ಗುಂಡ: ಈಗಿನವರು ಊಟ ಮಾಡುವುದಕ್ಕೆ ಮೊದಲು ಸರಿಯಾಗಿ ಕೈ ತೊಳೆಯದೆ ಹೋದ್ರೂ ಊಟ ಆದ ಮೇಲೆ ಚೆನ್ನಾಗಿ ಕೈ ತೊಳೆದು ಒರೆಸಿಕೊಳ್ತಾರಲ್ಲ, ಯಾಕೆ? ತಿಮ್ಮ: ಯಾಕಂದ್ರೆ, ಟಚ್ ಸ್ಕ್ರೀನ್ ಮೊಬೈಲ್ ಕೊಳೆ ಆದ್ರೆ ಕಷ್ಟ ಅಂತ! * ಮಂಕ: ಅಲ್ನೋಡೇ, ಎಷ್ಟೊಂದು ದೊಡ್ಡ ಪೋಸ್ಟರ್. ಇದರಲ್ಲಿ ಹೇಗೆ ಹತ್ತಿ ಕುಳಿತುಕೊಳ್ಳುತ್ತಾರೆ? ಪದ್ದು: ಚಿಕ್ಕವರಿದ್ದಾಗಲೇ ಹತ್ತಿ ಕುಳಿತುಕೊಂಡು ಬಿಡುತ್ತಾರೆ. * ಉದ್ಯೋಗಿ: ಸರ್, ನಾನು ಮೂರು ಜನರು ಮಾಡುವ ಕೆಲಸವನ್ನು ಒಬ್ಬನೇ ಮಾಡ್ತಾ ಇದ್ದೀನಿ. ನನ್ನ ಸಂಬಳ ಜಾಸ್ತಿ ಮಾಡಿ. ಬಾಸ್: ಸದ್ಯಕ್ಕೆ ಸಂಬಳ ಅಷ್ಟೇ ಇರುತ್ತದೆ. ಆದರೆ ಆ ಇನ್ನಿಬ್ಬರು ಯಾರು ಅಂತ ಹೇಳಿದರೆ ಅವರನ್ನು ಈಗಿನಿಂದಲೇ ವಜಾ ಮಾಡುತ್ತೇನೆ.
ಜೋಕ್ಬಾಕ್ಸ್: ಟಚ್ ಸ್ಕ್ರೀನ್ ಮೊಬೈಲ್ ಕೊಳೆ ಆದ್ರೆ ಕಷ್ಟ
ಜೋಕ್ಬಾಕ್ಸ್: ಸತ್ತ ಮೇಲೂ ಧಾರಾವಾಹಿಗಳನ್ನು ನೋಡಬಹುದಲ್ವಾ?
ಕಮಲಿ: ಏನು ರತ್ನಕ್ಕ? ನೇತ್ರದಾನಕ್ಕೆ ಒಪ್ಪಿಗೆ ಕೊಟ್ಟು ಅರ್ಜಿ ತುಂಬಿ ಸಹಿ ಹಾಕಿದ್ದೀರಲ್ಲ? ತುಂಬಾ ಒಳ್ಳೆಯ ನಿರ್ಧಾರ ಮಾಡಿದ್ರಿ. ರತ್ನಕ್ಕ: ಹಾಗೇನಿಲ್ಲ, ನಾನು ಸತ್ತ ಮೇಲೂ ಆ ಕಣ್ಣುಗಳಿಂದ ಈ ಧಾರಾವಾಹಿಗಳನ್ನು ನೋಡಬಹುದಲ್ವಾ? ಅದಕ್ಕೆ ಒಪ್ಕೊಂಡೆ! * ಟೀಚರ್: ಮುಂದಿನ ಮುಖ್ಯಮಂತ್ರಿ ಯಾರಾಗಬೇಕು ಮಕ್ಕಳೇ? ಮಕ್ಕಳು: ವಾಟಾಳ್ ಅಂಕಲ್ ಆಗಬೇಕು. ಟೀಚರ್: ಯಾಕೆ? ಮಕ್ಕಳು: ಅವರಾದ್ರೆ ವರ್ಷದ 365 ದಿವಸವೂ ಬಂದ್ ಮಾಡ್ತಾರೆ. ನಮ್ಮ ಶಾಲೆ ಯಾವಾಗ್ಲೂ ಬಂದ್ ಇರುತ್ತದೆ! * ನಿಮ್ಮ ಮನೆಯಲ್ಲಿರುವ ಎಲ್ಲಾ ಕೋಣೆಗಳಿಗೂ 4ಜಿ ನೆಟ್ವರ್ಕ್ ಸಿಗುತ್ತಿದ್ದರೆ ನಿಮ್ಮ ಮನೆಯ ವಾಸ್ತು ಸರಿಯಾಗಿದೆ ಎಂದು ಅರ್ಥ. ಯಾಕೆಂದರೆ ಅಂಥ ಮನೆಯಲ್ಲಿ ನೆಮ್ಮದಿ, ಶಾಂತಿ ನೆಲೆಯಾಗಿರುತ್ತವೆ!
ಮುಂದಿನ ಜನ್ಮದಲ್ಲಿ ನಂಬಿಕೆಇದೆಯಾ?
ಇದೆಯಾ?
ತಿಮ್ಮಣ್ಣ: ಖಂಡಿತಾ ಇದೆ ಕಣೋ.
ಗುಂಡಣ್ಣ: ಹಾಗಿದ್ರೆ ಒಂದು ಸಾವಿರ ರೂಪಾಯಿ ಸಾಲ
ಕೊಡು. ಮುಂದಿನ ಜನ್ಮದಲ್ಲಿ ತೀರಿಸುತ್ತೇನೆ.!
***
ಗುಂಡಣ್ಣ: ಏನೋ ತಿಮ್ಮಣ್ಣ ನಿನ್ನ ಹೆಂಡತಿ ಕೈಯಲ್ಲಿ
ಈರುಳ್ಳಿ ಹೆಚ್ಚುವ ಕೆಲಸವನ್ನು ಮಾತ್ರ ಯಾಕೆ
ಮಾಡಿಸೊಲ್ಲ?
ತಿಮ್ಮಣ್ಣ: ಅವಳು ಕಣ್ಣೀರು ಹಾಕದಂತೆ ನೋಡಿಕೋ ಎಂದು
ಅತ್ತೆ ಮಾವ ಹೇಳಿದ್ದಾರೆ. ಅದಕ್ಕೆ
ನನ್ನ ಹೆಂಡತಿಗಿಂತ ಅವಳ ಬಟ್ಟೆಗಳು ನನಗೆ ಜಾಸ್ತಿ ಮಾರ್ಯದೆ ಕೊಡುತ್ತವೆ
ಗುಂಡಣ್ಣ: ನನ್ನ ಹೆಂಡತಿಗಿಂತ ಅವಳ ಬಟ್ಟೆಗಳು ನನಗೆ ಜಾಸ್ತಿ ಮಾರ್ಯದೆ ಕೊಡುತ್ತವೆ. ತಿಮ್ಮಣ್ಣ: ಹೇಗೆ? ಗುಂಡಣ್ಣ: ಯಾವಾಗ ಬೀರು ತೆಗೆದರೂ ತಕ್ಷ ಣ ಅವಳ ಬಟ್ಟೆಗಳು ನನ್ನ ಕಾಲಿಗೆ ಬೀಳುತ್ತವೆ ! ** ಮೇಷ್ಟ್ರು: ನಾವು ಬದುಕ ಬೇಕಾದರೆ ಆಮ್ಲಜನಕ ತುಂಬಾ ಮುಖ್ಯ . ಇದನ್ನು 4 ಶತಮಾನಗಳ ಮುಂಚೆ ಕಂಡುಹಿಡಿಯಲಾಯಿತು. ಮರಿಗುಂಡ: ಸದ್ಯ ನಾನು ಆ ಕಾಲದಲ್ಲಿ ಹುಟ್ಟಲಿಲ್ಲ . ಇಲ್ಲಾಂದರೆ ಸತ್ತು ಹೋಗ್ತಾ ಇದ್ದೆ ! ** ಮೇಷ್ಟ್ರು : ನಿಮ್ಮ ತಂದೆಯ ಹೆಸರೇನು ಗುಂಡ? ಮರಿಗುಂಡ : ನನ್ನ ತಂದೆಯ ಹೆಸರು ಡ್ಯಾಡಿ !
ಬೋಧಿವೃಕ್ಷ: ಪ್ರಕೃತಿಯ ನಿಯಮಗಳ ಪಾಲನೆ ಮುಖ್ಯ
* ಬೋಧಿವೃಕ್ಷ: -ಡಾ. ಡಿ. ವೀರೇಂದ್ರ ಹೆಗ್ಗಡೆ, ಶ್ರೀಕ್ಷೇತ್ರ ಧರ್ಮಸ್ಥಳ ಈ ಪ್ರಪಂಚದಲ್ಲಿ ಆಧುನಿಕ ಸಂಸ್ಕೃತಿ, ನವ ನಾಗರಿಕತೆಗೆ ಮಾರು ಹೋಗಿ, ಪ್ರಾಚೀನ ಪ್ರಕೃತಿ-ಸಂಸ್ಕೃತಿಗಳನ್ನು ತಿರಸ್ಕಾರದಿಂದ ಕಾಣುವ ಮಂದಿ ಇಂದಿನ ಪರಿಸ್ಥಿತಿಯಲ್ಲಿ ಹೆಚ್ಚಾಗುತ್ತಿದ್ದಾರೆ. ಆಧುನಿಕ ಶಿಕ್ಷ ಣ, ವಿದೇಶೀ ಸಂಸ್ಕೃತಿಯ ಪ್ರಭಾವದಿಂದ ಜನರು ಪ್ರಕೃತಿಯಿಂದ ದೂರವಾಗಿ ನಗರಗಳ ಕಡೆಗೆ ಆಕರ್ಷಿತರಾಗುತ್ತಿದ್ದಾರೆ. ಆದರೆ ಮೂಲತಃ ಪ್ರಕೃತಿಯ ಮೂಲಾಧಾರವನ್ನು ನಾವು ಮರೆಯುವಂತಿಲ್ಲ ಎಂಬುದನ್ನು ನಿರೂಪಿಸುವ ಒಂದು ಪ್ರಸಂಗ ಇಲ್ಲಿದೆ. ರಾಮಾಯಣದಲ್ಲಿ ಬರುವ ಪ್ರಸಂಗವಿದು. ಶ್ರೀ ರಾಮಚಂದ್ರನು ತನ್ನ ತೀರ್ಥರೂಪರ ಆಜ್ಞೆಗನುಸಾರವಾಗಿ ವನವಾಸ ಮಾಡುತ್ತಿರುವಾಗ ಅನೇಕ ಋುಷಿ-ಮುನಿಗಳನ್ನು ಭೇಟಿಯಾದನು. ಅವರಿಂದ ಅನೇಕ ವಿಷಯಗಳ ಬಗ್ಗೆ ವಾರ್ತಾಲಾಪ ನಡೆಸಿ ಜೀವನ ದರ್ಶನದ ತತ್ವಜ್ಞಾನದ ಬಗ್ಗೆ ಅರಿವು ಸಂಪಾದಿಸಿಕೊಂಡನು. ಅದೇ ಸಂದರ್ಭದಲ್ಲಿ ರಾಮನು ಶರಭಂಗ ಪ್ರಸಿದ್ಧ ಋುಷಿಗಳ ಆಶ್ರಮಕ್ಕೆ ತಲುಪಿದ್ದನು. ಶರಭಂಗರು ತಮ್ಮ ಯೋಗ ಮತ್ತು ಆಧ್ಯಾತ್ಮಿಕ ಸಾಧನೆಗಳಿಂದಾಗಿ ಅವರ ಪಾಲಿಗೆ ಅದೇ ಅಂತಿಮ-ಮಾನವ ಜನ್ಮವೆಂಬುದು ಖಚಿತವಾಗಿತ್ತು. ಇದರಿಂದಾಗಿಯೇ ಅವರ ಕೊನೆಗಾಲ ಬಂದಾಗ ಅವರನ್ನು ಕರೆದೊಯ್ಯಲು ಸ್ವತಃ ಸ್ವರ್ಗದ ಅಧಿಪತಿ, ದೇವೇಂದ್ರನೇ ಬಂದು ಸ್ವರ್ಗಕ್ಕೆ ಕರೆದೊಯ್ಯುವೆನೆಂದಾಗ ಋುಷಿಗಳು ಬರಲೊಪ್ಪಲಿಲ್ಲ. ''ಏಕೆ?'' ಎಂದು ಕಾರಣ ಕೇಳಿದಾಗ, ಋುಷಿಗಳು ನುಡಿದರು ''ಹೇ ದೇವೇಂದ್ರ ಪ್ರಭುವೇ, ಮಾನವ ದೇಹವೆಂಬುದು ಪಂಚ ತತ್ವಗಳ ಮಿಶ್ರಣವೇ ಆಗಿದೆ. ನಾನೂ ಮಾನವ ದೇಹವೇ ಆಗಿದ್ದೇನೆ. ಹಾಗಿರುವಾಗ ಕೊನೆಗಾಲದಲ್ಲಿ ಮಾನವ ದೇಹದೊಂದಿಗೆ ನಿಮ್ಮೊಂದಿಗೆ ಸ್ವರ್ಗಕ್ಕೆ ಬರುವುದು ಪ್ರಕೃತಿ ನಿಯಮಗಳ ವಿರುದ್ಧ ನಡೆದಂತಾಗುವುದು. ಅಲ್ಲದೆ ಶ್ರೀರಾಮನನ್ನು ಕಾಣಬೇಕು ಎಂಬ ಬಯಕೆ ನನ್ನಲ್ಲಿದೆ. ಅಷ್ಟರವರೆಗೆ ಈ ದೇಹ ತ್ಯಜಿಸಲಾರೆ,'' ಇದನ್ನು ಕೇಳಿದ ದೇವೆಂದ್ರನು ಹಿಂದಿರುಗಿದ. ಅವರಿಬ್ಬರ ಸಂಭಾಷಣೆಯನ್ನು ಪೊದೆಯೊಂದರ ಮರೆಯಲ್ಲಿದ್ದು ಆಲಿಸಿದ್ದ ಶ್ರೀರಾಮನು ಬಹುಪ್ರಸನ್ನನಾಗಿ ಶರಭಂಗ ಋುಷಿಗಳ ಆಶ್ರಮಕ್ಕೆ ಹೋಗಿ ಭೇಟಿಯಾದಾಗ ಇಬ್ಬರಿಗೂ ಅಪಾರ ಆನಂದವಾಯಿತು. ಶರಭಂಗರೆಂದರು, ''ಹೇ ಪ್ರಭು ಶ್ರೀರಾಮಚಂದ್ರ, ನೀವೋ ಮಾನವ ರೂಪದಲ್ಲಿ ಭಗವಂತನ ಅವತಾರಿಯೇ ಆಗಿದ್ದೀರಿ. ನಾನಂತೂ ನಿಮ್ಮ ದರ್ಶನ ಭಾಗ್ಯ ಪಡೆದು ಈ ಲೋಕ ತ್ಯಜಿಸಬೇಕೆಂದಿದ್ದೆ,'' ಆಗ ಶ್ರೀರಾಮ ನುಡಿದ- ''ಹೇ ಮುನಿವರರೇ, ನಿಮಗಿಂತ ಶ್ರೇಷ್ಠರು ಯಾರಿದ್ದಾರೆ? ಈ ಮಾನವ ದೇಹದೊಂದಿಗೆ ಸ್ವರ್ಗಕ್ಕೆ ತೆರಳುವ ಭಾಗ್ಯ ದೊರೆತರೂ ಕೂಡ ಪ್ರಕೃತಿಯ ನಿಯಮಗಳಿಗನುಸಾರವೇ ನಡೆಯುವುದಾಗಿ ನಿರ್ಧರಿಸಿದಿರಿ. ಆದ್ದರಿಂದ ನೀವು ದೇವತೆಗಳಂತೆ ಪೂಜನೀಯವಾಗಿದ್ದೀರಿ. ಈ ಪ್ರಪಂಚದಲ್ಲಿ ಪ್ರಕೃತಿಯ ನಿಯಮಗಳನ್ನು ಪಾಲಿಸುವವರ ಎದುರು ಎಲ್ಲರೂ ತಲೆಬಾಗುವರು''. ಈ ಜಗತ್ತಿನಲ್ಲಿ ಪ್ರಕೃತಿ, ಮಾನವ ಮತ್ತು ದೇವತೆಗಳ ಸಂಬಂಧ ಬಹು ಮಹತ್ವದ್ದು. ಮಾನವನು ಪ್ರಕೃತಿಯನ್ನು ಗೌರವದಿಂದ ಮನ್ನಿಸಿದಾಗ ದೇವತೆಗಳೂ ಪ್ರಸನ್ನರಾಗಿ ಬಿಡುತ್ತಾರೆ. ಹಾಗೂ ಮಾನವರಿಗೆ ಪೂರ್ಣ ಬೆಂಬಲ ನೀಡುತ್ತಾರೆ. ನಾವೆಲ್ಲರೂ ಪ್ರಕೃತಿ ಮಾತೆಯನ್ನು ಆರಾಧಿಸಲು ಕಲಿಯೋಣ.
ಬೋಧಿವೃಕ್ಷ: ನಿಮ್ಮನ್ನು ನೋಡಿಕೊಳ್ಳುವವರಿರುತ್ತಾರೆ
*ಬೋಧಿವೃಕ್ಷ: ಶ್ರೀಶ್ರೀ ರವಿಶಂಕರ್ ಹಿರಿಯರಾದವರು, ತಾವು ಮತ್ತೊಬ್ಬರ ಮೇಲೆ ಅವಲಂಬಿತರಾಗಿದ್ದೇವೆæ, ಸ್ವತಂತ್ರರಾಗಿಬಿಡಬೇಕು ಎಂದು ದುಃಖಿಸುತ್ತಿರುತ್ತಾರೆ. ನೋಡಿ, ಇದುವರೆಗೂ ಯಾವ ಮಗುವೂ ಸ್ವತಂತ್ರವಾಗಿಲ್ಲ. ನೀವು ಮಗುವಾಗಿದ್ದಾಗ ನಿಮ್ಮನ್ನು ಹೆತ್ತವರು ನಿಮ್ಮನ್ನು ನೋಡಿಕೊಂಡರು. ನಿಮ್ಮ ಮುದಿತನದಲ್ಲಿ ನಿಮ್ಮ ಮಕ್ಕಳು ಅಥವಾ ಬೇರೆ ಯಾರೋ ನಿಮ್ಮನ್ನು ನೊಡಿಕೊಳ್ಳುತ್ತಾರೆ. ಆದ್ದರಿಂದ ಆರಂಭದಿಂದ ಕೊನೆಯವರೆಗೂ ಜೀವನವು ಅವಲಂಬಿಯಾಗಿದೆ. ಇದರ ನಡುವೆ ನಾವು ಸ್ವತಂತ್ರರು ಎಂದುಕೊಂಡರೂ, ಅನೇಕ ವಿಷಯಗಳ ಮೇಲೆ ಅವಲಂಬಿಗಳಾಗಿದ್ದೇವೆ. ನಿಮ್ಮ ಗಮನವೆಲ್ಲಾ ದೈವದ ಮೇಲಿದ್ದರೆ ನಿಮಗೆ ಅವಲಂಬನೆಯ ಹೊರೆಯನ್ನು ಅನುಭವಿಸುವುದಿಲ್ಲ ಅಥವಾ ಸ್ವತಂತ್ರರಾಗಬೇಕೆಂಬ ಆಶಾಭಂಗ, ಚಡಪಡಿಕೆಯೂ ಇರುವುದಿಲ್ಲ. ಎರಡೂ ಮಾಯವಾಗುತ್ತವೆ. ಸ್ವತಂತ್ರರಾಗಬೇಕೆಂಬ ಭಾವನೆಯುಳ್ಳವರು ಆಶಾಭಂಗಕ್ಕೊಳಗಾಗುತ್ತಾರೆ. ಏಕೆಂದರೆ ಸ್ವಾತಂತ್ರ್ಯಕ್ಕಾಗಿ ಕಾಯುವುದೇ ಆಶಾಭಂಗತನ. ಎಚ್ಚೆತ್ತು ನೋಡಿ. ನೀವು ಮಗುವಾಗಿದ್ದಾಗ ಅವಲಂಬಿಗಳಾಗಿರಲಿಲ್ಲವೆ? ''ನನ್ನ ಹೆತ್ತವರ ಮೇಲೆ ಅವಲಂಬಿಗಳಾಗಿರುವುದರಿಂದ ನಾನೆಲ್ಲಿಂದ ಬಂದೆನೊ ಅಲ್ಲಿಗೇ ಮರಳಿ ಹೋಗಿಬಿಡುತ್ತೇನೆ'' ಎನ್ನುವುದಿಲ್ಲ ಒಂದು ಮಗು! ಹೆತ್ತವರ ರೂಪದಲ್ಲಿ, ಮಕ್ಕಳ ರೂಪದಲ್ಲಿ ಅಥವಾ ಸ್ನೇಹಿತರ ರೂಪದಲ್ಲಿ, ಎಲ್ಲಿಂದಲೇ ಸಹಾಯ ಬರಲಿ, ಅದೆಲ್ಲವೂ ಒಂದೇ ಮೂಲದಿಂದ ಎಂದರೆ ದೈವತ್ವದಿಂದ ಬರುತ್ತಿದೆ. ಭಗವಂತನೇ ನಿಮ್ಮ ಹೆತ್ತವರಾಗಿ ನಿಮ್ಮನ್ನು ಪೋಷಿಸಿದ. ನಮ್ಮಲ್ಲಿ ಬೆಳೆಸಿಕೊಂಡಿರುವ ಅಸುರಕ್ಷ ತೆಯ ಭಾವವನ್ನು ಹೊರಕ್ಕೆಸೆದು ಸುಟ್ಟುಬಿಡಿ. ನಿಮ್ಮ ಮಕ್ಕಳೇ ನಿಮ್ಮನ್ನು ನೋಡಿಕೊಳ್ಳುತ್ತಾರೆ ಎಂದುಕೊಳ್ಳಬೇಡಿ. ನಿಮ್ಮ ಕೊನೆಯ ಉಸಿರನ್ನು ಬಿಡುತ್ತಿರುವಾಗ ನಿಮ್ಮ ಕೆಲಸದವರೊ ಅಥವಾ ಪಕ್ಕದ ಮನೆಯವರೊ ಬಂದು ಸಹಾಯಮಾಡಬಹುದು. ಯಾರಿಗೆ ಗೊತ್ತು? ಯಾರೇ ನಿಮಗೆ ಸಹಾಯ ಮಾಡಿದರೂ ಭಗವಂತನೇ ಬಂದು ನಿಮಗೆ ಆ ರೂಪದಲ್ಲಿ ಸಹಾಯ ಮಾಡುತ್ತಿದ್ದಾನೆ. ನಿಮಗೆ ಸಹಾಯ ಮಾಡುವ ಹೊಣೆಯನ್ನು ಆ ದೈವೀ ಶಕ್ತಿಗೆ ಕೊಟ್ಟುಬಿಡಿ. ನಿಮಗೆ ಯಾವಾಗ ಅವಶ್ಯಕವೋ ಆಗ, ಯಾವುದೇ ರೂಪದಲ್ಲಿ ಬಂದು ನಿಮಗೆ ಸಹಾಯ ಮಾಡಲಿ. ಯಾರ ಸಹಾಯದಿಂದಲೂ ನೀವು ಮುಜುಗರ ಪಡಬೇಕಿಲ್ಲ ಅಥವಾ ಹೊರೆಯನ್ನು ಅನುಭವಿಸಬೇಕಿಲ್ಲ. ತಿಳಿಯಿತೆ? ''ನಾನು ಯೋಗ್ಯವಾದ ವ್ಯಕ್ತಿ ನನಗೆಲ್ಲವೂ ಬರಬೇಕು'' ಎಂದುಕೊಂಡರೆ ಸಮಸ್ಯೆಗಳು ಬರುತ್ತವೆ, ದೂರುಗಳು ಬರುತ್ತವೆ. ಆಗ ನಿಮ್ಮ ಯೋಗ್ಯತೆಯೂ ಕಡಿಮೆಯಾಗುತ್ತದೆ. ದೂರುಗಳು ಕೊನೆಗೊಂಡಾಗ ಸರಳತೆ, ಸುಲಭತೆ, ವಿನಮ್ರತೆ ಮೂಡುತ್ತದೆ. ನಮಗೇನು ಬರಬೇಕೊ ಅದಕ್ಕಿಂತಲೂ ಹೆಚ್ಚಾಗಿ ಆಶೀರ್ವದಿಸಲ್ಪಟ್ಟೆವೆಂದು ಭಾವಿಸಿದಾಗ ಕೃತಜ್ಞತೆಯು ಉಕ್ಕುತ್ತದೆ. ಆಗ ಎಲ್ಲವೂ ನಿಮ್ಮ ಬಳಿಗೆ ತಾನಾಗಿಯೇ ಬರಲಾರಂಭಿಸುತ್ತದೆ. ನಿಮಗೆಲ್ಲಾ ಬರಬೇಕೆಂದು ತಗಾದೆ ಮಾಡಲಾರಂಭಿಸಿದರೆ, ನಿಮ್ಮೊಳಗಿರುವ ಏನೋ ಒಂದು ಸಣ್ಣದಾಗುತ್ತದೆ. ನಾವು ಮಾಡಿರುವ ಪರಿಶ್ರಮಕ್ಕೆ ಪುರಸ್ಕರಿಸಬೇಕು, ತಮಗೆ ಸಂಬಳ ಕೊಡಬೇಕು ಎಂದು, ಓರ್ವ ನೌಕರರ ಸ್ಥಾನದಲ್ಲಿ ನಿಂತು ತಗಾದೆ ಮಾಡಿದಂತಿರುತ್ತದೆ. ತಗಾದೆ ಮಾಡದೆ ಭಗವಂತ ಆಶೀರ್ವದಿಸಿದ್ದಾನೆ ಎಂದು ಭಾವಿಸಿದರೆ, ನಿಮ್ಮನ್ನು ಬಹಳ ಚೆನ್ನಾಗಿ ನೋಡಿಕೊಳ್ಳಲಾಗುತ್ತದೆ. ಕನ್ನಡ ವಚನವೊಂದು, ''ಶರಣು ಹೋಗು ಜೀವನ, ರಹಸ್ಯದಲಿ ಸತ್ಯದಲಿ'' ಎನ್ನುತ್ತದೆ. ಜೀವನ ಬಗ್ಗೆ ಹೆಚ್ಚಾಗಿ ತಿಳಿದಷ್ಟೂ, ತಿಳಿಯದೆ ಇರುವುದು ಇನ್ನಷ್ಟು ಹೆಚ್ಚುತ್ತದೆ. ಒಂದು ಪುಟ್ಟ ಮಗುವಿನ ಜಗತ್ತು ಅದರ ಆಟಿಕೆಗಳು ಸ್ನೇಹಿತರು ಮತ್ತು ಕುಟುಂಬವಷ್ಟೆ. ಮಗು ಬೆಳೆದಾಗ ಹೊರಗಿನ ವಿಶಾಲವಾದ ಜಗತ್ತನ್ನು ತಿಳಿಯುತ್ತದೆ ಮತ್ತು ಅರಿಯಬೇಕಾದದ್ದು ಇನ್ನಷ್ಟಿರುತ್ತದೆ. ನಮ್ಮ ತಾರ್ಕಿಕ ಬುದ್ಧಿಯನ್ನು ಬಿಟ್ಟು ಸೃಷ್ಟಿಯ ಸೃಷ್ಟಿಕರ್ತನೆ ನಮ್ಮೊಳಗಿದ್ದಾನೆ ಎಂದು ಮೌನವಾದ ಧ್ಯಾನದಲ್ಲಿ ಅರಿತಾಗ ಅಪಾರ ಶಾಂತಿ ಮತ್ತು ತೃಪ್ತಿ ನಮ್ಮ ಆಂತರ್ಯದಲ್ಲಿ ಉಕ್ಕುತ್ತದೆ. ಭಗವಂತನೇ ನಿಮ್ಮೊಳಗಿರುವಾಗ ನಿಮ್ಮನ್ನು ನೋಡಿಕೊಳ್ಳುವವರು ಯಾರು ಎಂಬ ಪ್ರಶ್ನೆಯೇಕೆ? ಶರಣಾಗಿ, ಪ್ರಶಾಂತವಾಗಿ, ಸಂತೋಷದಿಂದಿರಿ.
ಬೋಧಿವೃಕ್ಷ: ಆತ್ಮಜ್ಞಾನದಿಂದ ಅಮೃತತ್ವ
*ಬೋಧಿವೃಕ್ಷ: ಶ್ರೀ ಸಿದ್ಧೇಶ್ವರ ಸ್ವಾಮೀಜಿ ನಾವು ತೊಡುವ ಬಟ್ಟೆ ಸ್ವಚ್ಛವಾಗಿದ್ದರೆ, ಸುಂದರವಾಗಿದ್ದರೆ ನಮ್ಮ ಜೀವನವೂ ಅಷ್ಟೇ ಸುಂದರವಾಗಿರುತ್ತದೆ, ಸ್ವಚ್ಛವಾಗಿರುತ್ತದೆ. ಬಟ್ಟೆ ಎಂದಮೇಲೆ ಹಾಸು-ಹೊಕ್ಕು ಎರಡೂ ಇರಲೇಬೇಕು. ವಿದ್ಯೆ, ಅವಿದ್ಯೆ ಅಥವಾ ಜ್ಞಾನ ಮತ್ತು ಕರ್ಮ ಇವೆರಡೂ ನಮ್ಮ ಬಾಳ-ಬಟ್ಟೆಯ ಹಾಸು-ಹೊಕ್ಕು. ಅವೆರಡರಲ್ಲಿ ಒಂದಿಲ್ಲದಿದ್ದರೂ ನಮ್ಮ ಬಾಳಬಟ್ಟೆಯು ಸಿದ್ಧವಾಗಲಾರದು. ವಿದ್ಯೆ ಎಂದರೆ ಜ್ಞಾನ ಮಾಡಿಕೊಳ್ಳುವುದು, ಅವಿದ್ಯೆ ಎಂದರೆ ಕರ್ಮ ಅಥವಾ ದುಡಿಯುವುದು ಎಂದರ್ಥ. ಲಕ್ಷಾಂತರ ವರುಷದ ಜೀವವಿಕಾಸದ ಕಥೆಯನ್ನು ನೋಡಿದರೂ ಜ್ಞಾನ ಮತ್ತು ಕರ್ಮ ಇವೆರಡೇ ಮಾನವನ ಎಲ್ಲ ಪ್ರಗತಿಗೆ ಕಾರಣವಾಗಿವೆ. ವಿದ್ಯಾಂಚಾವಿದ್ಯಾಂಚ ಯಸ್ತದ್ವೇದೋಭಯಂ ಸಹ | ಅವಿದ್ಯಯಾ ಮೃತ್ಯುಂ ತೀತ್ರ್ವಾ ವಿದ್ಯಯಾಮೃತತ್ವಮಶ್ನುತೇ || (ಈ.ಉ.11) ಆತ್ಮವಿದ್ಯೆ ಹಾಗೂ ನಿಷ್ಕಾಮಕರ್ಮಗಳೆರಡೂ ಭಿನ್ನವಲ್ಲ. ಅವೆರಡನ್ನು ಕೂಡಿಯೇ ಅರಿಯಬೇಕು; ಅಳವಡಿಸಿಕೊಳ್ಳಬೇಕು. ಸಾಧಕನು ನಿಷ್ಕಾಮ ಕರ್ಮದಿಂದ ಮೃತ್ಯುವನ್ನು ದಾಟುತ್ತಾನೆ. ಆತ್ಮಜ್ಞಾನದಿಂದ ಅಮೃತತ್ವವನ್ನು ಹೊಂದುತ್ತಾನೆ. ನಾವು ಮಾಡುವ ಕರ್ಮಗಳ ಉದ್ದೇಶ ಸರಿಯಾಗಿಲ್ಲದಿದ್ದರೆ ಆತ್ಮಜ್ಞಾನ ಅಥವಾ ಅತ್ಮಾನಂದವು ದೊರೆಯಲಾರದು. ಪರಮಸತ್ಯ ಪರಮಾತ್ಮನ ಅರಿವಿಲ್ಲದೆ ಮಾಡಿದ ಕರ್ಮವು ಬಂಧನಕ್ಕೆ ಕಾರಣವಾಗುತ್ತದೆ. ಬರೀ ಪ್ರಾಪಂಚಿಕ ಆಶೆ-ಆಕಾಂಕ್ಷೆಗಳ ಪೂರೈಸುವುದೇ ಕರ್ಮಗಳ ಉದ್ದೇಶವಲ್ಲ. ಅದಕ್ಕಿಂತಲೂ ಶ್ರೇಷ್ಠವಾದ ಉದ್ದೇಶವು ನಾವು ಮಾಡುವ ಕರ್ಮಕ್ಕೆ ಇದೆ. ಜೀವನದಲ್ಲಿ ಪರಮಶಾಂತಿ, ಪರಮಾನಂದವನ್ನು ಪಡೆಯುವುದೇ ನಾವು ಮಾಡುವ ಎಲ್ಲ ಕರ್ಮಗಳ ಪರಮೋದ್ದೇಶವಾಗಿದೆ. ಓರ್ವ ಕಲಾವಿದನ ಕೈಯಲ್ಲಿ ಒಂದು ಕುಂಚ ಸಿಕ್ಕರೆ ಸಾಕು ಒಂದು ಸುಂದರವಾದ ಕಲಾಕುಸುಮವು ಅರಳಿಬಿಡುತ್ತದೆ. ಬೇರೆಯವರ ಕೈಯಲ್ಲಿ ಸಿಕ್ಕರೆ ಸುಂದರವಾದ ಕಲೆಯೂ ಕೆಟ್ಟು ಹೋಗುತ್ತದೆ. ನೂರು ವಸಂತಗಳ ನಮ್ಮ ಆಯುಷ್ಯವೇ ಚಿತ್ರ ಬರೆಯುವ ಪರದೆ. ಸುಂದರವಾದ ಕರ್ಮಗಳೆಂಬ ಕುಂಚನ್ನು ಹಿಡಿದು, ಭಾವದ ಬಣ್ಣನ್ನು ಬಳಸಿ, ಜ್ಞಾನದ ಬೆಳಕಿನಲ್ಲಿ ನಾವು ನಮ್ಮ ಜೀವನದ ಅಪ್ರತಿಮವಾದ ಚಿತ್ರವನ್ನು ಬರೆಯಬಹುದಾಗಿದೆ. ಹೀಗೆ ಸುಜ್ಞಾನ, ಸತ್ಕರ್ಮಗಳಿಂದ ನಾವು ಈ ಜಗತ್ತಿನಲ್ಲಿ ಸುಂದರವಾದ ಬದುಕನ್ನು ಕಟ್ಟಿಕೊಳ್ಳಬೇಕು. ಪರಮಶಾಂತಿ, ಪರಮಾನಂದವನ್ನು ಅನುಭವಿಸಬೇಕು, ಇಲ್ಲದಿದ್ದರೆ ನಮ್ಮ ಜೀವನವು ನಿರರ್ಥಕವಾದಂತೆಯೇ! ಪ್ರಜಾಪ್ರೇಮಿಯಾದ ಮಹಾರಾಜ. ಅಂದು ಅವನ ಹುಟ್ಟುಹಬ್ಬ. ತನ್ನಿಮಿತ್ಯ ರಾಜನು ತನ್ನ ಪ್ರಜೆಗಳಿಗೆಲ್ಲ ಸಂತೋಷಕೂಟವನ್ನು ಏರ್ಪಡಿಸಿದ್ದ. ಇಷ್ಟೇ ಅಲ್ಲ ತನ್ನ ಹುಟ್ಟುಹಬ್ಬದ ದಿವಸ ಯಾರಾದರೂ ಅರಮನೆಗೆ ಬಂದು ತನ್ನನ್ನು ಭೇಟಿಯಾಗಬಹುದು ಎಂದು ಡಂಗುರ ಸಾರಿಸಿದ. ರಾಜನ ದರ್ಶನ ಹಾಗೂ ಸಂತೋಷಕೂಟ ಎರಡೂ ದೊರೆಯುತ್ತವೆ ಎಂದಮೇಲೆ ಕೇಳುವುದೇನಿದೆ? ಊರಿಗೆ ಊರೇ ಅರಮನೆಯತ್ತ ಮುಖ ಮಾಡಿತು. ರಾಜನ ದರ್ಶನಕ್ಕಾಗಿ ಅರಮನೆಗೆ ಬರುವವರಿಗೆಲ್ಲ ದಾರಿಯುದ್ದಕ್ಕೂ ಬಗೆ ಬಗೆಯಾದ ತಿಂಡಿ-ತಿನುಸುಗಳು, ಬಟ್ಟೆ-ಬರೆ, ಉಡಿಗೆ-ತೊಡಿಗೆಗಳನ್ನು, ಸಂಗೀತ-ನೃತ್ಯವನ್ನೂ ಉಚಿತವಾಗಿ ಕೊಡುವ ಏರ್ಪಾಡು ಮಾಡಿದ್ದರು. ಬಂದವರೆಲ್ಲರೂ ಉಚಿತವಾಗಿದ್ದ ತಿಂಡಿ-ತಿನುಸು, ಉಡಿಗೆ-ತೊಡಿಗೆ, ಸಂಗೀತ-ನೃತ್ಯಗಳಲ್ಲಿಯೇ ಮಗ್ನರಾಗಿ ಬಿಟ್ಟರು. ಅರಮನೆಯ ಹೂದೋಟದಲ್ಲಿದ್ದ ರಾಜನತ್ತ ಯಾರೊಬ್ಬರೂ ಹೋಗಲಿಲ್ಲ. ಸಂಜೆಯ ಸಮಯಕ್ಕೆ ಒಬ್ಬ ಹಿರಿಯ ಅನುಭವಿಕ ರೈತನು ಅರಮನೆಗೆ ಬಂದ. ತಕ್ಷ ಣ ರಸ್ತೆಯ ಬದಿಯಲ್ಲಿದ್ದ ಅಂಗಡಿಯವರು ಬನ್ನಿ ಬನ್ನಿ ಎಂದು ಕರೆದು 'ಇದರಲ್ಲಿ ನಿಮಗೇನು ಬೇಕು ತೆಗೆದುಕೊಳ್ಳಿ, ಎಲ್ಲವೂ ಉಚಿತ' ಎಂದು ಹೇಳಿದರು. ರೈತ ಹೇಳಿದ 'ನನಗೇನೂ ಬೇಡ, ಮಹಾರಾಜನಿಗೆ ಭೆಟ್ಟಿಯಾಗಬೇಕು ಅಷ್ಟೇ!' ಇಷ್ಟು ಹೇಳಿ ರೈತನು ನೇರವಾಗಿ ಹೂದೋಟದಲ್ಲಿದ್ದ ರಾಜನಿಗೆ ಭೇಟಿಯಾದ. 'ಬೆಳಗಿನಿಂದ ಸಂಜೆಯವರೆಗೆ ದಾರಿ ಕಾಯ್ದರೂ ಯಾರೂ ಬಂದಿರಲಿಲ್ಲ, ಈಗ ನೀನೊಬ್ಬನಾದರೂ ಬಂದೆಯಲ್ಲಾ' ಎಂದು ರಾಜನು ವಾತ್ಸಲ್ಯದಿಂದ ರೈತನನ್ನು ಆಲಂಗಿಸಿದಾಗ ಈರ್ವರ ಕಣ್ಣುಗಳಲ್ಲಿ ಆನಂದ ಭಾಷ್ಪ ಧಾರೆಯಿಟ್ಟಿತ್ತು!! ನಾವಿರುವ ಈ ಪ್ರಪಂಚವೇ ಪರಮಾತ್ಮನ ಹೂದೋಟ. ನಾವೆಲ್ಲರೂ ಪ್ರಜೆಗಳು. ಭಕ್ತ ವತ್ಸಲನಾದ ಪರಮಾತ್ಮನು ನಮಗೆ ದರ್ಶನವನ್ನಿತ್ತು ನಮ್ಮನ್ನು ಉದ್ಧರಿಸಬೇಕೆಂದು ನಮಗಾಗಿ ನಿತ್ಯ ದಾರಿ ಕಾಯುತ್ತಾನೆ. ಪ್ರಪಂಚದ ವಿಷಯ ವ್ಯಾಮೋಹಗಳಲ್ಲಿ ಆಕಂಠಪೂರ್ತಿ ಮುಳುಗಿದ ನಮಗೆ ಆ ಮಹಾದೇವನತ್ತ ಹೋಗಲು ಸಮಯವೆಲ್ಲಿದೆ? ಬುದ್ಧ, ಬಸವ, ಮಹಾವೀರ, ಜ್ಞಾನೇಶ್ವರ ಮೊದಲಾದ ಬೆರಳಣಿಕೆಯ ಮಹಾತ್ಮರು ಮಾತ್ರ ಪ್ರಪಂಚದ ಎಲ್ಲ ಬಂಧನಗಳನ್ನು ಹರಿದೊಗೆದು ಆ ಪರಮಾತ್ಮನ ದಿವ್ಯ ದರ್ಶನ ಪಡೆದು ಧನ್ಯರಾದರು. ಆಧಾರ : ಈಶ ಪ್ರಸಾದ
ಬೋಧಿವೃಕ್ಷ: ಮಾನಸಿಕ ತಡೆಗೋಡೆ
*ಬೋಧಿವೃಕ್ಷ: ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಒಬ್ಬ ಮನುಷ್ಯ ಯಾಕಾಗಿ ತನ್ನ ಶಾಂತಿ, ನೆಮ್ಮದಿ ಕಳೆದುಕೊಳ್ಳುತ್ತಾನೆ. ಆರ್ಥಿಕ ಕಾರಣಗಳಿಗಾಗಿಯೋ? ಅಥವಾ ತಾನೇ ನಿರ್ಮಿಸಿಕೊಂಡ ಮಾನಸಿಕ ತಡೆಗೋಡೆಗಳ ಕಾರಣಕ್ಕಾಗಿಯೋ? ಒಬ್ಬ ಮನುಷ್ಯನ, ಕುಟುಂಬದ ಬದುಕಿನ ಅಗತ್ಯಗಳೇನೆಂದು ಪಟ್ಟಿ ಮಾಡಿ ನೋಡಿ. ಅದಕ್ಕಾಗಿ ನಾವು ಹಾಕುವ ಶ್ರಮ, ಅದರ ಪ್ರತಿಫಲ ಎಷ್ಟೆಂಬುದನ್ನು ಲೆಕ್ಕಾಚಾರ ಹಾಕಿ. ನಮ್ಮದೇ ಚೌಕಟ್ಟಿನಲ್ಲಿ ಬದುಕು ರೂಪಿಸಿಕೊಂಡಲ್ಲಿ ನಮ್ಮ ನೆಮ್ಮದಿ ಕಳೆಯುವಷ್ಟು ಸಮಸ್ಯೆ ಉದ್ಭವಿಸುವುದಿಲ್ಲ. ಬೇರೆಯವರ ಚೌಕಟ್ಟಿನಲ್ಲಿ ನಮ್ಮ ಬದುಕನ್ನು ರೂಪಿಸಿಕೊಳ್ಳಲು ಮುಂದಾದಾಗ ನಿಜವಾದ ಸಮಸ್ಯೆ ಉದ್ಭವಿಸುತ್ತದೆ. ಈ ಪ್ರಕ್ರಿಯೆಯಲ್ಲಿ ನಮ್ಮ ಜತೆಯಾದವರ ಬಗ್ಗೆ ಅವರು ಸಹಾಯ ಮಾಡಲಿ, ಬಿಡಲಿ ಅವಿಮರ್ಶಾತ್ಮಕವಾಗಿ ಮೌನ ವಹಿಸಿಬಿಡುತ್ತೇವೆ. ಸ್ವೀಕರಿಸುತ್ತೇವೆ. ನಮ್ಮಿಂದ ಅಂತರ ಕಾಯ್ದುಕೊಂಡವರ ಬಗ್ಗೆ ಅದು ಅಗತ್ಯವೋ, ಅನಗತ್ಯವೋ ಒಂದು ತೆರನಾದ ಮಾನಸಿಕ ತಡೆಗೋಡೆ ನಿರ್ಮಿಸಿಕೊಳ್ಳುತ್ತಾ ಹೋಗುತ್ತೇವೆ. ಈ ತಡೆಗೋಡೆಗಳು ವಾಸ್ತವದ ಪರಿಸ್ಥಿತಿ ಆಧರಿಸಿರುತ್ತವೆಯೋ, ಹೇಳಿಕೆ ಮಾತುಗಳ ಕೇಳುವುದರ ಪ್ರತಿಫಲವಾಗಿ ಹುಟ್ಟುತ್ತವೆಯೋ, ನಮ್ಮದೇ ಪೂರ್ವಾಗ್ರಹದ ಕಾರಣಕ್ಕೆ ನಿರ್ಮಾಣವಾಗುತ್ತವೆಯೋ ತಿಳಿಯುವುದೇ ಇಲ್ಲ. ಈ ತಡೆಗೋಡೆ ಮಾನಸಿಕವಾಗಿದ್ದರೂ ನಮ್ಮಲ್ಲಿ ತೀವ್ರವಾದ ತಳಮಳ ಹುಟ್ಟು ಹಾಕುತ್ತವೆ. ಅದರ ಫಲವಾಗಿ ಅಳಿದುಳಿದ ನೆಮ್ಮದಿ ಕಳೆದುಕೊಳ್ಳುತ್ತೇವೆ. ನಮ್ಮ ಪರಿಸ್ಥಿತಿಗೆ ಕಾರ್ಯ ಕಾರಣ ಸಂಬಂಧಗಳೇನೆಂದು ಯೋಚಿಸುವುದು ಕೈಬಿಟ್ಟು ಸಂಬಂಧವಿಲ್ಲದ ಕಡೆ ನೆಮ್ಮದಿ, ಶಾಂತಿ ಅರಸಲು ಹೋಗುತ್ತೇವೆ. ದೇವರು, ಧರ್ಮ, ಆಧ್ಯಾತ್ಮದ ಮೊರೆ ಹೋಗುತ್ತೇವೆ. ಇದು ತಪ್ಪೇನೂ ಅಲ್ಲ. ಅವು ನಮ್ಮ ಮಾನಸಿಕ ಶಾಂತಿ ಹೆಚ್ಚಿಸುವ ಒಂದು ದಿÊೌ್ಯಷಧವಾಗಿವೆ. ಆದರೆ, ಸಮಸ್ಯೆಯ ಮೂಲ, ಅದಕ್ಕಿರುವ ಕಾರಣಗಳ ಪರಾಮರ್ಶೆಯ ಮೂಲಕ ಪರಿಹಾರ ಮಾಡಿಕೊಳ್ಳದ ಹೊರತು ನಿಮ್ಮ ತಳಮಳ ಕಡಿಮೆಯಾಗಲಾರದು. ನಂಬಿಕೆಗೂ ಮತ್ತು ತಾರ್ಕಿಕ ಚಿಂತನೆಗೂ ಇರುವ ವ್ಯತ್ಯಾಸ ನಾವು ಗಮನಿಸದಾಗ ಸಮಸ್ಯೆ ಗಳ ಪರಿಹರಿಸಿಕೊಳ್ಳುವ ದಾರಿಗಳೂ ತೆರೆದುಕೊಳ್ಳುತ್ತವೆ. ನಂಬಿಕೆ ಮಾನಸಿಕ ಸ್ಥೈರ್ಯ ನೀಡಿದರೆ, ತಾರ್ಕಿಕ ಚಿಂತನೆ ಸಮಸ್ಯೆಗೆ ಪರಿಹಾರ ಸೂಚಿಸುತ್ತದೆ. ಯಾರಿಗೂ ತಾವು ವಿನಾಕಾರಣ ಕೆಟ್ಟವರಾಗಬೇಕು ಎನ್ನುವ ಇಚ್ಛೆ ಇರುವುದಿಲ್ಲ. ಹಾಗೆ ನೇರವಾಗಿ ತಮ್ಮ ಕೃತ್ಯಗಳಿಂದ ಕೆಟ್ಟವರಾದರ ಸಂಖ್ಯೆ ಕೂಡಾ ಕಡಿಮೆಯೇ. ಯಾವುದೋ ಒಂದು ಸಂದರ್ಭದ ನಡವಳಿಕೆ, ಮಾತು, ಕ್ರಿಯೆ ಇಂತಹ ಮಾನಸಿಕ ತಡೆಗೋಡೆಗಳನ್ನು ಕಟ್ಟಿರುತ್ತದೆ. ಅದರಲ್ಲಿ ಸಂಬಂಧಪಟ್ಟವರ ಪಾತ್ರ ಕಾಕತಾಳೀಯವಾಗಿರಬಹುದು. ಅದನ್ನು ಉದ್ದೇಶಪೂರ್ವಕ ಎಂದೇ ನಾವು ಭಾವಿಸಬೇಕಾದ ಅಗತ್ಯ ಇಲ್ಲ. ಅದು ಕಾಕತಾಳೀಯವೋ, ಉದ್ದೇಶಪೂರ್ವಕವೋ ಎಂಬುದನ್ನು ನಾವು ಪರಾಮರ್ಶೆ ಮಾಡಿಕೊಳ್ಳದ ಹೊರತು ಆ ತಡೆಗೋಡೆ ನಿವಾರಣೆಯಾಗಲಾರದು. ಒಂದು ಸಮಸ್ಯೆಯಿಂದ ಆರಂಭವಾದ ತಡೆಗೋಡೆ ಸಂಬಂಧವಿಲ್ಲದ ಎಲ್ಲ ವಿಷಯಗಳಿಗೂ ವಿಸ್ತರಿಸುತ್ತಲೇ ಹೋಗುತ್ತದೆ. ಇದು ಮಾನಸಿಕ ನೆಮ್ಮದಿ, ಶಾಂತಿ ಕೆಡಿಸುವ ಅಸ್ತ್ರವಾಗಿ ಬೆಳೆಯುತ್ತಲೇ ಹೋಗುತ್ತದೆ. ಬದುಕನ್ನು ಪ್ರೀತಿಸುವವರು, ಜೀವನದಲ್ಲಿ ಶಾಂತಿ, ನೆಮ್ಮದಿ ಬಯಸುವವರು ಇಂತಹ ತಡೆಗೋಡೆಗಳನ್ನ ಆರಂಭದಲ್ಲಿಯೇ ಕೆಡಹುವ ಪ್ರಯತ್ನ ಮಾಡುತ್ತಾರೆ. ಇಲ್ಲವೇ, ಅಂತಹ ತಡೆಗೋಡೆಗಳ ಅರಿವೇ ಇಲ್ಲದಂತೆ ಇದ್ದು ಬಿಡುತ್ತಾರೆ. ಏನಾದರಾಗಲೀ, ಇಂತಹ ಅರ್ಥಹೀನ ತಡೆಗೋಡೆಗಳನ್ನು ನಿವಾರಿಸಿಕೊಳ್ಳುವುದೇ ನಿಜವಾದ ನೆಮ್ಮದಿಯ ಮೂಲ ಎಂಬುದನ್ನು ನಾವು ಗ್ರಹಿಸಬೇಕು.
ಅವಲೋಕನದಿಂದ ಪರಿವರ್ತನೆ
- ಜಿಡ್ಡು ಕೃಷ್ಣಮೂರ್ತಿ ಶಬ್ದಗಳ ಮೂಲಕ ಹೇಳಬಹುದಾದುದನ್ನು ಅಭಿವ್ಯಕ್ತಿಸುವುದಕ್ಕಾಗಿ ಶಬ್ದಗಳಿವೆ. ಇದೆಲ್ಲದಕ್ಕೂ ಅತೀತವಾಗುವುದನ್ನು ಶಬ್ದಗಳು ಹಿಡಿದಿಡಲಾರವು. ಅಂಥ ಅನುಭವವನ್ನು ಬಣ್ಣಿಸುವುದು ಅರ್ಥಹೀನ. ನಾವು ಮಾಡಬಹುದಾದುದೆಂದರೆ ಬಾಗಿಲುಗಳನ್ನು ತೆರೆದಿಡುವುದು, ವ್ಯವಸ್ಥೆ ಇರುವಾಗ ಮಾತ್ರವೇ ತೆರೆದಿಡಬಹುದಾದ ಬಾಗಿಲುಗಳವು. ವ್ಯವಸ್ಥೆ ಎಂದರೆ ಸಾಮಾಜಿಕ ವ್ಯವಸ್ಥೆಯಲ್ಲ, ಅದು ಅವ್ಯವಸ್ಥೆ; ಆದರೆ ನೀವು 'ಅವಲೋಕನಕಾರ' ಸೃಷ್ಟಿಸುವ ಯಾವುದೇ ವಿಕಾರವಿಲ್ಲದೆ 'ಏನಿದೆಯೋ' ಅದನ್ನು ನೀವು ಯಥಾರ್ಥವಾಗಿ ನೋಡಿದಾಗ ವ್ಯವಸ್ಥೆ ಹುಟ್ಟಿಕೊಳ್ಳುತ್ತದೆ. ವಿಕಾರವೇ ಇಲ್ಲದಿರುವಾಗ ವ್ಯವಸ್ಥೆಯಿರುತ್ತದೆ. ಅದು ತನ್ನದೇ ಆದ ಸೂಕ್ಷ ್ಮವಾದ ಶಿಸ್ತನ್ನು ಉಂಟುಮಾಡುತ್ತದೆ. ಆ ಬಾಗಿಲುಗಳನ್ನು ತೆರದಿರುವುದಷ್ಟೆ ನಾವು ಮಾಡಬಹುದಾದ ಕೆಲಸ. ಆ ಬಾಗಿಲಿನ ಮೂಲಕ ವಾಸ್ತವ ಒಳಗೆ ಬರುವುದೋ ಇಲ್ಲವೋ ಗೊತ್ತಿಲ್ಲ; ನಾವು ಅದನ್ನು ಆಹ್ವಾನಿಸಲಾರೆವು. ನಾವು ಅದೃಷ್ಟಶಾಲಿಗಳಾಗಿದ್ದರೆ, ಆಕಸ್ಮಿಕವೋ ಎಂಬಂತೆ, ಅದು ಒಳಗೆ ಬಂದು ನಮ್ಮನ್ನು ಆಶೀರ್ವದಿಸಬಹುದು. ನೀವು ಅದನ್ನು ಅರಸಲಾರಿರಿ. ಕಡೆಗೂ ಅದೇ ಚೆಲುವು ಒಲವು. ನೀವು ಅದನ್ನು ಅರಸಲಾರಿರಿ. ನೀವು ಅದನ್ನು ಬಯಸಿದರೆ, ಅದು ಸುಖದ ಮುಂದುವರಿಕೆಯಾಗುತ್ತದೆ. ಅದು ಪ್ರೇಮವಲ್ಲ, ಆಗುವ ಆನಂದಾನುಭೂತಿಯು ಸುಖವಲ್ಲ. ಮನಸ್ಸು ಅಂಥ ಧ್ಯಾನಸ್ಥ ಸ್ಥಿತಿಯಲ್ಲಿದ್ದಾಗ, ಅಪಾರವಾದ ಆನಂದಾನುಭೂತಿ ಉಂಟಾಗುತ್ತದೆ. ಆಗ ನಿತ್ಯ ಜೀವನದ ವಿಸಂಗತಿಗಳು, ಕ್ರೌರ್ಯಗಳು ಮತ್ತು ಹಿಂಸೆಗೆ ಸ್ಥಾನವಿರುವುದಿಲ್ಲ. ಆದರೆ ನಾವು ಪ್ರತಿನಿತ್ಯ ಆ ತಳಪಾಯವನ್ನು ಹಾಕಲು ಶ್ರಮವಹಿಸಿ ದುಡಿಯಬೇಕು ಅಷ್ಟೆ. ಆಗ ಧ್ಯಾನಸ್ಥ ಮನಸ್ಥಿತಿಯ ಸ್ವಭಾವವೆನಿಸಿದ ಮೌನದಿಂದ ಚೆಲುವು ಒಲವು ಹೊರಹೊಮ್ಮಬಹುದು. ನಿಯಂತ್ರಕರಹಿತವಾಗಿ ನೀವು 'ಏನಿದೆಯೋ' ಅದನ್ನು ಅವಲೋಕಿಸಿದರೆ ಆಗ 'ಏನಿದೆಯೋ' ಅದರ ಪರಿವರ್ತನೆ ಆಗುತ್ತದೆ. ಒಬ್ಬಾತ ಹಿಂಸ್ರನಾಗಿದ್ದಾನೆ- ಅದು ಮಾನವಸಹಜ ಸ್ವಭಾವ. ನಾನು ಹಿಂಸ್ರನಾಗಿದ್ದೇನೆ. ಹಿಂಸೆಯ ಗಳಿಗೆಯಲ್ಲಿ ಅವಲೋಕನಕಾರನಿಲ್ಲ. ಕೆಲವು ಗಳಿಗೆಗಳ ಬಳಿಕ ಅವಲೋಕನಕಾರ ಹುಟ್ಟಿಕೊಳ್ಳುತ್ತಾನೆ. 'ನಾನು ಹಿಂಸ್ರನಾಗಬಾರದು' ಎಂದು ಆತ ಹೇಳುತ್ತಾನೆ. ಏಕೆಂದರೆ ಆತನಲ್ಲಿ ಅಹಿಂಸೆಯ, ಅಹಿಂಸಾ ಸಿದ್ಧಾಂತದ ಬಿಂಬವಿದೆ; ಇದು ಹಿಂಸೆಯನ್ನು ಆತ ಅವಲೋಕಿಸದಂತೆ ನಿರ್ಬಂಧಿಸುತ್ತದೆ. ಹೀಗಾಗಿ ''ಪ್ರತಿನಿತ್ಯವೂ ನಾನು ಕಮ್ಮಿ ಹಿಂಸಾಪರನಾಗುತ್ತೇನೆ. ಹೀಗೆ ಮಾಡುತ್ತಾ ಕೊನೆಗೊಂದು ದಿನ ಅಹಿಂಸಾವ್ರತಿಯಾಗುತ್ತೆನೆ,'' ಎಂದು ತನಗೆ ತಾನೇ ಹೇಳಿಕೊಳ್ಳುತ್ತಾನೆ. ಈ ಸರಳ ಸಂಗತಿಯಲ್ಲಿ ಅಡಕವಾಗಿರುವ ಅಂಶವೇನೆಂದರೆ ನಾನು ಹಿಂಸಾಪರನಾಗಿದ್ದೇನೆ, ಒಂದಲ್ಲ ಒಂದು ದಿನ ಅಹಿಂಸಾಪರನಾಗುತ್ತೇನೆ ಎಂದು. ಮೊದಲನೆಯದು ಇದರಲ್ಲಿ ಅವಲೋಕನಕಾರ ಮತ್ತು ಅವಲೋಕಿತ ಎರಡೂ ಇವೆ. ಎರಡನೆಯದು, ನಾನು ಅಹಿಂಸಾಪರನಾಗುವ ಸ್ಥಿತಿ ತಲುಪುವುದಕ್ಕೆ ಮೊದಲು ಹಿಂಸೆಯ ಬೀಜಗಳನ್ನು ಬಿತ್ತುತ್ತೇನೆ. ಆಮೇಲೆ ನಾನು ಪೂರ್ತಿ ಅಹಿಂಸಾಪರನಾಗುವುದಕ್ಕೆ ಮೊದಲು ಕಾಲದ ಅಂಶವೂ ಅಂದರೆ ಹಿಂಸೆ ಮತ್ತು ಅಹಿಂಸೆಯ ನಡುವಿನ ಅವಕಾಶವೂ ಇದೆ. ಇದರಲ್ಲಿ 'ಏನಿದೆಯೊ' ಅದನ್ನು ಅವಲೋಕನ ಮಾಡಿ. 'ಏನಿದೆಯೊ' ಅದನ್ನು ನೀವು ಹೇಗೆ ಅವಲೋಕಿಸುತ್ತೀರಿ? ನೀವು ಹಿಂಸೆಯ ಬಗೆಗಿನ ನಿಮ್ಮ ಬಿಂಬ ಸಹಿತವಾಗಿ 'ನಾನು ಹಿಂಸಾಪರನಾಗಬಾರದು' ಎಂದು ಹೇಳಿಕೊಳ್ಳುತ್ತ ನಿಮ್ಮ ಮನಸ್ಸಿನಿಂದ ಅವಲೋಕಿಸುತ್ತೀರಾ? ಅಥವಾ ಶಬ್ದರಹಿತವಾದ, ಬಿಂಬರಹಿತವಾದ ಅವಲೋಕನವೆಂಬುದು ಇದೆಯೇ? ಬಿಂಬರಹಿತವಾಗಿ ಅವಲೋಕನ ಮಾಡಲು ಅಸಾಧಾರಣ ಚೈತನ್ಯ ಬೇಕು. ಹಿಂಸೆಯನ್ನು ದಮನಿಸುವ ಮೂಲಕ ಆದರ್ಶವನ್ನು ಅರಸುವ ಮೂಲಕ ನೀವು ನಿಮ್ಮ ಶಕ್ತಿಯ ಅಪವ್ಯಯ ಮಾಡುತ್ತಿದ್ದೀರಿ. ಇದೆಲ್ಲವೂ ಅಪವ್ಯಯವೇ.
ಸಹಜ ಅಭಿವ್ಯಕ್ತಿಯ ಸೌಂದರ್ಯ
-ಶ್ರೀನಿವಾಸ ಅರ್ಕ ನಿಮ್ಮ ಅಂತರಂಗದ ತೃಪ್ತಿಗಾಗಿ ನೀವು ಹಾಡಿದಾಗ, ನಿಮ್ಮ ಕಂಠ ಸುಶ್ರಾವ್ಯವಾಗಿರುತ್ತದೆ. ಬೇರೆಯವರಿಗಾಗಿ ಹಾಡಲು ನೀವು ಪ್ರಯತ್ನಿಸಿದಾಗ, ಈ ಸಹಜವಾದ, ಅಂತರಂಗದ ರಾಗ ಕಳೆದುಹೋಗಬಹುದು. ನೀವು ಆತ್ಮ ತೃಪ್ತಿಗೆ, ಸಾಕ್ಷಾತ್ಕಾರಕ್ಕೆಂದು ನೃತ್ಯ ಮಾಡಬೇಕೆಂದಾಗ, ಯಾವುದೇ ಪೂರ್ವ ಸಿದ್ಧತೆ ಇಲ್ಲದೆ, ನೀವು ಸಹಜವಾಗಿ ನರ್ತಿಸಬಲ್ಲಿರಿ. ಆ ಸಂದರ್ಭದಲ್ಲಿ ಹಾಡು ಮತ್ತು ನೃತ್ಯ ನಿಮ್ಮ ಹೃದಯದ ಅಭಿವ್ಯಕ್ತಿಗಳಾಗಿರುತ್ತವೆ. ಮನಸ್ಸು ಕೇವಲ ದರ್ಶಕನಾಗಿರುತ್ತದೆ. ಹೃದಯ, ಯಾವುದೇ ತಾಳವಾದ್ಯಗಳ, ಪ್ರೇಕ್ಷಕರ ಅಗತ್ಯ ಬೀಳದ ಮಾರ್ಗದರ್ಶಿಯಾಗುತ್ತದೆ. ನೃತ್ಯ ನಿಮ್ಮ ನಿಜವಾದ ಅಭಿವ್ಯಕ್ತಿ. ಈ ನೃತ್ಯವನ್ನು ನೀವು ವ್ಯವಸಾಯದ ದೃಷ್ಟಿಯಿಂದ ಮಾಡುತ್ತಿಲ್ಲ. ಯಾವುದೇ ಬಹುಮಾನ ಪಡೆಯಲು ನರ್ತಿಸುತ್ತಿಲ್ಲ ಅಥವಾ ಪ್ರೇಕ್ಷಕರ ಕೈ ಚಪ್ಪಾಳೆಯ ಸದ್ದನ್ನು ಕೇಳಲೂ ನೀವು ನರ್ತಿಸುತ್ತಿಲ್ಲ. ಯಾವುದೇ ಕೀಳು ಕಾರಣಗಳಿಲ್ಲದೆ ನೃತ್ಯ ಮಾಡುವುದು, ಆತ್ಮತೃಪ್ತಿ ತರುವ ಅನುಭವ. ಈ ನೃತ್ಯಕ್ಕೆ ತರಬೇತಿ ಬೇಕಿಲ್ಲ. ತಾಲೀಮು ನಡೆಸಬೇಕಿಲ್ಲ. ನಿಮ್ಮಲ್ಲಿರುವ ಎಲ್ಲ ಅಂಗಗಳು ಇದರ ಭಾಗವಾಗುತ್ತವೆ. ನೃತ್ಯ ಮಾಡುವಾಗ ಅವು ಅದರಲ್ಲಿ ಭಾಗವಹಿಸುತ್ತವೆ. ನೆಲ ಡೊಂಕಾಗಿದೆಯೇ, ಮಟ್ಟಸವಾಗಿದೆಯೇ, ಮೋಡಕವಿದ ವಾತಾವರಣವೇ, ಗಾಳಿ ಜೋರಾಗಿ ಬೀಸುತ್ತಿದೆಯೇ, ಪ್ರೇಕ್ಷಕರು ಇದ್ದಾರೆಯೇ, ಇಲ್ಲವೇ ಎಂಬುದರ ಕಡೆ ನಿಮ್ಮ ಜ್ಞಾನ ಆಗ ಹೋಗುವುದಿಲ್ಲ. ನಿಮಗೆ ನೃತ್ಯ ಮಾಡಬೇಕೆನ್ನಿಸುತ್ತದೆ, ಹಾಗಾಗಿ ನರ್ತಿಸುತ್ತೀರಿ. ಹಾಡುವುದು, ಇಂತಹದೇ ಪ್ರಕ್ರಿಯೆ. ಹಕ್ಕಿಗಳು ನಿಶಾಂತವಾಗಿ ಹಾಡುತ್ತಿರುತ್ತವೆ. ಕಾರಣ ಅದು ಅವುಗಳ ಸಹಜ ಅಭಿವ್ಯಕ್ತಿ. ಅಹಂಕಾರದಲ್ಲಿ ಜೀವಿಸುವವರು ಹಾಡಲಾರರು, ನರ್ತಿಸಲಾರರು. ಅವರ ನೃತ್ಯದಲ್ಲಿ ಕಪಟವಿರುತ್ತದೆ. ಅವರು ಒಂದೊಂದು ಹೆಜ್ಜೆಯನ್ನು ಲೆಕ್ಕಾಚಾರ ಮಾಡಿ ಇಡುತ್ತಾರೆ. ಅವರಿಗೆ ನೃತ್ಯ ಮಾಡುವಾಗ ಇನ್ನೊಬ್ಬರ ಮೇಲೆ ಪ್ರಭಾವ ಬೀರಬೇಕಾಗಿರುತ್ತದೆ. ಇನ್ನೊಬ್ಬರನ್ನು ಸಂತೋಷಗೊಳಿಸಬೇಕೆಂಬ ಇರಾದೆ ಇರುತ್ತದೆ. ಅನೇಕ ಬಾರಿ ಅಭಿಮಾನ ಮತ್ತು ಅಹಂಕಾರ ಈ ಪದಗಳನ್ನು ಸಮನಾರ್ಥದಲ್ಲಿ ಉಪಯೋಗಿಸಲಾಗುತ್ತದೆ. ಆದರೆ ಅವುಗಳ ಅರ್ಥದಲ್ಲಿ ತುಂಬಾ ವ್ಯತ್ಯಾಸವಿದೆ. ಅಭಿಮಾನ ಎಂಬುದು ಆನಂದಾಭಿವ್ಯಕ್ತಿಯ ಮೊದಲ ಹೆಜ್ಜೆ. ನಿಮಗೆ ನಿಮ್ಮ ಕೆಲಸದಲ್ಲಿ ಅಭಿಮಾನವಿದೆ. ಅಂದರೆ ನೀವು ಈ ಕೆಲಸ ಮಾಡುವಾಗ ಆನಂದಿಸುತ್ತೀರಿ ಎಂದರ್ಥ. ಇದು ನಿಮ್ಮ ಪ್ರವೃತ್ತಿಗೆ, ಅಭಿರುಚಿಗೆ ತಕ್ಕದಾಗಿದೆ. ನಿಮ್ಮ ಕೆಲಸದಲ್ಲಿ ನಿಮಗೆ ಅಭಿಮಾನವಿಲ್ಲ ಎಂದರೆ ನೀವು ತಪ್ಪು ಕೆಲಸದಲ್ಲಿದ್ದೀರಿ ಎಂದರ್ಥ. ನೀವು ಅಥವಾ ನಿಮ್ಮ ಪ್ರೀತಿ ಪಾತ್ರರಾದವರು ಏನನ್ನಾದರೂ ಹಿರಿಯದನ್ನು ಗಳಿಸಿದಾಗನಿಮಗೆ ಅಭಿಮಾನವೆನಿಸುತ್ತದೆ. ನಿಮ್ಮ ಕಾರ್ಯ ಕುಶಲತೆಯಲ್ಲಿ, ಕಾರ್ಯಕ್ಷಮತೆಯಲ್ಲಿ ಆತ್ಮ ವಿಶ್ವಾಸ ಮೂಡಿದಾಗ ನಿಮಗೆ ಅಭಿಮಾನವೆನಿಸುತ್ತದೆ. ಅಭಿಮಾನ ಎಂಬುದು ನಿಮ್ಮ ಬಗ್ಗೆ ಉನ್ನತ ಮಟ್ಟದ ಚಿತ್ರವನ್ನು ನೀಡುತ್ತದೆ. ಅದು ನಿಮ್ಮ ವ್ಯಕ್ತಿತ್ವವನ್ನೇ ಆವರಿಸಿಕೊಂಡರೆ, ಅದು ದುರಭಿಮಾನವೆನಿಸುತ್ತದೆ. ವಿನಯದಿಂದ ಕೂಡಿದ ಅಭಿಮಾನ ಆರೋಗ್ಯಕರವಾದದ್ದು. ದುರಭಿಮಾನ ವಿನಾಶಕಾರಿ. ಆದರೂ ಆತ್ಮಪ್ರಜ್ಞೆಯ ಅವಕೋಕನಕ್ಕೆ ಸ್ವಲ್ಪ ಮಟ್ಟಿನ ಅಭಿಮಾನ ಇರಬೇಕು. ಸ್ವಾರ್ಥದಿಂದ ಪ್ರೇರಿತವಾದ ಅಭಿಮಾನನಿಮ್ಮನ್ನು ನಿಮ್ಮದೇಜಾಲದಲ್ಲಿ ಸಿಕ್ಕಿಸುತ್ತಾ ಹೋಗುತ್ತದೆ. ಜೇಡ ತನ್ನ ಜಾಲದಿಂದ ಹೊರಗೆ ಬರಬಲ್ಲುದು. ಆದರೆ ದುರಭಿಮಾನದ ಜಾಲ ಅದೃಶ್ಯವಾದದ್ದು, ಹಾಗೂ ಅನೇಕ ಬಾರಿ ಕ್ಲಿಷ್ಟವಾದದ್ದು. ಅಹಂಕಾರ ಎಂಬುದು ಅಭಿಮಾನದ ತುರೀಯಾವಸ್ಥೆ. ಇದು ಸುಳ್ಳು ಅಭಿಮಾನದ ರೂಪ. ಆಹಂಕಾರ ಎಂಬುದು ಬೇರೆಯವರು ನಿಮ್ಮ ಬಗ್ಗೆ ಏನು ಆಲೋಚಿಸುತ್ತಾರೆ ಎಂಬುದರ ಮೇಲೆ ನಿರ್ಧಾರಿತವಾಗುತ್ತದೆ. ಇದು ಚಂಚಲ ಎಂಬುದು ಬಿಡಿಸಿ ಹೇಳಬೇಕಾಗಿಲ್ಲ. ಏಕೆಂದರೆ ಬೇರೆಯವರ ಅಭಿಪ್ರಾಯ ಒಂದೇ ರೀತಿ ಇರುವುದಿಲ್ಲ ಅಲ್ಲವೇ?
ಮೂರನೆಯ ಹಂತದ ಜ್ಞಾನ
-ಶ್ರೀಶ್ರೀ ರವಿಶಂಕರ್ ಮೂರನೆಯ ಹಂತದ ಜ್ಞಾನವೆಂದರೆ ಅಂತಃಸ್ಫುರಣೆಯ ಜ್ಞಾನ. ಅನೇಕ ಸಲ ನಿಮ್ಮ ಭಾವನೆಗಳಿಂದ, ನಿಮ್ಮದೆ ರಾಗಗಳಿಂದ ಮತ್ತು ದ್ವೇಷಗಳಿಂದ ನೀವು, ''ಓ! ಇದು ನನ್ನ ಅಂತರಾಳದ ಭಾವನೆ, ಇದು ನನ್ನ ಜ್ಞಾನ,'' ಎನ್ನುತ್ತೀರಿ. ಇಲ್ಲ! ಇದನ್ನು ಮಾಯೆ ಎನ್ನುತ್ತಾರೆ- 'ಯೋಗಮಾಯೆ' ಅದರೊಳಗೆ ಹೊಕ್ಕಬೇಡಿ! ಆತ್ಮದ ಜ್ಞಾನವನ್ನು ಸನ್ಮಾನಿಸಲು ನಿಮ್ಮಿಂದ ಯಾವಾಗ ಸಾಧ್ಯವಾಗುತ್ತದೆ? ನೀವು ಪೂರ್ಣವಾಗಿ ಸ್ತಬ್ಧರಾದಾಗ. ಆದ್ದರಿಂದ, ಆರಂಭದಲ್ಲಿ ಕೆಲವರಿಗೆ ಮಾತ್ರ ಇದೇಕೆ ಕೆಲಸ ಮಾಡುತ್ತದೆ? ನಿಮಗೇಕೆ ಕೆಲಸ ಮಾಡುವುದಿಲ್ಲ? ಏಕೆಂದರೆ ನಿಮ್ಮಲ್ಲಿ ಸದಾ ಸ್ವಲ್ಪ ರಾಗ ವಿರುತ್ತದೆ, ಸ್ವಲ್ಪ ದ್ವೇಷ ವಿರುತ್ತದೆ. ಕೆಲವು ರಾಗಗಳು ಮತ್ತು ದ್ವೇಷಗಳು ಮತ್ತು ಇದರಿಂದ ನಿಮ್ಮಲ್ಲಿ ಗೊಂದಲವುಂಟಾಗುತ್ತದೆ. ನೀವು ಮಾಡುವ ಖಾಲಿ ಮತ್ತು ಟೊಳ್ಳಾದ ಧ್ಯಾನದಿಂದ ಈ ಹಂತದ ಜ್ಞಾನವನ್ನು, ಅಂತಃಸ್ಫುರಣೆಯನ್ನು ಪಡೆದುಕೊಳ್ಳಲು ಬಹಳ ಬಹಳ ಸಹಾಯಕವಾಗಿರುತ್ತದೆ. ಇದು ಇಂದ್ರಿಯಗಳ ಹಂತವನ್ನು ಮೀರುವಂತದ್ದು, ಬುದ್ಧಿಯನ್ನು ಮೆಟ್ಟಿ ನಿಂತಿರುವಂತದ್ದು. ಈಗ, ಇದನ್ನು ಯಾರಿಗಾದರೂ ಸರಿ, ಹೇಗೆ ವಿವರಿಸಿ ಹೇಳುವುದು? ಇದು ದೊಡ್ಡ ಸಮಸ್ಯೆ. ಆರಂಭದ ಆವಿಷ್ಕಾರವು ಅಂತಃಸ್ಫುರಣೆಯಿಂದ ಬರುತ್ತದೆ. ನಂತರ ಬುದ್ಧಿ ಅದರ ಮೇಲೆ ಆಟವಾಡುತ್ತದೆ ಮತ್ತು ಅದನ್ನು ಮತ್ತಷ್ಟು ಮುಂದಕ್ಕೆ ಬೆಳೆಸುತ್ತದೆ. ಪ್ರತಿಯೊಂದು ಅದ್ಭುತವಾದ ಸಂಗೀತ ಅಥವಾ ಕವಿತೆ ಆ ಸ್ಥಳದಿಂದ ಬಂದಿದೆ. ಪ್ರತಿಯೊಂದೂ ಸಹ! ಇದರಿಂದ ಪ್ರಾಯೋಗಿಕವಾದ ಲಾಭವನ್ನು ಎಲ್ಲರೂ ಪಡೆಯಬೇಕು. ನಿಮ್ಮ ಬುದ್ಧಿ ತೀರ್ಪನ್ನು ನೀಡುತ್ತಲಿರುತ್ತದೆ. ಆದ್ದರಿಂದ ಬುದ್ಧಿಯ ಮೇಲೆ ಪೂರ್ಣವಾಗಿ ಸದಾ ಅವಲಂಬಿಸಿರಬಾರದು. ''ಹೌದು ನನ್ನ ಮನಸ್ಸು ಒಂದಲ್ಲ ಒಂದು ಹೇಳುತ್ತಲಿರುತ್ತದೆ. ಪರವಾಗಿಲ್ಲ ಅದನ್ನು ನಾನು ಲೆಕ್ಕಿಸುವುದಿಲ್ಲ'' ಎನ್ನುವುದು ಮೊದಲ ಹೆಜ್ಜೆ. ಮನಸ್ಸಿನ ಈ ಆಟಗಳಲ್ಲಿ ಮಾರು ಹೋಗಬೇಡಿ. ಅವುಗಳಿಗೆ ಸಾಕ್ಷಿಯಾಗಿ. ಮನೆಯಲ್ಲಿ ಏನಾದರೂ ವಾದ ನಡೆದಾಗ ಅಥವಾ ಸ್ನೇಹಿತರ ನಡುವೆ ಜಗಳ ನಡೆದಾಗ ಏನೋ ಆಗುತ್ತದೆ. ಕೆಲವೊಮ್ಮೆ ಒಂದು ಹೆಜ್ಜೆ ಮುಂದಿಟ್ಟು, ''ಓ! ಇದೇನು? ಇದನ್ನೆಲ್ಲಾ ಬಹಳ ನೋಡಿದ್ದೇನೆ. ಇದರಿಂದ ನಾನು ಬಾಧೆಗೆ ಒಳಗಾಗುವುದಿಲ್ಲ'' ಎನ್ನುತ್ತೀರಿ. ನಿಧಾನವಾಗಿ ಈ ಹಂತಕ್ಕೆ ಪಯಣಿಸುತ್ತೀರಿ. ಎಲ್ಲರ ಜೀವನದಲ್ಲೂ ಇದು ನಡೆಯುತ್ತಿದೆ. ಇಷ್ಟು ಅರಿವಿದ್ದರೆ ಸಾಕು; ಮೂರನೆಯ ಹಂತದ ಜ್ಞಾನದೆಡೆಗೆ ಶೀಘ್ರವಾಗಿ ತೆರಳುತ್ತೀರಿ. ಅಂತಃಸ್ಫುರಣೆ ಎದ್ದಾಗ ಕುಳಿತು ಲೆಕ್ಕಾಚಾರ ಮಾಡುವುದಿಲ್ಲ. ಅಂತಃಸ್ಫುರಣೆಯೆಂದರೆ, ವಿಚಾರವನ್ನೂ ಮೀರಿ ತಾನಾಗಿಯೆ ಬರುವಂತದ್ದು. ಆರ್ಕಿಮೆಡಿಸ್ ಆಲೋಚಿಸಿ ಆಲೋಚಿಸಿ ದಣಿದ. ಆದರೆ ಏನು ಕೆಲಸ ಮಾಡಲಿಲ್ಲ! ಆದರೆ ವಿಶ್ರಮಿಸಿದಾಗ ದಿಢೀರೆಂದು ಆರ್ಕಿಮೆಡಿಸ್ನ ತತ್ವ ಆತನಿಗೆ ಹೊಳೆಯಿತು. ಅದೇ ರೀತಿಯಾಗಿ ಅನೇಕ ವಿಜ್ಞಾನಿಗಳು ಆರನೆಯ ಜ್ಞಾನದಿಂದ ಏನೋ ಒಂದನ್ನು ಪಡೆದರು. ಅದು ಅಂತಃಸ್ಫುರಣೆ ಮತ್ತು ಅದನ್ನು ಬೆಳೆಸಬೇಕು. ಆದ್ದರಿಂದ, ಕೇವಲ ನಿಮ್ಮ ಪಂಚೇಂದ್ರಿಗಳ ಮೇಲೆ ಮಾತ್ರ ಅಥವಾ ಬುದ್ಧಿಯ ಮೇಲೆ ಮಾತ್ರ ಅವಲಂಬಿಸಬೇಡಿ. ಅಂತಃಸ್ಫುರುಣೆಯ ಜ್ಞಾನವೂ ಮುಖ್ಯ. ಅದು ಆಳವಾದದ್ದು, ಸತ್ಯಕ್ಕೆ ಸಮೀಪವಾದದ್ದು, ವಾಸ್ತವತೆಗೆ ನಿಲುಕಿರುವಂತದ್ದು. ಇಲ್ಲವಾದರೆ ನೀವು ತೆಗೆದುಕೊಳ್ಳುವ ನಿರ್ಧಾರಗಳೆಲ್ಲವೂ ಸಾಮಾನ್ಯವಾಗಿ ತಪ್ಪಾಗುತ್ತಿರುವುದನ್ನು ಕಾಣುವಿರಿ. ನಿಮ್ಮ ಅಂತಃಸ್ಫುರಣೆ ನಿಮ್ಮ ಕೈಬಿಡುವುದಿಲ್ಲ
ಬೋಧಿವೃಕ್ಷ: ತರಳಬಾಳು ಹುಣ್ಣಿಮೆಯ ಪ್ರವರ್ತಕರು
*ಬೋಧಿವೃಕ್ಷ: ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ''ನಾವು ಹುಟ್ಟಾ ಜಾತಿ ವಿರೋಧಿಗಳು. ನಮಗೆ ನೆನಪಿರುವಂತೆ ಒಂಬತ್ತನೇ ವಯಸ್ಸಿನಿಂದ ಎಲ್ಲ ಜಾತಿಯ ಶಾಲಾ ಬಾಲಕರೊಂದಿಗೆ ಸಂಬಂಧ- ಸಮರಸ ಇತ್ತು. ಅನೇಕ ಜಾತಿಯ ಜನರಿಗೆ ನಾವು ಅಚ್ಚಮೆಚ್ಚಿನವರಾಗಿದ್ದೆವು. ಕಾಶಿಯಲ್ಲಿ ಓದುತ್ತಿದ್ದಾಗ ಒಂದು ದೃಶ್ಯ ನಮಗೆ ಬಹಳ ಅಸಹ್ಯವಾಗಿ ಕಂಡಿತು. ಜಾಡಮಾಲಿಗಳು ಚರಂಡಿಗಳನ್ನು ತೊಳೆಯಲಿಕ್ಕೆ, ಕಕ್ಕಸ್ಸು ಎತ್ತಿ ಹಾಕಲಿಕ್ಕೆ ರಸ್ತೆಯಲ್ಲಿ ಬಂದರೆ ಅವರು ತಮ್ಮ ಬರುವಿಕೆಯ ಸೂಚನಾರ್ಥಕವಾಗಿ ದಾರಿಯುದ್ದಕ್ಕೂ ಕೂಗಿಕೊಂಡು ಹೋಗಬೇಕಿತ್ತು. ನಮ್ಮಂತೆಯೇ ಅವರು ಮನುಷ್ಯರು. ಹಿರಿಯ ಕುಲದವರ ಬಗ್ಗೆ ಅವರು ಬಹಳ ನಯ, ವಿನಯ ಭಕ್ತಿ ವಿಶ್ವಾಸಗಳಿಂದ ನಡೆದುಕೊಳ್ಳುತ್ತಿದ್ದರು. ಅವರನ್ನು ಅತ್ಯಂತ ನಿಕೃಷ್ಟ ದೃಷ್ಟಿಯಿಂದ ಕಾಣುವುದು, ಅವರು ಕೂಗಿಕೊಂಡು ಬರುತ್ತಿದ್ದರೆ ಸತ್ತೆನೋ, ಕೆಟ್ಟೆನೋ ಎಂಬ ರೀತಿ ದಾರಿ ಬಿಟ್ಟು ಸರಿಯುವುದು. ಇದು ನಮಗೆ ಆಗುತ್ತಿರಲಿಲ್ಲ. ಇದಕ್ಕಾಗಿ ಅಲ್ಲಿಯ ಜನ ನಮ್ಮನ್ನು ಬಹಳ ತಿರಸ್ಕಾರದ ದೃಷ್ಟಿಯಿಂದ ಕಾಣುತ್ತಿದ್ದರು. ಅಂಥವರಿಗೆ ನಮ್ಮ ಪ್ರತಿವಾದ ಈ ರೀತಿ ಇರುತ್ತಿತ್ತು. ದೇವರು ಎಲ್ಲರನ್ನೂ ಸೃಷ್ಟಿಸಿದ್ದಾನೆಂದು ತಿಳಿದಿರುವ ನಾವು ಎಲ್ಲರನ್ನೂ ದೇವರ ಮಕ್ಕಳಾಗಿ ಸಮಾನವಾಗಿ ಕಾಣಬೇಕು. ಬಡತನದ ಕಾರಣ, ಪರಂಪರೆಯಿಂದ ಅವರು ಈ ಬದುಕು ಮಾಡುತ್ತಿರಬಹುದು. ಅವರಲ್ಲಿ ನಮಗೆ ಕೃತಜ್ಞತೆ ಇರಬೇಕು. ಈ ಪದ್ಧತಿ ತಪ್ಪಿಸಬೇಕು. ಜಾತಿಯ ನಿರ್ಮೂಲನಕ್ಕೆ ಯತ್ನಿಸಿ ನಾವು ಬಹಳ ನಿಷ್ಟುರಕ್ಕೆ ಗುರಿಯಾಗಿದ್ದೇವೆ. ಯಾರಿಗೇ ಆಗಲಿ ಸಮಾಜವನ್ನು ಪ್ರತಿಭಟಿಸುವುದು ಬಹಳ ಕಷ್ಟ. ಇದರಿಂದ ಅನೇಕ ವ್ಯಾವಹಾರಿಕ ತೊಂದರೆ ಉದ್ಭವಿಸುತ್ತವೆ. ಈ ಕಾರಣದಿಂದ ನಮ್ಮಲ್ಲಿ ಜಾತಿಯತೆ ಅಳಿಯಬೇಕು...'' ಹೀಗೆ ತಮ್ಮ ಬಾಲ್ಯದಲ್ಲಿ ಕಂಡ ಅನುಭವದಿಂದ ತಮ್ಮ ಬದುಕಿನಲ್ಲಿ ಜಾತಿ ನಿರ್ಮೂಲನೆಗೆ ಪಣತೊಟ್ಟವರು ಲಿಂ. ಶ್ರೀ ಶಿವಕುಮಾರ ಶಿವಾಚಾರ್ಯರು. ಸ್ವಾತಂತ್ರ್ಯ ಪೂರ್ವದಲ್ಲಿಯೇ ದೀನರಿಗೆ ಸಮಾನತೆಯನ್ನು ನೀಡಿದವರು. ಸಮುದಾಯದ ಪ್ರತಿರೋಧವನ್ನು ಮೀರಿ ದಲಿತರಿಗೆ ಸಹಪಂಕ್ತಿ ಭೋಜನ ನೀಡಿದವರು. ಒಬ್ಬ ಸನ್ಯಾಸಿಯಿಂದ ಒಂದು ಸಮುದಾಯ ಹೇಗೆ ಮುಖ್ಯವಾಹಿನಿಗೆ ಬರಬಹುದೆಂದು ತೋರಿಸಿಕೊಟ್ಟವರು. ಅವರು ಹಾಕಿದ ಅಕ್ಷರ, ಅನ್ನದಾಸೋಹ, ಕಾಯಕ ಪ್ರಜ್ಞೆ, ಏಕತೆ, ಭ್ರಾತೃತ್ವ, ಸಮಾನತೆಯ ಸಂದೇಶಗಳನ್ನು ವರ್ಷಕ್ಕೊಮ್ಮೆ ನಡೆಯುವ ತರಳಬಾಳು ಹುಣ್ಣಿಮೆ ಸಾಕಾರಗೊಳಿಸುತ್ತಿದೆ. ಇಂದಿನ ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮಿಗಳು ಹುಣ್ಣಿಮೆಗೆ ಮತ್ತಷ್ಟು ಹೊಳಪು ನೀಡಿದ್ದಾರೆ. ಹೆಚ್ಚುತ್ತಿರುವ ಆಧುನಿಕತೆಯ ಭರಾಟೆಯಲ್ಲಿ ಶಾಂತಿ, ನೆಮ್ಮದಿ ಕಳೆದುಕೊಳ್ಳುತ್ತಿರುವ ಇಂದಿನ ಪೀಳಿಗೆಗೆ ತರಳಬಾಳು ಹುಣ್ಣಿಮೆ ವಿಚಾರಗಳು ಪರಿಹಾರವಾಗಬಹುದು.
ಶ್ರೀಮದ್ ಉಜ್ಜಯಿನಿ ಸದ್ಧರ್ಮ ಶ್ರೀ ತರಳಬಾಳು ಜಗದ್ಗುರು ಪರಂಪರೆಯಲ್ಲಿ ಇಪ್ಪತ್ತನೆಯ ಪೀಠಾಧಿಪತಿಗಳು ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿ. ಅವರು ಹುಟ್ಟು ಹಾಕಿದ 'ತರಳಬಾಳು ಹುಣ್ಣಿಮೆ' ಇದೀಗ ಏಳನೇ ದಶಕದ ಹೊಸ್ತಿಲಲ್ಲಿದೆ. ಜಾತಿ, ಮತ, ಪಂಥ, ಧರ್ಮ ಮೀರಿದ ಈ ಹುಣ್ಣಿಮೆ ಈ ಬಾರಿ ದಾವಣಗೆರೆ ಜಿಲ್ಲೆಯ ಜಗಳೂರಿನಲ್ಲಿ ನಡೆಯುತ್ತಿದೆ. ಶ್ರೀಗಳ ದೂರದೃಷ್ಟಿಯ ಈ ಹುಣ್ಣಿಮೆ ನಾಡಿನ ಹಿರಿಮೆ, ಗರಿಮೆಯನ್ನು ಹೆಚ್ಚಿಸಿದೆ. ಬಸವಣ್ಣನವರ ತತ್ವಾದರ್ಶಗಳನ್ನು ಕೃತಿಯಲ್ಲಿ ಅಳವಡಿಸಿಕೊಂಡವರು, ಅವರ ಜೀವನ ಚರಿತ್ರೆಯನ್ನು ಬಲ್ಲವರು ಒಪ್ಪದೇ ಇರಲಾರರು. ಜಾತಿ ನಿರ್ಮೂಲನೆ ಅವರ ಕನಸಾಗಿತ್ತು. ಅಂತಹ ಶ್ರೀಗಳ ಬಾಲ್ಯ ಜೀವನದ ಒಂದು ಪ್ರಸಂಗ ನೆನಪಿಸಿಕೊಳ್ಳುವುದು ಇಂದಿನ ಪೀಳಿಗೆಗೆ ಸೂಕ್ತವೆನಿಸುತ್ತದೆ.
ಬೋಧಿವೃಕ್ಷ: ಕರ್ಮದಲ್ಲಿ ಅಕರ್ಮವನ್ನು ಕಾಣುವುದು?
* ಬೋಧಿವೃಕ್ಷ: ಶ್ರೀ ಶ್ರೀ ರವಿಶಂಕರ್ ಕರ್ಮ ಎಂದರೆ ಕಾರ್ಯ. ಕಾರ್ಯವನ್ನು ಮಾಡಲು ಬಯಸುವುದೂ ಸಹ ಕರ್ಮ. ಕಾರ್ಯದ ಬೀಜವು ಸುಪ್ತವಾದ ಕರ್ಮ. ಬೀಜವು ಮೊಳಕೆಯೊಡೆದು ಮರವಾಗುವುದು ಕರ್ಮ. ಮರವು ಮತ್ತೆ ಬೀಜವಾಗುವುದು ಕರ್ಮದ ಸಂಸ್ಕಾರ. ಕರ್ಮದ ಸಂಸ್ಕಾರದಿಂದ ಇನ್ನೂ ಹೆಚ್ಚು ಕರ್ಮವುಂಟಾಗುತ್ತದೆ. ಆದ್ದರಿಂದ ಕರ್ಮವೆಂದರೆ ಮನಸ್ಸಿನಲ್ಲಿರುವ ಅತೀ ಪ್ರಬಲವಾದ ಅಚ್ಚು, ಅದರಿಂದ ಉಂಟಾಗಿರುವ ಕಾರ್ಯ ಮತ್ತು ಭವಿಷ್ಯದಲ್ಲಿ ಅದು ಮನಸ್ಸಿನಲ್ಲಿ ಉಂಟು ಮಾಡಲಿರುವ ಅಚ್ಚು. ಈಗ, ವರ್ತಮಾನದಲ್ಲಿ ಮಾಡುವ ಕಾರ್ಯವು ಅಚ್ಚುಗಳನ್ನು ಉಂಟು ಮಾಡುತ್ತದೆ. ಅದರಿಂದಾಗಿ ಮತ್ತೊಂದು ಕಾರ್ಯವನ್ನು ಮಾಡುತ್ತೀರಿ. ಆದ್ದರಿಂದ, ಕಾರ್ಯದ ಅಚ್ಚು, ಕಾರ್ಯ ಮತ್ತು ಅದರ ಪ್ರಭಾವವನ್ನು ಕರ್ಮ ಎಂದು ಕರೆಯುತ್ತಾರೆ. ಇಡೀ ವಿಶ್ವವು ಕರ್ಮದಿಂದ ಪೂರ್ಣವಾಗಿ ತುಂಬಿದೆ. ಎಲ್ಲೆಡೆಯೂ ಕ್ರಿಯಾಶೀಲತೆಯಿದೆ. ಕರ್ಮದಿಂದ ಬಾಧಿತರಾಗದೆ ಇರುವುದು ಯೋಗ.ಭಗವದ್ಗೀತೆಯಲ್ಲಿ ಭಗವಾನ್ ಕೃಷ್ಣನು, ''ಯಾರು ಕರ್ಮದಲ್ಲಿ ಅಕರ್ಮವನ್ನು ಕಾಣುತ್ತಾರೊ ಮತ್ತು ಅಕರ್ಮದಲ್ಲಿ ಕರ್ಮವನ್ನು ಕಾಣುತ್ತಾರೊ, ಅವರೇ ಎಲ್ಲಾ ಮಾನವರಲ್ಲಿ ಅತಿ ಬುದ್ಧಿವಂತರು,'' ಎನ್ನುತ್ತಾನೆ. ಇದರ ಅರ್ಥವೇನು? ಬಹಳಷ್ಟು ಚಟುವಟಿಕೆಯಿದೆ ಮತ್ತು ಪ್ರತಿ ಕಾರ್ಯದ ಆಳದಲ್ಲೂ ಸ್ವಲ್ಪ ಮೌನವಿದೆ. ಎಲ್ಲಾ ಚಟುವಟಿಕೆಯಲ್ಲೂ ಸ್ತಬ್ಧತೆಯಿದೆ. ಈ ಸ್ತಬ್ಧತೆಯನ್ನು ಗುರುತಿಸುವುದು ಎಂದರೆ ನಮ್ಮ ಆತ್ಮವನ್ನು ಗುರುತಿಸುವುದು. ಆತ್ಮವು ಎಲ್ಲಾ ಕಾರ್ಯಗಳಿಗೂ ಸಾಕ್ಷಿಯಾಗಿದೆ. ನಮ್ಮ ಆತ್ಮದಲ್ಲಿ ಈ ಎಲ್ಲಾ ಚಟುವಟಿಕೆಯೂ ಇದೆ. ಇಡೀ ವಿಶ್ವವು ಚೈತನ್ಯದಲ್ಲಿದೆ. ಅಕರ್ಮದಲ್ಲಿ ಕರ್ಮವನ್ನು ಕಾಣುವುದೆಂದರೆ ಕ್ರಿಯಾತ್ಮಕವಾದ ವಿಶ್ವದಲ್ಲಿ ಚೈತನ್ಯವನ್ನು ಕಾಣುವುದು ಮತ್ತು ವಿಶ್ವವನ್ನು ವಿಶಾಲವಾದ ಚೈತನ್ಯದೊಳಗೆ ಕಾಣುವುದು. ಈ ಗುರುತಿಸುವಿಕೆಯನ್ನು ಸ್ವಾತಂತ್ರ್ಯ ಎಂದು ಕರೆಯುತ್ತಾರೆ. ಸ್ವಾತಂತ್ರ್ಯ ಎಂದರೆ ಕಾರ್ಯ ಮಾಡುವುದನ್ನು ನಿಲ್ಲಿಸಿ ಬಿಡುವುದಲ್ಲ. ಸ್ವಾತಂತ್ರ್ಯವೆಂದರೆ ಕಾರ್ಯ ಮಾಡಿದರೂ ಅದಕ್ಕೆ ಸಾಕ್ಷಿಯಾಗುವುದು. ನಾವು ಕಾರ್ಯವನ್ನು ಮಾಡುತ್ತಲೇ ಇರಬೇಕು ಆದರೆ ಕಾರ್ಯದ ಮೋಹಕ್ಕೊಳಗಾಗಬಾರದು. ನಮ್ಮ ದಿನನಿತ್ಯ ಜೀವನದಲ್ಲಿ ಅಚ್ಚುಗಳನ್ನು ಮೂಡಿಸದಂತಹ ಅನೇಕ ಕಾರ್ಯಗಳಿವೆ. ಉದಾಹರಣೆಗೆ ಹಲ್ಲುಜ್ಜುವುದು, ಊಟ ಮಾಡುವುದು, ಇತ್ಯಾದಿ. ಈ ಕಾರ್ಯಗಳು ಸಂಸ್ಕಾರಗಳಾಗುವುದಿಲ್ಲ. ಆದರೆ ನೀವು ಕೆಫೀನ್ನ್ನು ಸೇವಿಸುವ ಅಭ್ಯಾಸವನ್ನು ಹೊಂದಿದ್ದು, ಒಂದು ದಿನ ಕೆಫೀನ್ ಸೇವಿಸದಿದ್ದರೆ ಅದರಿಂದ ನಿಮಗೆ ತಲೆನೋವು ಬರುತ್ತದೆ ಮತ್ತು ಅದೇ ಕರ್ಮ. ಆ ಕಾಫಿ ಕರ್ಮವನ್ನು ನೀವು ಹಾಗೆಯೆ ಉಳಿಸಿಕೊಳ್ಳಬಹುದು ಅಥವಾ ಕೆಲವು ದಿವಸಗಳಿಗಾಗಿ, ''ನನ್ನ ವ್ಯವಸ್ಥೆಯನ್ನು ಶುದ್ಧಗೊಳಿಸಿಕೊಳ್ಳುತ್ತೇನೆ. ಇದನ್ನು ಕೊನೆ ಮಾಡುತ್ತೇನೆ'' ಎನ್ನಬಹುದು. ಈ ಕರ್ಮದಿಂದ ನೀವು ಅಲುಗಾಡುವುದಿಲ್ಲ ಎಂದು ನಿರ್ಧರಿಸಿ ಕಾಫಿ ಕರ್ಮದಿಂದ ಹೊರಬರಬಹುದು. ಆಗ ನೀವು ಕಾಫಿಯನ್ನು ಕುಡಿಯಲಿ, ಕುಡಿಯದಿರಲಿ ಅದರಿಂದ ನಿಮಗೇನೂ ಆಗುವುದಿಲ್ಲ. ಅದರಿಂದ ನಿಮ್ಮ ಮೇಲೆ ಯಾವ ಅಡ್ಡಪರಿಣಾಮವೂ ಉಂಟಾಗುವುದಿಲ್ಲ. ಆಗ ನಿಮಗೆ ಆ ಕರ್ಮದಿಂದ ಮುಕ್ತಿ ಸಿಕ್ಕಂತೆಯೆ. ಕರ್ಮವನ್ನು ಹೋಗಲಾಡಿಸಬೇಕು ಎಂದರೆ ಆ ಅಚ್ಚುಗಳನ್ನು ಅಳಸಿಹಾಕುವುದು. ಕೆಲವು ಸಂಸ್ಕಾರಗಳನ್ನು ಹೊಂದಲು ಬಯಸುತ್ತೇವೆ ಮತ್ತು ಕೆಲವನ್ನು ನಾವು ಹೊಂದಲು ಬಯಸುವುದಿಲ್ಲ. ಇದು ಒಳ್ಳೆಯ ಕರ್ಮ ಮತ್ತು ಕೆಟ್ಟ ಕರ್ಮ. ನಕಾರಾತ್ಮಕ ಅಚ್ಚುಗಳೆಂದರೆ ನೋವನ್ನು ಮತ್ತು ಕಷ್ಟಗಳನ್ನು ತಂದುಕೊಡುವಂತದ್ದು. ಸಕಾರಾತ್ಮಕ ಸಂಸ್ಕಾರಗಳೆಂದರೆ ಜೀವನದಲ್ಲಿ ನಿಮಗೆ ಮುದವನ್ನು ಮತ್ತು ಸಂತೋಷವನ್ನು ನೀಡುವಂತದ್ದು. ಆದ್ದರಿಂದ ಒಳ್ಳೆಯ ಕರ್ಮವೆಂದರೆ ನಿಮ್ಮ ಚೇತನದಲ್ಲಿ ಬಹಳ ಒಳ್ಳೆಯ ಸಂಸ್ಕಾರಗಳಿರುತ್ತವೆ ಮತ್ತು ನಿಮ್ಮ ಜೀವನದಲ್ಲಿ ಆ ರೀತಿಯ ಫಲಗಳನ್ನೇಕೊಡುತ್ತವೆ.
ಬೋಧಿವೃಕ್ಷ: ವಿಶಾಲ ಮನಸ್ಸಿನವರು ಮಹಾತ್ಮರು
*ಬೋಧಿವೃಕ್ಷ: ಶ್ರೀ ಸಿದ್ಧೇಶ್ವರ ಸ್ವಾಮೀಜಿ ವಿಶ್ವ ಹಾಗೂ ವಿಶ್ವಾತ್ಮನ ಕುರಿತಾದ ಜ್ಞಾನವು ಸರ್ವಶ್ರೇಷ್ಠವಾದುದು. ಇದುವೆ ಆತ್ಮಜ್ಞಾನ, ಇದರಿಂದ ನಮ್ಮ ಜೀವನದಲ್ಲಿ ಪರಮಶಾಂತಿ, ಪರಮಾನಂದ ನೆಲೆಸುತ್ತದೆ. ಹೃದಯ ವೈಶಾಲ್ಯ ಅಥವಾ ಮನೋವಿಕಾಸ ಉಂಟಾಗಿ ಜೀವನವು ಸಾರ್ಥಕವೆನಿಸುತ್ತದೆ. ಹಿಮಾಲಯ, ಬೆಟ್ಟ, ಆಗಸ ಎಂಬ ಶಬ್ದಗಳನ್ನು ಕೇಳಿದಾಗ ನಮ್ಮ ಮನಸ್ಸು ಸಹಜವಾಗಿಯೇ ವಿಶಾಲವಾಗುತ್ತದೆ. ಅದೇ ಹೊಲ, ಮನೆ, ಅಂಗಡಿ, ದುಡ್ಡು-ಕಾಸು ಎಂದಾಗ ನಮ್ಮ ಮನಸ್ಸು ಅಷ್ಟೇ ಚಿಕ್ಕದಾಗುತ್ತದೆ. ಗಣಿತದಲ್ಲಿ ತ್ರಿಕೋನ, ಚೌಕೋನ, ಆಯತ, ವೃತ್ತ ಎಂದು ಬರೆಯುತ್ತಾ ಹೋಗುತ್ತೇವೆ. ಆ ಎಲ್ಲ ಆಕೃತಿಗಳನ್ನು ಅಳಿಸಿದಾಗ ಉಳಿಯುವುದೇ ನಿಸ್ಸೀಮ, ನಿರಾಕಾರ ಬಯಲು. ಹೀಗೆ ಸಣ್ಣದರಿಂದ, ದೊಡ್ಡದರತ್ತ ಅನಂತದತ್ತ ಮನಸ್ಸನ್ನು ಮುನ್ನಡೆಸುವುದೇ ಸಾಧನೆಯಾಗಿದೆ. ಬರೀ ಮನೆ-ಮಠ, ಸತಿ-ಸುತರು, ಪಕ್ಷ -ಪಂಗಡ, ಜಾತಿ-ಮತ ಇದೇ ಸೀಮಿತ ವಲಯದಲ್ಲಿಯೇ ನಾವು ನಿಂತುಬಿಟ್ಟರೆ ನಮ್ಮ ಮನಸ್ಸು ವಿಶಾಲವಾಗುವುದು ಹೇಗೆ? ಪ್ರಾಪಂಚಿಕವಾದ ಎಲ್ಲೆ ಮೀರಿ ಮಹದೆತ್ತರಕ್ಕೆ ತಮ್ಮ ಮನಸ್ಸನ್ನು ಎತ್ತರಿಸಿದವರೇ ಮಹಾತ್ಮರು. 'ಮಹಾನ್ ಆತ್ಮಾ ಯಸ್ಯ ಸಃ ಮಹಾತ್ಮಾ' ವಿಶಾಲವಾದ ಮನಸ್ಸುಳ್ಳವರೇ ಮಹಾತ್ಮರು. ಸಂಕುಚಿತ ಮನಸ್ಸುಳ್ಳವರೇ ಅಲ್ಪಾತ್ಮರು. ಮಹಾತ್ಮರಂತೆ ನಮ್ಮ ಮನಸ್ಸು ವಿಶಾಲವಾದಾಗ ಜೀವನದಲ್ಲಿ ಶಾಂತಿ-ಸಮಾಧಾನ ಸಹಜವಾಗಿ ನೆಲೆಸುತ್ತದೆ. ನಮ್ಮ ಬದುಕು ಭವ್ಯ, ದಿವ್ಯವಾಗುತ್ತದೆ. ಸಂಭೂತಿ ಎಂದರೆ ಯಾವಾಗಲೂ ಇರುವಂಥದ್ದು. ಅ ಸಂಭೂತಿ ಎಂದರೆ ಮೊದಲು ಇರುವದಿಲ್ಲ, ಕೊನೆಗೂ ಇರುವುದಿಲ್ಲ. ಮಧ್ಯದಲ್ಲಿ ಮಾತ್ರ ತೋರುತ್ತದೆ. ಗಡಿಗೆಯು ಮೊದಲಿರಲಿಲ್ಲ, ಕೊನೆಗೂ ಇರುವುದಿಲ್ಲ. ಒಂದುದಿನ ಒಡೆದು ಹೋಗುತ್ತದೆ. ಮಣ್ಣು ಮಾತ್ರ ಮೊದಲೂ ಇತ್ತು, ಈಗಲೂ ಇದೆ, ಮುಂದೂ ಇರುತ್ತದೆ. ಅದು ಒಡೆದು ಹೋಗುವ ಪ್ರಶ್ನೆಯೇ ಇಲ್ಲ. ಈ ಪ್ರಪಂಚವು ಗಡಿಗೆಯಂತೆ. ಮಧ್ಯದಲ್ಲಿ ತೋರಿದೆ. ಇದು ಆದಿಯಲ್ಲಿ ಇರಲಿಲ್ಲ. ಅಂತ್ಯದಲ್ಲಿಯೂ ಇರುವುದಿಲ್ಲ. 'ಏತತ್ ಜಗತ್ ಕ್ಷ ಣಿಕಂ' ಈ ಜಗತ್ತು ಕ್ಷ ಣಿಕ, ನಶ್ವರ ಎಂದು ಬುದ್ಧನು ಸಾರಿದ. ಇದನ್ನು ಕ್ಷ ಣದರ್ಶನ ಎಂದು ಕರೆಯುತ್ತಾರೆ. ಪರಮಸತ್ಯ ಪರಮಾತ್ಮನು ಮಾತ್ರ ಗಡಿಗೆಯಂತೆ ಒಡೆದು ಹೋಗುವವನಲ್ಲ. ಅವನು ಗಡಿಗೆಗೆ ಆಧಾರವಾಗಿರುವ ಮಣ್ಣಿನಂತೆ, ಆಭರಣಕ್ಕೆ ಆಧಾರವಾಗಿರುವ ಚಿನ್ನದಂತೆ ಶಾಶ್ವತವಾಗಿ ಇರುತ್ತಾನೆ. ಈ ಪರಮಸತ್ಯವನ್ನೇ ಈಶ್ವರ, ಪರಮಾತ್ಮ, ಪರಬ್ರಹ್ಮ, ದೇವ ಎಂದು ಕರೆಯುತ್ತಾರೆ. ಅಲ್ಲಮ ಪ್ರಭುದೇವರು ತಮ್ಮ ಒಂದು ವಚನದಲ್ಲಿ ಆ ಮಹಾದೇವನ ಕುರಿತು ಹೀಗೆ ಹೇಳುತ್ತಾರೆ- ಆದಿ ಅನಾದಿ ಒಂದಾದಂದು, ಸೂರ್ಯ ಚಂದ್ರರೊಂದಾದಂದು ಧರೆಯಾಕಾಶ ಒಂದಾದಂದು, ಗೊಹೇಶ್ವರ ಲಿಂಗ ನಿರಾಳ. ಆದಿ-ಅನಾದಿ, ಸೂರ್ಯ-ಚಂದ್ರರು, ಭೂಮಿ-ಆಕಾಶ ಯಾವುದೂ ಇಲ್ಲದಾಗ ಬಯಲಿಗೆ ಬಯಲಾಗಿ ಇದ್ದವನೇ ದೇವನು. ಅವನೇ ಮಹಾ ಬಯಲು, ನಿರಾಳ! ದೇವನ ನಿಜಸ್ವರೂಪವನ್ನು ಅರಿತು ಪರಮಶಾಂತಿಯ ಪ್ರಾಪ್ತಿಗಾಗಿ ಮಾಡುವ ಪೂಜೆಯೇ ಸಾತ್ವಿಕ ಪೂಜೆ. ಇದರಿಂದ ನಮ್ಮ ಬದುಕು ಹೂವಂತೆ ಅರಳಿ ಎಲ್ಲರಿಗೂ ಸಂತಸದ ಸುಗಂಧವನ್ನೇ ನೀಡುತ್ತದೆ. ನಮ್ಮ ಋುಷಿ-ಮುನಿಗಳು, ಸಂತರು-ಶರಣರು ಈ ಬಗೆಯಾದ ಸಾತ್ವಿಕ ಉಪಾಸನೆಯನ್ನು ಯಾವುದೇ ಭೌತಿಕ ಬಯಕೆಗಳಿಲ್ಲದೆ ನಿಷ್ಕಾಮ ಭಾವನೆಯಿಂದ ಮಾಡಿ ಮುಕ್ತಾತ್ಮರಾದರು, ಜಗದ್ವಂದ್ಯರಾದರು. ದೇವನ ಪೂಜೆಯ ಹೆಸರಿನಲ್ಲಿ ಕೆಲವರು ತಮ್ಮ ಸಿರಿ-ಸಂಪದ, ಶಕ್ತಿ-ಸಾಮರ್ಥ್ಯ, ವಿದ್ಯಾಬುದ್ಧಿಯನ್ನು ಪ್ರದರ್ಶಿಸುತ್ತಾರೆ. ದೇವರಿಗಿಂತ ತಾವೇ ದೊಡ್ಡವರಾಗಲು ಹೋಗುತ್ತಾರೆ. ನಾವಿಲ್ಲದಿದ್ದರೆ ದೇವರ ಗುಡಿಯ ಗಂಟೆಯೇ ಬಾರಿಸುವುದಿಲ್ಲ. ಎನ್ನುವಂತೆ ವರ್ತಿಸುತ್ತಾರೆ. ಇನ್ನು ಕೆಲವರು ನನ್ನಂತೆ ದೇವರನ್ನು ತಿಳಿದುಕೊಂಡವರು, ದೇವರ ಪೂಜೆ ಮಾಡುವವರೇ ಇಲ್ಲವೆಂದು ಹೇಳಿಕೊಳ್ಳುತ್ತಿರುತ್ತಾರೆ. ಒಟ್ಟಿನಲ್ಲಿ ಬರೀ ಬಾಹ್ಯ ಆಡಂಬರದಲ್ಲಿ ಮುಳುಗಿದ ಇವರು ಭಗವಂತನ ನಿಜಸ್ವರೂಪವನ್ನೇ ಮರೆಯುತ್ತಾರೆ ಆಧಾರ : ಈಶ ಪ್ರಸಾದ
ಬೋಧಿವೃಕ್ಷ: ಸಂಪತ್ತಿನ ಹಂಚಿಕೆಯ ಸಮಾನತೆ
ಇದನ್ನೆಲ್ಲ ನೆನಪಿಸಿಕೊಳ್ಳುವಾಗ ಇತ್ತೀಚೆಗೆ ಜಾಗತಿಕ ಅಭಿವೃದ್ಧಿ ಅಧ್ಯಯನ ಸಂಸ್ಥೆಯೊಂದು ನಡೆಸಿರುವ ಸಮೀಕ್ಷೆಯೊಂದು ನಮ್ಮ ದೇಶದ ಶೇ.73ರಷ್ಟು ಸಂಪತ್ತು ಶೇ.1ರಷ್ಟಿರುವ ಶ್ರೀಮಂತರ ಬಳಿ ಇದೆ ಎಂದು ದಾಖಲಿಸಿದೆ. ವರ್ಷದಿಂದ ವರ್ಷಕ್ಕೆ ಈ ಆರ್ಥಿಕ ಅಸಮಾನತೆ ಎಂಬುದು ಹೆಚ್ಚುತ್ತಲೇ ಇದೆ. ಈ ಕಾರಣಕ್ಕಾಗಿ ನಮ್ಮ ದೇಶದಲ್ಲಿ ಹೆಚ್ಚುತ್ತಿರುವ ಸಮಸ್ಯೆಗಳನ್ನು ಪಟ್ಟಿ ಮಾಡುತ್ತಾ ಹೋದರೆ, ಅದೊಂದು ರಾಜಕೀಯ ಬರಹವಾದೀತು. ಹಾಗಾಗಿ, ವಾಸ್ತವಕ್ಕೆ ಕನ್ನಡಿ ಹಿಡಿಯುತ್ತಾ ಹೋದರೆ ಇಲ್ಲಿ ವಸತಿಹೀನರು, ಹಸಿವಿನಿಂದ ಬಳಲುವವರು, ವೈದ್ಯಕೀಯ ಚಿಕಿತ್ಸೆ ಇಲ್ಲದೇ ಅಕಾಲದಲ್ಲೇ ಸಾವಿಗೀಡಾಗುವವರು, ಅತಂತ್ರ ಬಾಲ್ಯ ಕಳೆಯುವ ಕೋಟ್ಯಂತರ ಮಕ್ಕಳು, ಶಿಕ್ಷಣ ವಂಚಿತರು, ಉದ್ಯೋಗಾವಕಾಶವಿಲ್ಲದವರು ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ನಮ್ಮನ್ನು ಮುನ್ನಡೆಸುವ ಸರಕಾರಗಳು ಮಾತ್ರವಲ್ಲದೇ, ಜನರಿಗೆ ಮಾರ್ಗದರ್ಶನ ನೀಡುವ ಧರ್ಮ ಗುರುಗಳಿಗೂ ಇದು ದೊಡ್ಡ ಸವಾಲನ್ನು ಮುಂದಿಡುವ ಬೆಳವಣಿಗೆ ಇದು. ಸರಕಾರಗಳು ಈ ಅಸಮಾನ ಬೆಳವಣಿಗೆಯಲ್ಲಿ ಸಮತೋಲನ ತರುವ ಪ್ರಯತ್ನಕ್ಕೆ ಮುಂದಾಗದಿದ್ದಲ್ಲಿ ಅದರ ಪರಿಣಾಮಗಳು ಊಹೆಗೂ ನಿಲುಕದ ಸ್ಥಿತಿಗೆ ದೇಶವನ್ನು ಕೊಂಡೊಯ್ಯತ್ತವೆ. ಅವಕಾಶ ವಂಚಿತರು, ಅಸಹಾಯಕರು ಈ ವ್ಯವಸ್ಥೆಯಲ್ಲಿ ಭರವಸೆ ತಳೆಯುವಂತ ದಿಟ್ಟಕ್ರಮಗಳನ್ನು ಸರಕಾರಗಳು ಕೈಗೊಳ್ಳಬೇಕು. 'ದೇಶದ ಅಭಿವೃದ್ಧಿ' ಎಂದು ಮೇಲಿಂದ ಮೇಲೆ ಹೇಳುತ್ತಿದ್ದರೂ ಇಂತಹ ಸಮೀಕ್ಷೆಗಳು ನಡೆಸುವ ಅಂಕಿ ಅಂಶಗಳೇಕೆ ಬರೀ ಶ್ರೀಮಂತರ ಅಭಿವೃದ್ಧಿಯ ಚಿತ್ರಣವನ್ನೇ ನೀಡುತ್ತಿವೆ? ಜನರ ಜೀವನ ಮಟ್ಟ ಸುಧಾರಣೆಯ ಚಿತ್ರಣ ನಮಗೇಕೆ ಕಾಣಿಸುತ್ತಿಲ್ಲ. ಜನರಿಗೆ ಎಲ್ಲವೂ ಸಿಕ್ಕು ಸಂಭ್ರಮಿಸುವಂತೆ ಕಾಣುತ್ತಿದ್ದರೂ, ನಮ್ಮ ಸಾಮಾಜಿಕ ಜನ ಜೀವನನ್ನು ಏಕೆ ಅತಂತ್ರದ ಭಾವನೆಗೆ ಕಾರಣವಾಗಿದೆ? ಇಂತ ವಿಷಮ ಸ್ಥಿತಿಯಲ್ಲಿ ಸರಕಾರಗಳು ಸಮಾನ ಬದುಕುವ ಅವಕಾಶ ಕಲ್ಪಿಸುವ ಇಚ್ಛಾಶಕ್ತಿ ಪ್ರಕಟಿಸಬೇಕಲ್ಲವೇ? ಸಂಪತ್ತು ಒಂದೇ ಕಡೆ ಒಗ್ಗೂಡುವ ಬದಲಿಗೆ ಅದರ ಪಾಲು ಎಲ್ಲರಿಗೂ ಸಿಗುವಂತಾಗಬೇಕಲ್ಲವೇ? ಧಾರ್ಮಿಕರು ಹೇಳುವ ನೀತಿಕತೆಗಳು, ಮೌಲ್ಯ ಪ್ರತಿಪಾದನೆಗಳು ಜನರನ್ನು ಕೊಂಚ ಆಲೋಚನೆಗೆ ಹಚ್ಚಬಹುದು ನಿಜ. ಸಂಯದಿಂದ ಬದುಕನ್ನು ರೂಪಿಸಿಕೊಳ್ಳುವಂತೆಯೂ ಮಾರ್ಗದರ್ಶನ ಮಾಡಬಹುದು. ಆದರೆ, ದೈನಂದಿನ ಭೌತಿಕ ಬದುಕು ಅಲ್ಲೋಲ ಕಲ್ಲೋಲದ ಕಡಲಾದಾಗ ಹಿತವಚನಗಳು ಎಷ್ಟು ಮಾತ್ರ ಪ್ರಯೋಜನಕ್ಕೆ ಬಂದಾವು? ಆರೋಗ್ಯಕರ ಚಿಂತನೆಗೆ, ಆರೋಗ್ಯಕರ ಬದುಕು ಮುಖ್ಯ ಅಲ್ಲವೇ? ಅಂತಹ ಬದುಕನ್ನು ಖಾತ್ರಿಗೊಳಿಸಬೇಕಾದುದು ಪ್ರಜೆಗಳ ಯೋಗಕ್ಷೇಮ ನೋಡುವ ಸರಕಾರಗಳ ಕರ್ತವ್ಯ.
*ಬೋಧಿವೃಕ್ಷ: ಶ್ರೀಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ
ಒಂದು ಸಮಾಜ ಹೆಚ್ಚು ಆರೋಗ್ಯಕರವಾಗಿರಬೇಕೆಂದರೆ, ಅದಕ್ಕೆ ಮಾನವೀಯ ಪಾತಳಿಯ ಒಂದು ಧಾರ್ಮಿಕ ಸ್ಪರ್ಶಬೇಕು. ಅದಕ್ಕೂ ಮೀರಿದ ಒಂದು ಆಧ್ಯಾತ್ಮಿಕ ತುಡಿತವೂ ಬೇಕು. ನಮ್ಮ ಪರಂಪರೆ ಶ್ರೀಮಂತಗೊಳಿಸಿದ ಅದೆಷ್ಟೋ ಋುಷಿಮುನಿಗಳು ನಮಗೆಲ್ಲ ಸರಳ ಬದುಕಿನ ಮಾದರಿ ಕಟ್ಟಿಕೊಟ್ಟರು. ಆಸೆಯೇ ದುಃಖಕ್ಕೆ ಮೂಲ ಎಂದು ಹೇಳಿದ ಬುದ್ಧ ಭೌತಿಕ ಬದುಕು ಹಸನಾಗಬೇಕು ಎನ್ನುವುದರ ಕಡೆಗೆ ಹೆಚ್ಚು ಒತ್ತುಕೊಟ್ಟ. ಬದುಕನ್ನು ಸರಳವಾಗಿ ರೂಪಿಸಿಕೊಳ್ಳುವ ಸೂತ್ರಗಳನ್ನು ಮುಂದಿಟ್ಟ. ಕಾಯಕದ ಮಹತ್ವ ಸಾರಿದ ಶರಣರಂತೂ ಸಂಪತ್ತು ಹಾಗೂ ಅದರ ಸಂಗ್ರಹವನ್ನು ಒಂದು ಕೇಡೆಂದು ಬಗೆದರು. ಈ ಎಲ್ಲ ಸಾರವನ್ನು ಗರ್ಭೀಕರಿಸಿಕೊಂಡಿರುವ ನಮ್ಮ ಸಂವಿಧಾನ ಕೂಡಾ ಆರ್ಥಿಕ ಸಮಾನತೆ ದೊರಕಿಸಿಕೊಡುವ ಖಾತ್ರಿ ನೀಡಿದೆ.
ಸಾಯದೆ ಮರುಹುಟ್ಟು ಸಿಗದು
- ಓಶೋ ಗುರುವಿನ ಕಾಯಕ ವಾಸ್ತವದಲ್ಲಿ ಬೇರನ್ನು ಬುಡಮೇಲುಗೊಳಿಸಿ ಮರುಸ್ಥಾಪನೆ ಮಾಡುವ ಕಾಯಕವಾಗಿದೆ. ಹೀಗೆ ಮಾಡುವಾಗ ಆ ಗಿಡದ ಎಲೆಗಳು ಪೂರ್ತಿಯಾಗಿ ಒಣಗಿ ಹೊಸ ನೆಲದಲ್ಲಿ ಮತ್ತೆ ಹೊಸದಾಗಿ ಎಲೆಗಳು ಚಿಗುರುತ್ತವೆ, ಗಿಡ ತಾತ್ಕಾಲಿಕವಾಗಿ ಸತ್ತು ಹೊಸಜನ್ಮ ಪಡೆಯುತ್ತದೆ. ಬೋಧಕನ ಸಾನ್ನಿಧ್ಯದಲ್ಲಾದರೂ ಅಂತಹ ಯಾವ ಹೊಸಹುಟ್ಟೂ ಸಂಭವಿಸುವುದಿಲ್ಲ. ಶಿಷ್ಯ ಮರುಹುಟ್ಟು ಪಡೆಯಲು, ದ್ವಿಜನೆನಿಸಲು ಗುರುವು ಒಬ್ಬ ಸೂಲಗಿತ್ತಿಯಂತೆ ನೆರವಾಗುವನು. ಸಾಕ್ರಟೀಸ್ ಒಂದೆಡೆ ''ನಾನೊಬ್ಬ ಸೂಲಗಿತ್ತಿಯಾಗಿರುವೆನು,'' ಎಂದು ಹೇಳಿರುವನು. ಆದರೆ ಸಾಕ್ರಟೀಸ್ ಅರ್ಧಸತ್ಯ ಮಾತ್ರ ನುಡಿದಿರುವನು. ಗುರು ಒಬ್ಬ ಕೊಲೆಗಡುಕನೂ ಹೌದು. ಏಕೆಂದರೆ ಶಿಷ್ಯನು ಗುರುವಿನ ಸಾನ್ನಿಧ್ಯದಲ್ಲಿ ಸಾಯದೆ ಅವನಿಗೆ ಮರುಹುಟ್ಟು ಸಿಗದು. ಬೋಧಕನಾದರೋ ಇಂತಹ ಯಾವ ಪರಿವರ್ತನೆಯನ್ನೂ ತರಲಾರ. ಹೆಚ್ಚೆಂದರೆ ಅವನು ನಮ್ಮ ಯಥಾಸ್ಥಿತಿಯನ್ನು ಇನ್ನಷ್ಟು ಪರಿಷ್ಕರಿಸಬಹುದು. ಆದರೆ ಗುರುವಿನ ಸಾನ್ನಿಧ್ಯದಲ್ಲಿ ನಮ್ಮ ಯಥಾಸ್ಥಿತಿಗೆ ಅಡಚಣೆ ಉಂಟಾಗುತ್ತದೆ. ನಮ್ಮ ಭೂತಕಾಲ ನಮ್ಮದಲ್ಲವೇ ಅಲ್ಲ ಎಂಬಂತೆ, ಅದೊಂದು ಕನಸು ಅಥವಾ ದುಃಸ್ವಪ್ನವೆಂಬಂತೆ ಮೊದಲ ಸಲ ಅನುಭವವಾಗುತ್ತದೆ. ಸಾಧನೆಯ ಹಾದಿಯಲ್ಲಿ ಸಾಧಕನು ಭೂತಕಾಲ ನಿರ್ಗಮಿಸಿದಾಗ ಉಂಟಾಗುವ ಖಾಲಿತನವನ್ನು ಮತ್ತು ಹೊಸ ಬದುಕು ಇನ್ನೂ ಬಂದಿರದ ಶೂನ್ಯಾವಸ್ಥೆಯನ್ನು ಹಾದು ಹೋಗಬೇಕಾಗುತ್ತದೆ. ಈ ಶೂನ್ಯಾವಸ್ಥೆಯ ಹೊಸ್ತಿಲಿನಲ್ಲಿ ಭಯವಿಹ್ವಲಗೊಂಡು ಅದೆಷ್ಟೊ ಸಾಧಕರು ಮರಳಿ ಭೂತಕಾಲವನ್ನು ಆಶ್ರಯಿಸುವರು. ಗುರುವಾದರೋ ಈ ಶೂನ್ಯಸ್ಥಿತಿಯಲ್ಲಿ ನಮಗೆ ಸಹಾಯ ಹಸ್ತ ನೀಡುವನು. ಕೇವಲ ಬೋಧಕನಿಂದ ಇವೆಲ್ಲ ಸಾಧ್ಯವಿಲ್ಲ. ಒಮ್ಮೆ ಒಬ್ಬ ಸಾಧಕನು ರಮಣ ಮಹರ್ಷಿಯನ್ನು ''ನಾನು ಬಹು ದೂರದಿಂದ ನಿಮ್ಮ ದರ್ಶನಕ್ಕಾಗಿ ಬಂದಿರುವೆನು. ನನಗೆ ನಿಮ್ಮ ಅರಿವನ್ನು ಕಲಿಸಿರಿ,'' ಎಂದು ಕೇಳಿದಾಗ ರಮಣರು ನಕ್ಕು ''ನಿನಗೆ ಕಲಿಯುವ ಇಚ್ಛೆಯಿದ್ದಲ್ಲಿ ಬೇರೆ ಜಾಗಕ್ಕೆ ಹೋಗು. ಇಲ್ಲಿ ಕಲಿಕೆಯಲ್ಲ, ಕಲಿಕೆಯ ನಿರಸನ ನಡೆಯುತ್ತದೆ. ಇಲ್ಲಿ ನಾನು ಏನನ್ನೂ ಕಲಿಸುತ್ತಿಲ್ಲ. ಈಗಾಗಲೇ ನೀನು ಬೇಕಾದಷ್ಟು ಕಲಿತಿರುವೆ. ಆ ಕಲಿಕೆಯೇ ನಿನ್ನ ಬದುಕಿನಲ್ಲಿ ಒಂದು ಸಮಸ್ಯೆಯಾಗಿ ಕೂತಿದೆ. ಹೆಚ್ಚು ಕಲಿಕೆ ಹೆಚ್ಚು ಸಮಸ್ಯೆಗಳನ್ನು ಸೃಷ್ಟಿಸುತ್ತದೆ,'' ಎಂದು ಉತ್ತರಿಸಿದ್ದರು. ಗುರುವಿನತ್ತ ಶಿಷ್ಯನೂ ಮತ್ತು ಬೋಧಕನತ್ತ ವಿದ್ಯಾರ್ಥಿಯೂ ಆಕರ್ಷಿತನಾಗುವನು. ಶಿಷ್ಯ ಮತ್ತು ವಿದ್ಯಾರ್ಥಿಯ ನಡುವೆ ವ್ಯತ್ಯಾಸವಿದೆ. ವಿದ್ಯಾರ್ಥಿಯು ಜ್ಞಾನಾಕಾಂಕ್ಷಿಯಾದರೆ ಶಿಷ್ಯನು ಆಮೂಲಾಗ್ರ ಅವಸ್ಥಾಂತರದ ಆಕಾಂಕ್ಷಿ. ಅವನು ಜ್ಞಾನದ ವ್ಯರ್ಥತೆಯನ್ನು ಮನಗಂಡು ಹೊಸ ಹುಟ್ಟಿಗೆ ಸನ್ನದ್ಧನಾಗುವನು. ಶಿಷ್ಯ ಎಂಬ ಪದವು ಶಿಕ್ಷಾ ಎಂಬ ಪದದಿಂದ ನಿಷ್ಪನ್ನವಾಗಿದೆ. ಶಿಕ್ಷೆಗೆ ಅಥವಾ ಗುರು ಸೂಚಿಸುವ ಅನುಶಾಸನವನ್ನು ಪಾಲಿಸುವುದಕ್ಕೆ ಸಿದ್ಧನಾದವನು ಶಿಷ್ಯನೆನಿಸಿಕೊಳ್ಳುವನು. ಅಷ್ಟು ಕಾಲ ಅಥವಾ ಜನ್ಮ ಜನ್ಮಾಂತರಗಳಿಂದಲೂ ತನ್ನ ಮನೋಲಹರಿ ಸೂಚಿಸುತ್ತಿದ್ದ ಅನುಶಾಸನವನ್ನು ಪಾಲಿಸುತ್ತ ಎಲ್ಲಿಯೂ ತಲುಪದೆ ಇನ್ನೂ ಹೆಚ್ಚು ಗೊಂದಲ ಮತ್ತು ಜಟಿಲತೆಗಳನ್ನು ಗುಡ್ಡೆ ಹಾಕಿಕೊಳ್ಳುತ್ತಿದ್ದ ಶಿಷ್ಯನು ಮನಸ್ಸಿನ ಸೂಚನೆಗಳನ್ನು ಪಾಲಿಸಿದ್ದು ಸಾಕು ಎಂಬ ದೃಢನಿಶ್ಚಯಕ್ಕೆ ಬಂದು ತಲುಪುವನು. ಮತ್ತು ಗುರುವಿಗೆ ಶರಣಾಗುವನು. ಇದೇ ಶಿಷ್ಯತ್ವದ ಮೊದಲ ಅರ್ಹತೆಯಾಗಿದೆ. ಗುರುವನ್ನು ಅನುಸರಿಸಿ ಎತ್ತ ಹೋಗುತ್ತಿರುವೆ ಎಂಬ ಪ್ರಶ್ನೆ ಅಂತಹವನನ್ನು ಬಾಧಿಸುವುದಿಲ್ಲ. ಏಕೆಂದರೆ ಹಾಗೆ ಪ್ರಶ್ನಿಸುವ ಮನಸ್ಸನ್ನೆ ಅವನು ನೀಗಿಕೊಂಡಿರುವನು.
ಬೋಧಿವೃಕ್ಷ: ಆತ್ಮವಿಶ್ವಾಸವೆಂಬ ಅಕ್ಷಯ ನಿಧಿ
*ಬೋಧಿವೃಕ್ಷ: ಡಾ. ಡಿ. ವೀರೇಂದ್ರ ಹೆಗ್ಗಡೆ, ಶ್ರೀಕ್ಷೇತ್ರ ಧರ್ಮಸ್ಥಳ ಈ ಜಗತ್ತಿನಲ್ಲಿ ಜನಿಸಿದ ಮಾನವನಿಗೆ ಭಗವಂತನು ಅತ್ಯಂತ ಸುಂದರವೂ, ಯುಕ್ತವೂ ಆದ ಶರೀರವನ್ನು ನೀಡಿದ್ದಾನೆ. ಈ ಶರೀರದಲ್ಲಿ ಐದು ಇಂದ್ರಿಯಗಳನ್ನೂ, ಅವುಗಳನ್ನು ಬಳಸಲು ಸೂಕ್ತವಾದ ಬುದ್ಧಿಯನ್ನೂ ನೀಡಿದ್ದಾನೆ. ಎಷ್ಟೇ ಉಪಯುಕ್ತ ಸಾಧನಗಳು ಇದ್ದರೂ ಅವುಗಳನ್ನು ಸಂದರ್ಭಕ್ಕೆ ಸರಿಯಾಗಿ ಸಮರ್ಪಕವಾಗಿ ಬಳಸಿಕೊಳ್ಳುವ ಆತ್ಮವಿಶ್ವಾಸದ ಕೊರತೆಯಿಂದಾಗಿ ಅನೇಕ ಬಾರಿ ವಿಫಲನಾಗಿ ಬಿಡುವುದುಂಟು. ಈ ನಿಟ್ಟಿನಲ್ಲಿ ಆತ್ಮವಿಶ್ವಾಸದ ಮಹತ್ವವನ್ನು ನಿರೂಪಿಸುವಂತಹ ಒಂದು ಪ್ರಸಂಗ ಇಲ್ಲಿದೆ. ಅಮೆರಿಕ ದೇಶದ ನ್ಯೂಯಾರ್ಕ್ ನಗರದಲ್ಲಿ ಎಡ್ವರ್ಡ್ ಐನಿಸ್ ಎಂಬ ಒಬ್ಬ ಶ್ರೀಮಂತನಿದ್ದನು. ಆತ ಧರ್ಮ-ಕರ್ಮ, ಭಗವಂತ ಇತ್ಯಾದಿ ವಿಚಾರಗಳಲ್ಲಿ ಅಪಾರ ವಿಶ್ವಾಸ ಉಳ್ಳವನಾಗಿದ್ದ. ತನ್ನ ಬಂಧು-ಬಳಗದವರ ಪೈಕಿ ಬಹಳ ಬಡವನಾಗಿದ್ದರೂ ಅವನಲ್ಲಿ ಅದ್ಭುತ ಆತ್ಮವಿಶ್ವಾಸವಿತ್ತು. ಆದ್ದರಿಂದಲೇ ಎಲ್ಲರೂ ಆತನನ್ನು ಗೌರವಿಸುತ್ತಿದ್ದರು. ಒಮ್ಮೆ ಊರಿಂದ ಹೊರಗೆ ನೆರೆಯ ನಗರಕ್ಕೆ ಹೋಗುತ್ತಿರುವಾಗ ತಾನು ನಡೆಯುತ್ತಿರುವ ದಾರಿಯ ಪಕ್ಕದ ಪರಿಸರದ ಭೂಮಿಯಡಿಯಲ್ಲಿ ಸಾಕಷ್ಟು ಬಂಗಾರದ ನಿಧಿ ಇದೆ ಎಂದೆನಿಸಿತು. ಪಕ್ಕದ ಊರಲ್ಲಿ ಅವನ ಪರಿಚಯದ ಒಬ್ಬ ಜ್ಯೋತಿಷಿಯಿದ್ದರು. ಅವರೊಡನೆ ಈ ಬಂಗಾರದ ನಿಧಿಯ ಬಗ್ಗೆ ಸಲಹೆ ಕೇಳಿದ. ಐನಿಸ್ನ ಬಳಿ ಹಣವಿರದಿದ್ದರೂ ಆತನ ಆತ್ಮವಿಶ್ವಾಸದ ಬಗ್ಗೆ ಜ್ಯೋತಿಷಿಗೆ ಪೂರ್ಣ ಭರವಸೆ ಇದ್ದುದರಿಂದ 'ನೀನು ಮುನ್ನಡೆಯುವಂತವನಾಗು. ಭಗವತ್ ಕೃಪೆಯಿಂದ ಯಶಸ್ವಿಯಾಗಬಲ್ಲೆ' ಎಂದು ಸಲಹೆ ನೀಡಿದರು. ಅಂತೆಯೇ ಐನಿಸ್ ತನ್ನ ಬಳಿಯಿದ್ದ ಸಾಧನ-ಸಂಪತ್ತು ಮತ್ತು ಗೆಳೆಯರ ನೆರವು ಪಡೆದು, ಬಂಗಾರದ ನಿಧಿ ಇದ್ದಿರಬಹುದಾದ ಜಮೀನನ್ನು ಖರೀದಿಸಿ, ಅಲ್ಲಿ ಅಗೆತವನ್ನು ಆರಂಭಿಸಿಯೇ ಬಿಟ್ಟ. ಹಾಗೆ ಅಗೆದಾಗ ಕೆಲವು ಬೆಳ್ಳಿಯ ತುಂಡುಗಳು ದೊರೆತರೂ ಬಂಗಾರ ಸಿಗಲೇ ಇಲ್ಲ. ಆಗ ಆತ ತನ್ನ ಕುಟುಂಬದ ಹಿರಿಯ ಮಹಿಳೆಯಾದ ಮಾರಿಯಾ ಮಾರ್ಲೆ ಎಂಬಾಕೆಯೊಡನೆ ನುಡಿದ- ''ನನ್ನ ಆತ್ಮವಿಶ್ವಾಸದಲ್ಲಿ ನನಗೆ ಪೂರ್ಣ ನಂಬಿಕೆಯಿದೆ. ಅಲ್ಲಿ ಬಂಗಾರ ಇದ್ದೇ ಇದೆ. ನನಗೆ ಸಿಗದಿದ್ದರೂ ಮುಂದೆ ಸಿಗಲಿದೆ,'' ಎಂದು ಹೇಳಿ ಮಡಿದೇ ಬಿಟ್ಟ. ಆತನ ಮೃತ್ಯುವಿನ 16 ವರ್ಷಗಳ ಬಳಿಕ ಮಾರಿಯಾ ಮಾರ್ಲೆ ಎಂಬ ಮಹಿಳೆ ಮತ್ತೆ ಅಗೆತವನ್ನು ಆರಂಭಿಸಿದಳು. 600 ಅಡಿ ಆಳಕ್ಕೆ ಹೋದಾಗ ಚಿನ್ನ, ಬೆಳ್ಳಿ, ತಾಮ್ರ, ಸತುಗಳ ನಿಧಿಯೇ ದೊರೆಯಿತು. ಇದರಿಂದ ಲಕ್ಷಾಂತರ ಡಾಲರ್ಗಳ ಲಾಭವಾದಾಗ ಆ ಮಹಿಳೆ ನುಡಿದರು- ''ಆತ್ಮವಿಶ್ವಾಸವೇ ಒಂದು ಮಹಾ ನಿಧಿ ಇದ್ದಂತೆ. ಇದರಿಂದ ಮನುಷ್ಯನ ಸ್ವಂತಕ್ಕೆ ಲಾಭವಾಗದಿದ್ದರೂ ಇತರರ ಕಲ್ಯಾಣಕ್ಕೆ ನೆರವಾಗುವುದರಲ್ಲಿ ಸಂಶಯವಿಲ್ಲ,'' ಆ ಮಹಿಳೆ ಆ ನಿಧಿಯನ್ನು ಎಡ್ವರ್ಡ್ನ ಹೆಸರಲ್ಲಿ ಲೋಕಕಲ್ಯಾಣಕ್ಕೆ ಬಳಸಲು ನಿರ್ಧರಿಸಿದಳು. ಹೀಗೆ ಆತ್ಮವಿಶ್ವಾಸದ ಫಲವು ತಕ್ಷ ಣವೇ ದೊರಕದಿದ್ದರೂ ಪ್ರಯತ್ನವನ್ನು ಮುನ್ನಡೆಸಿದಲ್ಲಿ ಯಶಸ್ಸು ದೊರೆಯುವುದರಲ್ಲಿ ಸಂದೇಹವಿಲ್ಲ. ಆತ್ಮವಿಶ್ವಾಸವುಳ್ಳವರು, ಆಶಾವಾದಿಗಳಾಗಿ ಭಗವಂತನನ್ನು ನಂಬಿಸಿ ಕಾರ್ಯವನ್ನು ಮುನ್ನಡೆಸಿದಾಗ ಸಫಲತೆ ದೊರೆತೇ ತೀರುವುದು. ಆತ್ಮವಿಶ್ವಾಸವುಳ್ಳವರು ಭಗವತ್ ಕೃಪೆಯೊಡನೆ ಪರಿಶ್ರಮ ವಹಿಸಿದಾಗ ಯಶಸ್ಸು ಗಳಿಸುವುದು ಖಂಡಿತ. -ಡಾ. ಡಿ. ವೀರೇಂದ್ರ ಹೆಗ್ಗಡೆ, ಶ್ರೀ ಕ್ಷೇತ್ರ ಧರ್ಮಸ್ಥಳ
ಬೋಧಿವೃಕ್ಷ: ನಮ್ಮ ಸ್ವಭಾವವೇ ಸಂತೋಷ
*ಬೋಧಿವೃಕ್ಷ: ಶ್ರೀಶ್ರೀರವಿಶಂಕರ್ ಸ್ವಲ್ಪ ಹಿಂದಿರುಗಿ ನೋಡಿ. ನೀವು ಮಗುವಾಗಿದ್ದಾಗ ನಿಮ್ಮ ಜೀವನವನ್ನು ನೋಡಿ. ನೀವು ಎಷ್ಟು ಬಾರಿ ಅತ್ತಿದ್ದೀರಿ? ನರಕವೇ ನಿಮ್ಮ ತಲೆಯ ಮೇಲೆ ಬಿದ್ದುಬಿಟ್ಟಂತೆ ಅತ್ತಿದ್ದೀರಿ. ಪ್ರಪಂಚವೇ ಮುಗಿಯಿತು. ಎಂದುಕೊಂಡು ನೀವು ಅತ್ತು ಅತ್ತು ಮಲಗಿಬಿಟ್ಟಿರಿ. ನಂತರ ಏನಾಯಿತು? ಈಗ ನೀವು ಇನ್ನೂ ಜೀವಂತವಾಗಿಯೆ ಇದ್ದೀರಿ. ನಿಮ್ಮ ಸ್ನೇಹಿತೆ ಅಥವಾ ಸ್ನೇಹಿತನೊಡನೆ ನಿಮ್ಮ ಸಂಬಂಧ ಮುರಿದಾಗ ಅಥವಾ ನಿಮ್ಮ ಮನೆಯಲ್ಲಿ ಯಾರಾದರೂ ತೀರಿಹೋದ ಆ ಕ್ಷ ಣಗಳನ್ನು ನೆನಪಿಸಿಕೊಳ್ಳಿ. ನಿಮಗೆ ಏನಾಯಿತು? ನೀವು ಚದುರಿ ಹೋದಂತೆ ನಿಮಗೆ ಅನಿಸಿತು. ಆದರೆ ವಾಸ್ತವಿಕವಾಗಿ ನಿಮಗೆ ಏನೂ ಆಗಲಿಲ್ಲ. ನೀವು ನಿಮ್ಮ ಜೀವನ ಪೂರ್ತಿ ಅಳುತ್ತಿರಬೇಕೆಂದು ಜನರು ಎದುರು ನೋಡುತ್ತಾರೆ. ಇದೇ ಸಹಜವೆಂದು ಜನ ತಿಳಿದಿರುತ್ತಾರೆ. ಯಾರಿಗಾದರೂ ಮುನ್ನಡೆಯುವ ಧೈರ್ಯ ಇದ್ದರೆ, ಆ ವ್ಯಕ್ತಿಯಲ್ಲಿ ಏನೋ ದೋಷವಿರಬೇಕು ಎಂದು ಅಂದುಕೊಳ್ಳುತ್ತೇವೆ. ನಮ್ಮ ಸ್ವಭಾವವೇ ಸಂತೋಷ, ಆನಂದ. ದುಃಖ, ಬವಣೆಗಳೆಲ್ಲಾ ಕೇವಲ ಹೊರಗಿನವಷ್ಟೆ. ನೀವೇ ಆಗಿರುವ ಬೆಳಕನ್ನು ಮೋಡಗಳು ಕೆಲಕಾಲ ಮುಚ್ಚಿದ ಹಾಗೆ. ನಿಮ್ಮ ಸ್ವಭಾವವೇ ಆನಂದ. ಅದರ ತೆರೆಯನ್ನು ಸರಿಸಬೇಕು. ಯಾರಿಗಾದರೂ ಎಂತಹ ಆಘಾತವೇ ಬಂದೊದಗಿದರೂ ಸಹ, ಅವುಗಳನ್ನೆಲ್ಲಾ ದಾಟಿ ಹೊರಬರಬಹುದು. ಅದಕ್ಕೆ ಬೇಕಾಗಿರುವುದು ಕೇವಲ ದೃಢತೆ, ಅಷ್ಟೆ. ಸದಾ ಸಂತೋಷದ ಮೂಡಿನಲ್ಲಿರುವ ಅಗತ್ಯವಿಲ್ಲ. ಯಾರಾದರೂ ತೀರಿ ಹೋದಾಗ ನೀವು, ''ಸರಿ, ಈಗ ನಾನು ಸಂತೋಷದಿಂದ ಇರುತ್ತೇನೆ'' ಎಂದು ನಕ್ಕು, ನರ್ತಿಸಲು ಸಾಧ್ಯವಿಲ್ಲ. ನೀವು ಹಾಗೆ ಮಾಡಬಾರದು. ಅದರ ಸಲುವಾಗಿಯೆ ಪ್ರಾಚೀನರು ಒಂದು ಕ್ರಮವನ್ನು ಮಾಡಿದ್ದರು. ಅವರು ಹೇಳಿದರು, ಯಾರ ಮನೆಯಲ್ಲಾದರೂ ಒಬ್ಬರು ಸತ್ತರೆ, ಆ ಮನೆಯವರೆಲ್ಲಾ ಹತ್ತು ದಿನ ಅಶೌಚದಲ್ಲಿ ಇರಬೇಕೆಂದರು. ನೀವು ಅಳದೆ ಇದ್ದರೆ, ಯಾರಾದರೂ ಅಳುವವರನ್ನು ಕರೆತರುತ್ತಾರೆ. ಭಾರತದಲ್ಲಿ, ಅವರಿಗೆ ಹಣವನ್ನು ನೀಡದರೆ, ಅವರು ಬಂದು ಅತ್ತು ಹೋಗುತ್ತಾರೆ. ಇದು ಚೀನಾ, ಹಾಂಗ್ಕಾಂಗ್ ಮತ್ತು ಸಿಂಗಪೂರ್ ದೇಶಗಳಲ್ಲೂ ಇದೆ.ಸತ್ತು ಹೋದವರನ್ನು ಹೊಗಳುತ್ತಾ ಅವರು ಅಳುತ್ತಿದ್ದಾಗ ಇತರರಿಗೆ ತಮ್ಮ ದುಃಖವನ್ನು ಹಿಡಿದಿಟ್ಟುಕೊಳ್ಳಲು ಸಾಧ್ಯವಾಗುವುದಿಲ್ಲ. ಹತ್ತು ದಿನಗಳ ಶೋಕದ ನಂತರ, ಹನ್ನೊಂದನೆಯ ದಿನ, ಜನರಿಗೆ ತಿಂಡಿಗಳನ್ನು ಹಂಚಿ, ಉತ್ಸವವನ್ನು ಆಚರಿಸಿ, ಹೊಸ ಬಟ್ಟೆಗಳನ್ನು ಧರಿಸುತ್ತಾರೆ. ಮನೆಯವರೆಲ್ಲಾ ಒಂದಾಗಿ ಸೇರುತ್ತಾರೆ. ಉಡುಗೊರೆಗಳನ್ನು ಪರಸ್ಪರ ಹಂಚಿ, ಔತಣವನ್ನು ಆಚರಿಸುತ್ತಾರೆ. ಔತಣದ ದಿವಸ ಸ್ವಲ್ಪ ತುಪ್ಪ ಮತ್ತು ನೀರನ್ನು ತೆಗೆದುಕೊಂಡು ಎಲ್ಲರ ಕಣ್ಣಿನ ರೆಪ್ಪೆಯ ಮೇಲೆ ಹಚ್ಚಲಾಗುತ್ತದೆ, ಕಣ್ಣನ್ನು ತಣ್ಣಗೆ ಮಾಡಲೆಂದು. ನಂತರ, ''ಈಗ ಜೀವನವನ್ನು ಮುಂದುವರಿಸೋಣ. ಆದದ್ದು ಆಯಿತು'' ಎಂದು ನಿರ್ಧರಿಸುತ್ತಾರೆ. ಸ್ವಂತ ಮನೆಯವರಿಗೆ ಶೋಕಾಚರಣೆಯು ಹತ್ತು ದಿನಗಳವರೆಗೆ. ಸ್ವಲ್ಪ ದೂರದ ನೆಂಟರಿಗೆ ಶೋಕಾಚರಣೆಯು ಕೇವಲ ಒಂದು ದಿನಕ್ಕಾಗಿ. ಶೋಕವನ್ನು ಹೇಗೆ ಆಚರಿಸುವುದು ಎಂಬ ಒಂದು ಪದ್ಧತಿಯನ್ನೆ ಮಾಡಿದ್ದಾರೆ. ಆದರೆ ಒಬ್ಬ ಆಧ್ಯಾತ್ಮಿಕ ವ್ಯಕ್ತಿಯು ತೀರಿ ಹೋದರೆ, ಇದೂ ಸಹ ಇರುವುದಿಲ್ಲ. ಆಗ ಪ್ರತಿ ಕ್ಷ ಣವೂ ಒಂದು ಉತ್ಸವ. ಏಕೆಂದರೆ ಆತ್ಮ ಸರ್ವವ್ಯಾಪ್ತಿಯಾಗಿದೆ. ಅದೇ ರೀತಿಯಾಗಿ, ಮನೆಯಲ್ಲಿ ಒಂದು ಮಗುವು ಜನಿಸಿದಾಗಲೂ ಸಹ ಆ ಮನೆಯಲ್ಲಿ ಹತ್ತು ದಿವಸಗಳ ಕಾಲದವರೆಗೆ ಶೌಚವಿರುತ್ತದೆ. ನಿಮ್ಮ ಮನೆಯಲ್ಲಿ ಒಂದು ಹೊಸ ಜೀವ ಬಂದಿದೆಯೆಂದು ನೀವು ಬಹಳ ಉದ್ರೇಕಗೊಂಡಿರುತ್ತೀರಿ. ಸರಿ, ಆ ಸಂತೋಷದೊಡನೆಯೆ, ಆ ಉದ್ರೇಕದೊಡನೆಯೆ ಹತ್ತು ದಿನಗಳವರೆಗೆ ಇರಿ. ಎಲ್ಲಾ ಸಾಮಾಜಿಕ ಕಟ್ಟುಪಾಡುಗಳಿಂದ, ಕರ್ತವ್ಯಗಳಿಂದ ನಿಮ್ಮನ್ನು ಮುಕ್ತಗೊಳಿಸಲಾಗುತ್ತದೆ, ನೀವು ನೂರು ಪ್ರತಿಶತ ಸಂತೋಷವಾಗಿ ಇರಲೆಂದು. ನಂತರ ನಿಮ್ಮ ಜವಾಬ್ದಾರಿಗಳಿಗೆ ಮತ್ತು ಬದ್ಧತೆಗಳಿಗೆ ಮರಳಿ ಬರಬೇಕು. ಶೌಚ, ಎರಡನೆಯದು ನಿಯಮ.
ಸಾತ್ವಿಕ ಪೂಜೆಯಿಂದ ಪರಮಶಾಂತಿ
ಒಬ್ಬ ಬೌದ್ಧ ಭಿಕ್ಷ ುವು ಒಂದು ಬೌದ್ಧ ಮಂದಿರದಲ್ಲಿ ಬುದ್ಧನ ಶಿಲಾಮೂರ್ತಿಯ ಪೂಜೆ ಮಾಡುತ್ತಿದ್ದ. ಯಾವಾಗಲೂ ಬುದ್ಧನ ನಾಮಸ್ಮರಣೆ, ಬುದ್ಧನ ಪಾವನ ಮೂರ್ತಿಯ ಧ್ಯಾನದಲ್ಲಿ ಇರುತ್ತಿದ್ದ. ಆತನ ಸರಳ ಸಾತ್ವಿಕ ಜೀವನ ಕಂಡು ಅನೇಕರು ಪ್ರೇರಣೆಯನ್ನು ಪಡೆದು ಬೌದ್ಧ ಧರ್ಮಾನುಯಾಯಿಗಳಾಗುತ್ತಿದ್ದರು. ಒಂದು ದಿನ ಒಬ್ಬ ಸಿರಿವಂತನು ಆ ಬೌದ್ಧ ಭಿಕ್ಷ ುವಿನ ಹತ್ತಿರ ಬಂದ. ಬೌದ್ಧ ಮಂದಿರದಲ್ಲಿದ್ದ ಬುದ್ಧನ ಮೂರ್ತಿಯ ದರ್ಶನ ಪಡೆದು ಹೊರಗೆ ಬಂದ. ಬೌದ್ಧ ಭಿಕ್ಷ ುವನ್ನು ಕರೆದು ಹೇಳಿದ- ''ಇನ್ನು ನೀನು ಈ ಬುದ್ಧನ ಶಿಲಾಮೂರ್ತಿಯನ್ನು ಪೂಜಿಸಬೇಕಾಗಿಲ್ಲ. ನಾನು ಇದಕ್ಕಿಂತಲೂ ಒಂದು ಸುಂದರವಾದ ಬುದ್ಧನ ಚಿನ್ನದ ಮೂರ್ತಿಯನ್ನು ಮಾಡಿ ಕೊಡುತ್ತೇನೆ,'' ಬೌದ್ಧ ಭಿಕ್ಷ ುವು- ಹಿಂದು ಮುಂದು ನೋಡದೆ ಆಗಲಿ ಎಂದು ಹೇಳಿಬಿಟ್ಟ. ಮರುದಿನವೇ ಸಿರಿವಂತ ಬುದ್ಧನ ಚಿನ್ನದ ಮೂರ್ತಿಯನ್ನು ತಂದು ಆ ಮಂದಿರದಲ್ಲಿ ಪ್ರತಿಷ್ಠಾಪಿಸಿದ. ಅಲ್ಲಿಗೆ ಆ ಭಿಕ್ಷ ುವಿನ ಧ್ಯಾನ, ಪೂಜಾದಿಗಳೆಲ್ಲ ಹೆಚ್ಚು ಕಡಿಮೆ ನಿಂತೇ ಹೋದವು. ರಾತ್ರಿ, ಹಗಲು ಆ ಚಿನ್ನದ ಮೂರ್ತಿಯನ್ನು ಕಾಯುವುದೇ ಆಯಿತು. ಬಂದವರೆಲ್ಲರೂ ಏನು ಬಂಗಾರ ಏನು ಸಿಂಗಾರ ಎನ್ನುತ್ತಿದ್ದರೇ ವಿನಾ ಬುದ್ಧ ಭಗವಾನರ ಸ್ಮರಣೆ ಯಾರಿಗೂ ಬರಲಿಲ್ಲ. ಹೀಗೆ ಸಿರಿ-ಸಂಪದ ಪ್ರದರ್ಶನಕ್ಕಾಗಿ ಸಾಕಾರ ದೇವೋಪಾಸನೆ ಮಾಡುವವರು ಕೂಡಾ ದುಃಖರೂಪ ಕತ್ತಲೆಯ ಕೂಪದಲ್ಲಿ ಬೀಳುತ್ತಾರೆ. ತಾಮಸಿಕ ಪೂಜೆ: ದಯಾಮಯನೂ ಸಚ್ಚಿದಾನಂದ ಸ್ವರೂಪನೂ ಆದ ದೇವನ ನಿಜಸ್ವರೂಪವನ್ನರಿಯದ ಅಜ್ಞ ಜನರು ದೇವರ ಹೆಸರಿನಲ್ಲಿ ಪಶುಬಲಿ, ನರಬಲಿ ಅಂತಹ ಕ್ರೂರ ಕೃತ್ಯಗಳಲ್ಲಿ ತೊಡಗುತ್ತಾರೆ. ಸುರಾಪಾನ, ಮಾಂಸಸೇವನೆ ಮೊದಲಾದ ವ್ಯಸನಗಳಲ್ಲಿ ಮುಳುಗೇಳುತ್ತಾರೆ. ಈ ಬಗೆಯಾದ ತಾಮಸಿಕ ಉಪಾಸನೆಯಲ್ಲಿ ತೊಡಗಿದ ಅಜ್ಞ ಜನರು ಎಂಥ ಹೇಯ ಕೃತ್ಯಗಳನ್ನು ಮಾಡಲು ಹೆದರುವುದಿಲ್ಲ. ಒಂದು ಊರಿನಲ್ಲಿ ಒಬ್ಬ ಮಹಾರಾಜನಿದ್ದ. ಆಕಸ್ಮಿಕವಾಗಿ ಅವನ ಒಬ್ಬನೇ ಒಬ್ಬ ಮಗ ಯುವರಾಜ ಗಂಭೀರ ಕಾಯಿಲೆಗೆ ಒಳಗಾದ. ''ಮಗನ ಹೆಸರಿನಲ್ಲಿ ದೇವರಿಗೆ ನರಬಲಿ ಕೊಟ್ಟರೆ ಯುವರಾಜನ ಕಾಯಿಲೆ ಗುಣವಾಗುತ್ತದೆ,'' ಎಂದು ಯಾರೋ ಹೇಳಿದರು. ತಕ್ಷ ಣ ಮಹಾರಾಜನು 'ಯಾರಾದರೂ ತಮ್ಮ ಒಬ್ಬ ಮಗನನ್ನು ನರಬಲಿಗೆ ಕೊಡುವುದಾದರೆ ಯಥೇಚ್ಛವಾದ ಸಂಪತ್ತನ್ನು ನೀಡಲಾಗುತ್ತದೆ'ಎಂದು ಡಂಗುರ ಸಾರಿಸಿದ. ಆ ಊರಿನಲ್ಲಿ ಒಂದು ಮನೆಯ ಸಿರಿವಂತ ದಂಪತಿಗೆ ಮೂವರು ಮಕ್ಕಳಿದ್ದರು. ತಂದೆ ಹಿರಿಯ ಮಗನನ್ನು ಪ್ರೀತಿಸುತ್ತಿದ್ದ. ತಾಯಿ ಕಿರಿಯ ಮಗನನ್ನು ಪ್ರೀತಿಸುತ್ತಿದ್ದಳು. ನಡುವಿನ ಮಗನನ್ನು ಯಾರೂ ಪ್ರೀತಿಸುತ್ತಿರಲಿಲ್ಲ. ಅವನೇ ಶುನಶ್ಚೇಪ. ಕೊನೆಗೆ ಸಂಪತ್ತಿನ ಆಸೆಗಾಗಿ ನಡುವಿನ ಮಗನನ್ನೇ ಬಲಿಗೆ ಕಳುಹಿಸಿಕೊಡಲು ಒಪ್ಪಿದನು. ''ತಾಯಿ-ತಂದೆ, ರಾಜ-ಮಹಾರಾಜ, ಬಂಧು-ಬಳಗ ಯಾರಿಗೂ ಬೇಡವಾದ ನಾನು ದೇವರೇ ನಿನಗೂ ಬೇಡವಾದೆನೇ?,''ಎಂದು ಬಾಲಕ ಶುನಶ್ಚೇಪನು ದೇವರಲ್ಲಿ ಮೊರೆ ಇಡುವಾಗ ಮೂರು ಲೋಕವೇ ಕಂಬನಿಗರೆದಂತಾಗಿತ್ತು. ಈ ಬಗೆಯಾದ ತಾಮಸಿಕಪೂಜೆ, ರಾಜಸಿಕ ಪೂಜೆಯಿಂದ ದೂರ ಉಳಿದು ಯಾರು ಸಾತ್ವಿಕ ಪೂಜೆಯಲ್ಲಿ ತೊಡಗುತ್ತಾರೋ ಅವರೇ ಪರಮಶಾಂತಿ, ಪರಮಾನಂದ ಪಡೆಯುತ್ತಾರೆ. ಇದುವೇ ಈಶಪ್ರಸಾದ ! ಆಧಾರ : ಈಶ ಪ್ರಸಾದ.
ಶಿವದರ್ಶನ ಸತ್ಸಂಗ ನಾಳೆ
ಕಲಬುರಗಿ: ವಿಜಯ ಕರ್ನಾಟಕ, ಆಧ್ಯಾತ್ಮಿಕ ಪಾಕ್ಷಿಕ ಬೋಧಿವೃಕ್ಷ ಮತ್ತು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ಆಶ್ರಯದಲ್ಲಿ ಶಿವರಾತ್ರಿ ಪ್ರಯುಕ್ತ ಶಿವ ದರ್ಶನ ಸತ್ಸಂಗ ಕಾರ್ಯಕ್ರಮ ಫೆ. 7ರಂದು ಬೆಳಗ್ಗೆ 8ಕ್ಕೆ ಇಲ್ಲಿನ ಆದರ್ಶನ ನಗರದ ಬ್ರಹ್ಮಕುಮಾರಿ ವಿವಿಯಲ್ಲಿ ಜರುಗಲಿದೆ. ಕಣ್ವ ಮಠದ ಶ್ರೀಗಳು, ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಕಲಬುರಗಿ ವಲಯದ ಮುಖ್ಯಸ್ಥೆ ಬಿ.ಕೆ. ವಿಜಯಾ ಅವರು ಶಿವದರ್ಶನ ಕುರಿತು ಉಪನ್ಯಾಸ ನೀಡುವರು. ಮಹಾನಗರ ಪಾಲಿಕೆ ಮಹಾಪೌರ ಶರಣುಕುಮಾರ ಮೋದಿ ಕಾರ್ಯಕ್ರಮ ಉದ್ಘಾಟಿಸುವರು.