* ಪದ್ಮಾ ಶಿವಮೊಗ್ಗ
ಇಂದು ಶಿಕ್ಷಣ ಪದ್ಧತಿಯಲ್ಲಿ ಮಕ್ಕಳು ಓದಬಯಸೋದು ಬೇರೆ, ಪೋಷಕರು, ಉಪನ್ಯಾಸಕರು ಮೂಗು ಹಿಡಿದು ಕುಡಿಸೋದೇ ಬೇರೆ. ಇದನ್ನು ಸಿನಿಮಾದಲ್ಲಿ ಹೇಳುವ ಪ್ರಯತ್ನವೇ 'ವಾಸ್ಕೋಡಿಗಾಮ' ಚಿತ್ರ. ಆದರೆ, ಉತ್ತಮವಾದ ಕಥಾವಸ್ತುವನ್ನು ಸರಿಯಾಗಿ ಟ್ರೀಟ್ ಮಾಡದೆ, ವಿಡಂಬನಾತ್ಮಕವಾಗಿ ತೋರಿಸಲು ಹೋಗಿ ಎಡವಿದ್ದಾರೆ ನಿರ್ದೇಶಕ ಮಧುಚಂದ್ರ. ಪಡ್ಡೆ ಹುಡುಗರು ಯಾವ ತರ್ಕ, ರಿಯಾಲಿಟಿ, ನಿರೀಕ್ಷೆಯನ್ನು ಇಟ್ಟುಕೊಳ್ಳದೆ, ಸುಮ್ಮನೆ ಹಗುರವಾಗಿ ನೋಡಿ ಬರಬಹುದಾದ ಚಿತ್ರ ಇದು.
ಗಾಮನಹಳ್ಳಿಯಿಂದ ಬಂದ ವಾಸು (ಕಿಶೋರ್) ಎಲ್ಲಾ ಉಪನ್ಯಾಸಕರಂತೆ ಅಲ್ಲ. ಯಾವುದನ್ನೇ ಮಾಡಿದರೂ ಇಷ್ಟಪಟ್ಟು ಮಾಡಬೇಕು ಎನ್ನುವವ. ಕ್ಲಾಸ್ನಲ್ಲಿ ಪಾಠ ಮಾಡದೆ, ಕತೆ ಹೇಳಿಕೊಂಡು, ಸ್ಟೂಡೆಂಟ್ ಜತೆ ಕಾಲೇಜಿನಲ್ಲೇ ಇಸ್ಪೀಟು, ಸಿಗರೇಟ್, ಗುಂಡು ಹಾಕುತ್ತಾ, ಪ್ರೇಮ-ಗೀಮ ಅಂತ ಕಾಲ ಕಳೆಯೋ ತಲೆಹರಟೆ. ಬಲವಂತದಿಂದ ವಿದ್ಯೆಯನ್ನು ತುರುಕಬಾರದು, ಶಿಸ್ತು ಎಂದು ವಿದ್ಯಾರ್ಥಿಗಳನ್ನು ಹಿಂಸಿಸಬಾರದು ಅನ್ನೋನು. ಸ್ಟಡಿ ಒಂದನ್ನು ಬಿಟ್ಟು ಬೇರೆಲ್ಲಾ ಮಾಡಲು ಸ್ಟೂಡೆಂಟನ್ನು ಪ್ರೋತ್ಸಾಹಿಸುವ ಲೆಕ್ಚರರ್ ವಾಸುಗೆ ಕಾಲೇಜಿಗೆ ಹೊಸದಾಗಿ ಬಂದ ಇಂಗ್ಲಿಷ್ ಉಪನ್ಯಾಸಕಿ ಶ್ರುತಿ (ಪಾರ್ವತಿ ನಾಯರ್)ಯನ್ನು ನೋಡಿದ ತಕ್ಷಣ ಪ್ರೇಮ ಶುರು. ಇದಕ್ಕೆ ಅವನ ವಿದ್ಯಾರ್ಥಿಗಳೇ ಸಪೋರ್ಟ್. ಹೀಗಿರುವಾಗ ಇವನ ಅತಿರೇಕದಿಂದಲೇ ಒಂದು ದುರಂತ ನಡೆಯುತ್ತದೆ. ಇದರಿಂದ ವಾಸು ತನ್ನ ಐಡಿಯಾಲಜಿ ಬದಲಾಯಿಸಿಕೊಳ್ಳುತ್ತಾನಾ ? ಶಿಕ್ಷಣವನ್ನು ಗಂಭೀರವಾಗಿ ತೆಗೆದುಕೊಂಡಿದ್ದ ಶ್ರುತಿ ಪ್ರಿನ್ಸಿಪಾಲ್ ಆಗಿ ವಿದ್ಯಾರ್ಥಿಗಳನ್ನು ಮತ್ತೆ ಸರಿದಾರಿಗೆ ತರ್ತಾಳಾ? ಅನ್ನೋದು ಸಿನಿಮಾ.
ವಿದ್ಯಾರ್ಥಿಗಳಲ್ಲಿರುವ ಸುಪ್ತ ಪ್ರತಿಭೆ, ಆಸಕ್ತಿಯನ್ನು ಹೊರತಂದು ಆ ಹಾದಿಯಲ್ಲಿ ಸಾಗುವಂತೆ ಪ್ರೇರೇಪಿಸಬೇಕು, ಪುಸ್ತಕದ ಬದನೆಕಾಯಿಯಿಂದ ಹೊಟ್ಟೆ ತುಂಬುವುದಿಲ್ಲ ಅನ್ನೋದು ಚಿತ್ರದ ಸಾರ. ಆದರೆ, ಉತ್ತಮವಾದ ವಿಷಯಕ್ಕೂ, ದೃಶ್ಯಗಳನ್ನು ಹೆಣೆದಿರುವ ರೀತಿಗೂ ಸಂಬಂಧವೇ ಇಲ್ಲ. ಎಲ್ಲವೂ ಹುಚ್ಚಾಟದಂತೆ ಇವೆ. ಕಾಲೇಜಿನ ಪಡ್ಡೆ ಹುಡುಗರ ಆಲೋಚನೆಯಂತೆಯೇ ಚಿತ್ರ ಮೂಡಿಬಂದಿದೆ. ಸ್ಕ್ರೀನ್ ಪ್ಲೇನಲ್ಲಿ ಪ್ರಬುದ್ಧತೆ ಕಾಣುವುದಿಲ್ಲ. ನಿರ್ದೇಶನದಲ್ಲಿ ಪರಿಣಿತಿಯ ಕೊರತೆ ಕಂಡುಬರುತ್ತದೆ. ಕಾಲೇಜು ಸ್ಪರ್ಧೆಯಲ್ಲಿ ಹುಡುಗರು ಕುಡಿದು ಡ್ಯಾನ್ಸರ್ ಜತೆ ಕುಣಿಯುವುದು. ಪರೀಕ್ಷೆ ಇರುವಾಗ ಎಲ್ಲಾ ವಿದ್ಯಾರ್ಥಿಗಳನ್ನು ವಾಸು ನಾಲ್ಕು ದಿನ ಯಾರಿಗೂ ಹೇಳದೆ ದೂರ ಕರೆದೊಯ್ಯುವುದು ಇವೆಲ್ಲಾ ಅತಿ ಎನಿಸುತ್ತದೆ. ಮೊದಲರ್ಧ ದೃಶ್ಯಗಳು ಅತಿರೇಕ, ನಾನ್ಸೆನ್ಸ್, ವಾಸ್ತವಕ್ಕೆ ದೂರ ಎನಿಸುತ್ತದೆ. ದ್ವಿತಿಯಾರ್ಧದಲ್ಲಿ ಸ್ವಲ್ಪ ಕುತೂಹಲ ಕೆರಳಿಸುತ್ತದೆ. ಮನರಂಜನೆಗಾಗಿ ಐಟಂ ಡ್ಯಾನ್ಸ್ ಬೇಕೇ ಇರಲಿಲ್ಲ. ನಾಯಕಿನೇ ಸಾಕಿತ್ತು. ಸೂಪರ್ ಮ್ಯಾನ್ಗಳಿಗಿಂತ ಆಂಜನೇಯ ಸ್ಟ್ರಾಂಗ್ ಅಂತ ತೋರಿಸೋಕೆ ಇರೋ ಫೈಟ್ ಮಕ್ಕಳನ್ನು ಕೂಡ ಮೆಚ್ಚಿಸಲು ಸಾಧ್ಯವಾಗದಷ್ಟು ಹಾಸ್ಯಾಸ್ಪದವಾಗಿದೆ.
ಕಿಶೋರ್ ಪಾತ್ರ ಕನ್ಫ್ಯೂಸ್ಡ್ ಆಗಿದೆ. ಪಾರ್ವತಿ ನಾಯರ್ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದಾರೆ. ಸುಂದರ್ ಉತ್ತಮ ಅಭಿನಯದಿಂದ ಪ್ರೇಕ್ಷಕರನ್ನು ನಗಿಸುತ್ತಾರೆ. ಮುಂಬೈನಿಂದ ಕರೆತಂದ ಕರಂ ಚಾವ್ಲಾರ ಛಾಯಾಗ್ರಹಣ ಕಿರಿಕಿರಿಯನ್ನುಂಟು ಮಾಡುತ್ತದೆ. ಪೂರ್ಣಚಂದ್ರ ತೇಜಸ್ವಿ ಸಂಗೀತ ಮತ್ತು ಒಂದೆರಡು ಹಾಡುಗಳು ಇಷ್ಟವಾಗುತ್ತವೆ.
ಕನ್ನಡ ಸಿನಿಮಾ: ವಾಸ್ಕೋಡಿಗಾಮ