಯಣ್‌ ಅವರ ಆಪ್ತ ಕಾರ್ಯದರ್ಶಿಯಾಗಿದ್ದರು. ಕೊನೆಯ ದಿನಗಳಲ್ಲಿ ಹಿಂದು ಯೋಗ ಪದ್ಧತಿಯ ಬೆಳಕಿನಲ್ಲಿ ಮಾನವತೆಯ ಕ್ರೌರ್ಯದ ಅಧ್ಯಾಯಗಳನ್ನು ಅಭ್ಯಾಸಮಾಡಿ ಪುಸ್ತಕಗಳನ್ನು ಬರೆದರು. ಅವರ 'ಹೌ ಐ ಬಿಕೇಮ್‌ ಎ ಹಿಂದು' ಬೌದ್ಧಿಕನೊಬ್ಬ ಏಕಾಂಗಿ ಸಾಹಸಗಳ ನೆನಪುಗಳ ಸಂಗ್ರಹ.

ಭಾರತಕ್ಕೆ ಸಮಸ್ಯೆ ಇರುವುದು ಬಡಪಾಯಿ, ಮುಗ್ಧ ಮುಸ್ಲಿಮ್‌ ಸಮುದಾಯದಿಂದಲ್ಲ, ಮೂಲತಃ ಇಸ್ಲಾಂನಲ್ಲಿಯೇ ಅನೇಕ ತಾತ್ತ್ವಿಕ ಸಮಸ್ಯೆಗಳಿವೆ ಎಂಬುದು ಗೋಯಲ್‌ ಪ್ರತಿಪಾದನೆಯಾಗಿತ್ತು. ಅವರು ಯಾವುದೇ ಸಮುದಾಯದ ವಿರುದ್ಧ ಮಾತನಾಡಲಿಲ್ಲ. ಕಾನ್ರಾಡ್‌ ಎಲ್ಸ್ಟ್‌ ಗುರುತಿಸಿರುವಂತೆ ಮಂದೊಂದು ದಿನ ಭಾರತದ ನೈಜ ಇತಿಹಾಸ ಬರೆಯುವಾಗ ಗೋಯಲ್‌ ಅವರ ಕೊಡುಗೆಯನ್ನು ವಿವರಿಸಲು ಒಂದು ಅಧ್ಯಾಯವನ್ನೇ ಮೀಸಲಿಡಬೇಕಾಗುತ್ತದೆ. ( Thಛಿ ಜಿಞpಟ್ಟಠಿa್ಞ್ಚಛಿ ಟ್ಛ ್ಕaಞ ಖಡಿa್ಟ್ಠp's a್ಞd ಖಜಿಠಿa ್ಕaಞ ಎಟ್ಝಛಿ's ಡಿಟ್ಟk ್ಚa್ಞ ha್ಟd್ಝy ಚಿಛಿ ಟvಛ್ಟಿಧಿಛಿsಠಿಜಿಞaಠಿಛಿd. ಐ ್ಛಟ್ಟ ಟ್ಞಛಿ havಛಿ ್ಞಟ dಟ್ಠಚಿಠಿ ಠಿhaಠಿ ್ಛ್ಠಠ್ಠ್ಟಿಛಿ ಠಿಛ್ಡಿಠಿಚಿಟಟks ಟ್ಞ ್ಚಟಞpa್ಟaಠಿಜಿvಛಿ ್ಟಛ್ಝಿಜಿಜಜಿಟ್ಞ as ಡಿಛ್ಝ್ಝಿ as ಠಿhಟsಛಿ ಟ್ಞ ಐ್ಞdಜಿa್ಞ pಟ್ಝಜಿಠಿಜ್ಚಿa್ಝ a್ಞd ಜ್ಞಿಠಿಛ್ಝ್ಝಿಛ್ಚಿಠ್ಠಿa್ಝ hಜಿsಠಿಟ್ಟy ಡಿಜ್ಝ್ಝಿ dಛಿvಟಠಿಛಿ ್ಚ್ಟ್ಠ್ಚಜಿa್ಝ ್ಚhapಠಿಛ್ಟಿs ಠಿಟ ಠಿhಛಿಜ್ಟಿ a್ಞa್ಝysಜಿs.ಱ).

ಸತ್ಯವೇ ದೇವರು ಎಂದು ನಂಬಿದ್ದ ಈ ಇತಿಹಾಸಕಾರ ಈಗಲೂ ತಮ್ಮ ಕೃತಿಗಳ ಮೂಲಕ ಜೀವಂತವಾಗಿದ್ದಾರೆ. ಅವರ ಕೃತಿಗಳ ಅಧ್ಯಯನ, ಮುಕ್ತ ಚರ್ಚೆಯೇ ನಾವು ಅವರಿಗೆ ಸಲ್ಲಿಸಬಹುದಾದ ಗೌರವ. ಕನ್ನಡದ ವಿಚಾರವಂತರು ಗೋಯಲ್‌ ಮತ್ತು ಸಂಗಡಿಗರ ಕೃತಿಗಳಿಗೆ ಮುಖಾಮುಖಿಯಾಗುವರೇ ಎಂದು ಕಾದು ನೋಡಬೇಕು.

ಈಚೆಗೆ ವೆಂಡಿ ಡೊನಿಗರ್‌ ಅವರ 'ದಿ ಹಿಂದೂಸ್‌' ಗ್ರಂಥ ಓದುವಾಗ, ಅವರೇನಾದರು ಗೋಯಲ್‌ ಅವರ ಸ್ವತಂತ್ರ ಸಂಶೋಧನೆ ಕುರಿತು ಬರೆದಿರುವರೇ ಎಂದು ಇಡೀ 779 ಪುಟಗಳಲ್ಲಿ ಹುಡುಕಿ ನಿರಾಸೆಗೊಂಡೆ.

ರಾಷ್ಟ್ರೀಯವಾದಿಗಳನ್ನು ಬಲಪಂಥದವರು ಎಂದು ಹಣೆಪಟ್ಟಿ ಅಂಟಿಸುವ ವಿದ್ವಾಂಸರು ಯಾಕೆ ರಾಮ್‌ ಸ್ವರೂಪರ ಚಿಂತನೆ, ಗೋಯಲ್‌ ಇತಿಹಾಸ ಬರವಣಿಗೆ ಕುರಿತು ಇದುವರೆಗೂ ಗಂಭೀರವಾದ ಚರ್ಚೆ ಮಾಡಿಲ್ಲ ಕರ್ನಾಟಕದಲ್ಲಿ ಇರುವ ಇಷ್ಟೊಂದು ವಿಶ್ವವಿದ್ಯಾನಿಲಯಗಳಲ್ಲಿ ಯಾಕೆ ಗೋಯಲ್‌ ಅವರ ಕೃತಿಗಳ ಗಂಭೀರ ಚರ್ಚೆಯಾದರೂ ನಡೆಯುತ್ತಿಲ್ಲ ಎಂದು ಯೋಚಿಸಿದರೆ, ಬೌದ್ಧಿಕ ಅಸ್ಪೃಶ್ಯತೆ ನಮ್ಮ ಅರಿವಿನ ಕೇಂದ್ರಗಳಲ್ಲಿ ಎಷ್ಟು ಆಳವಾಗಿ ಬೇರು ಬಿಟ್ಟಿದೆ ಎಂಬುದು ಅನುಭಕ್ಕೆ ಬರುತ್ತದೆ. ವೆಂಡಿಯಂಥವರು ಏನು ಮಾಡಿದ್ದಾರೆ ಗೊತ್ತಾ? ಹಿಂದುಯಿಸಂ ಕುರಿತ ಅಷ್ಟು ವಿಸ್ತಾರವಾದ ಗ್ರಂಥದಲ್ಲಿ ವಿಷಯಸೂಚಿಯಲ್ಲಿ ಗೋಯಲ್‌ ಹೆಸರು ತರುವುದಿಲ್ಲ, ಬದಲಿಗೆ ಪುಸ್ತಕಗಳ ಪಟ್ಟಿಯಲ್ಲಿ ಮಾತ್ರ ಅವರ 'ವಾಟ್‌ ಹ್ಯಾಪನ್ಡ್‌ ಟು ಹಿಂದು ಟೆಂಪಲ್ಸ್‌ ' ಕೃತಿ ಹೆಸರಿಸಿದ್ದಾರೆ.

ಈಗಾಗಲೇ ಅಯೋಧ್ಯೆಯ ರಾಮಜನ್ಮಭೂಮಿ ಚರ್ಚೆ ಮತ್ತೆ ಬಿಸಿಯಾಗುತ್ತಿದೆ. ಶಿಯಾ ಮತ್ತು ಸುನ್ನಿಗಳಲ್ಲಿ ಈ ಕುರಿತು ಭಿನ್ನಾಭಿಪ್ರಾಯ ಏರ್ಪಟ್ಟಿದೆ. ಈ ಹಿನ್ನೆಲೆಯಲ್ಲಿ ಮಂದಿರ ಚರ್ಚೆ ಸಂದರ್ಭದಲ್ಲಿ ಹಿಂದುಪರ, ಹಿಂದುವಿರೋಧಿಗಳಿಬ್ಬರಿಗೂ ಪ್ರಾಮಾಣಿಕತೆ ಇದ್ದರೆ ಸೀತಾರಾಮ್‌ ಗೋಯಲ್‌ ವೈಚಾರಿಕತೆಯನ್ನು ಅವರು ಅರಿಯಬೇಕಾಗುವುದು ಅನಿವಾರ್ಯ.


ನಡೆ ಮುಂದೆ ನಡೆ ಮುಂದೆ

$
0
0

ನಾವು ನಡೆದಾಗಲಷ್ಟೇ, ನಮ್ಮ ಪ್ರಯಾಣವನ್ನು ಸ್ವತಂತ್ರವಾಗಿ, ಪ್ರಭಾವಶಾಲಿಯಾಗಿ ಹಾಗೂ ತೃಪ್ತಿಕರವಾಗಿ ಮಾಡಬಲ್ಲೆವು. ಚಲನೆಯ ಬಗ್ಗೆ ನಮ್ಮ ಆಲೋಚನೆಗಳು ಕ್ರಿಯೆಯಾಗಿ ಮಾರ್ಪಡುತ್ತವೆ. ನಡೆಯಬೇಕು ಎಂಬ ಇಚ್ಛೆಯೇ ನರಗಳ ಮೂಲಕ, ನ್ಯೂರಾನ್‌ಗಳ ಮೂಲಕ ಪ್ರಬಲವಾದ ತರಂಗಗಳನ್ನು ಎಬ್ಬಿಸುತ್ತದೆ. ಆಗ ಮನಸ್ಸು ಹಾಗೂ ದೇಹ ಈ ಕ್ರಿಯೆಯನ್ನು ಆಗು ಮಾಡಿಸಲು ಒಂದರೊಡನೊಂದು ಸಹಕರಿಸುತ್ತವೆ. ಅನೇಕರಿಗೆ ನಡೆಯಬೇಕು ಎನ್ನಿಸುತ್ತದೆ. ಆದರೆ ಈ ಬಯಕೆಯ ತರಂಗಗಳು ನರಗಳ ಮೂಲಕ, ಸ್ನಾಯುಗಳ ಮೂಲಕ ಸಂವಹಿಸಲಾರವು. ದೇಹ, ಮನಸ್ಸಿನ ಈ ಇಚ್ಛೆಯನ್ನು ಸ್ವೀಕರಿಸುವ, ಅದಕ್ಕೆ ಸ್ಪಂದಿಸುವ ಹಾಗಿರಬೇಕು. ಆಗ ಸಮತೋಲನದ, ಸ್ವತಂತ್ರ ನಡಗೆಯನ್ನು ಒಬ್ಬ ನಡೆಯಬಲ್ಲ. ಜನರು ನಡೆಯುವಾಗ ಮುಂದಕ್ಕೆ ಮಾತ್ರ ಹೆಜ್ಜೆಯನ್ನು ಹಾಕಬಲ್ಲರು. ಕಾರಣ, ನಮ್ಮ ಕಾಲುಗಳ ವಿನ್ಯಾಸವೇ ಈ ಮುನ್ನಡೆಗೆ ಸೂಕ್ತವಾಗಿದೆ. ಹಿಮ್ಮುಖವಾಗಿಯಾಗಲೀ, ಪಕ್ಕಕ್ಕಾಗಲೀ ನಡೆಯುವುದು ಸುಲಭವಲ್ಲ ಹಾಗೂ ಅಸುರಕ್ಷಿತ. ಮಾನವ ದೇಹದ ಬೆನ್ನೆಲುಬು ಸಹ ಮುಂದಕ್ಕೆ ಬಾಗಲು ಮಾತ್ರ ವಿನ್ಯಾಸಗೊಂಡಿದೆ.

ಹಾಗೆಯೇ ನಮ್ಮ ಕಣ್ಣುಗಳು ಮುಂದಿರುವ ದೃಶ್ಯವನ್ನು ನೋಡಲು ಮಾತ್ರ ಸೃಷ್ಟಿಗೊಂಡಿವೆ. ನಿಮ್ಮ ಪಕ್ಕದಲ್ಲಿ ಏನಿದೆ ಎಂಬುದನ್ನು ನೋಡಲು ನೀವು ಕತ್ತು ತಿರುಗಿಸಬೇಕಾಗುತ್ತದೆ. ನಿಮ್ಮ ಕಣ್ಣನ್ನು ಪಕ್ಕಕ್ಕೆ ನೀವು ಹೊರಳಿಸಬಹುದು, ಆದರೆ ಸ್ಪಷ್ಟವಾಗಿ ಏನಿದೆ ಎಂಬುದನ್ನು ನಿಮಗೆ ನೋಡಲಾಗುವುದಿಲ್ಲ.

ಮಗು ನಡೆಯಲು ಆರಂಭಿಸಿದಾಗ, ಅದರ ಸರಳತನ ಹೃದಯದೊಳಗೆ ಇಳಿಯುತ್ತದೆ ಹಾಗೂ ಮನಸ್ಸು ಹೊರಗೆ ನೋಡಲು ಆರಂಭಿಸುತ್ತದೆ. ನರಶಾಸ್ತ್ರದ ಪ್ರಕಾರ ಎಲ್ಲ ಮನುಷ್ಯರು ಒಂದೇ ರೀತಿ ನಡೆಯುತ್ತಾರೆ ಎನ್ನಬಹುದಾದರೂ, ಪ್ರತಿಯೊಬ್ಬರ ನಡಿಗೆಯಲ್ಲಿ ಗುರುತಿಸಬಹುದಾದ ವ್ಯತ್ಯಾಸಗಳಿರುತ್ತವೆ. ಅವರ ಪ್ರಕೃತಿಯಲ್ಲಿ ವ್ಯತ್ಯಾಸ ಇರುವುದರಿಂದ, ಜನರು ವೈಯಕ್ತಿಕ ನಡಿಗೆಯ ಶೈಲಿಗಳನ್ನು, ಮಾದರಿಗಳನ್ನು ರೂಪಿಸಿಕೊಂಡಿರುತ್ತಾರೆ. ಅವರ ಆಲೋಚನಾ ರೀತಿಯಲ್ಲಿ ವ್ಯತ್ಯಾಸಗಳಿರುತ್ತವೆ./ ಅವರ ಅಭಿರುಚಿಗಳಲ್ಲಿ, ಪ್ರವೃತ್ತಿಗಳಲ್ಲಿ ವ್ಯತ್ಯಾಸವಿರುತ್ತದೆ. ಆದರೆ ಮುಮ್ಮುಖವಾಗಿ ನಡೆಯುವುದರಲ್ಲಿ ವ್ಯತ್ಯಾಸವಿರುವುದಿಲ್ಲ. ಮಾನವನು ಸೃಷ್ಟಿಗೊಂಡಾಗಿನಿಂದ ಇದೇ ರೀತಿ ನಡೆದುಬಂದಿದೆ. ಜೀವನವೇ ಒಂದು ನಡಿಗೆ. ಈ ಪ್ರಯಾಣದಲ್ಲಿ ನಿದ್ರೆ ಎಂಬುದು ಒಂದು ಆರಾಮ ತಾಣ. ಕೆಲವರು ಸಂತೋಷ ಪಡೆಯಲು ನಡೆಯುತ್ತಾರೆ. ಇನ್ನು ಕೆಲವರು ಹೊರಗೆ ಏನು ನಡೆದಿದೆ ಎಂಬುದನ್ನು ಅರಿಯುವ ಕುತೂಹಲದಿಂದ ನಡೆಯುತ್ತಾರೆ. ಮಿಕ್ಕವರು ಶಾಂತಿಗಾಗಿ, ಆರೋಗ್ಯಕ್ಕಾಗಿ, ನಾವೀನ್ಯಕ್ಕಾಗಿ ನಡೆಯುತ್ತಾರೆ. ನಡೆಯುವುದಕ್ಕೆ ಅನೇಕ ಕಾರಣಗಳಿವೆ. ಪ್ರಜ್ಞಾವಂತ ಜೀವಿಗಳು ಈ ಭೂಮಿಯ ಮೇಲೆ ಅನೇಕ ಕಾರಣಗಳನ್ನಿಟ್ಟುಕೊಂಡು ನಡೆಯುತ್ತಾ ಬಂದಿವೆ.

ನಡೆಯುವುದು ಒಂದು ಆಯನ. ಅದಕ್ಕೊಂದು ಗಮ್ಯ ಸ್ಥಾನವಿರಬೇಕು. ಏತಕ್ಕೆಂದರೆ ನಾವೆಲ್ಲರೂ. ಮೂಲದಿಂದ ನಮ್ಮ ಅಯನವನ್ನು ಆರಂಭಿಸಿದ್ದೇವೆ. ನಮ್ಮ ಗಮ್ಯಸ್ಥಾನವನ್ನುಅರ್ಥ ಮಾಡಿಕೊಳ್ಳದಿದ್ದರೆ ನಮ್ಮ ಆಯನ ವ್ಯರ್ಥ. ಅದು ಸಾಗರದ ಮಧ್ಯೆ ದಟ್ಟವಾದ ಮಂಜಿನ ನಡುವೆ ಅವಿತು ಕುಳಿತಿರುವ ಹಡಗಿನಂತೆ. ಅದು ಆ ಪರಿಸ್ಥಿತಿಯಲ್ಲೂ ಪ್ರಮಾಣ ಮಾಡಬಲ್ಲದು. ಆದರೆ ಅದಕ್ಕೊಂದು ಗುರಿಯಿರುವುದಿಲ್ಲ.

ನಾವು ಮುಮ್ಮುಖವಾಗಿ ಪ್ರಯಾಣ ಮಾಡುವುದರಿಂದ, ನಮ್ಮೊಳಗೆ ನಮ್ಮ ಭವಿಷ್ಯವನ್ನು ತಿಳಿಯುವ ಇಚ್ಛೆ ಕುಳಿತಿದೆ. ಮನುಷ್ಯನ ದೇಹವೇ ಅವನ ಹಿಂದಿನ ಜನ್ಮದ ಫಲ. ಹೀಗಾಗಿ ಈ ದೇಹ ನಮಗೆ ನಮ್ಮ ಭೂತಕಾಲವನ್ನು ನೆನಪಿಸುತ್ತದೆ. ಮನಸ್ಸು ಭವಿಷ್ಯವನ್ನು ತಿಳಿಯಲು ಪ್ರಯತ್ನಿಸುತ್ತದೆ.



ರೈತರ ಬಳಿಗೆ ನೌಕರಶಾಹಿ

$
0
0

ವಾರಕ್ಕೊಮ್ಮೆಯಾದರೂ ತೋಟಗಾರಿಕೆ ಅಧಿಕಾರಿಗಳು ಕಡ್ಡಾಯವಾಗಿ ರೈತರ ತೋಟಗಳಿಗೆ ಭೇಟಿ ನೀಡಬೇಕು ಎಂದು ತೋಟಗಾರಿಕೆ ಇಲಾಖೆ ಆದೇಶಿಸಿದೆ. ಕೇಂದ್ರ ಮತ್ತು ರಾಜ್ಯದ ಯೋಜನೆಗಳು ಮಧ್ಯವರ್ತಿಗಳ ಹಸ್ತಕ್ಷೇಪವಿಲ್ಲದೆ ನೇರವಾಗಿ ರೈತರಿಗೆ ತಲುಪಬೇಕು ಹಾಗೂ ಪಾಲಿಹೌಸ್‌ ನಿರ್ಮಾಣ, ಕೃಷಿ ಹೊಂಡ, ಹನಿ ನೀರಾವರಿಯಂಥ ಕಾರ್ಯ ಯೋಜನೆಗಳ ಪ್ರಗತಿ ಪರಿಶೀಲನೆಯನ್ನು ಖುದ್ದಾಗಿ ಮಾಡಬೇಕು. ಯಾವುದೇ ಕೆಲಸ ಕುಂಠಿತಗೊಂಡಿದ್ದರೆ ಅದಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂಬುದು ಈ ಆದೇಶದ ತಿರುಳು. ಸರಕಾರದ ಯಾವುದೇ ಇಲಾಖೆಗೆ ಹೋದರೂ ಅಧಿಕಾರಿಗಳ ಗೈರು ಹಾಜರಿ ಎದ್ದು ಕಾಣುತ್ತದೆ. ವಿಚಾರಿಸಿದರೆ 'ಸಭೆಗೆ ಹೋಗಿದ್ದಾರೆ' ಇಲ್ಲವೇ 'ಕ್ಷೇತ್ರ ಭೇಟಿಗೆ ಹೋಗಿದ್ದಾರೆ'ಎನ್ನುವ ಉತ್ತರಗಳು ದೊರೆಯುತ್ತವೆ. ಆದರೆ ಗ್ರಾಮಗಳಲ್ಲಿ ರೈತರ ಕುಂದುಕೊರತೆಗಳನ್ನು ಸಹಾನುಭೂತಿಯಿಂದ ವಿಚಾರಿಸುವವರೇ ಇರುವುದಿಲ್ಲ. ಬಜೆಟ್‌ನಲ್ಲಿ ಕೃಷಿ ಅಭಿವೃದ್ಧಿಗಾಗಿ ಕೋಟ್ಯಂತರ ರೂ. ಮೀಸಲಿಡಲಾಗಿರುತ್ತದೆ. ಅವರ ಜೀವನವನ್ನು ಹಸನುಗೊಳಿಸಲು ಹತ್ತಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರಲಾಗುತ್ತದೆ.
ಮೇಲ್ನೋಟಕ್ಕೆ ಇವು ಅದ್ಭುತ ಎಂದೆನಿಸುತ್ತವೆ.ಇವೆಲ್ಲ ಜಾರಿಯಾದರೆ ರೈತರ ಬಾಳು ಬಂಗಾರವಾಗುತ್ತದೆ ಎನ್ನುವ ಭಾವ ಮೂಡುತ್ತದೆ. ಆದರೆ ಅಂಕಿ ಅಂಶಗಳಲ್ಲಿ ದೊಡ್ಡ ಸಾಧನೆಯಾಗಿ ಕಣ್ಣು ಕೋರೈಸುವಂತೆ ಕಂಡಿದ್ದು ನಿಜದಲ್ಲಿ ನಿಸ್ತೇಜವಾಗಿರುತ್ತದೆ. ಯೋಜನೆ ಮತ್ತು ಫಲಾನುಭವಿಗಳ ನಡುವೆ ಅಗಾಧ ಅಂತರವಿರುತ್ತದೆ. ಈ ಅಂತರವನ್ನು ಹೋಗಲಾಡಿಸಿ, ರೈತರು ಮತ್ತು ಜನಪ್ರತಿನಿಧಿಗಳ ನಡುವೆ ಸೇತುವೆಯಂತೆ ಕೆಲಸ ಮಾಡಬೇಕಾದ ಹೊಣೆ ಅಧಿಕಾರಶಾಹಿಗಿರುತ್ತದೆ. ಆದರೆ ನಮ್ಮಲ್ಲಿ ಅಧಿಕಾರಶಾಹಿ ಜನಸ್ನೇಹಿಯಾಗಿ ಕೆಲಸ ಮಾಡುವ ಸಂಸ್ಕೃತಿ ಇನ್ನೂ ಆಳವಾಗಿ ಬೇರುಬಿಟ್ಟಿಲ್ಲ. ಅವರ ಹೊಣೆಗಾರಿಕೆಯನ್ನು ಖಚಿತವಾಗಿ ಗುರುತಿಸುವ ಮತ್ತು ಅದನ್ನು ಪರಿಣಾಮಕಾರಿಯಾಗಿ ನಿರ್ವಹಿಸದೇ ಇದ್ದರೆ ಕಠಿಣ ದಂಡನೆಗೆ ಒಳಪಡಿಸುವ ಯಾವುದೇ ವ್ಯವಸ್ಥೆ ನಮ್ಮಲ್ಲಿಲ್ಲ. ಆದರೆ ಇತ್ತೀಚೆಗೆ ಕೇಂದ್ರವೂ ಸೇರಿದಂತೆ ಹಲವು ರಾಜ್ಯಗಳಲ್ಲಿ ಸರಕಾರಿ ಅಧಿಕಾರಿಗಳಿಗೆ ಹೊಣೆಗಾರಿಕೆಯನ್ನು ಗೊತ್ತುಪಡಿಸುವ ಅದರಲ್ಲಿ ವಿಫಲರಾದರೆ ಅವರನ್ನು ಮನೆಗೆ ಕಳುಹಿಸುವ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ; ಅಧಿಕಾರಿಗಳ ಕೌಶಲ ಮತ್ತು ದಕ್ಷತೆಯನ್ನು ಅವರ ಬಡ್ತಿ, ಉದ್ಯೋಗದ ಅಳಿವು ಉಳಿವಿಗೆ ಜೋಡಿಸುವ ಪ್ರಯತ್ನಗಳು ನಡೆಯುತ್ತಿವೆ.
ಇಂಥ ಸುಧಾರಣೆಗಳು ಎಂದೋ ಆಗಬೇಕಿತ್ತು. ಆದರೆ ಇದೀಗ ಅವು ನಿಧಾನಕ್ಕೆ ಚಾಲನೆಗೊಳ್ಳುತ್ತಿವೆ. ಇದರ ಭಾಗವಾಗಿ ತೋಟಗಾರಿಕೆ ಇಲಾಖೆಯಲ್ಲಿ 'ಸುಧಾರಣೆ ಪರ್ವ' ಆರಂಭವಾಗಿದೆ. ನಿರ್ದೇಶಕರು, ಜಂಟಿ ನಿರ್ದೇಶಕರು, ಸಹಾಯಕ ತೋಟಗಾರಿಕೆ ಅಧಿಕಾರಿಗಳು ತೋಟಗಳಿಗೆ ಭೇಟಿ ನೀಡುವುದಷ್ಟೇ ಅಲ್ಲ; ಆ ಕುರಿತು ಛಾಯಾಚಿತ್ರಗಳನ್ನೂ ಅಪ್‌ಲೋಡ್‌ ಮಾಡಬೇಕೆಂದು ಆದೇಶಿಸಲಾಗಿದೆ. ಇದರಿಂದ ಯಾರೋ ಕೆಳ ಹಂತದ ಸಿಬ್ಬಂದಿಯನ್ನು ಹಳ್ಳಿಗಳಿಗೆ ಕಳುಹಿಸಿ ಆ ಕೆಲಸ ತಾವೇ ಮಾಡಿದ್ದು ಎಂದು ಹೇಳಿಕೊಳ್ಳುವ ಪ್ರವೃತ್ತಿಗೆ ಕಡಿವಾಣ ಬೀಳುತ್ತದೆ.

ಸರಕಾರಿ ಯೋಜನೆಗಳ ಜಾರಿ ಪರಿಶೀಲನೆಯಲ್ಲದೆ ರೈತರ ಇತರ ಕುಂದುಕೊರತೆಗಳನ್ನು ಕೂಡ ಅಧಿಕಾರಿಗಳು ಅರಿಯಬೇಕು. ಅದನ್ನು ಸಂಬಂಧಿಸಿದವರ ಗಮನಕ್ಕೆ ತರಬೇಕು. ಅವುಗಳನ್ನು ಪರಿಶೀಲಿಸಿ, ಬಗೆಹರಿಸುವ ಕಾರ್ಯಗಳು ಕೂಡ ಕ್ರಮಬದ್ಧವಾಗಿ ನಡೆಯಬೇಕು. ಇತ್ತೀಚೆಗಂತೂ ರೈತರ ಬೆಳೆಗೆ ಯಾವ ಕಾಲದಲ್ಲಿ ಯಾವ ರೋಗ ಬರುತ್ತದೆ ಎಂದು ಊಹೆ ಕೂಡ ಮಾಡಲಾಗುವುದಿಲ್ಲ.ಮಾಧ್ಯಮಗಳಲ್ಲಿ ಅವು ಪ್ರಚಾರವಾದಾಗ ಮಾತ್ರ ಇಲಾಖೆ, ಕೃಷಿ ತಜ್ಞರು, ವಿಶ್ವವಿದ್ಯಾಲಯಗಳು ಎಚ್ಚೆತ್ತುಕೊಳ್ಳುವ ಪರಿಸ್ಥಿತಿ ಇದೆ. ರೈತರ ಬಳಿ ಹೋಗುವ ಅಧಿಕಾರಿಗಳು ಸಂವೇದನಾಶೀಲರಾಗಿದ್ದರೆ ಕೃಷಿ ಕಂಟಕಗಳನ್ನು ಬಹುಬೇಗ ಅರಿಯಬಹುದು. ಕೃಷಿ ಸಮಸ್ಯೆಗಳು ಯಾರೋ ಒಬ್ಬರಿಂದ ಬಗೆಹರಿಸಲು ಆಗುವುದಿಲ್ಲ. ಇಲ್ಲಿ ಅಧಿಕಾರಿಗಳು, ತಜ್ಞರು, ಯೋಜನಾ ನಿರ್ವಾಹಕರು ಮತ್ತು ನೀತಿ ನಿರೂಪಕರ ಸಾಂಘಿಕ ಪ್ರಯತ್ನ ಆಗಬೇಕಾಗುತ್ತದೆ. ತೋಟಗಾರಿಕೆ ಇಲಾಖೆ ಇಂಥ ಕಾರ್ಯಜಾಲಗಳನ್ನು ರೂಪಿಸಿಕೊಳ್ಳಬೇಕು. ಎಲ್ಲ ಇಲಾಖೆಗಳು ಕೂಡ ಅಧಿಕಾರಿಗಳು ಜನರ ಬಳಿ ಸಾಗುವಂತೆ ನೋಡಿಕೊಳ್ಳಬೇಕು. ಇದು ಪ್ರಜಾಪ್ರಭುತ್ವವನ್ನು ಖಂಡಿತ ಬಲಗೊಳಿಸುವ ಕಾರ್ಯ ಎಂಬುದನ್ನು ಎಲ್ಲರೂ ಅರಿಯಬೇಕು.


ವಾಹನ ಪ್ರೇಮಿಗಳನ್ನು ರಂಜಿಸಿದ 2018 ಎಲೈಟ್ ಐ20

$
0
0

ಹೊಸದಿಲ್ಲಿ: ಗ್ರೇಟರ್ ನೋಯ್ಡಾದಲ್ಲಿ ಸಾಗುತ್ತಿರುವ 2018 ಆಟೋ ಎಕ್ಸ್‌ಪೊದಲ್ಲಿ ದೇಶದ ಎರಡನೇ ಅತಿ ದೊಡ್ಡ ವಾಹನ ತಯಾರಿಕಾ ಸಂಸ್ಥೆಯಾಗಿರುವ ಹ್ಯುಂಡೈ ಮೋಟಾರ್ ಇಂಡಿಯಾ ಸಂಸ್ಥೆಯು ಅತಿ ನೂತನ 2018 ಎಲೈಟ್ ಐ20 ಕಾರನ್ನು ಅನಾವರಣಗೊಳಿಸಿದೆ.

ಪ್ರೀಮಿಯಂ ಹ್ಯಾಚ್‌ಬ್ಯಾಕ್ ಕಾರು ವಿಭಾಗದಲ್ಲಿ ತನ್ನದೇ ಆದ ವಿಶಿಷ್ಟ ಛಾಪು ಮೂಡಿಸಿರುವ ಎಲೈಟ್ ಐ20 ವಾಹನ ಪ್ರೇಮಿಗಳಲ್ಲಿ ಹೆಚ್ಚಿನ ಆಕರ್ಷಣೆಗೆ ಪಾತ್ರವಾಗಿದೆ.

ಎಲೈಟ್ ಐ20 ಪೆಟ್ರೋಲ್ ಮಾದರಿಯು 5.34 ಲಕ್ಷ ರೂ.ಗಳಿಂದ 7.9 ಲಕ್ಷ ರೂ.ಗಳ ವರೆಗೆ ದುಬಾರಿಯೆನಿಸಲಿದೆ. ಹಾಗೆಯೇ ಡೀಸೆಲ್ ಆವೃತ್ತಿಯು 6.7 ಲಕ್ಷ ರೂ.ಗಳಿಂದ 9.15 ಲಕ್ಷ ರೂ.ಗಳ ವರೆಗೆ ಬೆಲೆ ಬಾಳಲಿದೆ.

ನೂತನ ಎಲೈಟ್ ಐ20 ಕಾರಿನಲ್ಲಿ 1.4 ಯು2 ಸಿಆರ್‌ಡಿ ಡೀಸೆಲ್ ಹಾಗೂ 1.2 ಕಪ್ಪ ಡ್ಯುಯಲ್ ವಿಟಿವಿಟಿ ಪೆಟ್ರೋಲ್ ಎಂಜಿನ್‌ಗಳನ್ನು ಆಳವಡಿಸಲಾಗುವುದು. ಇವೆರಡು ಅನುಕ್ರಮವಾಗಿ ಆರು ಸ್ಪೀಡ್ ಹಾಗೂ ಐದು ಸ್ಪೀಡ್ ಗೇರ್ ಬಾಕ್ಸ್‌ಗಳನ್ನು ಪಡೆಯಲಿದೆ.

ಹೊಸ ಲುಕ್‌ನಲ್ಲಿ ನಿಮ್ಮ ಮೆಚ್ಚಿನ ಕ್ರೀಡಾ ಬೈಕ್ ಎಂಟ್ರಿ

$
0
0

ಹೊಸದಿಲ್ಲಿ: ಎಂಟ್ರಿ ಲೆವೆಲ್ ಕ್ರೀಡಾ ಬೈಕ್ ವಿಭಾಗದಲ್ಲಿ ತಲ್ಲಣವನ್ನೇ ಮೂಡಿಸಿರುವ ಯಮಹಾ ಮೋಟಾರ್ ಇಂಡಿಯಾ ಸಂಸ್ಥೆಯು, ತನ್ನ ಜನಪ್ರಿಯ ವೈಝಡ್‌ಎಫ್-ಆರ್15 ಆವೃತ್ತಿಯ ನೂತನ 2018 ಮಾದರಿಯನ್ನು ಬಿಡುಗಡೆಗೊಳಿಸಿದೆ.

ಬೆಲೆ ಮಾಹಿತಿ: 1.25 ಲಕ್ಷ ರೂ. (ಎಕ್ಸ್ ಶೋ ರೂಂ ದಿಲ್ಲಿ)

ಬಣ್ಣಗಳು: ನೀಲಿ ಮತ್ತು ಕಪ್ಪು.

ಮೂರನೇ ತಲೆಮಾರಿನ ಯಮಹಾ 2018 ವೈಝಡ್‌ಎಫ್-ಆರ್15 ವಿ3.0 (YZF-R15 V3.0) ಮಾದರಿಯಲ್ಲಿ ಆಕ್ರಮಣಕಾರಿ ವಿನ್ಯಾಸ ನೀತಿಯನ್ನು ಅನುಸರಿಸಲಾಗಿದೆ.

ಹಿಂದಿನ ಮಾದರಿಗೆ ಹೋಲಿಸಿದಾಗ ಸಂಪೂರ್ಣ ವಿಭಿನ್ನವಾಗಿ ಗುರುತಿಸಲಾಗಿರುವ ನೂತನ ಯಮಹಾ ಆರ್15, ಫುಲ್ ಫೇರ್ಡ್ ವಿನ್ಯಾಸವನ್ನು ಮೈಗೂಡಿಸಿಕೊಂಡಿದೆ.

ಐಕಾನಿಕ್ ಆರ್25 ಮಾದರಿಯಿಂದ ಪ್ರೇರಣೆ ಪಡೆದು ಇದರ ವಿನ್ಯಾಸವನ್ನು ರಚಿಸಲಾಗಿದೆ. ಶಕ್ತಿಶಾಲಿ ಟ್ಯಾಂಕ್, ರೇಸಿಂಗ್ ಮೆಶಿನ್, ಏರೋಡೈನಾಮಿಕ್ ಫೇರಿಂಗ್ ಜತೆಗೆ YZF-R1 ಸೂಪರ್ ಬೈಕ್‌ನಿಂದಲೂ ಕೆಲವೊಂದು ವಿನ್ಯಾಸವನ್ನು ಆಮದು ಮಾಡಲಾಗಿದೆ.

ಎಂಜಿನ್:
155 ಸಿಸಿ, ಸಿಂಗಲ್ ಸಿಲಿಂಡರ್, ಲಿಕ್ವಿಡ್ ಕೂಲ್ಡ್,
ವೆರಿಯಬಲ್ ವಾಲ್ವ್ ಆಕ್ಚುವೇಷನ್ (Variable Valve Actuation),
19.3PS ಪವರ್, 14.7Nm ತಿರುಗುಬಲ
ಫ್ಯೂಯಲ್ ಇಂಜೆಕ್ಟಡ್ ಎಂಜಿನ್,
ಆರು ಸ್ಪೀಡ್ ಗೇರ್ ಬಾಕ್ಸ್,

ಎಲ್‌ಇಡಿ ಹೆಡ್‌ಲ್ಯಾಂಪ್, ಎಲ್ಲ ಹೊಸತನದ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಸಹ ಪ್ರಮುಖ ವೈಶಿಷ್ಟ್ಯವಾಗಿದೆ. ಹಾಗೆಯೇ ಫ್ರಂಟ್ ಡಿಸ್ಕ್ ಬ್ರೇಕ್ ಸೌಲಭ್ಯವನ್ನು ಕೊಡಲಾಗಿದೆ. ಹಾಗಿದ್ದರೂ ಎಬಿಎಸ್ ಅಭಾವ ಕಾಡಲಿದೆ.

ಅಚ್ಚರಿಯ ಬೆಲೆಗಳಲ್ಲಿ ಮಾರುತಿ ಸ್ವಿಫ್ಟ್ ಭರ್ಜರಿ ಎಂಟ್ರಿ

$
0
0

ಹೊಸದಿಲ್ಲಿ: ದೇಶದ ಅತಿ ದೊಡ್ಡ ವಾಹನ ಪ್ರದರ್ಶನ ಮೇಳವಾಗಿರುವ 2018 ಆಟೋ ಎಕ್ಸ್‌ಪೊದಲ್ಲಿ ಅತಿ ನೂತನ ಸ್ವಿಫ್ಟ್ ಕಾರಿನ ಪ್ರವೇಶವಾಗಿದೆ.

ಆದರೆ ಎಲ್ಲರನ್ನು ಅಚ್ಚರಿಗೊಳಿಸುವ ರೀತಿಯಲ್ಲಿ 4.99 ಲಕ್ಷ ರೂ.ಗಳ ಪರಿಚಯಾತ್ಮಕ ಬೆಲೆಯಲ್ಲಿ ಸ್ವಿಫ್ಟ್ ಭರ್ಜರಿ ಬಿಡುಗಡೆ ಕಂಡಿದೆ. ಹಾಗೆಯೇ ಟಾಂಪ್ ಎಂಡ್ ವೆರಿಯಂಟ್ 7.96 ಲಕ್ಷ ರೂ.ಗಳಷ್ಟು ದುಬಾರಿಯೆನಸಲಿದೆ.

ಸಂಪೂರ್ಣ ಬೆಲೆ ಮಾಹಿತಿ (ಎಕ್ಸ್ ಶೋ ರೂಂ)

ಪೆಟ್ರೋಲ್ ಮ್ಯಾನುವಲ್
ಎಲ್‌ಎಕ್ಸ್‌ಐ: 4.99 ಲಕ್ಷ ರೂ.
ವಿಎಕ್ಸ್‌ಐ: 5.87 ಲಕ್ಷ ರೂ.
ಝಡ್ಎಕ್ಸ್‌ಐ: 6.49 ಲಕ್ಷ ರೂ.
ಝಡ್ಎಕ್ಸ್‌ಐ ಪ್ಲಸ್: 7.29 ಲಕ್ಷ ರೂ.

ಪೆಟ್ರೋಲ್ ಆಟೋಮ್ಯಾಟಿಕ್ (ಎಜಿಎಸ್)
ವಿಎಕ್ಸ್‌ಐ: 6.34 ಲಕ್ಷ ರೂ.
ಝಡ್ಎಕ್ಸ್‌ಐ: 6.96 ಲಕ್ಷ ರೂ.

ಡೀಸೆಲ್ ಮ್ಯಾನುವಲ್
ಎಲ್‌ಡಿಐ: 5.99 ಲಕ್ಷ ರೂ.
ವಿಡಿಐ: 6.87 ಲಕ್ಷ ರೂ.
ಝಡ್‌ಡಿಐ: 7.49 ಲಕ್ಷ ರೂ.
ಝಡ್‌ಡಿಐ ಪ್ಲಸ್: 8.29 ಲಕ್ಷ ರೂ.

ಡೀಸೆಲ್ ಆಟೋಮ್ಯಾಟಿಕ್ (ಎಜಿಎಸ್)
ವಿಡಿಐ: 7.34 ಲಕ್ಷ ರೂ.
ಝಡ್‌ಡಿಐ: 7.96 ಲಕ್ಷ ರೂ.

ಮೂರನೇ ತಲೆಮಾರಿನ ಹೊಸ ಹೊಚ್ಚ ಸ್ವಫ್ಟಿ ಕಾರಿನ ಬುಕ್ಕಿಂಗ್ ಪ್ರಕ್ರಿಯೆಯು ಜನವರಿ ತಿಂಗಳಿನಿಂದಲೇ ಆರಂಭವಾಗಿತ್ತು. ಅಲ್ಲದೆ ಈಗಗಾಲೇ 40,000ಗಿಂತಲೂ ಹೆಚ್ಚು ಮುಂಗಡ ಬುಕ್ಕಿಂಗ್‌ಗಳು ದಾಖಲಾಗಿದೆ.

ಎಂಜಿನ್:
ನೂತನ ಸ್ವಿಫ್ಟ್ ಕಾರು 1.2 ಲೀಟರ್ ಕೆ ಸಿರೀಸ್ ಪೆಟ್ರೋಲ್ ಹಾಗೂ 1.3 ಲೀಟರ್ ಡಿಡಿಐಎಸ್ ಡೀಸೆಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದೆ.

2005ನೇ ಇಸವಿಯಲ್ಲಿ ಮೊದಲ ಬಾರಿಗೆ ದೇಶಕ್ಕೆ ಎಂಟ್ರಿ ಕೊಟ್ಟಿರುವ ಸ್ವಿಫ್ಟ್ ಇದುವರೆಗೆ 18 ಲಕ್ಷಕ್ಕೂ ಹೆಚ್ಚು ಯುನಿಟ್‌ಗಳ ಮಾರಾಟವನ್ನು ಕಂಡಿದೆ.

ದೇಶದಲ್ಲಿ ಅತಿ ಹೆಚ್ಚು ಮಾರಾಟವಾಗುವ ಅಗ್ರ ಐದು ಕಾರುಗಳಲ್ಲಿ ಗುರುತಿಸಿಕೊಳ್ಳುವ ಸ್ವಿಫ್ಟ್, ದೇಶದ ಸರ್ವಕಾಲಿಕ ಶ್ರೇಷ್ಠ ಹ್ಯಾಚ್‌ಬ್ಯಾಕ್ ಕಾರುಗಳಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಂಡಿದೆ.

ಭಾರತದ ಪ್ರಪ್ರಥಮ ಎಲೆಕ್ಟ್ರಿಕ್ ಸೂಪರ್ ಬೈಕ್ ಅನಾವರಣ

$
0
0

ಹೊಸದಿಲ್ಲಿ: ರಾಷ್ಟ್ರ ರಾಜಧಾನಿಯಲ್ಲಿ ಸಾಗುತ್ತಿರುವ ಅತಿ ದೊಡ್ಡ ವಾಹನ ಪ್ರದರ್ಶನ ಮೇಳ 2018 ಆಟೋ ಎಕ್ಸ್‌ಪೊದಲ್ಲಿ ದೇಶದ ಪ್ರಪ್ರಥಮ ಎಲೆಕ್ಟ್ರಿಕ್ ಸೂಪರ್ ಬೈಕ್ ಆಗಿರುವ ಎಂಫ್ಲಕ್ಸ್ ಒನ್ ಭರ್ಜರಿ ಅನಾವರಣಗೊಂಡಿದೆ.

ಬೆಂಗಳೂರು ತಳಹದಿಯ ನೂತನ ವಾಹನ ಸಂಸ್ಥೆಯಾಗಿರುವ ಎಂಫ್ಲಕ್ಸ್ ಮೋಟಾರ್ಸ್ ಎಂಫ್ಲಕ್ಸ್ ಒನ್ ಮಾರುಕಟ್ಟೆಗೆ ಪರಿಚಯಿಸಿದ್ದು, ಆರು ಲಕ್ಷ ರೂ.ಗಳಷ್ಟು ಬೆಲೆ ಬಾಳಲಿದೆ.

ನಿರ್ವಹಣೆಗೆ ಅನುಗುಣವಾಗಿ ಮೂರು ವಿಧಗಳಲ್ಲಿ ಲಭ್ಯವಾಗಲಿದೆ ಎಂದು ಎಂಫ್ಲಕ್ಸ್ ಪ್ರಕಟಣೆಯಲ್ಲಿ ತಿಳಿಸಿದೆ. ಅಂದರೆ ಗರಿಷ್ಠ ನಿರ್ವಹಣೆ ಎಲೆಕ್ಟ್ರಿಕ್ ಬೈಕ್ 11 ಲಕ್ಷ ರೂ.ಗಳಷ್ಟು ದುಬಾರಿಯೆನಿಸಲಿದೆ.

ಸ್ಯಾಮ್‌ಸಂಗ್‌ನ 9.7 kWh ಲಿಥಿಯಂ ಇಯಾನ್ (60kW motor) ಬ್ಯಾಟರಿಯಂದ ನಿಯಂತ್ರಿಸ್ಪಡಲಿದೆ. ಅಷ್ಟೇ ಯಾಕೆ ಕೇವಲ ಮೂರು ಸಕೆಂಡುಗಳಲ್ಲೇ ಗಂಟೆಗೆ 100 ಕೀ.ಮೀ. ವೇಗವರ್ಧಿಸುವ ಸಾಮರ್ಥ್ಯವನ್ನು ಹೊಂದಿದೆ. ಹಾಗೆಯೇ ಗಂಟೆಗೆ ಗರಿಷ್ಠ 200 ಕೀ.ಮೀ. ವೇಗದಲ್ಲಿ ಸಾಗಲಿದೆ.

ಬ್ರೆಂಬೊ ಬ್ರೇಕ್ಸ್ ಜತೆ ಡ್ಯುಯಲ್ ಚಾನೆಲ್ ಎಬಿಎಸ್, ಸಿಂಗಲ್ ಸೈಡಡ್ ಸ್ವಿಂಗಾರ್ಮ್, ಓಹ್ಲಿನ್ಸ್ ಸಸ್ಪೆನ್ಷನ್ ಹಾಗೂ ಹಗುರ ಭಾರದ ಅಲಾಯ್ ಚಕ್ರಗಳನ್ನು ಪಡೆಯಲಿದೆ.

ಪ್ರಸ್ತುತ ಫುಲ್ ಫೇರ್ಡ್ ಮಾದರಿಯನ್ನು ಪರಿಚಯಿಸಲಾಗಿದ್ದು, ನಿಕಟ ಭವಿಷ್ಯದಲ್ಲೇ ನೆಕ್ಡ್ ವರ್ಷನ್ ಬಿಡುಗಡೆ ಮಾಡುವ ಯೋಜನೆ ಹೊಂದಲಾಗಿದೆ.

ಮನಸೆಳೆದ ಮಹೀಂದ್ರ ಸ್ಟಿಂಗರ್ ಓಪನ್ ಟಾಪ್ ಎಸ್‌ಯುವಿ

$
0
0

ಹೊಸದಿಲ್ಲಿ: ದಿಲ್ಲಿಯಲ್ಲಿ ಸಾಗುತ್ತಿರುವ 2018 ಆಟೋ ಎಕ್ಸ್‌ಪೊದಲ್ಲಿ ದೇಶದ ಮುಂಚೂಣಿಯ ಉಪಯುಕ್ತ ವಾಹನಗಳ ನಿರ್ಮಾಣ ಸಂಸ್ಥೆಯಾಗಿರುವ ಮಹೀಂದ್ರ ಆ್ಯಂಡ್ ಮಹೀಂದ್ರ, ತನ್ನ ಜನಪ್ರಿಯ ಟಿಯುವಿ300 ಮಾದರಿಯ ಹೊಸತಾದ ಕನ್ವರ್ಟಿಬಲ್ ಮಾದರಿ 'ಟಿಯುವಿ ಸ್ಟಿಂಗರ್' ಕ್ಯಾನ್ಸೆಪ್ಟನ್ನು ಅನಾವರಣಗೊಳಿಸಿದೆ.

ಟಿಯುವಿ300 ಕಾಂಪಾಕ್ಟ್ ಕ್ರೀಡಾ ಬಳಕೆಯ ವಾಹನದ ತಳಹದಿಯಲ್ಲಿ ಟಿಯುವಿ300 ಸ್ಟಿಂಗರ್ ಓಪನ್ ಟಾಪ್ ಕಾರನ್ನು ನಿರ್ಮಿಸಲಾಗಿದೆ.

ಪ್ರಮುಖವಾಗಿಯೂ ಸಕ್ರಿಯ ಜೀವನಶೈಲಿಯನ್ನು ಇಷ್ಟಪಡುವ ಯುವ ಜನಾಂಗವನ್ನು ಗುರಿಯಾಗಿರಿಸಿಕೊಂಡು ಇದನ್ನು ರಚಿಸಲಾಗಿದೆ.

ಪ್ರೀಮಿಯಂ ಎಸ್‌ಯುವಿ ಹಾಗೂ ಓಪನ್ ಟಾಪ್ ಜೀಪ್ ಮಿಶ್ರಣವನ್ನು ಟಿವಿಯು ಸ್ಟಿಂಗರ್ ಕನ್ವರ್ಟಿಬಲ್ ಕಾರು ಪಡೆದಿದೆ. ಕಾರಿನ ಹೊರಗೂ ಒಳಗೂ ಸ್ಟೈವಿಷ್ ವಿನ್ಯಾಸ ಪ್ರಮುಖ ಆಕರ್ಷಣೆಯಾಗಿದೆ.

ಸಂಸ್ಥೆಯ ಜನಪ್ರಿಯ ಎಂಹಾಕ್ ಡೀಸೆಲ್ ಎಂಜಿನ್ ಇದರಲ್ಲಿ ಆಳವಡಿಸಲಾಗಿದ್ದು, 320 ಎನ್‌ಎಂ ತಿರುಗುಬಲದಲ್ಲಿ 140 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಹಾಗೆಯೇ ಎಲ್‌ಇಡಿ ಹೆಡ್‌ಲ್ಯಾಂಪ್‌ಗಳಂತಹ ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಪಡೆಯಲಿದೆ.

ಬೈಕ್ ಪ್ರೇಮಿಗಳಿಗಾಗಿ ಹೋಂಡಾ ಎಕ್ಸ್-ಬ್ಲೇಡ್ 160 ಸಿಸಿ ಬೈಕ್

$
0
0

ಹೊಸದಿಲ್ಲಿ: ಪ್ರತಿಷ್ಠಿತ 2018 ಆಟೋ ಎಕ್ಸ್‌ಪೊದಲ್ಲಿ ದೇಶದ ಎರಡನೇ ಅತಿ ದೊಡ್ಡ ವಾಹನ ನಿರ್ಮಾಣ ಸಂಸ್ಥೆಯಾಗಿರುವ ಹೋಂಡಾ ಮೋಟಾರ್‌ಸೈಕಲ್ ಆ್ಯಂಡ್ ಸ್ಕೂಟರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯು ಅತಿ ನೂತನ ಎಕ್ಸ್-ಬ್ರೇಡ್ 160 ಸಿಸಿ ಬೈಕನ್ನು ಅನಾವರಣಗೊಳಿಸಿದೆ.

ಈ ಮೂಲಕ 160 ಸಿಸಿ ವಿಭಾಗದಲ್ಲಿ ನೂತನ ಎಕ್ಸ್-ಬ್ಲೇಡ್ ಮತ್ತಷ್ಟು ಪೈಪೋಟಿಗೆ ಎಡೆ ಮಾಡಿಕೊಟ್ಟಿದೆ.

ನೂತನ ಎಕ್ಸ್-ಬ್ಲೇಡ್ 160 ಸಿಸಿ ಬೈಕ್, ಆಕ್ರಮಣಕಾರಿ ವಿನ್ಯಾಸದೊಂದಿಗೆ ಎಲ್‌ಇಡಿ ಹೆಡ್‌ಲೈಟ್ ವ್ಯವಸ್ಥೆಯನ್ನು ಪಡೆದಿದೆ.

ಕ್ರೀಡಾತ್ಮಕ ವಿನ್ಯಾಸ, ಸಂಪೂರ್ಣ ಎಲ್‌ಇಡಿ ಟೈಲ್ ಲ್ಯಾಂಪ್, ಶಕ್ತಿಯುತ ಗ್ರಾಫಿಕ್ಸ್, ಸ್ಟೈಲಿಷ್ ಅಲಾಯ್ ಚಕ್ರಗಳು, ಲಿಂಕ್ ಟೈಪ್ ಗೇರ್ ಶಿಫ್ಟರ್ ಪ್ರಮುಖ ವೈಶಿಷ್ಟ್ಯಗಳಾಗಿವೆ.

ಎಂಜಿನ್:
162.71 ಸಿಸಿ ಎಚ್‌ಇಟಿ (ಹೋಂಡಾ ಇಕೊ ಟೆಕ್ನಾಲಜಿ) ಎಂಜಿನ್‌ನಿಂದ ನಿಯಂತ್ರಿಸಲ್ಪಡುವ ನೂತನ ಹೋಂಡಾ ಎಕ್ಸ್-ಬ್ಲೇಡ್ 13.9 ಎನ್‌ಎಂ ತಿರುಗುಬಲದಲ್ಲಿ 14.12 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

ಎಲ್ಲ ಹೊಸತಾದ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಲಗತ್ತಿಸಲಾಗಿದೆ. 1,347ಎಂಎಂ ಚಕ್ರಾಂತರವನ್ನು 130 ಸೆಕ್ಷನ್ ಟ್ಯೂಬ್‌ಲೆಸ್ ಚಕ್ರಗಳು ಇರಲಿದೆ.

6 ಆಕರ್ಷಕ ಬಣ್ಣಗಳು: ಮ್ಯಾಟ್ ಮಾರ್ವೆಲ್ ಬ್ಲೂ ಮೆಟ್ಯಾಲಿಕ್, ಮ್ಯಾಟ್ ಫ್ರಾಜನ್ ಸಿಲ್ವರ್ ಮೆಟ್ಯಾಲಿಕ್, ಪಿಯರ್ಲ್ ಸ್ಪಾರ್ಟನ್ ರೆಡ್, ಪಿಯರ್ಲ್ ಇಗ್ನೆಯಸ್ ಬ್ಲ್ಯಾಕ್, ಮ್ಯಾಟ್ ಮಾರ್ಷಲ್ ಮತ್ತು ಗ್ರಿನ್ ಮೆಟ್ಯಾಲಿಕ್.

2018 ಮಾರ್ಚ್ ವೇಳೆಗೆ ಮಾರುಕಟ್ಟೆ ಪ್ರವೇಶಿಸುವ ನಿರೀಕ್ಷೆಯಿರುವ ನೂತನ ಎಕ್ಸ್‌-ಬ್ರೇಡ್ ಬೆಲೆ ವಿವರಗಳು ಬಿಡುಗಡೆ ವೇಳೆ ತಿಳಿದು ಬರಲಿದೆ.


ಆಟೋ ಎಕ್ಸ್‌ಪೊ ರಂಜಿಸಿದ ಮಾರುತಿಯ ಚೊಚ್ಚಲ ಎಲೆಕ್ಟ್ರಿಕ್ ಕಾರು

$
0
0

ಹೊಸದಿಲ್ಲಿ: ನಿಕಟ ಭವಿಷ್ಯದಲ್ಲೇ ಚೊಚ್ಚಲ ವಿದ್ಯುತ್ ಚಾಲಿತ ಕಾರು ಬಿಡುಗಡೆ ಮಾಡುವ ಬಗ್ಗೆ ದೇಶದ ಅತಿ ದೊಡ್ಡ ಪ್ರಯಾಣಿಕ ಕಾರು ಸಂಸ್ಥೆಯಾಗಿರುವ ಮಾರುತಿ ಸುಜುಕಿ ಮಾಹಿತಿ ನೀಡಿತ್ತು.

ಇದೀಗ ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ಸಾಗುತ್ತಿರುವ ಪ್ರತಿಷ್ಠಿತ 2018 ಆಟೋ ಎಕ್ಸ್‌ಪೊ ವಾಹನ ಪ್ರದರ್ಶನ ಮೇಳದಲ್ಲಿ ಅತಿ ನೂತನ ಇ-ಸರ್ವೈವರ್ ಎಲೆಕ್ಟ್ರಿಕ್ ವಾಹನದ ಕ್ಯಾನ್ಸೆಪ್ಟನ್ನು ಅನಾವರಣಗೊಳಿಸಿದೆ.

ಈ ಸುಸ್ಥಿರ ಪರಿಸರಕ್ಕಾಗಿನ ತನ್ನ ಬದ್ಧತೆಯನ್ನು ಮಾರುತಿ ಸುಜುಕಿ ವ್ಯಕ್ತಪಡಿಸಿದೆ. ನೂತನ ಸುಜುಕಿ ಇ-ಸರ್ವೈವರ್ ಕಾರು ಎರಡು ಸೀಟುಗಳ ಓಪನ್ ಟಾಪ್ ಕ್ರೀಡಾ ಬಳಕೆಯ ವಿದ್ಯುತ್ ಚಾಲಿತ ವಾಹನವಾಗಿದೆ.

ಮಾರುತಿಯ ನೂತನ ಭವಿಷ್ಯತ್ತಿನ ಕಾನ್ಸೆಪ್ಟ್, ಅಂಗಸಂಸ್ಥೆ ಸುಜುಕಿಯ 'ಫೇಸ್' (F.A.C.E - Four-Wheel Drive, Autonomous, Connected & Electric) ಭಾಗವಾಗಿರಲಿದೆ.

ಹಗುರ ಭಾರ, ಭವಿಷ್ಯತ್ತಿನ ವಿನ್ಯಾಸ ನೀತಿ, ಹೆಚ್ಚು ಗ್ರೌಂಡ್ ಕ್ಲಿಯರನ್ಸ್, ಶಕ್ತಿಶಾಲಿ ಎಂಜಿನ್, ಅದ್ಭುತ ರಸ್ತೆ ಸಾನಿಧ್ಯ ಹಾಗೂ ಚಾಲನಾ ಸಾಮರ್ಥ್ಯ, ಗರಿಷ್ಠ ಸುರಕ್ಷತೆ ಹಾಗೂ ವೈಶಿಷ್ಟ್ಯಗಳು ಕಂಡುಬರಲಿದೆ.

ಕೇಂದ್ರ ಸರಕಾರವು 2030ರ ವೇಳೆಗೆ ಸಂಪೂರ್ಣ ಎಲೆಕ್ಟ್ರಿಕ್ ವಾಹನಗಳನ್ನು ಮಾರಾಟ ಮಾಡುವ ಮಹತ್ತರ ಯೋಜನೆಯನ್ನು ಇಟ್ಟುಕೊಂಡಿದೆ. ಇದೀಗ 2020ರ ವೇಳೆಯಾಗುವಾಗ ವಿದ್ಯುತ್ ಕಾರನ್ನು ಬಿಡುಗಡೆ ಮಾಡುವ ಯೋಜನೆಯನ್ನು ಮಾರುತಿ ಹೊಂದಿದೆ.

ಬಿಡಿಭಾಗಗಳನ್ನು ಸ್ಥಳೀಯವಾಗಿ ನಿರ್ಮಿಸುವುದು, ಮರುಬಳಕೆ ಮಾಡಬಹುದಾದ ಬ್ಯಾಟರಿ ಹಾಗೂ ಚಾರ್ಜಿಂಗ್ ಮೂಲ ಸೌಕರ್ಯ ವೃದ್ಧಿಗೂ ಮಾರುತಿ ತನ್ನ ಬದ್ಧತೆಯನ್ನು ತೋರಲಿದೆ.

ಟೊಯೊಟಾ ಬಹುನಿರೀಕ್ಷಿತ ಕಾರು ಭರ್ಜರಿ ಅನಾವರಣ

$
0
0

ಹೊಸದಿಲ್ಲಿ: ಪ್ರಸಕ್ತ ಸಾಲಿನಲ್ಲಿ ನಡೆಯಲಿರುವ ಅತಿ ದೊಡ್ಡ ಲಾಂಚ್‌ಗಳಲ್ಲಿ ಒಂದಾಗಿರುವ ಟೊಯೊಟಾ ಯಾರಿಸ್ ಭರ್ಜರಿ ಅನಾವರಣ ಕಂಡಿದೆ.

ದಿಲ್ಲಿಯಲ್ಲಿ ಸಾಗುತ್ತಿರುವ ಪ್ರತಿಷ್ಠಿತ 2018 ಆಟೋ ಎಕ್ಸ್‌ಪೊದಲ್ಲಿ ಜಪಾನ್ ಮೂಲದ ಮುಂಚೂಣಿಯ ವಾಹನ ಸಂಸ್ಥೆ ಟೊಯೊಟಾ ಕಿರ್ಲ್ಕೊಸರ್ ಮೋಟಾರ್ ಸಂಸ್ಥೆಯು ಅತಿ ನೂತನ ಯಾರಿಸ್ (Yaris) ಕಾರನ್ನು ಪ್ರದರ್ಶಿಸಿದೆ.

ಬಿ ಸೆಗ್ಮೆಂಟ್ ಕಾರು ವಿಭಾಗದಲ್ಲಿ ಟೊಯೊಟಾ ಯಾರಿಸ್ ಹೊಸ ನಿರೀಕ್ಷೆಯನ್ನುಂಟು ಮಾಡಿದೆ. ಗುಣಮಟ್ಟ, ಬಾಳ್ವಿಕೆ ಮತ್ತು ವಿಶ್ವಾಸಾರ್ಹತೆ (QDR) ತತ್ವಶಾಸ್ತ್ರದಲ್ಲಿ ಈ ವಿಶ್ವ ದರ್ಜೆಯ ಸೆಡಾನ್ ಕಾರು ಹೆಚ್ಚು ಐಷಾರಾಮಿಯೆನಿಸಿದೆ.

ಆಕ್ರಮಣಕಾರಿ ವಿನ್ಯಾಸ, ಹೆಚ್ಚು ಸ್ಥಳಾವಕಾಶ, ಆರಾಮದಾಯಕತೆಗೆ ಆದ್ಯತೆ ಕೊಡಲಾಗಿದೆ.

ಯಾರಿಸ್ ಹೆಸರು ಏಕೆ?
ಗ್ರೀಕ್ ದೇವತೆ ಚಾರೀಸ್ (charis) ಗಾಗಿ ಕಾರಿಗೆ ಯಾರಿಸ್ ಎಂಬ ಹೆಸರು ಇಡಲಾಗಿದ್ದು, ಇದು ಸೌಂದರ್ಯ ಮತ್ತು ಸೊಬಗನ್ನು ಸಾರುತ್ತದೆ.

ಐದು ವಿಶಿಷ್ಟತೆಗೆ ಇದು ವಿಶ್ವ ದರ್ಜೆಯಲ್ಲಿ ಹೆಸರು ಮಾಡಿದೆ. ಅವುಗಳಲ್ಲಿ ಮುಂದುವರಿದ ಮತ್ತು ಭಾವನಾತ್ಮಕ ವಿನ್ಯಾಸ, ವಿಸ್ತಾರವಾದ ಸೌಲಭ್ಯ, ಉತ್ತಮ ಸವಾರಿ ಗುಣಮಟ್ಟ ಹಾಗೂ ಶಾಂತತೆ, ಕ್ರಿಯಾತ್ಮಕ ದಕ್ಷತೆ, ಸುರಕ್ಷತೆ ಮತ್ತು ತಂತ್ರಜ್ಞಾನಗಳು ಸೇರಿವೆ.

ಟಾಟಾ ನೆಕ್ಸನ್‌ಗೆ ವರ್ಷದ ಕಾರು ಪ್ರಶಸ್ತಿ

$
0
0

ಹೊಸದಿಲ್ಲಿ: 10ನೇ ಆವೃತ್ತಿಯ ಟೈಮ್ ಆಟೋ ಪ್ರಶಸ್ತಿಯನ್ನು ಪ್ರಕಟಿಸಲಾಗಿದ್ದು, ದೇಶದ ಅತಿ ದೊಡ ವಾಹನ ಸಂಸ್ಥೆ ಟಾಟಾ ಮೋಟಾರ್ಸ್ ನಿರ್ಮಿತ ನೆಕ್ಸನ್ ಕ್ರೀಡಾ ಬಳಕೆಯ ವಾಹನವನ್ನು ವರ್ಷದ ಕಾರು ಪ್ರಶಸ್ತಿಗೆ ಭಾಜನವಾಗಿದೆ.

ಇವೊ ಇಂಡಿಯಾ ಹಾಗೂ ಫಾಸ್ಟ್ ಬೈಕ್ಸ್ ಇಂಡಿಯಾ ಸಹಯೋಗದಲ್ಲಿ ವರ್ಷದ ಕಾರು ಪ್ರಶಸ್ತಿಗಳನ್ನು ಘೋಷಿಸಲಾಗಿದೆ. ಇದರಂತೆ ನಾಲ್ಕು ಪ್ರಮುಖ ಪ್ರಶಸ್ತಿಗಳನ್ನು ಟಾಟಾ ಮೋಟಾರ್ಸ್ ಬಾಚಿಕೊಂಡಿದೆ.

ಅತ್ಯುತ್ತಮ ವಿನ್ಯಾಸ, ವರ್ಷದ ಕಾಂಪಾಕ್ಟ್ ಎಸ್‌ಯುವಿ, ವರ್ಷದ ಉಪಯಕ್ತ/ಬಹು ಬಳಕೆಯ ವಾಹನ ಮತ್ತು ವರ್ಷದ ಕಾರು ಪ್ರಶಸ್ತಿಗಳಿಗೆ ಟಾಟಾ ಮೋಟಾರ್ಸ್ ಅರ್ಹವಾಗಿದೆ.

ಇಲ್ಲಿ ನಿಕಟ ಪ್ರತಿಸ್ಪರ್ಧಿ ಜೀಪ್ ಕಾಂಪಾಸ್ ಹಿಂದಿಕ್ಕಿರುವ ಟಾಟಾ ನೆಕ್ಸನ್ ಪ್ರಶಸ್ತಿ ಬಾಚಿಕೊಂಡಿದೆ.

ಇನ್ನುಳಿದಂತೆ ಮಾರುತಿ ಸುಜುಕಿ ಇಗ್ನಿಸ್ ವರ್ಷದ ಹ್ಯಾಚ್‌ಬ್ಯಾಕ್, ಡಿಜೈರ್ ವರ್ಷದ ಕಾಂಪಾಕ್ಟ್ ಸೆಡಾನ್ ಪ್ರಶಸ್ತಿಗಳಿಗೆ ಅರ್ಹವಾಗಿದೆ. ಹಾಗೆಯೇ ವರ್ಷದ ಅತ್ಯುತ್ತಮ ತಯಾರಕಾ ಸಂಸ್ಥೆ ಪ್ರಶಸ್ತಿಗೂ ಮಾರುತಿ ಭಾಜನವಾಗಿದೆ.

ವರ್ಷದ ಐಷಾರಾಮಿ ಕಾರು ತಯಾರಿಕಾ ಪ್ರಶಸ್ತಿಗೆ ಮರ್ಸಿಡಿಸ್ ಬೆಂಝ್ ಹಾಗೂ ಸಂಸ್ಥೆಯ ಇ-ಕ್ಲಾಸ್ ಸೆಡಾನ್ ವರ್ಷದ ಐಷಾರಾಮಿ ಕಾರು ಪ್ರಶಸ್ತಿಗಳನ್ನು ಗೆದ್ದುಕೊಂಡಿದೆ. ಹಾಗೆಯೇ ಪ್ರೀಮಿಯಂ ಸೆಡಾನ್ ಪ್ರಶಸ್ತಿ ಹ್ಯುಂಡೈ ವೆರ್ನಾ ಪಾಲಾಗಿದೆ.

ದ್ವಿಚಕ್ರ ವಾಹನ ವಿಭಾಗದಲ್ಲಿ ವರ್ಷದ ಬೈಕ್ ಪ್ರಶಸ್ತಿಗೆ ಕೆಟಿಎಂ 390 ಡ್ಯೂಕ್ ಅರ್ಹವಾಗಿದೆ. ಹಾಗೆಯೇ ವರ್ಷದ ತಯಾರಿಕಾ ಪ್ರಶಸ್ತಿಗೆ ಟಿವಿಎಸ್ ಮೋಟಾರ್ ಹಾಗೆಯೇ ವರ್ಷದ ಸ್ಪೋರ್ಟ್ಸ್ ನೆಕ್ಡ್ ವಿಭಾಗದಲ್ಲಿ ಟ್ರಯಂಫ್ ಸ್ಟ್ರೀಪ್ ಟ್ರಿಪಲ್ ಆರ್‌ಎಸ್ ಪ್ರಶಸ್ತಿಗಳನ್ನು ಗೆದ್ದಿವೆ.

ಕಣ್ಮರೆಯಾಗಲಿರುವ ಟಾಟಾ 'ನ್ಯಾನೋ'

$
0
0

ಹೊಸದಿಲ್ಲಿ: ರತನ್ ಟಾಟಾ ಅವರ ಕನಸಿನ ಕೂಸು ಜಗತ್ತಿನ ಅತಿ ಚೊಕ್ಕದಾದ ಕಾರು ಟಾಟಾ ನ್ಯಾನೋ ನಿಕಟ ಭವಿಷ್ಯದಲ್ಲೇ ಓಡಾಟ ನಿಲುಗಡೆಯಾಗಲಿದೆ.

ಹಾಗೆಂದು ಕಳವಳ ವ್ಯಕ್ತಪಡಿಸಿದವರು ಟಾಟಾ ಮೋಟಾರ್ಸ್ ನಿರ್ದೇಶಕ ಗುಂಟೆರ್ ಬುಟ್ಸ್ಚೆಕ್.

ಹೊಸ ಸುರಕ್ಷತಾ ಮಾನದಂಡಗಳು ಜಾರಿಗೆ ಬರಲಿರುವುದರಿಂದ ನ್ಯಾನೋಗೆ ಸಂಪೂರ್ಣ ಹೊಸ ಸ್ವರೂಪ ನೀಡಬೇಕಿದೆ. ಅಲ್ಲದೆ ಕಳಪೆ ಮಾರಾಟದ ಹಿನ್ನಲೆಯಲ್ಲಿ ಉಳಿವಿಗಾಗಿ ಹೊಸ ಹೂಡಿಕೆಯನ್ನು ಹುಡುಕಬೇಕಾದ ಪರಿಸ್ಥಿತಿ ಬಂದೊದಗಿದೆ.

ನ್ಯಾನೋ ಓಡಾಟ ನಿಲುಗಡೆಯಾಗಲಿದೆಯೇ ಎಂಬುದಕ್ಕೆ ಇದೂ ಪರಿಗಣೆಯಲ್ಲಿದೆ. ನಾವು ಸಂಪೂರ್ಣ ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದೇವೆ. ಇಲ್ಲಿಯ ವರೆಗೂ ಯಾವುದೇ ನಿರ್ಧಾರ ಕೈಗೊಂಡಿಲ್ಲ. ನ್ಯಾನೋ ಉಳಿಗಾವಿಗಾಗಿ ಕ್ರಾಂತಿಕಾರಿ ಬದಲಾವಣೆಯಾಗಬೇಕಿದೆ ಎಂದು ಹೇಳಿದ್ದಾರೆ.

ಒಟ್ಟಾರೆಯಾಗಿ ಈಗಿನ ಪರಿಸ್ಥಿತಿಯಲ್ಲಿ ಟಾಟಾ ನ್ಯಾನೋ 2019ರ ಇಸವಿಯ ಆಚೆಗೆ ದಾಟುವುದು ಕಷ್ಟಕರವೆನಿಸಿದೆ.

ಟಾಟಾ ಎಚ್‌5ಎಕ್ಸ್ ಕ್ಯಾನ್ಸೆಪ್ಟ್ ಎಸ್‌ಯುವಿ ಅನಾವರಣ

$
0
0

ಹೊಸದಿಲ್ಲಿ: ಪ್ರತಿಷ್ಠಿತ 2018 ಆಟೋ ಎಕ್ಸ್‌ಪೊದಲ್ಲಿ ದೇಶದ ಅತಿ ದೊಡ್ಡ ವಾಹನ ಸಂಸ್ಥೆ ಟಾಟಾ ಮೋಟಾರ್ಸ್, ಅತಿ ನೂತನ ಎಚ್‌5ಎಕ್ಸ್ ಕ್ಯಾನ್ಸೆಪ್ಟ್ ಕ್ರೀಡಾ ಬಳಕೆಯ ವಾಹನವನ್ನು ಅನಾವರಣಗೊಳಿಸಿದೆ.

ನೂತನ ಟಾಟ್ ಎಚ್‌5ಎಕ್ಸ್ ಕ್ಯಾನ್ಸೆಪ್ಟ್ ಕಾರನ್ನು ಓಮೆಗಾ ಎಆರ್‌ಸಿ ತಳಹದಿಯಲ್ಲಿ ನಿರ್ಮಿಸಲಾಗಿದೆ. ಇದೇ ತಳಹದಿಯಲ್ಲಿ ಲ್ಯಾಂಡ್ ರೋವರ್ ಎಲ್550 ಹಾಗೂ ಡಿಸ್ಕವರಿ ಸ್ಪೋರ್ಟ್ ನಿರ್ಮಾಣವಾಗಿರುವುದು ಗಮನಾರ್ಹವೆನಿಸುತ್ತದೆ.

ವಿನ್ಯಾಸವನ್ನು ಗಮನಿಸಿದಾಗ ಐಕಾನಿಕ್ ಡಿಸ್ಕವರಿ ಸ್ಪೋರ್ಟ್ ಮಾದರಿಗೆ ಎಚ್‌5ಎಕ್ಸ್ ಸಾಮತ್ಯೆಯನ್ನು ಪಡೆದಿದೆ. ವಿಶಿಷ್ಟ ವಿನ್ಯಾಸದ ರಿಯರ್ ವಿಂಡೋ ಇದರ ಪ್ರಮುಖ ಹೈಲೆಟ್ ಆಗಿದೆ.

ನ್ಯೂ ಇಂಪಾಕ್ಟ್ 2.0 ಡಿಸೈನ್ ಜತೆಗೆ ಸ್ಲಿಮ್ ಹೆಡ್‌ಲ್ಯಾಂಪ್, ಫಾಂಗ್ ಲ್ಯಾಂಪ್ಸ್ ಕಾರಿಗೆ ತಾಜಾತನವನ್ನ ತುಂಬುತ್ತಿದೆ.

ನೂತನ ಎಚ್‌5ಎಕ್ಸ್ ಕಾರಿನಲ್ಲಿ ಫಿಯೆಟ್ ಆಮದಿತ 2.0 ಲೀಟರ್ ಮಲ್ಟಿಜೆಟ್ II ಡೀಸೆಲ್ ಮೋಟಾರು ಆಳವಡಿಕೆಯಾಗುವ ಸಾಧ್ಯತೆಯಿದೆ. ಇದು ಜೀಪ್ ಕಾಂಪಾಸ್‌ಗೆ ಸಮಾನವಾಗಿದ್ದು, 350ಎನ್‌ಎಂ ತಿರುಗುಬಲದಲ್ಲಿ 170 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

ಅಂತೆಯೇ ಟು ವೀಲ್ ಹಾಗೂ ಫೋರ್ ವೀಲ್ ಚಾಲನಾ ವ್ಯವಸ್ಥೆಯೊಂದಿಗೆ ಮ್ಯಾನುವಲ್ ಹಾಗೂ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಗಳು ಲಭ್ಯವಿರಲಿದೆ.

Viewing all 6221 articles
Browse latest View live


<script src="https://jsc.adskeeper.com/r/s/rssing.com.1596347.js" async> </script>