* ಎಚ್. ಮಹೇಶ್
ಸ್ಯಾಂಡಲ್ವುಡ್ನಲ್ಲಿ ಬಂದಿರುವ ಸಾಕಷ್ಟು ರೌಡಿಸಂ ಚಿತ್ರಗಳ ಪೈಕಿ ಕೆಲವೇ ಕೆಲವನ್ನು ಪ್ರೇಕ್ಷಕ ಇಷ್ಟಪಟ್ಟಿದ್ದಾನೆ. ಉಳಿದವುಗಳಿಂದ ದೂರವೇ ಉಳಿದಿದ್ದಾನೆ. ಬೆತ್ತನಗೆರೆ ಚಿತ್ರದ ಕತೆ ಎಲ್ಲರಿಗೂ ಗೊತ್ತಿರುವಂಥದ್ದೆ. ಬೆತ್ತನಗೆರೆ ಸೀನ, ಶಂಕರ ನಡುವಣ ಮಾರಾಮಾರಿ ಕತೆಯೇ ಬೆತ್ತನಗೆರೆ ಚಿತ್ರದ ಕತೆ. ಇನ್ನು ಗ್ಯಾಂಗ್ವಾರ್ ಕತೆಗಳು ಸಹ ಬೇಕಾದಷ್ಟು ಬಂದಿವೆ. ಬೆತ್ತನಗೆರೆ ಚಿತ್ರದಲ್ಲಿಯೂ ಎರಡು ಗ್ಯಾಂಗ್ ವಾರ್ ಕತೆ ಇದ್ದರೂ ನೋಡಿಸಿಕೊಂಡು ಹೋಗುತ್ತದೆ. ಮುಂದೆ ಏನಾಗುತ್ತದೆ ಎಂದು ಸುಲಭವಾಗಿ ಊಹಿಸಿದರೂ, ಪ್ರೇಕ್ಷಕನನ್ನು ಸ್ವಲ್ಪ ಮಟ್ಟಿಗೆ ಹಿಡಿದಿಟ್ಟುಕೊಳ್ಳುವಲ್ಲಿ ಚಿತ್ರದ ನಿರ್ದೇಶಕ ಮೋಹನ್ ಗೆದ್ದಿದ್ದಾರೆ.
ಇಬ್ಬರು ಸಹೋದರರ ನಡುವೆ ರಾಜಕೀಯ ನುಸುಳುತ್ತದೆ. ರಾಜಕೀಯ ವ್ಯಕ್ತಿಗಳು ತಮ್ಮ ಬೇಳೆ ಬೇಯಿಸಿಕೊಳ್ಳುವುದಕ್ಕೆ ಈ ಇಬ್ಬರನ್ನೂ ಬಳಸಿಕೊಳ್ಳುತ್ತಾರೆ. ಆನಂತರ ಶತ್ರುಗಳಾಗುತ್ತಾರೆ. ಸ್ಟೋರಿ ಓಲ್ಡ್ ಅನಿಸಿದರೂ ಅದನ್ನು ಪರ್ವಾಗಿಲ್ಲ ನೋಡುವಂತೆ ಚಿತ್ರಕತೆ ಮಾಡಿದ್ದಾರೆ ನಿರ್ದೇಶಕರು. ಎಲ್ಲೂ ಕನ್ಫ್ಯೂಶನ್ ಕ್ರಿಯೇಟ್ ಮಾಡುವುದಿಲ್ಲ. ರೌಡಿಸಂ ಚಿತ್ರವಾದರೂ ರಕ್ತಪಾತಕ್ಕೆ ಹೆಚ್ಚಿನ ಅವಕಾಶ ಇಲ್ಲ. ಆ್ಯಕ್ಷನ್ ದೃಶ್ಯಗಳನ್ನು ಹೊಸ ರೀತಿಯಲ್ಲಿ ಸಂಯೋಜಿಸಬಹುದಿತ್ತು. ಆದರೆ ಅದೇ ಬೋರಿಂಗ್ ಫೈಟಿಂಗ್. ಚಿತ್ರದ ಮೊದಲಾರ್ಧ ಬ್ರದರ್ ಸೆಂಟಿಮೆಂಟ್. ವಿರಾಮದ ನಂತರ ಇಬ್ಬರ ನಡುವಿನ ಕಾದಾಟದ ಕತೆ.
ನಿರ್ದೇಶಕ ಮೋಹನ್ ತಾವು ಕಣ್ಣಾರೆ ಕಂಡ ಇಬ್ಬರು ಸಹೋದರರ ನಡುವಿನ ವೈರತ್ವವನ್ನು ಪರಿಣಾಮಕಾರಿಯಾಗಿ ದೃಶ್ಯರೂಪದಲ್ಲಿ ಹಿಡಿದಿಟ್ಟಿದ್ದಾರೆ. ಆದರೆ ಆ ಪಾತ್ರಕ್ಕೆ ಕಲಾವಿದರನ್ನು ಆಯ್ಕೆ ಮಾಡುವಾಗ ಎಡವಿದ್ದಾರೆ. ಇದೇ ಪಾತ್ರಗಳಲ್ಲಿ ಇಬ್ಬರು ದೊಡ್ಡ ಸ್ಟಾರ್ಗಳು ಕಾಣಿಸಿಕೊಂಡಿದ್ದಿದ್ದರೆ ಚಿತ್ರ ಎಲ್ಲೋ ಹೋಗುತ್ತಿತ್ತು. ಯಾಕೆಂದರೆ ಸೀನ, ಶಂಕರನ ಪಾತ್ರಗಳಿಗೆ ದೊಡ್ಡ ತಾಕತ್ತಿದೆ. ನಟನೆಯಲ್ಲಿ ಸುಮಂತ್ ಇನ್ನೂ ಪಳಗಬೇಕಿತ್ತು. ಸುಮಂತ್ರನ್ನು ನೋಡಿದರೆ ರೌಡಿ ಅಂತ ಅನಿಸುವುದಿಲ್ಲ. ಡೈಲಾಗ್ ಡೆಲಿವರಿಯಲ್ಲಿ ಅಂತಹ ಧಮ್ ಕೂಡ ಇಲ್ಲ. ಅಕ್ಷಯ್ ಆ್ಯಕ್ಷನ್ ದೃಶ್ಯಗಳಲ್ಲಿ ಮಿಂಚುತ್ತಾರೆ. ಆದರೆ ತಮ್ಮ ಪಾತ್ರವನ್ನು ಅವರು ಇನ್ನೂ ಪರಿಣಾಮಕಾರಿಯಾಗಿ ನಿರ್ವಹಿಸಬಹುದಿತ್ತು.
ಸೀನ ಇಲ್ಲಿ ಶಿವ ಆಗಿದ್ದಾನೆ, ಶಂಕರ ಇಲ್ಲಿ ಶೇಖರ್ ಆಗಿದ್ದಾನೆ. ಸುಮಂತ್, ಅಕ್ಷಯ್ ತಮ್ಮ ಪಾತ್ರಗಳಿಗೆ ನ್ಯಾಯ ಕೊಡಲು ಶ್ರಮಿಸಿದ್ದಾರೆ. ಶೋಭರಾಜ್ ನಟನೆ ಸೂಪರ್. ಅವಿನಾಶ್ ನಟನೆ ಬಗ್ಗೆ ತಕರಾರು ಇಲ್ಲ. ನಾಯಕಿ ನೈನಾಗೆ ಹೆಚ್ಚಿನ ಅವಕಾಶ ಇಲ್ಲ. ಇರುವ ಕೆಲವೇ ದೃಶ್ಯಗಳಲ್ಲಿ ಅವರ ನಟನೆ ಓಕೆ. ಹಿನ್ನೆಲೆ ಸಂಗೀತ ಚಿತ್ರದ ಪ್ಲಸ್ ಪಾಯಿಂಟ್. ರೌಡಿಸಂಗೆ ತಕ್ಕ ಸಂಗೀತ ಈ ಚಿತ್ರಕ್ಕಿದೆ. ವೇಣು ಅವರ ಕೈಚಳಕದಲ್ಲಿ ಕ್ಯಾಮೆರಾ ಕೆಲಸ ಅಚ್ಚುಕಟ್ಟಾಗಿ ಮೂಡಿ ಬಂದಿದೆ. ಖಳ ನಾಯಕನ ಪಾತ್ರದಲ್ಲಿ ಕಾಣಿಸಿಕೊಂಡಿರುವ ಅನಿಲ್ ಕುಂಬ್ಲೆ ಗೆಟಪ್ ಚೆನ್ನಾಗಿದೆ. ಆದರೆ ಅವರನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಬಳಸಿಕೊಳ್ಳಬಹುದಿತ್ತು. ನೆರೇಶನ್ ಟೆಕ್ನಿಕ್ ಅಪ್ಡೇಟ್ ಆಗಿಲ್ಲ. ಮಾಸ್ ಮಸಾಲೆ ಚಿತ್ರಗಳನ್ನು ಇಷ್ಟಪಡುವ ಪ್ರೇಕ್ಷಕನಿಗೆ ಬೆತ್ತನ ಗೆರೆ ರುಚಿಸಬಲ್ಲದು.
ಕನ್ನಡ ಚಿತ್ರ