Quantcast
Channel: Lifestyle, Latest Trends- ಟ್ರೆಂಡ್ಸ್, ಜೀವನಶೈಲಿ
Viewing all articles
Browse latest Browse all 6221

'ರುದ್ರಮ್ಮ ದೇವಿ'ಗೆ ಬಹುಪರಾಕ್

$
0
0

ತೆಲುಗು ಚಿತ್ರ

* ಎಚ್.ಮಹೇಶ್

ತೆಲುಗು ಚಿತ್ರರಂಗ ಹತ್ತು ಹಲವು ಮಸಾಲೆ ಚಿತ್ರ ಕೊಡುತ್ತದೆ. ಅದರ ಜತೆಗೆ ರುದ್ರಮ್ಮದೇವಿ ಅಂತಹ ಗಟ್ಟಿ ಚಿತ್ರವನ್ನೂ ನೀಡುತ್ತದೆ. ಬಾಹುಬಲಿ ಚಿತ್ರದ ನಂತರ ರಿಲೀಸ್ ಆಗಿರುವ ಐತಿಹಾಸಿಕ ಸಿನಿಮಾವಿದು. ಬಾಹುಬಲಿ ಮುಂದೆ ಈ ಚಿತ್ರದ ಆಟ ಏನೂ ನಡೆಯೋಲ್ಲ ಎಂದು ಪ್ರೇಕ್ಷಕ ಕೂಡ ಬೆಟ್ ಕಟ್ಟಿದ್ದ. ಆದರೆ ಬಾಹುಬಲಿಯ ಸರಿ ಸಮಾನವಾಗಿದೆ ಈ ಸಿನಿಮಾ.

ನಿರ್ದೇಶಕ ಗುಣಶೇಖರ್ 2013ರಲ್ಲಿ ಈ ಚಿತ್ರದ ಶೂಟಿಂಗ್ ಪ್ರಾರಂಭಿಸಿದ್ದರು. ರಿಲೀಸ್ ಮಾಡಿದ್ದು ಈಗ. ತೆಲಂಗಾಣವನ್ನು ( ಆಗಿನ ವಾರಂಗಲ್) ಆಳಿದ ರಾಣಿ ರುದ್ರಮ್ಮ ದೇವಿ ( ಕ್ರಿಶ 1261-1289)ಯ ನೈಜ ಕತೆಯಾಧರಿಸಿದ ಸಿನಿಮಾ ಇದು. ಹಾಗಾಗಿ ಮೂಲ ಕತೆಗೆ ಧಕ್ಕೆಯಾಗದಂತೆ, ಇತ್ತ ಕಡೆ ಸಾಮಾನ್ಯ ಪ್ರೇಕ್ಷಕನಿಗೂ ಬೋರ್ ಆಗದಂತೆ ಜಾಣತನದಿಂದ ಸಿನಿಮಾ ಮಾಡಿದ್ದಾರೆ ನಿರ್ದೇಶಕರು. ನಾಯಕಿ ಅನುಷ್ಕಾ ಶೆಟ್ಟಿ, ಈ ಚಿತ್ರದಲ್ಲಿ ರುದ್ರ ದೇವ ಮತ್ತು ರುದ್ರಮ್ಮ ದೇವಿಯಾಗಿ ಕಾಣಿಸಿಕೊಂಡಿದ್ದು, ಪುರುಷ ಹಾಗೂ ಮಹಿಳಾ ಪಾತ್ರದಲ್ಲಿ ಮಿಂಚಿದ್ದಾರೆ.

ವಿಶೇಷವಾದ ಕತೆ ಇಲ್ಲಿದೆ. ಮಹಿಳೆಯರು ರಾಜ್ಯವನ್ನು ಆಳಬಾರದು ಎಂಬ ನಂಬಿಕೆ ಆ ಪ್ರದೇಶದ್ದು. ಆದರೆ ರಾಜ ಗಣಪತಿ ದೇವನಿಗೆ ರುದ್ರಮ್ಮ ದೇವಿ ಜನಿಸಿದರೂ, ರಾಜ್ಯದ ಅನುಕೂಲಕ್ಕಾಗಿ ಆ ಹೆಣ್ಣು ಮಗುವನ್ನು ಗಂಡಾಗಿ ಬೆಳೆಸುತ್ತಾನೆ. ಅದಕ್ಕೆ ರುದ್ರದೇವ ಎಂದೇ ಹೆಸರಿಡುತ್ತಾರೆ. ಈ ರಹಸ್ಯ ಬಹಳಷ್ಟು ದಿನ ಉಳಿಯುವುದಿಲ್ಲ. ರಹಸ್ಯ ಗೊತ್ತಾದರೂ ಮುಕ್ತಾಂಭ ( ನಿತ್ಯಾ ಮೆನನ್) ರುದ್ರಮ್ಮ ದೇವಿಯನ್ನು ಮದುವೆಯಾಗುತ್ತಾಳೆ. ಹೀಗೆ ಕತೆಯಲ್ಲಿ ಹಲವು ಟ್ವಿಸ್ಟ್‌ಗಳಿವೆ. ನೋಡುಗರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಅವುಗಳು ಯಶಸ್ವಿ ಆಗುತ್ತವೆ.

ಅನುಷ್ಕಾ ಶೆಟ್ಟಿ ಪುರುಷ, ಮಹಿಳೆ ಎರಡೂ ಪಾತ್ರ ನಿರ್ವಹಿಸಿರುವ ರೀತಿಗೆ ಮೆಚ್ಚಬೇಕು. ಅವರನ್ನು ಪುರುಷನಂತೆ ಕಾಣಿಸಲು ಪ್ರಸಾಧನ ಕಲಾವಿದರು ಹರಸಾಹಸ ಪಟ್ಟಿದ್ದಾರೆ. ಯಾರು ಏನೇ ಹೇಳಲಿ ಅನುಷ್ಕಾ, ರುದ್ರಮ್ಮ ದೇವಿಯಾಗಿ ಕಾಣಿಸಿಕೊಳ್ಳುವುದೇ ಪ್ರೇಕ್ಷಕನಿಗೆ ಇಷ್ಟವಾಗುತ್ತದೆ. ಅರಮನೆಯಿಂದ ಕಳ್ಳ ದಾರಿಯಲ್ಲಿ ಬಂದು ನದಿಯಲ್ಲಿ ಸ್ನಾನ ಮಾಡುವಾಗ ಚಾಲುಕ್ಯ ವೀರಭದ್ರ ( ರಾಣಾ ದಗ್ಗುಬಾಟಿ) ಆಕೆಯನ್ನು ನೋಡಿ ಮನ ಸೋಲುತ್ತಾನೆ. ಆ ದೃಶ್ಯವನ್ನು ನಿರ್ದೇಶಕರು ಕಲರ್‌ಫುಲ್ ಆಗಿ ಚಿತ್ರಿಸಿದ್ದಾರೆ.

ಅರಮನೆ ಸೆಟ್, ನದಿ ಪ್ರಪಾತ, ಕುದುರೆಗಳ ಸಾಹಸವನ್ನು ಸಿಜಿಯಲ್ಲಿ ಚಿತ್ರೀಸಿದ್ದರೂ, ನೈಜವಾಗಿ ಕಾಣುತ್ತವೆ. ಅನುಷ್ಕಾ ಶೆಟ್ಟಿ ಇಂಟ್ರಡಕ್ಷನ್‌ನಲ್ಲಿ ಮದ ಗಜ ಜತೆ ಕಾದಾಡುವ ದೃಶ್ಯವು ಪರಿಣಾಮಕಾರಿಯಾಗಿ ಮೂಡಿ ಬಂದಿದೆ. ಎಲ್ಲದಕ್ಕಿಂತ ವಿಶೇಷವಾಗಿ ಮೂಡಿ ಬಂದಿದ್ದು, ಗೋನಾ ಗೋನ್ನ ರೆಡ್ಡಿಯಾಗಿ ಅಲ್ಲು ಅರ್ಜುನ್ ಕಾಣಿಸಿಕೊಂಡಿರುವುದು. ಹೀರೋಯಿಸಂ ಅನ್ನು ತಲೆಯಲ್ಲಿ ಇಟ್ಟುಕೊಂಡು ಅಲ್ಲು ಅರ್ಜುನ್‌ರ ಇಂಟ್ರಡಕ್ಷನ್ ದೃಶ್ಯವನ್ನು ಕಟ್ಟಿಕೊಟ್ಟಿದ್ದಾರೆ ನಿರ್ದೇಕರು. ಅರ್ಜುನ್‌ಗೆ ಕೊಟ್ಟಿರುವ ಗೆಟಪ್, ಕುದುರೆ ಎಲ್ಲವೂ ಸೂಪರ್.

ಮಂತ್ರಿ ಶಿವ ದೇವಯ್ಯನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಪ್ರಕಾಶ್ ರೈ. ಇವರ ಡೈಲಾಗ್ ಡೆಲಿವರಿ ಇಷ್ಟವಾಗುತ್ತದೆ. ಚಿತ್ರದಲ್ಲಿ ಅಲ್ಲು ಅರ್ಜುನ್, ರಾಣಾ ದಗ್ಗುಬಾಟಿ, ಅನುಷ್ಕಾ ನಾಯಕರು. ಅವರಿಲ್ಲದೇ ಚಿತ್ರವನ್ನು ನಿರ್ದೇಶಕರು ಊಹಿಸಿಕೊಳ್ಳುವುದಕ್ಕೂ ಸಾಧ್ಯವಾಗುತ್ತಿರಲಿಲ್ಲ. ನಾಯಕಿ ಪ್ರಧಾನ ಚಿತ್ರದಲ್ಲಿ ರಾಣಾ ಹಾಗೂ ಅಲ್ಲು ಅರ್ಜುನ್ ಅಂತಹ ಸೂಪರ್ ಸ್ಟಾರ್‌ಗಳು ತಮ್ಮ ಸ್ಟಾರ್‌ಗಿರಿ ಪಕ್ಕಕ್ಕಿಟ್ಟು ನಟಿಸಿದ್ದಾರೆ. ಇಂತಹ ಉದಾರ ಮನೋಭಾವ ನಮ್ಮ ಕನ್ನಡ ನಟರಿಗೂ ಇದ್ದರೆ ಕನ್ನಡ ನಿರ್ದೇಶಕರಿಗೆ ರುದ್ರಮ್ಮ ದೇವಿ ಅಂತಹ ಸಿನಿಮಾ ಊಹಿಸಿಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ.

ಇಳೆಯ ರಾಜರ ಹಿನ್ನೆಲೆ ಸಂಗೀತ ಮತ್ತೆ ಮತ್ತೆ ಕೇಳಬೇಕು ಅನಿಸುತ್ತದೆ. ಮೂರು ದೊಡ್ಡ ಸ್ಟಾರ್‌ಗಳಿದ್ದರೂ, ಕತೆಗೆ ಹೆಚ್ಚು ಮಹತ್ವಕೊಟ್ಟಿರುವ ನಿರ್ದೇಶಕರಿಗೆ ಸಲಾಂ ಹೇಳಬೇಕು. ಇಂತಹ ಸಿನಿಮಾ ಕನ್ನಡ ಚಿತ್ರರಂಗದಲ್ಲೂ ಮೂಡಿ ಬರಲು ನಮ್ಮ ಸ್ಟಾರ್‌ಗಳು ಮನಸ್ಸು ಮಾಡಬೇಕು. ಆಗ ಮಾತ್ರ ಕನ್ನಡ ಚಿತ್ರಗಳು ತೆಲುಗು ಚಿತ್ರರಂಗಕ್ಕೆ ಪೈಪೋಟಿ ಕೊಡಲು ಸಾಧ್ಯ.


Viewing all articles
Browse latest Browse all 6221


<script src="https://jsc.adskeeper.com/r/s/rssing.com.1596347.js" async> </script>